ವಿಷಯಕ್ಕೆ ಹೋಗಿ

ವರದಾ ಬಸ್ಸಿಗೆ ಬೆಂಕಿ ಬಿತ್ತು !!


ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು.

ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು.
ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹುಡುಗಿಯರು, ಕುಡುಕರು, ಶಾಲಾ ಬಾಲಕ, ಬಾಲಕಿಯರು - ಹೀಗೇ ಎಲ್ಲಾ ವರ್ಗದ ಜನರೂ ಸೇರಿ ಅದೊಂದು ಮಿನಿ ಭಾರತವೇ ಆಗಿತ್ತು. ಜೊತೆಗೆ ಸೀಮೆಣ್ಣೆ ಕ್ಯಾನು, ಮೆಣಸಿನಕಾಯಿ ಚೀಲ, ತರಕಾರಿ, ಬಂಗಡೆ ಮೀನು, ಮುಳಗಾಯಿ, ತೆಂಗಿನಕಾಯಿ, ಹುಣಸೇಹಣ್ಣು ಎಂದು ಅರ್ಧ ಮಾರುಕಟ್ಟೆಯೇ ಬಸ್ಸೊಳಗಿತ್ತು. ಬೇರೆ ಬೇರೆ ಬ್ರಾಂಡು ಹೊಡೆದ ಬ್ರಾಂಡ್ ಫ್ಯಾಕ್ಟರಿಗಳಿಗೇನೂ ಕೊರತೆ ಇರಲಿಲ್ಲ. ಹೀಗೆ ಎಲ್ಲಾ ಪರಿಮಳವೂ ಸೇರಿ ಅದೊಂದು ಮಿಶ್ರತಳಿಯ ವಾಸನೆಯಾಗಿ ಬಸ್ಸೊಳಗೆ ಹರಡಿತ್ತು. ಏಜೆಂಟ್ ಸೀತಾರಾಮಣ್ಣ ಕೂಗಿ ಕೂಗಿ ಟಿಕೇಟು ಕೊಟ್ಟರೆ ಕಂಡಕ್ಟರ‍್ ಚಂದ್ರಣ ಖುಶಿಯಿಂದ ದುಡ್ಡು ಎಣಿಸಿದರು. ಕೊನೆಗೂ ಬಸ್ ಹೊರಟಿತು.

ರಾಘವೇಂದ್ರ ಅಕ್ಕಿ ಮಿಲ್ ಹತ್ತಿರ ಬಂದಾಗ ಅಲ್ಲೊಂದಿಷ್ಟು ಜನ ಹತ್ತಿದರು. ಜೊತೆಗೆ ಅಕ್ಕಿ ಮೂಟೆ ಬೇರೆ. ಅಲ್ಲಿಂದಲೂ ಹೊರಟ ನಂತರ ಮುಂದೆ ಹೋಗಿ ವರದಳ್ಳಿ ರಸ್ತೆಗೆ ತಿರುಗಿಕೊಂಡಾಗ ಅಲ್ಲೊಂದಿಷ್ಟು ಜನ ಒತ್ತರಿಸಿ ಹತ್ತಿಕೊಂಡರು. ಈ ರೀತಿ ವರದ ಬಸ್ಸೆಂಬುದು "ಸಂತೃಪ್ತ ಸ್ಥಿತಿ" ತಲುಪಿದ ಭೌತಿಕ ವಸ್ತುವಂತೆ ಕಂಡು ಬಂತು. ಅಲ್ಲಿ ಇನ್ನೊಂದೇ ಒಂದು ಕೆಜಿ ಜಾಸ್ತಿ ಆದರೂ ಬಸ್ಸು ಸಿಡಿದು ನುಚ್ಚು ನೂರಾಗಿ ಬಿಡುತ್ತೇನೋ ಎನ್ನುವಂತಿತ್ತು. ಈ ವಿಪರೀತ ನೂಕುನುಗ್ಗಲಿನಿಂದ ಬೇಸತ್ತ ಅನೇಕರು ಕಂಡಕ್ಟರು, ಡ್ರೈವರಿಗೆ ಬೈಯುತ್ತಾ ತಮ್ಮ ನೋವು ತೋಡಿಕೊಂಡರು.

