ಕೊನೆಗೂ ನಮ್ಮ ಕಣ್ಣೆದುರೇ ನಡೆದ ಒಂದು ಭೃಹತ್ ಚಳವಳಿ ನೋಡ ನೋಡುತ್ತಲೇ ಮಣ್ಣು ಪಾಲಾಗಿದೆ. ಗಾಂಧಿಯನ್ನು ನಾವ್ಯಾರೂ ನೋಡಿಲ್ಲ. ಆದರೆ ಅವರ ಅಪರಾವತಾರದಂತೆ ಬಂದ ಅಣ್ಣ ನಮ್ಮೆಲ್ಲರ ಕಣ್ಮಣಿಯಾದುದು ನಿಜ. ಹತ್ತಾರು ವರ್ಷಗಳ ಅಣ್ಣ ಹೋರಾಟ ಒಂದು ಅಂತಿಮ ಘಟ್ಟಕ್ಕೆ ಬಂದುದು ಜನಲೋಕಪಾಲ ಹೋರಾಟದಿಂದ. ಇದರಿಮದಾಗಿ ಅವರು ದೇಶಾಧ್ಯಂತ ಪ್ರಖ್ಯಾತರಾದರು. ಹಾಗೆಯೇ ಜನರ ಒಲವನ್ನೂ ಗಳಿಸಿ ಹೋರಾಟವು ಅತ್ಯಂತ ಯಶಸ್ವಿಯಾಗುವಂತೆ ಮಾಡಿದರು. ಆದರೆ ಅದಕ್ಕೆ ಬಾಗಿದಂತೆ ನಾಟಕವಾಡಿದ ಕಳ್ಳ ಕಾಂಗ್ರೆಸಿಗರು ಪೊಳ್ಳು ಲೋಕಪಾಲವನ್ನೇ ಲೋಕಸಭೆಯಲ್ಲಿ ಮಂಡನೆ ಮಾಡಿತು. ತಾನೇನೋ ಸಂಪನ್ನ ಎಂದು ಬೊಗಳೆ ಬಿಡುವ ಬಿಜೆಪಿ ಸಹ ಅಣ್ಣಾ ಬೆಂಬಲಕ್ಕೆ ನಿಲ್ಲಲಿಲ್ಲ. ಅದರೊಳಗೇ ಹತ್ತಾರು ಹುಳುಕು. ಆದರೂ ಅಣ್ಣಾ ಹೋರಾಟ ಒಂದು ಕ್ರಾಂತಿ ಗೀತೆಯಾಗಿ ಮುಂದುವರಿಯುತ್ತಲೇ ಇತ್ತು. ಅಣ್ಣಾಗೆ ಜೊತೆಯಾಗಿ ನಮ್ಮ ಸಂತೋಷ್ ಹೆಗಡೆ, ಕೇಜ್ರೀವಾಲ್, ಕಿರಣ್ ಬೇಡಿ, ಪ್ರಶಾಂತ್ ಭೂಷಣ್ ಮತ್ತವರ ಮಗ - ಹೀಗೆ ಒಂದು ಪ್ರಾಮಾನಿಕರ ಪಡೆಯೇ ಇತ್ತು. ಆದರೆ ಅದೆಲ್ಲವೂ ಕೇವಲ ಒಂದು ವರ್ಷದ ಅವಧಿಯಲ್ಲಿ ಗಾಳಿಯಲ್ಲಿ ಕರಗಿದ ಕರ್ಪೂರದಂತೆ ನಿಧಾನವಾಗಿ ಮರೆಯಾಗುತ್ತಿದೆ.
