ಮೊನ್ನೆ ಮೊನ್ನೆ ನೆಟ್ನಲ್ಲಿ ಇಂತಹುದೊಂದು ಚಿತ್ರ ದೊರೆಯಿತು. ಒಬ್ಬ ವ್ಯಕ್ತಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ನೋಡಿದಾಗ ಎಂತವರ ಕರುಳುದಾರೂ ಚುರ್ ಎನ್ನದಿರದು. ಆದರೆ ಈ ಚಿತ್ರವನ್ನು ನೋಡಿದಾಗ ಅದಕ್ಕಿಂತಲೂ ಮಿಗಿಲಾಗಿ ವೇದನೆ ಕಾಡದಿರದು. ಒಬ್ಬ ವ್ಯಕ್ತಿ ಹೊತ್ತಿ ಉರಿಯುತ್ತಿದ್ದರೂ ಸಹ ಈ ರೀತಿ ಅಮಾನವೀಯವಾಗಿ ಅವನನ್ನು ಫೋಟೋ, ವೀಡಿಯೋ ತೆಗೆದುಕೊಳ್ಳುತ್ತಿರುವ ಮಾಧ್ಯಮದ ಮಂದಿಗೆ ಏನೆಂದು ಹೇಳೋಣ ? ಮಾಧ್ಯಮಗಳವರು ಮದ್ಯಮಗಳಾದಾಗ ಇಂತಹ ಆಘಾತಕಾರಿ ಘಟನೆಗಳು ನಡೆದು ಹೋಗುತ್ತವೆ. ಆ ಚಿತ್ರವನ್ನು ಒಮ್ಮೆ ಕೂಲಂಕುಶವಾಗಿ ನೋಡಿ. ಆದರೆ ಅಲ್ಲಿರುವ ಅಷ್ಟೊಂದು ಮಂದಿ ಮಾಧ್ಯಮ ಮಿತ್ರರು ಒಟ್ಟಾಗಿ ಪ್ರಯತ್ನಿಸಿದ್ದರೆ ಬೇಗನೆ ಬೆಂಕಿ ಆರಿಸಲು ಸಾಧ್ಯವಿತ್ತು. ಅದು ನಮ್ಮ ದೇಶದ್ದಲ್ಲ. ಢಾಕಾದಲ್ಲಿ ನಡೆದ ಘಟನೆ ಅನ್ನುವುದೇನೋ ನಿಜ. ಆದರೆ ವೃತ್ತಿ ಮತ್ತು ಮಾನವೀಯತೆ ಎಲ್ಲಾ ಕಡೆಗು ಒಂದೇ ಅಲ್ಲವೇ ?
ಇಂತಹ ಘಟನೆಗಳು ನಮ್ಮ ದೇಶದಲ್ಲೇನೂ ನಡೆಯುವುದೇ ಇಲ್ಲ ಎಂದಲ್ಲ. ಕಳೆದ ವರ್ಷ ತಮಿಳುನಾಡಿನಲ್ಲಿ ವಿದ್ವಂಸಕಾರಿಗಳ ದಾಳಿಗೆ ಸಿಲುಕಿ ಮಂತ್ರಿಗಳ ರಕ್ಷಣಾ ಪಡೆಯ ಸಬ್ಇನ್ಸ್ಪೆಕ್ಟರ್ ಓರ್ವರು ಮೂವರು ಮಂತ್ರಿಗಳ ಎದುರಲ್ಲೇ ನಡು ರಸ್ತೆಯಲ್ಲಿ ಬಿದ್ದು ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟರು. ಅದನ್ನು ಟಿವಿ ವಾಹಿನಿಯವರು ಚಿತ್ರಿಸಿ (ಮಂತ್ರಿಗಳನ್ನೂ ತೋರಿಸುತ್ತಾ) ಜನರಿಗೆ ಹೇಳಿದ್ದು ಏನು ಗೊತ್ತೇ ? "ಮಂತ್ರಿಗಳ ಅಮಾನವೀಯತೆಯಿಂದ ಸಬ್ಇನ್ಸ್ಪೆಕ್ಟರ್ ಮರಣ!" ಎಂದು. ಮಂತ್ರಿಗಳಿಗಂತೂ ಮಾನವೀಯತೆ ಇಲ್ಲ ಅಂದುಕೊಳ್ಳೋಣ, ಆದರೆ ಅಲ್ಲೇ ಇದ್ದ ಈ ಮಾಧ್ಯಮದವರಾದರೂ ಗಾಯಾಳುವಿನ ರಕ್ಷಣೆಗೆ ತೆರಳಬೇಕಾಗಿತ್ತಲ್ಲ ?
