ವಿಷಯಕ್ಕೆ ಹೋಗಿ

”ಕೂಲಿಗಾಗಿ ಕಾಳು’ ಯೋಜನೆಗೂ ಹಾಕುವರೇ ಕಲ್ಲು ?


ಹೀಗೊಂದು ಅನುಮಾನ ಕಾಡುತ್ತಿದೆ. ಏಕೆಂದರೆ ನಿನ್ನೆ ಸುವರ್ಣಾ ನ್ಯೂಸ್‌ನಲ್ಲಿನ ಒಂದು ಚರ್ಚೆ ನಡೆಯುತ್ತಿತ್ತು. ಅದು ಕೇಂದ್ರ ಸರ್ಕಾರವು ಅಡುಗೆ ಅನಿಲ ಸಿಲಿಂಡರ್‌ಗಳನ್ನು ವರ್ಷಕ್ಕೆ ಆರಕ್ಕೆ ಸೀಮಿತಗೊಳಿಸಿರುವುದರ ಬಗ್ಗೆ ನಡೆದಿತ್ತು. ಅದರಲ್ಲಿ ಭಾಗವಹಿಸಿದ ವ್ಯಕ್ತಿಯೊಬ್ಬರು ಹೇಳಿದ್ದು ವರ್ಷಕ್ಕೆ ಹನ್ನೆರಡು ಸಿಲಿಂಡರುಗಳನ್ನು ನೀಡಲೇ ಬೇಕು. ಅದಕ್ಕೆ ಹಣ ಬೇಕಾದರೆ ನರೇಗಾ (ಕೂಲಿಗಾಗಿ ಕಾಳು ಯೋಜನೆ) ವನ್ನು ತೆಗೆದು ಹಾಕಿ ಆ ಹಣದಿಂದ ನೀಡಬೇಕು, ಕೂಲಿಗಾಗಿ ಕಾಳು ಯೋಜನೆಯಲ್ಲಿ ಕೂಲಿಗಳಿಗೆ 100 ರೂ ಹೋದರೆ 20 ರೂಪಾಯಿ ಮಧ್ಯವರ್ತಿ ಜೇಬು ಸೇರುತ್ತಿದೆ. ಅಲ್ಲದೇ ಇದರಿಂದ ಹೊಲಗಳಲ್ಲಿ ದುಡಿಯಲು ಕೂಲಿಗಳೇ ಸಿಗುತ್ತಿಲ್ಲ. ಎಂದರು. 

ಅನಿಲ ಸಿಲಿಂಡರ್ ವಿಷಯಕ್ಕೆ ಬಂದರೆ ಅದನ್ನು ಉಪಯೋಗಿಸುತ್ತಿರುವುದು ಬಹುತೇಕ ಮಧ್ಯಮ ಮತ್ತು ಧನಿಕ ವರ್ಗ. ಬಡವರು, ಕಡು ಬಡವರು ಇಂದಿಗೂ ಸೌದೆ, ಸೀಮೆಣ್ಣೆಯನ್ನೇ ನಂಬಿಕೊಂಡಿದ್ದಾರೆ. ಮಧ್ಯಮ ವರ್ಗದ ಒಂದು ಸಾಧಾರಣ ಕುಟುಂಬಕ್ಕೆ ವರ್ಷಕ್ಕೆ 6 ಸಿಲಿಂಡರ್ ಅಡುಗೆ ಮಾಡಿಕೊಳ್ಳಲು ಸಾಕು. ಸ್ನಾನಕ್ಕೆ ನೀರು ಕಾಯಿಸಲೂ ಅದನ್ನೇ ಬಳಸಿದರೆ ಸಾಕಾಗುವುದಿಲ್ಲ. ಆದರೆ ಸರ್ಕಾರ ಸಬ್ಸಿಡಿ ಕೊಡುವುದು ಅಡುಗೆ ಮಾಡಿಕೊಳ್ಳಲಿಕ್ಕೇ ಹೊರತೂ ಪ್ರಜೆಗಳು ಬಿಸಿಬಿಸಿ ನೀರು ಸ್ನಾನ ಮಾಡಿ ಹಾಯಾಗಿರಲಿ ಎಂದೇನಲ್ಲ. ಪ್ರಜೆಗಳ ಎಲ್ಲಾ ಬೇಡಿಕೆಯನ್ನೂ ನೀಡಲು ಯಾವ ಸರ್ಕಾರದಿಂದಲೂ ಸಾಧ್ಯವಿಲ್ಲ. ಮಿತ ಬಳಕೆಯನ್ನು ಸಾರ್ವಜನಿಕರೂ ಸ್ವಲ್ಪ ರೂಢಿಸಿಕೊಂಡರೆ ದೇಶಕ್ಕೆ ಒಳ್ಳೆಯದು. ಇನ್ನು ಧನಿಕರಿಗೆ ವರ್ಷಕ್ಕೆ 12 ಹಾಗಿರಲಿ, 24 ಕೊಟ್ಟರೂ ಸಾಕಾಗುವುದಿಲ್ಲ. ಅವರ ಬೇಡಿಕೆ ಅಂತಹುದು. ಅದಕ್ಕೆ ಯಾರೂ ಏನೂ ಮಾಡಲಾಗದು. 

