ಇಂದು ವಕೀಲರು ಪತ್ರಕರ್ತರ ಮೇಲೆ ನಡೆಸಿದ ಅಮಾನವೀಯ ಹಲ್ಲೆ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಆದರೆ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಏಕೆಂದರೆ ಇದು ಮೊದಲೇನಲ್ಲ, ಕೊನೆಯೂ ಅಗುವುದಿಲ್ಲ. ಏಕೆಂದರೆ ನಮ್ಮ ವ್ಯವಸ್ಥೆ ಸದ್ದಿಲ್ಲದೇ ಹದಗೆಟ್ಟಿದೆ. ಒಳಗೊಳಗೇ ಕೊಳೆತಿರುವ ಈ ಸಮಾಜದಲ್ಲಿ ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಲೇ ಇರುತ್ತವೆ. ಇಂದು ವಕೀಲರು ಮಾಡಿದ್ದನ್ನು ನಾಳೆ ಪೊಲೀಸರು ಮಾಡಬಹುದು. ನಾಡಿದ್ದು ಇನ್ಯಾರೋ ಮಾಡಬಹದು. ಇದಕ್ಕೆಲ್ಲಾ ಕಾರಣಗಳು ಅನೇಕ... ಆದರೆ ಮೂಲ ಒಂದೇ... ವ್ಯವಸ್ಥೆ ಹದಗೆಟ್ಟಿದೆ.
ಇಲ್ಲಿ ಉತ್ತಮ ಸಮಜದ ನಿರ್ಮಾಣದ ಕನಸು ಕಾಣುವವರಿಗಿಂತಲೂ ಅಕ್ರಮ ಸಂಪಾದನೆಯ ಕನಸು ಕಾಣುತ್ತಿರುವವರೇ ಅಧಿಕ. ಹೀಗಾಗಿ ಸಮಾಜ ಘಾತುಕರ ನಡುವೆ ಉತ್ತಮ ಸಂಬಂಧ ಏರ್ಪಟ್ಟಿದೆ. ಹಣ ಹೆಚ್ಚು ಹೇಗೆ ಬರುತ್ತೋ ಆ ಕಡೆಗೆ ಜನರ ಮನನ್ಸು ಒಲಿಯುತ್ತಿದೆ. ಇದಕ್ಕೆ ನ್ಯಾಯವಾದಿಗಳೇನೂ ಹೊರತಾಗಿಲ್ಲ. ಭ್ರಷ್ಟರೊಂದಿಗೆ ಕೈ ಜೋಡಿಸುತ್ತಿರುವ ಅನೇಕ ನ್ಯಾಯವಾದಿಗಳಿಗೆ ಸಹಜವಾಗಿಯೇ ’ಭ್ರಷ್ಟರಿಗೆ ದುಸ್ವಪ್ನವಾಗಿರುವ’ ಸುದ್ದಿ ವಾಹಿನಿಗಳ ಬಗ್ಗೆ ಆಕ್ರೋಶವಿದೆ. ಇದರ ಜೊತೆ ಜಾತಿ ರಾಜಕೀಯ ವಕೀಲರನ್ನು ಬಿಟ್ಟಿಲ್ಲ. ಯಡಿಯೂರಪ್ಪನನ್ನು ಬೆತ್ತಲು ಮಾಡಿ ಮಾನ ಕಳೆದ ಸುದ್ದಿ ವಾಹಿನಿಗಳ ಮೇಲೆ ಜಾತಿಯ ಕಾರಣಕ್ಕೇ ಸಿಟ್ಟುಗೊಂಡಿರುವವರಿದ್ದಾರೆ. ಅದೇ ರೀತಿ ಜನಾರ್ದನ ರೆಡ್ಡಿಯ ವಿಷಯದಲ್ಲೂ ನಡೆದಿದೆ. ಆತನ ಬಿಟ್ಟಿ ದುಡ್ಡು ತಿಂದ ಕೆಲವು ನ್ಯಾಯವಾದಿಗಳು ಇಂದು ಆತನ ಬಗ್ಗೆ ಹೆಚ್ಚೇ ಅನ್ನುವಷ್ಟು ಸುದ್ದಿ ಮಾಡ ಹೊರಟಿದ್ದ ಸುದ್ದಿ ವಾಹಿನಿಗಳ ಮೇಲೆ ಪ್ರಹಾರ ನಡೆಸಿರುವ ಸಾಧ್ಯತೆ ಹೆಚ್ಚಿದೆ. ಅಂದರೆ ವಕೀಲರು ಏನು ಮಾಡಿದರೂ ಜನ ಸಹಿಸಬೇಕು. ದಿನವಿಡೀ ಲಕ್ಷಾಂತರ ಜನರಿಗೆ ತೊಂದರೆ ಕೊಟ್ಟು ರಸ್ತೆ ತಡೆ ನಡೆಸಿದರೂ ಅವರ ಮೇಲೆ ಕ್ರಮವಿಲ್ಲ.
