ವಿಷಯಕ್ಕೆ ಹೋಗಿ

ಆಂಗ್ಲ ಮಾಧ್ಯಮ ಬೇಡ ಅನ್ನಲು ಇವರಿಗೆ ನೈತಿಕತೆ ಇದೆಯೇ ?

ಎಲ್ಲರೂ ಒಮ್ಮೆ ಇಂದಿನ ಕನ್ನಡಪ್ರಭ (ಪುಟ-೭) ನೋಡಿ. ಅದರಲ್ಲಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೇಡ ಎಂದು ಹೋರಾಟಕ್ಕೆ ಇಳಿದಿರುವ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀ ಪುಂಡಲೀಕ ಹಾಲಂಬಿಯವರ ಸಂದರ್ಶನವಿದೆ. ಈ ಹೋರಾಟದ ನೇತೃತ್ವ ಇವರದ್ದೇ. ಅಂದರೆ ಉಳಿದ ಸಾಹಿತಿಗಳನ್ನು, ಕನ್ನಡ ಹೋರಾಟಗಾರರನ್ನು ಸೇರಿಸಿ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೇಡ ಎಂಬ ಹೋರಾಟಕ್ಕೆ ಕೈ ಹಾಕಿದ್ದಾರೆ. ಅದಕ್ಕಾಗಿ ಆಮರಾಣಾಂತ ಉಪವಾಸ ಮಾಡುತ್ತಾರಂತೆ!

ಸರಿ ಇವರ ಕನ್ನಡ ಕಾಳಜಿ ಮತ್ತು ಹೋರಾಟವನ್ನು ಮೆಚ್ಚೋಣ. ಆದರೆ ಸಂದರ್ಶನದಲ್ಲಿ ಇವರೇ ಬಾಯಿ ಬಿಟ್ಟಿರುವಂತೆ ಇವರ ಇಬ್ಬರು ಮಕ್ಕಳು ಓದಿದ್ದು ಒಂದು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ!! ಅದಕ್ಕೆ ಇವರು ನೀಡಿರುವ ಕಾರಣ "ನಗರದಲ್ಲಿ ಸುಸಜ್ಜಿತ ಕನ್ನಡ ಮಾಧ್ಯಮ ಶಾಲೆಗಳು ಇಲ್ಲದ್ದರಿಂದ ಹಾಗೆ ಮಾಡಬೇಕಾಯ್ತಂತೆ!" ಎಂಥಹಾ ಕುಚೋಧ್ಯ ನೋಡಿ. ಅಲ್ಲಾ, ಇವರು ಯಾರ ಕಿವಿ ಮೇಲೆ ಹೂವಿಡಲು ಹೊರಟಿದ್ದಾರೆ ? ನಗರದಲ್ಲಿ ಸುಸಜ್ಜಿತ ಕನ್ನಡ ಶಾಲೆ ಸಿಗಲಿಲ್ಲ ಅಂತ ಇವರು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದರು. ಅಂದರೆ ಇವರ ಪ್ರಕಾರ ಹಳ್ಳಿಗಳ ಸರ್ಕಾರಿ ಶಾಲೆಗಳು ಸುಸಜ್ಜಿತವಾಗಿವೆಯೇ ? ಇವರು ಯಾವುದಾದರೂ ಉತ್ತರ ಕರ್ನಾಟಕದ ಹಳ್ಳಿಯ ಶಾಲೆಯನ್ನು ನೋಡಿದ್ದಾರಾ ? ಇದನ್ನು ಯಾರೂ ಪ್ರಶ್ನಿಸಬಾರದಂತೆ. "ಸಾರ್ವತ್ರಿಕ ವಿಷಯವನ್ನು ಆ ರೀತಿ ವೈಯಕ್ತಿಕವಾಗಿ ನೋಡಬಾರದು" ಎಂಬ ಫಾರ್ಮಾನು ಬೇರೆ. ಇವರ ಮಕ್ಕಳದ್ದು ವೈಯಕ್ತಿಕ ವಿಷಯ. ಹಳ್ಳಿಯ ಬಡ ಮಕ್ಕಳದ್ದು ಸಾರ್ವತ್ರಿಕ ವಿಷಯ! ಹೇಗಿದೆ ನೋಡಿ ಇವರ ಹೋರಾಟದ ಪರಿ!