ಹೆಲಿಫ್ಯಾಡ್ ಬಳಿ ಮತ್ತೊಂದಿಷ್ಟು ಜನ ಕೈ ಅಡ್ಡ ಹಾಕಿದರು. ಚಾಲಕ ಬಸ್ ನಿಲ್ಲಿಸಲಿಲ್ಲ. ಅವರೇನದರೂ ಓಡಿ ಬಂದಿದ್ದರೆ ಬಸ್‌ಗಿಂತಾ ಮುಂದೆ ಹೋಗಿ ಮನೆ ಸೇರಬಹುದಿತ್ತು. ಬಸ್ ಅಷ್ಟೊಂದು ವೇಗವಾಗಿ ಓಡುತ್ತಿತ್ತು. ಅಂತಹ ವೇಗದಲ್ಲೂ ಸೆಟ್ಟೀಸರ ತಂಗುದಾಣದಲ್ಲಿ ಕಂಡಕ್ಟರ‍್ ವಿಷಲ್ ಹಾಕಿದರೂ ಚಾಲಕ ನಿಲ್ಲಿಸಲಿಲ್ಲ. ಅದಕ್ಕೆ ಕಾರಣ ಅಲ್ಲಿ ಇಳಿಯಬೇಕಾಗಿದ್ದ ನಾಲ್ಕಾರು ಮಂದಿ ನೂರಾರು ಜನರ ನಡುವೆ ಸಿಕ್ಕಿಕೊಂಡಿರುವುದರಿಂದ ನಿಲ್ಲಿಸಿದರೆ ಅವರು ಇಳಿಯಲು ತುಂಬಾ ಸಮಯವಾಗಿ ಬಿಡುತ್ತಲ್ಲ. ಹಾಗಾಗಿ ಅಲ್ಲಿಂದ ಸ್ವಲ್ಪ ದೂರದಲ್ಲೇ ಇರುವ ಕರ್ಕೀಕೊಪ್ಪ ನಿಲ್ದಾಣದಲ್ಲಿ ಜಾಸ್ತಿ ಜನ ಇಳಿಯುತ್ತಾರೆ. ಇವರನ್ನೂ ಅಲ್ಲೇ ಒಟ್ಟಿಗೆ ಇಳಿಸಿದರಾಯ್ತು ಎಂದು ಚಾಲಕ ಹಾಗೆ ಮಾಡಿದ್ದ. ಆದರೆ ಅಲ್ಲಿ ಇಳಿಯಬೇಕಾಗಿದ್ದವರು ಒಂದು ಥರದ ಗೌಜು ಎಬ್ಬಿಸಿದರು. ಕೊನೆಗೂ ಬಸ್ಸು ಬಂದು ನಿಂತಿದ್ದು ಕರ್ಕೀಕೊಪ್ಪ ನಿಲ್ದಾಣದಲ್ಲೇ.

 ಅಲ್ಲಿ ಬಂದು ನಿಲ್ಲುವುದಕ್ಕೂ ಸರಿಯಾಗಿ ಇಂಜಿನ್‌ನಿಂದ ಹೊಗೆ ಶುರುವಾಗಿ ಅದು ಕೆಲವೇ ಕ್ಷಣದಲ್ಲಿ ದೊಡ್ಡದಾಗಿ ಹೋಯ್ತು. ಅದೇ ಸಮಯಕ್ಕೆ ಸರಿಯಾಗಿ ಸೆಟ್ಟಿಸರದಲ್ಲೇ ಇಳಿಯಬೇಕಾಗಿದ್ದ ಕುಡುಕನೊಬ್ಬ ತನ್ನನ್ನು ಮುಂದೆ ತಂದು ಇಳಿಸಿದ್ದಕ್ಕಾಗಿ ಇಳಿದು ಹೋಗುವಾಗ ಕೋಪದಲ್ಲಿ "ವರದಾ ಬಸ್ಸಿಗೆ ಬೆಂಕಿ ಬಿತ್ತು" ಎಂದು ನುಡಿದದ್ದೂ ನಡೆದು ಹೋಯ್ತು. ವನೇನೋ ಅವನಷ್ಟಕ್ಕೆ ಅವನೇ ಬೈದು ಹೊರಟು ಹೋದ. ಆದರೆ ಇದು ಕೇಳಿದ್ದೇ ತಡ "ಬೆಂಕಿ ಬಿತ್ತಾ ? ಅಯ್ಯೋ ಇಳೀರಿ ಎಲ್ಲ" ಎನ್ನುತ್ತಾ ಜನರು ಕಂಡ ಕಂಡಲ್ಲಿ ಧುಮುಕತೊಡಗಿದರು.