ಒಂದು ಸಮಯ ಸರ್ಕಾರವನ್ನೇ ನಡುಗಿಸಿದ ಈ ಹೋರಾಟ ನೋಡ ನೋಡುತ್ತಲೇ ಧರಾಶಾಯಿಯಾದುದು ಈ ದೇಶದ ದುರಂತ. ಆದರೆ ಇದು ಅಣ್ಣಾ ಮತ್ತವರ ಸಂಗಡಿಗರು ಮಾಡಿದ ಸ್ವಯಂಕೃತಪರಾಧವಲ್ಲದೇ ಬೇರೇನೂ ಅಲ್ಲ. ಬರೀ ಭ್ರಷ್ಟರಿಂದಲೇ ತುಂಬಿರುವ ಇಂದಿನ ರಾಜಕಾರಣದಲ್ಲಿ ಒಂದು ಬಲಿಷ್ಟ ಜನಲೋಕಪಾಲ ಬರುವುದು ದೂರದ ಮಾತೇ ಆಗಿತ್ತು. ಅದನ್ನು ಶತಾಯ ಗತಾಯ ತಡೆಯಲೇ ಬೇಕೆಂದು ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಲೂ ಟೊಂಕ ಕಟ್ಟಿ ನಿಂತಿದ್ದವು. ಇಂತಹ ಸಮಯದಲ್ಲಿ ಅಣ್ಣಾ ತಂಡ ತನ್ನ ಧ್ಯೇಯವನ್ನು ಕೇವಲ ಜನಲೋಕಪಾಲದತ್ತ ಮಾತ್ರ ಕೇಂದ್ರೀಕರಿಸಿ ಉಳಿದ ಎಲ್ಲವನ್ನೂ ಕಣ್ಣೆತ್ತಿಯೂ ನೋಡದೇ ಇದ್ದಿದ್ದರೆ ಹೋರಾಟದ ತೀವ್ರತೆ ಉಳಿಯುತ್ತಿತ್ತೇನೋ.
ಆದರೆ ಇವರು ಮಾಡಿದ್ದಾದರೂ ಏನು ? ಕೇಂದ್ರ ಮಂತ್ರಿಗಳ ವಿರುದ್ಧ ಆರೋಪ ಮಾಡತೊಡಗಿದರು. ಪ್ರಧಾನ ಮಂತ್ರಿಯ ವಿರುದ್ಧವೇ ತೊಡೆ ತಟ್ಟಿದರು. ಆದರೆ ಅಪ್ಪಿ ತಪ್ಪಿಯೂ ಕರ್ನಾಟಕದ ದರೋಡೆಗಾರ ಯಡ್ಡಿಯ ಬಗ್ಗೆ ಚಕಾರವೆತ್ತಲಿಲ್ಲ. ಬಿಜೆಪಿಯ ಭ್ರಷ್ಟರ ಬಗ್ಗೆ ಮಾತಾಡಲಿಲ್ಲ. ಯಾರ ಬಗ್ಗೆಯೂ ಅವರು ಮಾತಾಡಲೇ ಬಾರದಿತ್ತು. ಸರ್ಕಾರದ ವಿರುದ್ಧ ಸವಾಲು ಎಸೆದರು. ಇದೆಲ್ಲಾ ನೋಡಿದ ಯಾವ ಭ್ರಷ್ಟ ಇವರನ್ನು ಬೆಳೆಯಲು, ಉಳಿಯಲು ಬಿಟ್ಟಾನು ?