ಇದು ಹಾಲಂಬಿಯೊಬ್ಬರ ಕಥೆಯಲ್ಲ, ಬಹುತೇಕ ಎಲ್ಲಾ ಸಾಹಿತಿಗಳ ಒಳ ಹೂರಣವೂ ಇದೇನೆ. ಇನ್ನೊಬ್ಬರು ಪ್ರಸಿದ್ಧ ಸಾಹಿತಿ ಒಮ್ಮೆ ಕನ್ನಡಿಗರನ್ನೇ ತರ್ಲೆಗಳು ಅಂದರು. ಹಾಗೂ ಸಂಸ್ಕೃತ ಮಾಧ್ಯಮ ಬರಬೇಕು, ಸಂಸ್ಕೃತ ವಿದ್ಯಾಲಯ ಆಗಬೇಕು. ಕನ್ನಡವನ್ನು ಸರಿಯಾಗಿ ಮಾತಾಡಲು ಸಂಸ್ಕೃತ ಕಲಿಯಬೇಕು ಎಂದೆಲ್ಲಾ ತಮ್ಮ ಪಾಂಡಿತ್ಯ ಹೇರಿದ್ದರು. ಅವರಿಂದು "ಆಂಗ್ಲ ಮಾಧ್ಯಮ ಬೇಡ" ಎಂದು ಮತ್ತೆ ಬಡ ಮಕ್ಕಳಿಂದ ಆಂಗ್ಲವನ್ನು ದೂರವಿಡುವ ಕಾರ್ಯ ಮಾಡುತ್ತಿದ್ದಾರೆ. ಹಿಂದೆ ರಾಜಾಜಿಯವರು "ಕನ್ನಡವು ತೆಲುಗಿನಿಂದ ಆಂಗ್ಲರು ತಿರುಚಿದ ಭಾಷೆ" ಎಂದು ಹೇಳಿದಾಗ ಅದನ್ನೂ ಅಂದಿನ ಇಬ್ಬರು ಪ್ರಮುಖ ಸಾಹಿತಿಗಳು ಹೌದು ಎಂದು ಒಪ್ಪಿಕೊಂಡಿದ್ದರಂತೆ. ಅಂದರೆ ಇವರ ಸಾಹಿತ್ಯಕ್ಕೂ ಮನೋಭಾವಕ್ಕೂ ವ್ಯತ್ಯಾಸವಿರುತ್ತೆ ಅನ್ನೋದು ಅಂದಿನಿಂದಲೂ ಇರುವ ವಿಷಯವೇ.

ಇಲ್ಲಿ ನಡೆದಿರುವುದಿಷ್ಟು... ಹಾಲಂಬಿಯವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗುತ್ತಿರುವಂತೆಯೇ ಸೋತ ಚಂಪಾ ಇವರನ್ನು ಕಿಚಾಯಿಸಿದರು. ಇದರಿಂದ ಏನಾದರೂ ಮಾಡಿ ಚಮಪಾರಿಗೆ ಒಂದು ಟಾಂಗ್ ಕೊಟ್ಟು "ನನ್ನ ಶಕ್ತಿ ಹೀಗಿದೆ ನೋಡಿ" ಎಂದು ತೋರಿಸಲು ಕಾದಿದ್ದವರಿಗೆ ತಕ್ಷಣವೇ ಕಂಡಿದ್ದು ಸರ್ಕಾರಿ ಆಂಗ್ಲ ಮಾಧ್ಯಮದ ಆದೇಶ. ಹಿಂದು ಮುಂದು ಯೋಚಿಸದೇ ಈ ಹೋರಾಟಕ್ಕೆ ಕೈ ಹಾಕಿದ್ದಾರೆ. 

ಆದರೆ ಹಾಲಂಬಿಯವರೇ ನಿಮ್ಮ ಅರ್ಥವಿಲ್ಲದ ಈ ಹೋರಾಟವ್ನನು ಕೈಬಿಡಿ. ನಿಮ್ಮ ಬಿಟ್ಟಿ ಪ್ರಚಾರಕ್ಕಾಗಿ ಬಡತನದೊಂದಿಗೆ ಆಟವಾಡಬೇಡಿ. ಬಡ ಮಕ್ಕಳೂ ಅಷ್ಟಿಷ್ಟು ಆಂಗ್ಲ ಕಲಿತು ( ಅವರೇನೂ ಕನ್ನಡ ಮರೆತು ಆಂಗ್ಲ ಕಲಿಯುತ್ತಿಲ್ಲ, ಐದನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಓದಿರುತ್ತಾರೆ) ಸಾಮರ್ಥ್ಯಾನುಸಾರ ಕೆಲಸ ಗಿಟ್ಟಿಸಲಿ. ಕನ್ನಡವನ್ನು ಅನ್ನದ ಭಾಷೆಯಾಗಿ ಪರಿವರ್ತಿಸಲು ಏನು ಮಾಡಬೇಕು ಅನ್ನುವುದನ್ನು ಸಾಹಿತಿಗಳನ್ನೆಲ್ಲಾ ಕೂರಿಸಿಕೊಂಡು ಮಾತನಾಡಿ. ಅದಕ್ಕೆ ಬೇಕಾದ ಹೋರಾಟ ರೂಪಿಸಿ. ಅದು ಬಿಟ್ಟು ಈ ರೀತಿ ಕನ್ನಡ ಉಳಿಸುವ ಬರದಲ್ಲಿ ಬಡ ಮಕ್ಕಳಿಗೆ ದ್ರೋಹ ಮಾಡಬೇಡಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...