ಪುಣ್ಯಕ್ಕೆ ಆ ಬಸ್ಸಿನ ಕಿಟಕಿಗೆ ಗಾಜುಗಳೇ ಇರಲಿಲ್ಲ. ದೊಡ್ಡ ಕಿಟಕಿ ಬೇರೆ. ಎಲ್ಲಾ ಕಿಟಕಿಗಳಿಂದಲೂ ಮೇಲೆ ತಿಳಿಸಿದ ಎಲ್ಲಾ ವರ್ಗದ ಸಾರ್ವಜನಿಕರೂ ಧುಮುಕುತ್ತಿದ್ದರು. ಕೆಳಗೆ ಯಾರಿದ್ದಾರೆ ಯಾರಿಲ್ಲ ಅಂತ ನೋಡಲಿಲ್ಲ. ಅದರಲ್ಲೂ ಕೆಲವರು ತಮ್ಮ ತಮ್ಮ ಸಾಮಾನಿನ ಮೂಟೆಯನ್ನೂ ಬಿಡದೇ ಹೊರಗೆ ಎಸೆದುಕೊಂಡು ನಂತರ ಹೊರಗೆ ಹಾರಿದರು. ಕೆಳಗೆ ಹಾರಿ ಕಾಲು ನೋವು ಮಾಡಿಕೊಂಡಿರುವಾಗಲೇ ಮೇಲಿನಿಂದ ತಲೆ ಮೇಲೆ ಸಾಮಾನು ಚೀಲಗಳು ಬಿದ್ದವು. ಕೆಲವರು ಎಸೆದ ಸೀಮೆಣ್ಣೆ ಕ್ಯಾನ್ ಮುಚ್ಚಳ ತೆರೆದುಕೊಂಡು ಅದು ಹಲವರ ಸಾಮಾನುಗಳನ್ನು ತೋಯಿಸಿತು. ನಾನು ಕಿಟಕಿ ಪಕ್ಕದಲ್ಲೇ ಕುಳಿತಿದ್ದರೂ ನನಗೆ ಮೇಲೇಳಲೂ ಬಿಡದಂತೆ ನನ್ನನ್ನು ದಾಟಿಕೊಂಡು ಜನರು ಧುಮುಕುತ್ತಿದ್ದುದು ಮಜವಾಗಿತ್ತು. ಹೆಂಗಸರು ಮಕ್ಕಳೇಲ್ಲಾ ಕಿಟಕಿಯಿಂದಲೇ ಹಾರಲು ಹೋಗಿ ಸಮತೋಲನ ಸಿಗದೇ ಬಿದ್ದು ಲಗಾಟಿ ಹೊಡೆದುದೂ ಆಯ್ತು. ಈ ನಡುವೆ ಚಾಲಕ ಮತ್ತು ನಿರ್ವಾಹಕ ಇಂಜಿನ್ ಪರಿಶೀಲಿಸಿ ಅಲ್ಲಿ ಏನೂ ತೊಂದರೆ ಇಲ್ಲದ್ದನ್ನು ಗಮನಿಸಿ ಹಾರುತ್ತಿದ್ದವರ ಬಳಿ ಬಂದು "ಏನೂ ಆಗಿಲ್ಲರೀ, ಗಾಭರಿ ಆಗಬೇಡಿ, ರೇಡಿಯೇಟರ್‌ನಲ್ಲಿ ನೀರು ಕಡಿಮೆ ಆಗಿದೆ ಅಷ್ಟೇ!" ಎಂದು ಹೇಳಿದರೆ ಯರೂ ಅವರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಅವರ ಮೇಲೆಯೇ ನೆಗೆದು ಸೇಡು ತೀರಿಸಿಕೊಂಡರು.