ನಾವು ಅನಿಲವನ್ನು ಮಾತ್ರ ಉಳಿಸಿದರೆ ಸಾಲದು, ವಿದ್ಯುತ್ ಉಳಿತಾಯವನ್ನೂ ನೋಡಬೇಕಾಗಿದೆ. ನಗರಗಳಲ್ಲಿ ಒತ್ತೊತ್ತಾಗಿ ಮನೆಗಳನ್ನು ಕಟ್ಟಿಕೊಂಡಿರುವುದರಿಂದ ಗಾಳಿ, ಬೆಳಕು ಎರಡೂ ಮನೆಯನ್ನು ಪ್ರವೇಶಿಸುವುದಿಲ್ಲ. ಹೀಗಾಗಿ ಹಗಲಿನಲ್ಲಿ ದೀಪವನ್ನೂ, ರಾತ್ರಿಯಲ್ಲಿ ಗಾಳಿಪಂಕವನ್ನೂ ವ್ಯರ್ಥವಾಗಿ ಉರಿಸಿ ವಿದ್ಯುತ್ ಪೋಲು ನಡೆಯುತ್ತಿದೆ. ಇಷ್ಟಾದರೂ ನಗರವಾಸಿಗಳಿಗೆ ವಿದ್ಯುತ್ ಪೂರೈಕೆ ಹೆಚ್ಚು.

ಹಳ್ಳಿಯಲ್ಲಿ ಧನಿಕರ ಕೂಲಿಗೆ ಆಳುಗಳು ಸಿಗುತ್ತಿಲ್ಲ ಅನ್ನೋದೇನೋ ನಿಜ. ಆದರೆ ಇದು ಅವರ ಸ್ವಯಂಕೃತಪರಾಧ. ಹಿಂದೆ ಆಳುಗಳು ಹೆಚ್ಚಾಗಿ ದೊರೆಯುತ್ತಿದ್ದ ಸಮಯದಲ್ಲಿ ಇವರು ಎಷ್ಟು ಕೂಲಿ ಕೊಡುತ್ತಿದ್ದರು ಎಂಬುದನ್ನು ಅವರು ಈಗ ನೆನಪು ಮಾಡಿಕೊಳ್ಳಬೇಕು. ಒಂದು ವೇಳೆ ಉತ್ತಮವಾದ ಕೂಲಿ ನೀಡಿದ್ದರೆ ಹಳ್ಳಿಯ ಜನರು ನಗರಗಳಿಗೆ ಇಷ್ಟೊಂದು ವಲಸೆ ಬರುತ್ತಿರಲಿಲ್ಲ. ಕೂಲಿ ನೀಡಿದರೂ ಸಹ ಯಾವುದೇ ಜೀವನದ ಭದ್ರತೆ ನೀಡಲು ಧನಿಕರು ಮುಂದಾಗಿಲ್ಲ. ಬಡವರು ಇರುವುದು ಕೂಲಿ ಮಾಡಲಿಕ್ಕೆ ಮಾತ್ರ, ಹಾಗೂ ಬಡವರು ಬಡವರಾಗಿಯೇ ಇರಬೇಕು ಅನ್ನೋದು ಧನಿಕರ ಭಾವನೆ. ಅದು ಈಗಲೂ ಬದಲಾಗಿಲ್ಲ ಅನ್ನೋದು ವಿಷಾಧಕರ. 

ತಲತಲಾಂತರದಿಂದ ಈ ರೀತಿ ಕಡಿಮೆ ಕೂಲಿ ನೀಡಿ ಬಡವರನ್ನು ವಂಚಿಸಿದೆ ಧನಿಕ ವರ್ಗ. ಈಗ ಸರ್ಕಾರದ ಕೂಲಿಗಾಗಿ ಕಾಳು ಯೋಜನೆಯಿಂದ ನಾಲ್ಕು ಕಾಸು ಮಾಡಿಕೊಳ್ಳುತ್ತಿದ್ದರೆ ಅದರ ಮೇಲೂ ವಕ್ರ ನೋಟ ಬೀರಿರುವಂತಿದೆ. ಅದನ್ನು ನಿಲ್ಲಿಸಿದರೆ ಅನಿವಾರ್ಯವಾಗಿ ಬಡವರು ತಮ್ಮ ಕೆಲಸಕ್ಕೆ ಬಂದೇ ಬರುತ್ತಾರೆ ಎಂಬ ದುರಾಲೋಚನೆ ಅವರದು. ಅದಕ್ಕಾಗಿ ಅಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ಧನಿ ಎತ್ತಿದ್ದಾರೆ. ಅಕ್ರಮದ ಬಗ್ಗೆ ಧನಿ ಎತ್ತುವುದೇನೋ ಸರಿ, ಆದರೆ ಅದಕ್ಕಾಗಿ ಆ ಯೋಜನೆಯನ್ನೇ ನಿಲ್ಲಿಸಬೇಕು ಅನ್ನೋದು ಇವರ ಕ್ರೂರತನಕ್ಕೆ ಸಾಕ್ಷಿ.

