ಕಾವೇರಿ ಕೊಳ್ಳದ ಕದನ ಸಧ್ಯಕ್ಕೆ ಮುಗಿದು ಅನ್ನಿಸುತ್ತೆ. ಮುಗಿಸುವ ಯೋಚನೆಯೂ ನಮ್ಮ ಯಾವ ರಾಜಕಾರಣಿಗಳಿಗೂ ಇದ್ದಂತಿಲ್ಲ. ಎಲ್ಲರೂ ಕಾವೇರಿಯ ಈ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿರುವವರೆ.
ಅಂದು ನಡೆದ ಪ್ರಧಾನಿಗಳ ಅಧ್ಯಕ್ಷತೆಯ ಕಾವೇರಿ ಪ್ರಾಧಿಕಾರದ ಸಬೆಯಲ್ಲಿ ಸಿಂಗ್ ನೀಡಿದ ಆದೇಶ ನಮ್ಮ ರಾಜ್ಯಕ್ಕೆ ಮಾರಕವಾಗಿತ್ತು. ಜಯಾ ಕೇಳಿದ್ದು ಪ್ರತಿ ದಿನ ೨ ಟಿಎಂಸಿ. ಸಿಂಗ್ ಬಿಡಲು ಹೇಳಿದ್ದು ದಿನವೂ ೯,೦೦೦ ಕ್ಯೂಸೆಕ್ ನೀರು. ಪರವಾಗಿಲ್ಲ, ೨ ಟಿಎಂಸಿ ಕೇಳಿದರೆ ಕೇವಲ ೯,೦೦೦ ಕ್ಯೂಸೆಕ್ ನೀಡಲು ಹೇಳಿ ಕರ್ನಾಟಕದ ಕಡೆಗೇ ನ್ಯಾಯ ಒದಗಿಸಿದ್ದಾರೆ ಅನ್ನುವಂತಿಲ್ಲ. ಏಕೆಂದರೆ ಜಯಾ ಇಲ್ಲಿ ಮಹಾನ್ ನಾಟಕವಾಡಿದ್ದಾಳೆ. ಅದಕ್ಕೆ ಕಾಂಗ್ರೆಸ್ ಸಹ ಕೈ ಜೋಡಿಸಿದೆ ಎಂಬುದರಲ್ಲಿ ಅನುಮಾನವಿಲ್ಲ. ಅವಳಿಗೆ ಸಧ್ಯಕ್ಕೆ ನೀರಿನ ಅವಶ್ಯಕತೆಯೇ ಇಲ್ಲ. ಈಗಾಗಲೇ ರಾಜ್ಯದಿಂದ ಸಾಕಷ್ಟು ನೀರು ಹೋಗಿ ಮರಟ್ಟೂರು ಅಣೆ ತುಂಬಿಸಿದೆ. ತಮಿಳುನಾಡಿನಲ್ಲಿ ಹಿಂಗಾರು ಮಳೆಯೇ ಹೆಚ್ಚು. ಅದು ಇನ್ನೂ ಬಂದೇ ಇಲ್ಲ. ಅದು ಬರುವ ಸಮಯಕ್ಕೆ ಬೇಕಾದಷ್ಟು ನೀರು ಸಿಕ್ಕಿ ಅದು ಹೆಚ್ಚಾಗಿ ಸಮುದ್ರವನ್ನೂ ಸೇರುತ್ತದೆ. ಆದರೂ ಅವಳಿಗೆ ಕರ್ನಾಟಕದ ಮೂರ್ಖ ರಾಜಕಾರಣಿಗಳನ್ನು ಆಟ ಆಡಿಸುವ ಚಟ. ಆದುದರಿಂದಲೇ ಆಕೆ ದಿನವೂ ೨ ಟಿಎಂಸಿ ನೀರು ಬೇಕು ಎಂದು ಕೇಳಿದ್ದು.