ಆದರೆ ಇದೇ ಮಾಧ್ಯಮದವರು ತಮ್ಮ ಪತ್ರಿಕೆ, ಟಿವಿ ವಾಹಿನಿಗಳ ಮುಖಾಂತರ ದಿನದ ೨೪ ಗಂಟೆಯೂ ಊರಿಗೆಲ್ಲಾ ಬುದ್ದಿ ಹೇಳುತ್ತಾರೆ. ಯಾರದಾದರೂ ಚಿಕ್ಕ ತಪ್ಪು ದೊರೆತರೂ ದೊಡ್ಡದು ಮಾಡುತ್ತಾರೆ. ದೊಡ್ಡದು ಸಿಕ್ಕರೆ ಗುಡ್ಡ ಮಾಡುತ್ತಾರೆ. ಯಾವುದಾದರೊಂದು ವಿಷಯ ಸಿಕ್ಕರೆ ಅದನ್ನೇ ಹಿಡಿದುಕೊಂಡು ವಾರಗಟ್ಟಲೇ ಜಗ್ಗಾಡುತ್ತಾರೆ. ಏನೂ ಇಲ್ಲದಿದ್ದರೂ ಹೀಗೂ ಉಂಟೇ ಎಂದು ಕಾಗೆ ಹಾರಿಸುತ್ತಾರೆ. ಇವರಿಗೆ ಮಾತ್ರ ನಿಂತಲ್ಲೇ ನ್ಯಾಯ, ಅದು ಸಿಗದಿದ್ದರೆ ಮೆಘಾಫೈಟು!
ಇದೇ ವಿಶ್ವೇಶ್ವರ ಭಟ್ಟರು ಮತ್ತು ರವಿ ಬೆಳಗೆರೆ ಬಾಯಿ ಬಯಿ ಆಗಿದ್ದಾಗ ಬೆಳಗೆರೆಯನ್ನು ಕರೆತಂದು ವಿಜಯ ಕರ್ನಟಕದಲ್ಲಿ ಅಂಕಣ ಬರೆಸಿದರು. ತಮ್ಮ ಶಿಷ್ಯ ಪ್ರತಾಪ್ ಸಿಂಹರ ಬಗ್ಗೆ ಬೆಳಗೆರೆ ತಮ್ಮ ಪತ್ರಿಕೆಯಲ್ಲಿ ಅವಹೇಳನಕಾರಿಯಾಗಿ ಬರೆಯುತ್ತಿದ್ದರೂ ಒಂದು ಮಾತು ಅದರ ಬಗ್ಗೆ ಪಿಟ್ ಎನ್ನಲಿಲ್ಲ. ಬೆಳಗೆರೆಯ ಬುದ್ಧಿ ಲೋಕಕ್ಕೇ ತಿಳಿದಿದ್ದರೂ ತಮಗೇನೂ ತಿಳಿಯದು ಎಂಬಂತೆ ಮುಗುಮ್ಮಾಗಿದ್ದರು. ಆದರೆ ಯಾವಾಗ ಬೆಳಗೆರೆ ಇವರ ವಿರುದ್ಧವೇ ಬರೆಯಲು ತೊಡಗಿದರೋ ಆಗ ಮಾತ್ರ ಜಾಗ್ರತರಾದರು. ಈಗಂತು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭದಲ್ಲಿ ಬೆಳಗೆರೆ ಬಗ್ಗೆ ಧಾರಾವಾಹಿಗಳೇ ನಡೆದು ಹೋದವು.