ಆಗ ನಾನು ನೋಡುತ್ತಿರುವಂತೆಯೇ ನನ್ನ ಎದುರಿಂದ ಯಾರೋ ಪ್ಯಾರಾಚೂಟ್ ಕಟ್ಟಿಕೊಂಡು ಹಾರಿದಂತೆ ಕಂಡು ಬಂತು. ’ಅಲೆಲೆ, ಬಸ್‌ನಿಂದ ಹಾರಲಿಕ್ಕೂ ಪ್ಯಾರಾಚ್ಯೂಟೇ?’ ಎಂದು ಚಕಿತನಾಗಿ ಹಾರಿದವರನ್ನು ನೋಡಿದರೆ ಅದು ಹಾಯ್ಗೋಡಿನ ಕಳ್ಳಭಟ್ಟಿ ಮಾರುವ ವನಜಕ್ಕ! ಅವಳು ಪ್ಯಾರಾಚೂಟ್ ಕಟ್ಟಿಕೊಂಡು ಹಾರಿರಲಿಲ್ಲ... ಅವಳು ಸಹಜವಾಗೇ ಹಾರಿದ್ದರೂ ಅವಳ ಸೀರೆ ಮತ್ತು ಲಂಗ ಗಾಳಿಗೆ ಪ್ಯಾರಾಚೂಟ್‌ನಂತೆ ಅಗಲವಾಗಿ ಬಿಚ್ಚಿಕೊಂಡು ಅವಳನ್ನು ಕ್ಷೇಮವಾಗಿ ನೆಲಕ್ಕಿಳಿಸಿದ್ದವು. ಅದನ್ನು ಕೆಳಗೆ ನಿಂತು ನೋಡಿದ ಕಾಲೇಜು ಹುಡುಗರು ಮುಸಿ ಮುಸಿ ನಗುತ್ತಾ ಮತ್ತೆ ಯಾರಾದರೂ ಇದೇ ರೀತಿ ಹಾರುವರೇ ಎಂದು ಕಾಯತೊಡಗಿದರು.

ಈ ರೀತಿ ಒಂದು ಹಂತಕ್ಕೆ ಬಸ್ ಖಾಲಿಯಾಗಿ ಕೊನೆಗೆ ನಾವೊಂದು ಹತ್ತು ಹನ್ನೆರಡು ಜನರಷ್ಟೇ ಉಳಿದಾಗ ಬಸ್ಸಿಗೆ ಬೆಂಕಿ ಬಿದ್ದಿಲ್ಲ ಅಂತ ತೀರ್ಮಾನವಾಯ್ತು. ಮತ್ತೆ ಎಲ್ಲರೂ ಧಡಬಡಾಯಿಸಿ ಬಸ್ ಏರಿದರು. ಕರ್ಕೀಕೊಪ್ಪದಲ್ಲೇ ಸುಮಾರು ಅರ್ಧ ಬಸ್ ಜನ ಇಳಿಯುವುದು ಇದ್ದುದರಿಂದ ಈ ಸಲ ಅಷ್ಟೊಂದು ಕಷ್ಟ ಆಗಲಿಲ್ಲ. ಈ ಬಾರಿ ’ಬಸ್‌ಗೆ ಬೆಂಕಿ ಬಿತ್ತು’ ಎಂದು ಹೇಳಿದ ಆ ಕುಡುಕನನ್ನು ಎಲ್ಲರೂ "ಥೂ ಅವನ ಮನೆ ಹಾಳಾಗ" ಎಂದು ಬೈದುಕೊಳ್ಳುತ್ತಾ ತಮ್ಮ ತಮ್ಮ ಸ್ಥಿತಿಯ ಬಗ್ಗೆ ಹಳಿದುಕೊಳ್ಳತೊಡಗಿದರು. ಒಬ್ಬೊಬ್ಬರೂ ತಾವು ಹಾರಿದ ಬಗೆಯನ್ನು ಬಗೆ ಬಗೆಯಲ್ಲಿ ವರ್ಣಿಸುತ್ತಿದ್ದರೆ ವನಜಕ್ಕ ತಾನೇನೂ ಕಮ್ಮಿ ಇಲ್ಲ ಅನ್ನುವಂತೆ "ನನ್ನ ಸೀರೆ ಕಂಡಿರ್ಯಾ? ಹೆಂಗ್ ಬಿಚ್ಕಂಡಿತ್ ಅಂತ?!" ಎಂದು ದೊಡ್ಡದಾಗಿ ಹೇಳುತ್ತಾ ಅದನ್ನು ನೋಡದಿದ್ದವರೂ ಸಹ ಕಲ್ಪನೆ ಮಾಡಿಕೊಳ್ಳುವಂತೆ ಮಾಡಿದಳು!

