ವಿಷಯಕ್ಕೆ ಹೋಗಿ

ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ

ಪ್ಲಾಸ್ಟಿಕ್ ಕೊಟ್ಟೆಗಳನ್ನು ಸಂಗ್ರಹಿಸಿ ಮರುಬಳಕೆ ಮಾಡಿರಿ

ಬೆಂಗಳೂರಿನಲ್ಲಿ ಕಸದ ಸಮಸ್ಯೆ ವಿಪರೀತ. ಹೀಗೇ ಕಸದ ವಿಲೇವಾರಿಯನ್ನು ಸರಿಯಾಗಿ ಮಾಡದೇ ಹೋದರೆ ಬೆಂಗಳೂರು ಸಹ ಚೆನ್ನೈ, ಮುಂಬೈ ರೀತಿ ಗಬ್ಬು ನಾರಲು ಶುರುವಾಗುತ್ತದೆ. ಕಸದಿಂದ ರಸ ಮಾಡಲು ಮಹಾನಗರ ಪಾಲಿಕೆಯವರಿಗೆ ಸಾಧ್ಯವಿಲ್ಲವಾದರೂ ಕಸದಿಂದ ವಿದ್ಯುತ್ ಆದರು ಮಾಡಬಹುದಿತ್ತು. ಅದಕ್ಕೆಲ್ಲಾ ಇಚ್ಚಾಶಕ್ತಿ ಬೇಕು. ಅದನ್ನು ನಮ್ಮ ಅಧಿಕಾರಿಗಳಿಂದ, ಕಾರ್ಪೋರೇಟರುಗಳಿಂದ ಅಪೇಕ್ಷಿಸಿದರೆ ತಪ್ಪಾಗುವುದೇನೋ. ಅಥವಾ ಅದಕ್ಕೂ ಕಸದ ಮಾಫಿಯಾ ಅಡ್ಡಗಾಲು ಹಾಕಿದೆಯೋ ಎಂಬ ಅನುಮಾನ ಬೇರೆ!

ಮಹಾನಗರ ಪಾಲಿಕೆಯ ಮಂಗಾಟ ಅತ್ಲಾಗಿರಲಿ, ಸಾರ್ವಜನಿಕರಾದ ನಾವು ಕಸದ ಸಮಸ್ಯೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದ್ದೇವೆ ಎಂಬುದೆ ಈಗಿನ ಪ್ರಶ್ನೆ. ನವ್ಯಾರೂ ಕಸದ ಬಗ್ಗೆ ಗಮನ ಹರಿಸಿಯೇ ಇಲ್ಲ. ಹಾಗೇನಾದರೂ ನಮ್ಮ ಗಮನ ಕಸದ ಬಗ್ಗೆ ಇದ್ದರೆ, ಪಾಲಿಕೆಯ ಕಸದ ವಾಹನ ಎಷ್ಟೊತ್ತಿಗೆ ಬರುತ್ತೆ.. ಎನ್ನುವುದರ ಬಗ್ಗೆ ಮಾತ್ರ. ಕಸದ ವಾಹನ ಬಂದು ಅದನ್ನು ಸಾಗ ಹಾಕಿದರೆ ಮುಗಿಯಿತು. ನಂತರ ನಮಗೇನೂ ಚಿಂತೆ ಇಲ್ಲ. ಆ ಕಸವನ್ನು ಎಲ್ಲಿ ತೆಗೆದುಕೊಂಡು ಹೋಗಿ ಹಾಕುತ್ತಾರೆ ಎಂಬುದರ ಅರಿವೂ ನಮಗಿಲ್ಲ. ಕಸದ ನಿಯಂತ್ರಣದ ಮಾತು ದೂರವೇ ಉಳಿಯಿತು.

ನಾನು ಚೆನ್ನೈಯನ್ನು ಚೆನ್ನಾಗಿ ನೋಡಿದ್ದೇನೆ. ಅಲ್ಲಿಗೆ ಹೋಲಿಸಿದರೆ ಕಸ ವಿಲೇವಾರಿಯಲ್ಲಿ ಬೆಂಗಳೂರು ಪಾಲಿಕೆ ಹತ್ತು ಪಟ್ಟು ಮೇಲು. ಆದರೂ ನಮ್ಮಲ್ಲಿ ಅನೇಕ ಮನೆಯವರು ಆಗಾಗ ಕಸವನ್ನು ಒಂದು ಪ್ಲಾಸ್ಟಿಕ್ ಕೊಟ್ಟೆಯಲ್ಲಿ ಕಟ್ಟಿ ಯಾರೂ ನೋಡದಿರುವಾಗ ರಸ್ತೆ ಬದಿ ಎಸೆಯುವುದನ್ನು ಕಾಣಬಹುದು. ಎಲ್ಲಾದರೂ ಒಂದು ಖಾಲಿ ನಿವೇಶನವಿದ್ದರಂತೂ ಮುಗಿದೇ ಹೋಯ್ತು, ಅದು ಖಾಲಿ ಇರುವುದೇ ಕಸ ತುಂಬಲಿಕ್ಕೆ ಎಂಬ ಮನೋಭಾವ ನಮ್ಮದು.