ಯಾವುದೇ ಒಂದು ಗುಂಪುಗಾರಿಕೆ ಸಾಮಾಜಿಕವಾಗಿ ಒಳ್ಳೆಯದಲ್ಲ. ಜಾತಿ, ವೃತ್ತಿ ಗುಂಪುಗಾರಿಕೆಗಳು ಸದಾ ದೇಶಕ್ಕೆ ಮುಳುವಾಗಿಯೇ ಇವೆ. ನಾಯಕತ್ವ ವಹಿಸಿಕೊಂಡ ಅಲ್ಪಜ್ಞರು ಈ ಆಮಿಷಕ್ಕೆ ಒಳಗಾದರಂತೂ ಮುಗಿದೇ ಹೋಯ್ತು. ಇಡಿಯ ವ್ಯವಸ್ಥೆಯನ್ನೇ ಹಾಳು ಮಾಡುತ್ತಾರೆ. ಲಿಂಗಾಯತ ಸಮಾಜವನ್ನು ಬೆನ್ನಿಗಿಟ್ಟುಕೊಂಡವರಂತೆ ಯಡಿಯೂರಪ್ಪ ಆಡಿದ್ದಕ್ಕೂ, ಇಡಿಯ ವಕೀಲ ವೃಂದವೇ ತಮ್ಮ ಹಿಂದಿದೆ ಎಂದು ಅಟ್ಟಹಾಸ ಮೇರೆದ ಇಂದಿನ ಕೆಲವು ದುಷ್ಟ ವಕೀಲರಿಗೂ ಯಾವುದೇ ವ್ಯತ್ಯಾಸ ಇಲ್ಲ. ಇವರ ಉದ್ದೇಶ ಒಂದೇ, ತಮ್ಮನ್ನು ಯಾರು ಪ್ರಶ್ನಿಸಬಾರದು. ತಮ್ಮ ಬಲ ಇಷ್ಟಿದೆ ಎಂದು ತೋರಿಸಿಕೊಳ್ಳುವುದು.
ಇದೆಲ್ಲ ಒಂದು ಕಡೆಗಾದರೆ ಕಾನೂನನ್ನು ಪಾಲಿಸಬೇಕಾಗಿದ್ದ ಪೊಲೀಸರನ್ನು ಕಟ್ಟಿ ಹಾಕಿದ್ದಾದರೂ ಯಾರು ? ಪೊಲೀಸ್ ಆಯುಕ್ತರೇ ? ಸರ್ಕಾರವೇ ? ಜನಾರ್ದನ ರೆಡ್ಡಿಯೇ ? ಬಿಜೆಪಿ ಸರ್ಕಾರ ಯಾಕೆ ಇಷ್ಟೊಂದು ನಿರ್ಲಜ್ಜ, ಬೇಜವಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ ? ಇನ್ನೂ ಯಾಕೆ ಇವರಿಗೆ ಬುದ್ದಿ ಬಂದಿಲ್ಲ ? ಅಷ್ಟು ದೊಡ್ಡ ಗಲಾಟೆ ನಡೆದಿದ್ದರೂ ಸದಾನಂದ ಗೌಡರು "ನನಗೆ ವಿಷಯ ತಿಳಿದಿಲ್ಲ" ಅನ್ನುತ್ತಾರೆ ಎಂದರೆ ಇಂತಹ ಜಾಣ ಕುರುಡರಿಗೆ ಏನೆನ್ನಬೇಕು ?

ಕಾಮೆಂಟ್ಗಳು