ಜನಶಕ್ತಿಯಾಗಿ ನಿಲ್ಲಬೇಕಾಗಿದ್ದವರು ರಾಜಕೀಯ ಶಕ್ತಿಯಾಗಿ ಬದಲಾಗಲು ಯೋಚಿಸಿದ್ದೇ ಇವರು ಮಾಡಿದ ಮಹಾಪರಾಧ. ಇವರೇನಾದರೂ ಈ ರೀತಿ ರಾಜಕಾರಣಕ್ಕೆ ಇಳಿಯುತ್ತೇವೆ ಎಂದು ಕಳೆದ ವರ್ಷವೇ ಘೋಷಿಸಿದ್ದರೆ ಆಗಲೇ ಜನರ ಬೆಂಬಲ ಶೂನ್ಯಕ್ಕಿಳಿಯುತ್ತಿತ್ತು. ಈ ಬಾರಿಯೂ ರಾಜಕೀಯ ಪಕ್ಷ ಕಟ್ಟುತ್ತೇವೆ ಎಂಬ ಘೋಷಣೆಯನ್ನು ಏಕಾಏಕೀ ಘೋಷಿಸಿದರು. ಇವರು ರಾಜಕಾರಣಿಗಳಿಗೆ ಶಾಕ್ ನೀಡಲು ಹೋದರು. ಆದರೆ ನಿಜವಾಗಿಯೂ ಶಾಕ್ ಪಡೆದುದು ಅಣ್ಣಾ ಅಭಿಮಾನಿಗಳೇ! ಇವರ ರಾಜಕೀಯದ ವಿಷಯ ಕೇಳಿ ರಾಜಕಾರಣಿಗಳೇಲ್ಲಾ ಶಾಕ್ ಆಗುವ ಬದಲು ಖುಷಿಯಾಗಿ ಹೋಗಿದ್ದಾರೆ.
ಅಣ್ಣಾ ಯಾಕೆ ಇಂತಹ ಯಡವಟ್ಟು ಮಾಡಿದರು ಎಂಬುದು ಅರ್ಥವಾಗದ ವಿಷಯ. ಬಹುಶಃ ಕೇಜ್ರಿವಾಲ್, ಕಿರಣ್ಬೇಡಿ ಮುಂತಾದವರ ಆತುರದ ನಿರ್ಧಾರ ಇದಕ್ಕೆ ಕಾರಣವಾಗಿದ್ದಿರಬಹುದು. ಈ ವಿಷಯದಲ್ಲಿ ಸಮಚಿತ್ತದಿಂದ ನಡೆದುಕೊಂಡ ಸಂತೋಷ್ ಹೆಗಡೆಯವರನ್ನು ಮೆಚ್ಚಲೇ ಬೇಕು. ಬಹುಶಃ ಕೇಜ್ರಿವಾಲ್ ಅವರ ರಾಜಕೀಯ ನಡೆಯ ವಾಸನೆ ಹಿಡಿದೇ ಹೆಗಡೆ ತುಂಬಾ ದಿನದಿಂದಲೂ ಅವರಿಂದ ದೂರವೇ ಇದ್ದರೇನೋ ಅನ್ನಿಸುತ್ತಿದೆ. ಅಣ್ಣಾ ಕಡೇ ಪಕ್ಷ ತಮ್ಮ ನಂತರದ ಹಿರಿಯರಾದ ಹೆಗಡೆಯವರಲ್ಲಿ ಈ ವಿಷಯದ ಬಗ್ಗೆ ಕೂಲಂಕುಶ ಚರ್ಚೆ ಮಾಡಬೇಕಾಗಿತ್ತು. ಜನರ ಅಭಿಪ್ರಾಯವನ್ನು ತಿಳಿಯಬೇಕಾಗಿತ್ತು. ತಮ್ಮ ಸುತ್ತ ಕಟ್ಟಿರುವ ಕೋಟೆಯನ್ನು ಕಿತ್ತೆಸೆದು ಹೊರ ಬಂದು ಜನರ ಜೊತೆ ಬೆರೆತಿದ್ದರೆ ಹೋರಾಟ ಉಳಿಯುತ್ತಿತ್ತು.
ಕೊನೆಗೂ ಒಂದು ಹೋರಾಟವನ್ನು ನೋಡುವ ಭಾಗ್ಯ ಮಾತ್ರ ನಮ್ಮದಾಯ್ತು... ಅದರ ಪ್ರತಿಫಲ ಕಾನುವ ಭಾಗ್ಯ ಇಲ್ಲವಾಗಿತ್ತು!

ಕಾಮೆಂಟ್ಗಳು