
ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ್ ಡಿಕ್ಕಿಯಿಂದಾಗಿ ರತ್ನಾಗರ್ ಸತ್ತಿದ್ದಾರೆ ಎಂದು.
ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ್ ಸಾವಿನ ಬಗ್ಗೆ ನಾನು ಯೋಚಿಸಿದ್ದು.
ರೇಡಿಯೋ ಕಮೆಂಟೇಟರ್ ಡಿಕ್ಕಿಯಿಂದಾಗಿ ರತ್ನಾಗರ್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ ಸಾಯುವ ಸಂಭವ ಇದೆ. ಅದೇ ಸಮಯ ಡಿಕ್ಕಿ ಹೊಡೆದಾತನಿಗೂ ಪೆಟ್ಟಾಗುತ್ತದೆ. ಡಿಕ್ಕಿ ಹೊಡೆದ ಕಮೆಂಟೇಟರನಿಗೆ ರತ್ನಾಗರ್ ಅವರನ್ನು ಕೊಲ್ಲುವ ಉದ್ದೇಶವೇ ಇದ್ದಿರಬಹುದು. ಆದುದರಿಂದ ಮೊದಲೇ ಯೋಚಿಸಿ ಶಿರಸ್ತ್ರಾಣ ಹಾಕಿಕೊಂಡು ಬಂದು ಯಾಕೆ ಡಿಕ್ಕಿ ಹೊಡೆದಿರಬಾರದು ? ಆದರೆ ರತ್ನಾಗರ್ ಖ್ಯಾತ ವ್ಯಕ್ತಿ ಆಗಿರುವುದರಿಂದ ಅಷ್ಟು ಸುಲಭದಲ್ಲಿ ಕೊಲೆ ಮಾಡಲು ಸಾಧ್ಯವಾಗಿರಲಾರದು. ಅದೂ ಸಹ ಓಡಿ ಬಂದು ಡಿಕ್ಕಿ ಹೊಡೆದು?! ಅಥವಾ ಬೆಳಗಿನ ಜಾವ ವಾಕಿಂಗ್ಗೆ ಹೋದಾಗ ಈತ ಈ ಕೃತ್ಯವನ್ನು ಮಾಡಿರಬಹುದೇ ?
ಅಥವಾ ಕಮೆಂಟೇಟರ್ ಯಾವುದಾದರೂ ವಾಹನದಲ್ಲಿ ಡಿಕ್ಕಿ ಹೊಡೆದಿರಬಹುದೆ ? ಬೈಕ್, ಕಾರು, ಲಾರಿ ?
ಹೀಗೆ ನಾನಾ ರೀತಿ ಯೋಚಿಸಿ ಕೊನೆಗೂ ೧೫ನೇ ಪುಟಕ್ಕೆ ಹೋಗಿ ಸುದ್ದಿಯನ್ನು ನೋಡಿದೆ. ನನಗೇ ನಗು ಬಂತು.. ಕಾರಣ ರತ್ನಾಗರ್ ಯಾರ ಡಿಕ್ಕಿಯಿಂದಲೂ ಸತ್ತಿರಲಿಲ್ಲ ಪಾಪ, ಅವರ ಹೆಸರೇ "ಡಿಕ್ಕಿ ರತ್ನಾಗರ್" ಆಗಿತ್ತು, ಹಾಗೂ ಅವರು ರೇಡಿಯೋ ಕಾಮೆಂಟೇಟರ್ ಸಹ ಆಗಿದ್ದರಂತೆ !
ಕಾಮೆಂಟ್ಗಳು