ವಿಷಯಕ್ಕೆ ಹೋಗಿ

ಕಾವೇರಿ ಕೊಳ್ಳ ಮತ್ತು ಕದೀಮ ಕಳ್ಳರು !

ಕಾವೇರಿ ಕೊಳ್ಳದ ಕದನ ಸಧ್ಯಕ್ಕೆ ಮುಗಿದು ಅನ್ನಿಸುತ್ತೆ. ಮುಗಿಸುವ ಯೋಚನೆಯೂ ನಮ್ಮ ಯಾವ ರಾಜಕಾರಣಿಗಳಿಗೂ ಇದ್ದಂತಿಲ್ಲ. ಎಲ್ಲರೂ ಕಾವೇರಿಯ ಈ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವವರೆ. 

ಅಂದು ನಡೆದ ಪ್ರಧಾನಿಗಳ ಅಧ್ಯಕ್ಷತೆಯ ಕಾವೇರಿ ಪ್ರಾಧಿಕಾರದ ಸಬೆಯಲ್ಲಿ ಸಿಂಗ್ ನೀಡಿದ ಆದೇಶ ನಮ್ಮ ರಾಜ್ಯಕ್ಕೆ ಮಾರಕವಾಗಿತ್ತು. ಜಯಾ ಕೇಳಿದ್ದು ಪ್ರತಿ ದಿನ ೨ ಟಿಎಂಸಿ. ಸಿಂಗ್ ಬಿಡಲು ಹೇಳಿದ್ದು ದಿನವೂ ೯,೦೦೦ ಕ್ಯೂಸೆಕ್ ನೀರು. ಪರವಾಗಿಲ್ಲ, ೨ ಟಿಎಂಸಿ ಕೇಳಿದರೆ ಕೇವಲ ೯,೦೦೦ ಕ್ಯೂಸೆಕ್ ನೀಡಲು ಹೇಳಿ ಕರ್ನಾಟಕದ ಕಡೆಗೇ ನ್ಯಾಯ ಒದಗಿಸಿದ್ದಾರೆ ಅನ್ನುವಂತಿಲ್ಲ. ಏಕೆಂದರೆ ಜಯಾ ಇಲ್ಲಿ ಮಹಾನ್ ನಾಟಕವಾಡಿದ್ದಾಳೆ. ಅದಕ್ಕೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಅವಳಿಗೆ ಸಧ್ಯಕ್ಕೆ ನೀರಿನ ಅವಶ್ಯಕತೆಯೇ ಇಲ್ಲ. ಈಗಾಗಲೇ ರಾಜ್ಯದಿಂದ ಸಾಕಷ್ಟು ನೀರು ಹೋಗಿ ಮರಟ್ಟೂರು ಅಣೆ ತುಂಬಿಸಿದೆ. ತಮಿಳುನಾಡಿನಲ್ಲಿ ಹಿಂಗಾರು ಮಳೆಯೇ ಹೆಚ್ಚು. ಅದು ಇನ್ನೂ ಬಂದೇ ಇಲ್ಲ. ಅದು ಬರುವ ಸಮಯಕ್ಕೆ ಬೇಕಾದಷ್ಟು ನೀರು ಸಿಕ್ಕಿ ಅದು ಹೆಚ್ಚಾಗಿ ಸಮುದ್ರವನ್ನೂ ಸೇರುತ್ತದೆ. ಆದರೂ ಅವಳಿಗೆ ಕರ್ನಾಟಕದ ಮೂರ್ಖ ರಾಜಕಾರಣಿಗಳನ್ನು ಆಟ ಆಡಿಸುವ ಚಟ. ಆದುದರಿಂದಲೇ ಆಕೆ ದಿನವೂ ೨ ಟಿಎಂಸಿ ನೀರು ಬೇಕು ಎಂದು ಕೇಳಿದ್ದು.  