ಹಾಗೆಯೇ ಕೆಲವು ದಿನಗಳ ಹಿಂದೆ ಬಿದರಿ ಪ್ರಕರಣದಲ್ಲಿ ನ್ಯಾಯಮೂರ್ತಿಗಳು "ಗಧಾಫಿ, ಸದ್ದಾಂ"ಗೆ ಬಿದರಿಯನ್ನು ಹೋಲಿಸಿದರು ಎಂದು ಪ್ರತಾಪ್ಸಿಂಹ ಕನ್ನಡಪ್ರಭದಲ್ಲಿ ಅದನ್ನು ಮುಖಪುಟದಲ್ಲೇ ಪ್ರಶ್ನಿಸಿದ್ದರು. ಆದರೆ "ಬಿದರಿಯವರು ತಮ್ಮ ಪ್ರಮಾಣ ಪತ್ರದಲ್ಲೇ ತಾನು ಗಧಾಫಿ, ಸದ್ದಾಂ ರೀತಿ ವರ್ತಿಸಿಲ್ಲ ಎಂದಿದ್ದರು. ವೀರಪ್ಪನ್ ಕಾಯಾಚರಣೆಯಲ್ಲಿ ಬಡವರ ಮೇಲೆ ಪೊಲೀಸರಿಂದ ನಡೆದ ಹಿಂಸಾಚಾರ ನಿಜವಾಗಿದ್ದರೆ ಬಿದರಿಯವರು ಸದ್ದಾಂ, ಗಡಾಫಿಗಿಂತಲೂ ಕಡೆ" ಎಂದು ಮಾತ್ರವೇ ತಾನು ಹೇಳಿದ್ದಾಗಿ ತಿಳಿಸಿರುವ ನ್ಯಾಯಮೂರ್ತಿಗಳು ಈಗ ಕನ್ನಡಪ್ರಭ ಮೇಲೆ ನ್ಯಾಯಾಲಯ ನಿಂದನೆ ದೂರು ದಾಖಲಿಸಿಕೊಂಡಿದ್ದಾರೆ. ಆದರೆ ಈ ಸುದ್ದಿ ಮಾತ್ರ ಕನ್ನಡಪ್ರಭದಲ್ಲಿ ಬರಲೇ ಇಲ್ಲ!
"ತಪ್ಪಾಯ್ತು ತಿದ್ಕೊತೀವಿ" ಅಂಕಣದಲ್ಲೇ ತಪ್ಪು !
ಏಪ್ರಿಲ್ ೧೯ರ ಕನ್ನಡಪ್ರಭದಲ್ಲಿ "ತಪ್ಪಾಯ್ತು ತಿದ್ಕೋತಿವಿ" ಅಂಕಣದ ಕೊನೆಯ ಪ್ಯಾರಾದಲ್ಲಿ "6.6 ಓವರ್ ಅಂದರೆ 7 ಓವರ್ ಅಂತಲೇ ಅರ್ಥ. ಆದರೆ 6ನೇ ಓವರಿನ ಕೊನೆಯ ಎಸೆತದಲ್ಲಿ ವಿಕೆಟ್ ಪತನವಾದ ಸಂದರ್ಭದಲ್ಲಿ ಹೀಗೆ ಬರೆಯಲಾಗುತ್ತದೆ. ಇಲ್ಲವಾದಲ್ಲಿ '6ನೇ ಓವರ್ನ ಕೊನೆಯ ಎಸೆತದಲ್ಲಿ' ಎಂದೇ ಬರೆಯಬೇಕಾಗುತ್ತದೆ." ಎಂದು ಬರೆದಿದ್ದಾರೆ.
ಆದರೆ 6.6 ಓವರ್ ಎಂದರೆ " 6ನೇ ಓವರಿನ ಕೊನೆಯ ಎಸೆತ" ಅಲ್ಲ. ಅದು 7ನೇ ಓವರಿನ ಕೊನೆಯ ಎಸೆತ ಆಗುತ್ತದೆ. 6 ನೇ ಓವರಿನ ಕೊನೆಯ ಎಸೆತವನ್ನು 5.6 ಓವರ್ ಎಂದು ಬರೆಯಬೇಕಾಗುತ್ತದೆ ಅಲ್ಲವೇ ? ಇದನ್ನು ಅವರಿಗೆ ಮಿನ್ನಂಚೆ ಮಾಡಿದರೆ ಅದೂ ಪ್ರಕಟವಾಗಲಿಲ್ಲ. ಬಹುಶಃ ತಮ್ಮ ವರದಿಗಾರರು, ಸಹ ಸಂಪದಕರು ಮಾಡಿದ ತಪ್ಪುಗಳನ್ನು ಮಾತ್ರ ಇವರು ತಿದ್ದುವುದೋ ಏನೋ.


ಕಾಮೆಂಟ್ಗಳು