ಕಾವೇರಿ ವಿಷಯದಲ್ಲಿ ಕರ್ನಾಟಕದ ರಾಜಕಾರಣಿಗಳು ಸರಿಯಾಗಿ ವ್ಯವಹಾರ ನಡೆಸಲ್ಲ ಅನ್ನೊದು ಲಗಾಯ್ತಿನಿಂದಲೂ ತಿಳಿದು ಬಂದಿರುವ ವಿಷಯ. ಅದರಲ್ಲಿ ಹೊಸದೇನೂ ಇಲ್ಲ. ಅದರಲ್ಲೂ ಆಂತರಿಕ ಕಚ್ಚಾಟದಲ್ಲೇ ಮುಳುಗಿರುವ ಬಿಜೆಪಿಗೆ ಇತ್ತ ಗಮನ ಹರಿಸಲು ಸಮಯವೂ ಇಲ್ಲ. ಕಾವೇರಿ ಕದನ ಶುರುವಾಗಿ ೨೫ ದಿನ ಕಳೆದರೂ ಪರಮ ಪ್ರಾಮಾಣಿಕ ಕಾನೂನು ಮಂತ್ರಿ ಕಾಣೆಯಾಗಿದ್ದಾರೆ ಎಂದರೆ ಈ ಸರ್ಕಾರಕ್ಕೆ ಅದೆಂತಹ ದರಿದ್ರ ಬಡಿದಿದೆ ಅನ್ನೋದು ತಿಳಿಯುತ್ತೆ. ಈ ನಾಲಾಯಕ್ ಸುರೇಶ್ ಕುಮಾರ್ ಅಂದಿನ ಪ್ರಧಾನಿಗಳ ಸಭೆಗೂ ಹೋಗಿರಲಿಲ್ಲ. ಇವರು ಹಾಗಿರಲಿ ನ್ಯಾಯಾಲಯಕ್ಕೆ ರಾಜ್ಯದ ಪರ ಮುಖ್ಯ ನ್ಯಾಯವಾದಿ ನಾರಿಮನ್ ಅವರನ್ನೇ ಕಳಿಸಲಿಲ್ಲ ಅಂದರೆ ಇವರ ಬೇಜವಾಬ್ದಾರಿ ಎಷ್ಟು ಅನ್ನೋದನ್ನು ಅರಿಯಬಹುದು. ಮೈಸೂರು ಮಂಡ್ಯ ಹೊತ್ತಿ ಉರಿಯುತ್ತಿದ್ದರೂ ಈ ಮನುಷ್ಯ ಒಂದು ಹೇಳಿಕೆ ನೀಡಿದ್ದೂ ಸಹ ಎಲ್ಲೂ ಕಂಡು ಬರಲಿಲ್ಲ. ಕಡೇ ಪಕ್ಷ ಬದುಕಿದ್ದಾರೋ ಇಲ್ಲವೋ ಅನ್ನೋದೂ ಸಹ ಸಂದೇಹ !
ರಾಜ್ಯದ ಬರ ಪರಿಸ್ಥಿತಿಯನ್ನು ಸಮಗ್ರವಾಗಿ ಪ್ರಧಾನಿ ಮುಂದೆ ಮತ್ತು ನ್ಯಾಯಾಲಯದ ಮುಂದೆ ಮಂಡಿಸಲು ಸೋತ ಬಿಜೆಪಿ ಸರ್ಕಾರ ಈಗ ಅದನ್ನು ಪ್ರಧಾನಿಯ ಮೇಲೇ ಅಪವಾದ ಹೊರಿಸಿ ತಾನು ನುಣುಚಿಕೊಳ್ಳಲು ಪ್ರಯತ್ನ ನಡೆಸಿದೆ. ಅತ್ತ ಕಾಂಗ್ರೆಸ್ ಕೇಂದ್ರ ಸಚಿವರುಗಳು ಇದುವರೆಗೂ ತುಟಿ ಪಿಟಕ್ ಅನ್ನುತ್ತಿಲ್ಲ. ರಾಜ್ಯದ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ಪ್ರಮಾದವನ್ನು ಎತ್ತಿ ತೋರಿಸಿ ತಾವು ಬಚಾವಾಗಲು ಪ್ರಯತ್ನಿಸಿದ್ದಾರೆ. ಇನ್ನು ಉಳಿದ ಜೆಡಿಎಸ್ ಉರಿವ ಮನೆಯಲ್ಲಿ ಗಳ ಹಿರಿದಂತೆ ತನ್ನ ರಾಜಕೀಯ ಲಾಭವನ್ನು ಹುಡುಕಿಕೊಂಡಿದೆ.
ಸಂದರ್ಶನವೊಂದರಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದು, "ಎರಡೂ ರಾಜ್ಯಗಳ ರೈತರು ಸಂಧಾನ ನಡೆಸಿ ಇಬ್ಬರೂ ಸೌಹಾರ್ದಯುತವಾಗಿ ನೀರು ಹಂಚಿಕೊಳ್ಳಲು ಮಾತುಕತೆ ನಡೆದು ಅದು ಯಶಸ್ವಿ ಆಗಿತ್ತು. ತಮಿಳುನಾಡು ರೈತರೂ ಸಹ ರಾಜ್ಯಕ್ಕೆ ಇನ್ನಷ್ಟು ನೀರು ಬಿಟ್ಟು ಕೊಡಲು ತಯಾರಾಗಿದ್ದರು. ಅದೇ ಸಮಯಕ್ಕೆ ವಕ್ಕರಿಸಿದ ಜಯಲಲಿತಾ ಕುತಂತ್ರ ಮಾಡಿ ಎಲ್ಲಾ ಹಾಳಾಯ್ತು." ಅಂದರೆ ಈ ಸಮಸ್ಯೆ ಬಗೆ ಹರಿಯುವುದು ರಾಜಕಾರಣಿಗಳಿಗೆ ಬೇಕಾಗಿಲ್ಲ. ಇದನ್ನು ಜಯಾ ಮೇಲೆ ಮಾತ್ರ ಹೇಳಲಗದು. ನಮ್ಮ ರಾಜ್ಯದ ರಾಜಕಾರಣಿಗಳಿಗೂ ತಮ್ಮ ಅಸ್ತತ್ವಕ್ಕಾಗಿ ಕಾವೇರಿ ಸಮಸ್ಯೆ ಇರಲೇ ಬೇಕಾಗಿದೆ. ಇದು ದುರ್ದೈವ!

ಕಾಮೆಂಟ್ಗಳು