ಏನೆ ಆದರೂ ವರದಾ ಬಸ್ಸಿನ ಸೇವೆಯನ್ನು ನಮ್ಮೂರಿನ ಜನ ಮರೆಯುವ ಹಾಗೆಯೇ ಇಲ್ಲ. ದಶಕಗಳ ಕಾಲ ಅದು ಸೇವೆ ನೀಡಿ ಈಗ ಮರೆಯಾಗಿದೆ. ಅದರ ಮಾಲೀಕರು ಬಸ್‌ ರೂಟ್‌ ಅನ್ನು ಗಜಾನನ ಸಂಸ್ಥೆಯವರಿಗೆ ಮಾರಿದ್ದಾರೆ. ವರದಾ ಬಸ್‌ ನಮ್ಮೂರಿನವರ ಜನ ಮಾನಸದಲ್ಲಿ ಹೇಗೆ ಬೇರು ಬಿಟ್ಟಿತ್ತೆಂದರೆ ಈಗಿನ ಗಜಾನನದವರೂ ಸಹ "ಶ್ರೀ ವರದಾ" ಹೆಸರಿನಲ್ಲೇ ಒಂದು ಬಸ್‌ನ್ನು ನಮ್ಮೂರಿಗೆ ಬಿಟ್ಟಿದ್ದಾರೆ!

ಕಾಮೆಂಟ್‌ಗಳು

ಆನಂದ್ ಸಿ.ಎಸ್. ಹೇಳಿದ್ದಾರೆ…
ಆಗ ನಾನು ನೋಡುತ್ತಿರುವಂತೆಯೇ ನನ್ನ ಎದುರಿಂದ ಯಾರೋ ಪ್ಯಾರಾಚೂಟ್ ಕಟ್ಟಿಕೊಂಡು ಹಾರಿದಂತೆ ಕಂಡು ಬಂತು. ’ಅಲೆಲೆ, ಬಸ್‌ನಿಂದ ಹಾರಲಿಕ್ಕೂ ಪ್ಯಾರಾಚ್ಯೂಟೇ?’ ಎಂದು ಚಕಿತನಾಗಿ ಹಾರಿದವರನ್ನು ನೋಡಿದರೆ ಅದು ಹಾಯ್ಗೋಡಿನ ಕಳ್ಳಭಟ್ಟಿ ಮಾರುವ ವನಜಕ್ಕ! ಅವಳು ಪ್ಯಾರಾಚೂಟ್ ಕಟ್ಟಿಕೊಂಡು ಹಾರಿರಲಿಲ್ಲ... ಅವಳು ಸಹಜವಾಗೇ ಹಾರಿದ್ದರೂ ಅವಳ ಸೀರೆ ಮತ್ತು ಲಂಗ ಗಾಳಿಗೆ ಪ್ಯಾರಾಚೂಟ್‌ನಂತೆ ಅಗಲವಾಗಿ ಬಿಚ್ಚಿಕೊಂಡು ಅವಳನ್ನು ಕ್ಷೇಮವಾಗಿ ನೆಲಕ್ಕಿಳಿಸಿದ್ದವು.
- ಈ ಸಾಲುಗಳು ಇಷ್ಟವಾದವು.
krishna ಹೇಳಿದ್ದಾರೆ…
ಅವಳ ಸೀರೆ ಮತ್ತು ಲಂಗ ಗಾಳಿಗೆ ಪ್ಯಾರಾಚೂಟ್‌ನಂತೆ ಅಗಲವಾಗಿ ಬಿಚ್ಚಿಕೊಂಡು ಅವಳನ್ನು ಕ್ಷೇಮವಾಗಿ ನೆಲಕ್ಕಿಳಿಸಿದ್ದವು. ಅದನ್ನು ಕೆಳಗೆ ನಿಂತು ನೋಡಿದ ಕಾಲೇಜು ಹುಡುಗರು ಮುಸಿ ಮುಸಿ ನಗುತ್ತಾ ಮತ್ತೆ ಯಾರಾದರೂ ಇದೇ ರೀತಿ ಹಾರುವರೇ ಎಂದು ಕಾಯತೊಡಗಿದರು.


super..........

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ,