ಇವರು ಇವತ್ತೊಂದು ಕತೆ ಹೇಳಿದ್ದಾರೆ... ಅದು ಸೋಮಾರಿ ಮಿಡತೆ ಹಾಗೂ ಶ್ರಮಜೀವಿ ಇರುವೆ ಕತೆ. ಇರುವೆ ಕಷ್ಟ ಪಟ್ಟು ಮುಂದಾಲೋಚನೆಯಿಂದ ದುಡಿದು ಆಹಾರ ಸಂಗ್ರಹಿಸಿ ಇಡುತ್ತೆ, ಆದರೆ ಮಿಡತೆ ಸೋಮಾರಿಯಾಗಿ ಆಡಿಕೊಂಡಿರುತ್ತೆ. ಆದರೆ ಮುಂದೆ ಮಿಡತೆ ಹಸಿವಿನಿಂದ ಬಳಲುವಾಗ ಇರುವೆ ಸಹಾಯ ಮಾಡಲಿಲ್ಲ ಎಂದು ಹಲವರು ಹೋರಾಟ ನಡೆಸುತ್ತಾರೆ... ಇತ್ಯಾದಿ ಇತ್ಯಾದಿಯಾಗಿದೆ ಇವರು ಹೇಳಿದ ಕತೆ. ಇದನ್ನೂ ಇವರು ಈ ಹಿಂದೆಯೂ ಒಮ್ಮೆ ಬರೆದಿದ್ದರು, ಈಗ ಕತೆಗೆ ಸ್ವಲ್ಪ ಸುಣ್ಣ-ಬಣ್ಣ ಬಂದಿದೆ.
ಆದರೆ ಇದನ್ನು ಓದುತ್ತಾ ಹೋದಂತೆ ಮಿಡತೆ ಹಾಗೂ ಇರುವೆಯನ್ನು ಯಾರು ಯಾರಿಗೆ ಹೋಲಿಸಿದ್ದಾರೆ ಎಂದು ತಿಳಿದಾಗ ಮೈ ಉರಿಯುತ್ತದೆ. ಕಾರಣ ಇವರ ಪ್ರಕಾರ "ಮುಂದಾಲೋಚನೆಯಿಂದ" ಕೂಡಿಸಿ ಇಟ್ಟುಕೊಂಡಿರುವ ಇರುವೆಗಳೆಂದರೆ ಇಂದಿನ ಶ್ರೀಮಂತರು, ಹಾಗೂ ಬಡತನದಲ್ಲಿ ಹೊಟ್ಟೆಗಿಲ್ಲದೇ ಒದ್ದಾಡುತ್ತಿರುವ ಬಡವರೆಲ್ಲಾ ಸೋಮಾರಿ ಮಿಡತೆಗಳ ತರದವರು... ನಾಚಿಕೆಯಾಗಬೇಕು ಇವರಿಗೆ.
ವಿಶ್ವೇಶ್ವರ ಭಟ್ಟರು ಈ ಕೆಲವು ಉದಾಹರಣೆಗಳಿಗೆ ಯಾವ ರೀತಿ ಹೋಲಿಕೆ ಮಾಡುತ್ತಾರೆ ?
ಧರ್ಮಸ್ಥಳದ ವೀರೆಂದ್ರ ಹೆಗ್ಗಡೆಯವರು ಬಡವರ ಅನುಕೂಲಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಅಂದರೆ ಹೆಗ್ಗಡೆವರು ಪಾಪ ಗೊತ್ತಿಲ್ಲದೇ ಸೋಮಾರಿ ಮಿಡತೆಗಳಿಗೆ ಸಹಾಯ ಮಾಡುತ್ತಿದ್ದಾರಾ ? ಅಜೀಂ ಪ್ರೇಮ್ಜೀ ತಾವು ಗಳಿಸಿದ ಸಾವಿರಾರು ಕೋಟಿ ರೂಪಾಯಿಗಳನ್ನು ದೀನ ದಲಿತರ ಉದ್ದಾರಕ್ಕಾಗಿ ಸಮರ್ಪಿಸಿದ್ದಾರೆ... ಹಾಗಿದ್ದರೆ ಸಾವಿರಾರು ಸೋಮಾರಿಗಳಿಗೆ ಇದರಿಂದ ಲಾಭವಾಯ್ತು... ಭಟ್ಟರು ಅಜೀಂರಿಗೆ ಸ್ವಲ್ಪ ಬುದ್ಧಿ ಹೇಳಿ ಅದನ್ನು ಶ್ರೀಮಂತ ಇರುವೆಗಳಿಗೇ ನೀಡಲು ತಿಳಿಸಬಹುದು. ಇದೇ ರೀತಿ ನೋಡುತ್ತಾ ಹೋದರೆ ನೂರಾರು ನಿಸ್ವಾರ್ಥದ ಧನಿಕರು ತಮ್ಮ ಆಸ್ತಿಯನ್ನು ಬಡವರಿಗೆ ಹಂಚಿ ಜನಸೇವೆಯಲ್ಲೇ ಜನಾರ್ದನ ಸೇವೆಯನ್ನು ಕಂಡಿದ್ದಾರೆ. ಬಹುಶಃ ಅವರೆಲ್ಲಾ ಬಡವರು ಸೋಮಾರಿ ಮಿಡತೆಗಳು ಎಂಬ ಜ್ಞಾನವನ್ನು ಗ್ರಹಿಸದವರಿರಬೇಕು!
ಇದೇ ಭಟ್ಟರ ಊರಾದ ಕುಮಟಾ ಸಹ ಸೇರಿದಂತೆ ಕರ್ನಾಟಕದಾಂದ್ಯಂತ ಭಟ್ಟರಂತಹ ಧನಿಕರ ಗದ್ದೆ ತೋಟಗಳಲ್ಲಿ ದುಡಿಯುತ್ತಿರುವ ಕೆಲಸಗಾರರು ಸೋಮಾರಿ ಮಿಡತೆಗಳೇ ? ಅಥವಾ ಅವರಿಂದ ದುಡಿಸಿಕೊಂಡು ಕಡಿಮೆ ಸಂಬಳ ನೀಡಿ ಲಾಭ ಮಾಡಿಕೊಳ್ಳುವ ಮಿಟಕಲಾಡಿಗಳು ಮಿಡತೆಗಳೇ ಅನ್ನುವುದನ್ನು ಇವರು ಅರ್ಥಮಾಡಿಕೊಳ್ಳಬೇಕಿದೆ.
ಇಂತಹ ನೀಚರಿಗೆ ಪತ್ರಿಕೋದ್ಯಮ ಬೇರೆ ಕೇಡು. ಸರ್ಕಾರ ಬಡವರಿಗೆ ನೀಡುವ ಮೀಸಲಾತಿ ಸವಲತ್ತುಗಳನ್ನು ಟೀಕಿಸುವ ಇವರು ಒಂದು ವೇಳೆ ಸರ್ಕಾರ ಅದನ್ನು ನಿಲ್ಲಿಸಿದರೆ ಪರಿಣಾಮ ಏನಾಗುತ್ತೆ ಅನ್ನೋದನ್ನು ಊಹಿಸಿರಲಿಕ್ಕಿಲ್ಲ. ಶಕ್ತಿವಂತರಾದ ಬಡವರು ಭಟ್ಟರಂತಹ ಧನಿಕರನ್ನು ಬೀದಿ ಬೀದಿಯಲ್ಲಿ ಅಟ್ಟಾಡಿಸಿಕೊಂಡು ದೋಚತೊಡಗಿದರೆ ಆಗ ಇವರು ಯಾವ ಮಿಡತೆ-ಇರುವೆ ಕತೆ ಹೊಸೆಯುತ್ತಾರೋ?

ಕಾಮೆಂಟ್ಗಳು