ಕಾವೇರಿ ವಿಷಯದಲ್ಲಿ ಕರ್ನಾಟಕದ ರಾಜಕಾರಣಿಗಳು ಸರಿಯಾಗಿ ವ್ಯವಹಾರ ನಡೆಸಲ್ಲ ಅನ್ನೊದು ಲಗಾಯ್ತಿನಿಂದಲೂ ತಿಳಿದು ಬಂದಿರುವ ವಿಷಯ. ಅದರಲ್ಲಿ ಹೊಸದೇನೂ ಇಲ್ಲ. ಅದರಲ್ಲೂ ಆಂತರಿಕ ಕಚ್ಚಾಟದಲ್ಲೇ ಮುಳುಗಿರುವ ಬಿಜೆಪಿಗೆ ಇತ್ತ ಗಮನ ಹರಿಸಲು ಸಮಯವೂ ಇಲ್ಲ. ಕಾವೇರಿ ಕದನ ಶುರುವಾಗಿ ೨೫ ದಿನ ಕಳೆದರೂ ಪರಮ ಪ್ರಾಮಾಣಿಕ ಕಾನೂನು ಮಂತ್ರಿ ಕಾಣೆಯಾಗಿದ್ದಾರೆ ಎಂದರೆ ಈ ಸರ್ಕಾರಕ್ಕೆ ಅದೆಂತಹ ದರಿದ್ರ ಬಡಿದಿದೆ ಅನ್ನೋದು ತಿಳಿಯುತ್ತೆ. ಈ ನಾಲಾಯಕ್ ಸುರೇಶ್ ಕುಮಾರ‍್ ಅಂದಿನ ಪ್ರಧಾನಿಗಳ ಸಭೆಗೂ ಹೋಗಿರಲಿಲ್ಲ. ಇವರು ಹಾಗಿರಲಿ ನ್ಯಾಯಾಲಯಕ್ಕೆ ರಾಜ್ಯದ ಪರ ಮುಖ್ಯ ನ್ಯಾಯವಾದಿ ನಾರಿಮನ್ ಅವರನ್ನೇ ಕಳಿಸಲಿಲ್ಲ ಅಂದರೆ ಇವರ ಬೇಜವಾಬ್ದಾರಿ ಎಷ್ಟು ಅನ್ನೋದನ್ನು ಅರಿಯಬಹುದು. ಮೈಸೂರು ಮಂಡ್ಯ ಹೊತ್ತಿ ಉರಿಯುತ್ತಿದ್ದರೂ ಈ ಮನುಷ್ಯ ಒಂದು ಹೇಳಿಕೆ ನೀಡಿದ್ದೂ ಸಹ ಎಲ್ಲೂ ಕಂಡು ಬರಲಿಲ್ಲ. ಕಡೇ ಪಕ್ಷ ಬದುಕಿದ್ದಾರೋ ಇಲ್ಲವೋ ಅನ್ನೋದೂ ಸಹ ಸಂದೇಹ ! 

ರಾಜ್ಯದ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಪ್ರಧಾನಿ ಮುಂದೆ ಮತ್ತು ನ್ಯಾಯಾಲಯದ ಮುಂದೆ ಮಂಡಿಸಲು ಸೋತ ಬಿಜೆಪಿ ಸರ್ಕಾರ ಈಗ ಅದನ್ನು ಪ್ರಧಾನಿಯ ಮೇಲೇ ಅಪವಾದ ಹೊರಿಸಿ ತಾನು ನುಣುಚಿಕೊಳ್ಳಲು ಪ್ರಯತ್ನ ನಡೆಸಿದೆ. ಅತ್ತ ಕಾಂಗ್ರೆಸ್ ಕೇಂದ್ರ ಸಚಿವರುಗಳು ಇದುವರೆಗೂ ತುಟಿ ಪಿಟಕ್ ಅನ್ನುತ್ತಿಲ್ಲ. ರಾಜ್ಯದ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ಪ್ರಮಾದವನ್ನು ಎತ್ತಿ ತೋರಿಸಿ ತಾವು ಬಚಾವಾಗಲು ಪ್ರಯತ್ನಿಸಿದ್ದಾರೆ. ಇನ್ನು ಉಳಿದ ಜೆಡಿಎಸ್ ಉರಿವ ಮನೆಯಲ್ಲಿ ಗಳ ಹಿರಿದಂತೆ ತನ್ನ ರಾಜಕೀಯ ಲಾಭವನ್ನು ಹುಡುಕಿಕೊಂಡಿದೆ. 

ಸಂದರ್ಶನವೊಂದರಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ‍್ ಹೇಳಿದ್ದು, "ಎರಡೂ ರಾಜ್ಯಗಳ ರೈತರು ಸಂಧಾನ ನಡೆಸಿ ಇಬ್ಬರೂ ಸೌಹಾರ್ದಯುತವಾಗಿ ನೀರು ಹಂಚಿಕೊಳ್ಳಲು ಮಾತುಕತೆ ನಡೆದು ಅದು ಯಶಸ್ವಿ ಆಗಿತ್ತು. ತಮಿಳುನಾಡು ರೈತರೂ ಸಹ ರಾಜ್ಯಕ್ಕೆ ಇನ್ನಷ್ಟು ನೀರು ಬಿಟ್ಟು ಕೊಡಲು ತಯಾರಾಗಿದ್ದರು. ಅದೇ ಸಮಯಕ್ಕೆ ವಕ್ಕರಿಸಿದ ಜಯಲಲಿತಾ ಕುತಂತ್ರ ಮಾಡಿ ಎಲ್ಲಾ ಹಾಳಾಯ್ತು." ಅಂದರೆ ಈ ಸಮಸ್ಯೆ ಬಗೆ ಹರಿಯುವುದು ರಾಜಕಾರಣಿಗಳಿಗೆ ಬೇಕಾಗಿಲ್ಲ. ಇದನ್ನು ಜಯಾ ಮೇಲೆ ಮಾತ್ರ ಹೇಳಲಗದು. ನಮ್ಮ ರಾಜ್ಯದ ರಾಜಕಾರಣಿಗಳಿಗೂ ತಮ್ಮ ಅಸ್ತತ್ವಕ್ಕಾಗಿ ಕಾವೇರಿ ಸಮಸ್ಯೆ ಇರಲೇ ಬೇಕಾಗಿದೆ. ಇದು ದುರ್ದೈವ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...