ಕಸದಲ್ಲೂ ಹಸಿ ( ಸುಲಭವಾಗಿ ಮಣ್ಣಿನಲ್ಲಿ ಕರಗುವ ) ಕಸಕ್ಕಿಂತ ಓಣ ಕಸ (ಪ್ಲಾಸ್ಟಿಕ್) ತುಂಬಾ ಅಪಾಯಕಾರಿ. ನಾವುಗಳು ಅದನ್ನೂ ಸರಿಯಾಗಿ ವಿಲೇವಾರಿ ಮಾಡುತ್ತಿಲ್ಲ. ಸರಿಯಾಗಿ ಉಪಯೋಗಿಸಲೂ ನಮಗೆ ತಿಳಿದಿಲ್ಲ. ಪ್ಲಾಸ್ಟಿಕ್ ಕೈಚೀಲಗಳನ್ನು ಮತ್ತೆ ಮತ್ತೆ ಉಪಯೋಗಿಸಿ ಹಣ ಉಳಿಸುವುದರೊಂದಿಗೆ ಪರಿಸರ ಮಲಿನ್ಯ ಮತ್ತು ಅದರ ತಯಾರಿಕೆಯನ್ನೂ ಕಡಿಮೆ ಮಾಡಬಹುದು. ನಾನು ಮೊದಲಿನಿಂದಲೂ ಇದನ್ನು ಮಾಡುತ್ತಾ ಬಂದಿದ್ದೇನೆ. ಸಾಮಾನುಗಳನ್ನು ತಂದಾಗ ಬರುವ ಪ್ಲಾಸ್ಟಿಕ್ ಕೈಚೀಲಗಳನ್ನು ಕಸದ ಜೊತೆ ಎಸೆಯದೇ ಚೆನ್ನಾಗಿ ಮಡಿಚಿ ಇಡುತ್ತೇನೆ. ಬಹಳಷ್ಟು ಸೇರಿದ ನಂತರ ಮೊದಲು ಯಾವುದಾದರೂ ಅಂಗಡಿಗೆ ಕೊಟ್ಟು ಬಿಡುತ್ತಿದ್ದೆ. ಆದರೆ ಈಗ ಹಾಗಲ್ಲ.

ನನ್ನ ಒಬ್ಬ ಮಿತ್ರನದು ದಿನಸಿ ಅಂಗಡಿ ಇದೆ. ಅವನ ಅಂಗಡಿ ದೂರ ಇರುವುದರಿಮದ ಅವನ ಅಂಗಡಿಯಿಂದ ನಾನು ಏನು ತರುವುದಿಲ್ಲವಾದರೂ ಆವನು ಆಗಾಗ ನನಗೆ ಪಾರ್ಟಿ ಕೊಡುತ್ತಿರುತ್ತಾನೆ. ಯಾವಾಗಲೂ ಅವನೇ ಬಿಲ್ ಕೊಡುತ್ತಿದ್ದ. ನಾನು ಕೊಡಲು ಹೋದರೂ ಬೇಡ ಅನ್ನುತ್ತಿದ್ದ. "ಆರ್ಥಿಕವಾಗಿ ನನು ಚೆನ್ನಾಗಿದ್ದೇನೆ, ಮುಂದೆ ಯಾವಾಗಲಾದರೂ ನಷ್ಟ ಆಗಿದ್ದರೆ ನೀನು ಪಾರ್ಟಿ ಕೊಡುವಂತೆ" ಎಂದು ಹೆಳಿ ನನ್ನ ಬಾಯಿ ಮುಚ್ಚಿಸುತ್ತಿದ್ದ. ಇದಕ್ಕೆ ಪರಿಹಾರವಾಗಿ ನನಗೆ ತೋಚಿದ್ದು ಪ್ಲಾಸ್ಟಿಕ್ ಕೊಟ್ಟೆಗಳು. ನಾವು ಯಾವಾಗಲೋ ಒಮ್ಮೆ ಪಾಟಿ ಮಾಡುವ ಹೊತ್ತಿಗೆ ನನ್ನ ಮನೆಯಲ್ಲಿ ಕೆಜಿಗಟ್ಟಲೇ ಪ್ಲಾಸ್ಟಿಕ್ ಕೊಟ್ಟೆಗಳ ಸಂಗ್ರಹ ಆಗಿರುತ್ತದೆ. ಅದನ್ನು ಅವನಿಗೆ ಕೊಡುತ್ತೇನೆ. ಪ್ಲಾಸ್ಟಿಕ್ ಮರು ಬಳಕೆ ಮಾಡಿದಂತೆಯೂ ಆಯ್ತು, ಪಾರ್ಟಿ ಕೊಟ್ಟವನ ಋಣ ತೀರಿಸಿದಂತೆಯೂ ಆಯ್ತು. ಹೀಗಿದೆ ನನ್ನ ಪರಿಸರ ಕಾಳಜಿ. 

ಕಾಮೆಂಟ್‌ಗಳು

Manu. ಹೇಳಿದ್ದಾರೆ…
ತುಂಬಾ ಚೆನ್ನಾಗಿದೆ ಸರ್..ನಿಮ್ಮ ತರಹನೇ ಎಲ್ಲರೂ ಮಾಡಿದರೆ ನಮ್ಮಲ್ಲಿ ಪ್ಲಾಸ್ಟಿಕ್ ಸಮಸ್ಯೆ ಸ್ವಲ್ಪ ಆದರೂ ಕಮ್ಮಿ ಆಗುತ್ತದೆ ಅಲ್ವಾ...
ಗುಡುಗು ಮಿಂಚು ಹೇಳಿದ್ದಾರೆ…
ಹೌದು ರಾಜೇಶ್ ಅವರೆ, ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಿದರೆ ಸಮಾಜ ಸುಧಾರಣೆ ಆಗುತ್ತೆ. ಪ್ರತಿಯೊಂದನ್ನೂ ಸರ್ಕಾರವೇ ಮಾಡಲಿ ಅಂತ ಕೂತರೆ ನಮ್ಮ ದೇಶ ಎಂದಿಗೂ ಉದ್ಧಾರ ಆಗಲ್ಲ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...