ನಮ್ಮ ದೇಶದಲ್ಲಿ ಅಕ್ರಮ ಯಾವುದರಲ್ಲಿ ನಡೆಯುತ್ತಿಲ್ಲ ? ನೂರು ರೂಪಾಯಿಯ ಕೂಲಿಗಾಗಿ ಕಾಳುವಿನಿಂದ ಹಿಡಿದು ನೂರು ಕೋಟಿಯ ಬೃಹತ್ ಯೋಜನೆಯಾದರೂ ಸಹ ಅಕ್ರಮವಿಲ್ಲದೇ ನಡೆಯುತ್ತಿಲ್ಲ. ಕೂಲಿಗಾಗಿ ಕಾಳು ಯೋಜನೆಯಲ್ಲಿ ಹತ್ತಿಪ್ಪತ್ತು ರೂಪಯಿ ಮಧ್ಯವರ್ತಿಯ ಅಥವಾ ಗ್ರಾ.ಪಂ ಪಿಡಿಓ ಜೇಬು ಸೇರಿದರೆ ನೂರಾರು ಕೋಟಿ ಯೋಜನೆಗಳಲ್ಲಿ ಹತ್ತಿಪ್ಪತ್ತು ಕೋಟಿ ರಾಜಕಾರಣಿಗಳ, ಅಧಿಕಾರಿಗಳ ಬೊಕ್ಕಸಕ್ಕೆ ಹೋಗುತ್ತಿದೆ. ಸಾವಿರಾರು ಕೋಟಿಯ ಯೋಜನೆಗಳಲ್ಲಿ ನೂರಾರು ಕೋಟಿ ಅಕ್ರಮವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಬಡವರ ದುಡಿಮೆಗೂ ಇವರು ಕಲ್ಲು ಹಾಕಲು ತಯಾರಾಗಬೇಕೇ ?

ಕೂಲಿಗಾಗಿ ಕಾಳು ಯೋಜನೆಯಲ್ಲಿ ಅಷ್ಟಿಷ್ಟು ಅಕ್ರಮ ನಡೆದಿದ್ದರೂ ಸಹ ಅದು ಯಶಸ್ವಿಯಾಗಿದೆ. ಹಳ್ಳಿಗಳಲ್ಲಿ ಅನೇಕ ಕೆಲಸಗಳು ಇದರಿಂದ ನಡೆದಿವೆ. ಗ್ರಾ.ಪಂ. ಮಟ್ಟದಲ್ಲಿ ಹಲವಾರು ಕುಗ್ರಾಮಗಳ ರಸ್ತೆಯನ್ನು ಸರಿಪಡಿಸಿದ್ದಾರೆ. ಕೆರೆ ಕಟ್ಟೆಗಳನ್ನು ಅಭಿವೃದ್ದಿ ಮಾಡಲಾಗಿದೆ. ಬಂಜರು ಭೂಮಿಯಲ್ಲಿ ಗಿಡಗಳನ್ನು ನೆಡಲಾಗಿದೆ. ಇದೆಲ್ಲಾ ಈ ಯೋಜನೆಯಿಂದ ಆದ ಅನುಕೂಲವಲ್ಲವೇ ? ಮೇಲಾಗಿ ಬಡವರಿಗೆ ನೂರು ದಿನದ ಕೆಲಸ ದೊರೆತು ಅವರು ಕಷ್ಟಪಟ್ಟು ದುಡಿದು ಮೂರು ಹೊತ್ತು ನೆಮ್ಮದಿಯಗಿ ಉಣ್ಣುವಂತಾಗಿದೆ. ಅದಕ್ಕಿಂತಾ ಬೇರೇನು ಬೇಕು ? ಆದರೂ ಕೆಲವು ಧನಿಕರಿಗೆ ಬಡವರ ಅನ್ನದ ಮೇಲೇ ಕಣ್ಣು. ಬಡವರಿಗೆ ಹೊಟ್ಟೆ ತುಂಬ ಅನ್ನ ಸಿಕ್ಕರೆ ತಮ್ಮ ಹೊಲದ ಕೆಲಸ ಯಾರು ಮಾಡುವುದು? ಎಂಬ ಚಿಂತೆ ಅವರಿಗೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಪಡುವಣಕ್ಕೆ ಹೊರಟ ವಿಮಾನ ಏಕೆ ಬೇಗನೆ ತಲುಪುವುದಿಲ್ಲ ?

ಭೂಮಿ ವೇಗವಾಗಿ ಸುತ್ತುತ್ತಿದೆ ಎಂಬುದನ್ನು ಒಪ್ಪದವರು ಮುಂದಿಡುವ ಒಂದು ಪ್ರಶ್ನೆ ಹೀಗಿದೆ. "ಭೂಮಿ ಅಷ್ಟು ವೇಗವಾಗಿ ತಿರುಗುತ್ತ ಇದ್ದರೆ ಒಂದು ವಿಮಾನವು ಚೀನಾದಿಂದ ಸೌದಿಗೆ ಹೋಗಬೇಕಾದಲ್ಲಿ ಸ್ವಲ್ಪ ಮೇಲೆ ಹೋಗಿ ನಿಂತುಕೊಂಡರೆ ಸಾಕಲ್ಲ, ಭೂಮಿ ತಿರುಗುವುದರಿಂದ ಸೌದಿ ಅರೇಬಿಯಾ ತಾನಾಗಿಯೇ ವಿಮಾನದ ಕೆಳಗೆ ಬರುತ್ತದೆ. ಅಥವಾ ಮೂಡಣ ದಿಕ್ಕಿಗೆ ಹೊರಟ ವಿಮಾನವು ತಡವಾಗಿ ತಲುಪಬೇಕು ಮತ್ತು ಪಡುವಣ ದಿಕ್ಕಿಗೆ ಹೊರಟ ವಿಮಾನವು ಬೇಗನೆ ತಲುಪಬೇಕು" ಎಂಬ ವಾದವನ್ನು ಮುಂದಿಡುತ್ತಾರೆ. ಆದರೆ ಹಾಗೆ ಆಗಲು ಸಾಧ್ಯವಿಲ್ಲ, ಏಕೆಂದರೆ ಭೂಮಿ ಅಂದರೆ ಬರೀ ನೆಲವಷ್ಟೇ ಅಲ್ಲ, ಅದರ ಸುತ್ತಲಿನ ವಾತಾವರನವೂ ಸೇರಿ ಅದರ ಜೊತೆಗೇ ತಿರುಗುತ್ತಾ ಇದೆ. ಹಾಗಾಗಿ ವಿಮಾನವು ಮೇಲೆ ಹೋಗಿ ನಿಂತರೂ ಸಹ ಅದು ಭೂಮಿಯ ಜೊತೆಗೇ ಸಾಗುತ್ತದೆಯಾದ್ದರಿಂದ ಕೆಳಗಿನ ನೆಲ ಮಾತ್ರ ಜರುಗಲು ಸಾಧ್ಯ ಇಲ್ಲ. ಇದನ್ನು ನಾವೇ ಪರಿಶೀಲಿಸಬಹುದು. ಹೇಗೆಂದರೆ.. ವೇಗವಾಗಿ ಹೋಗುತ್ತಿರುವ ರೈಲಿನ ಎಲ್ಲಾ ಕಿಟಕಿಗಳನ್ನೂ ಮುಚ್ಚಿ ಅದರ ಮಾಡಿನ ಹತ್ತಿರದಿಂದ ಒಂದು ಚಿಕ್ಕ ವಸ್ತುವನ್ನು (ಉದಾ : ಗೋಲಿ) ಬಿಟ್ಟರೆ ಅದು ನಾವು ಬಿಟ್ಟಬಿಂದುವಿನ ನೇರಕ್ಕೇ ಬಿಳುತ್ತದೆಯೆ ಹೊರತಾಗಿ ರೈಲು ಓಡುತ್ತಿರುವುದರಿಂದ ಸ್ವಲ್ಪ ಹಿಂದೆ ಬೀಳುವುದಿಲ್ಲ. ಹಾಗೆಯೇ ಗಾಳಿಯಾಡದಂತೆ ಮುಚ್ಚಿದ ರೈಲು ಬೋಗಿಯ ಒಳಗೆ ಒಂದು ತುದಿಯಿಂದ ಇನ್ನೊಂದು ತುದಿಗೆ ಚೆಂಡನ್ನು ಒಂದೇ ಜೋರಿನಲ್ಲಿ ಎಸೆದರೆ ಅದು ಎರಡೂ ದಿಕ್ಕಿಗೂ (ಮುಂದಿನಿ...