ಮೋದಿ ಬರುತ್ತಾನೆಂದರೆ ಕನಿಷ್ಟ ಸಾವಿರ ಜನ ಪೊಲೀಸರು ಆತನ ರಕ್ಷಣೆಗೆ ನಿಲ್ಲಬೇಕು. ಯಕಶ್ಚಿತ್ ಒಂದು ರಾಜ್ಯದ ಮುಖ್ಯಮಂತ್ರಿಗೆ ಅಷ್ಟೊಂದು ರಕ್ಷಣೆ, ಬೊಕ್ಕಸಕ್ಕೆ ಹೊಡೆತ. ಇನ್ನು ಏನೂ ಅಲ್ಲದ ಕೇವಲ ಸಂಸದೆ ಸೋನಿಯಾ ರಕ್ಷಣೆಗಾಗಿ ಖರ್ಚು ಮಾಡುತ್ತಿರುವುದೆಷ್ಟು ? ಸಂಸದ ರಾಹುಲನ ರಕ್ಷಣೆಗೆ ? ಮಾಜಿ ಮಂತ್ರಿ ಅದ್ವಾನಿಗಾಗಿ ? ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂದು ಇವರಿಗೆ ಇಷ್ಟೆಲ್ಲಾ ರಕ್ಷಣೆ ? ಇರಲಿ ವಿಷಯಕ್ಕೆ ಬರೋಣ..
ಮೊನ್ನೆ ಮೊನ್ನೆ ಕಲಬುರ್ಗಿಯಲ್ಲಿ ರೌಡಿಯೊಬ್ಬನನ್ನು ಹಿಡಿಯಲು ಹೋದ ದಕ್ಷ ಪೊಲೀಸ್ ಅಧಿಕಾರಿಗಳು ರೌಡಿಯ ಗುಂಡಿಗೇ ಎದೆಕೊಡಬೇಕಾಯ್ತು. ಪೊಲೀಸರ ಗುಂಡಿಗೆ ರೌಡಿಯೇನೋ ಸತ್ತನಾದರೂ ನಮ್ಮ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡಿ ಅವರನ್ನೂ ಕಳೆದುಕೊಳ್ಳಬೇಕಾಯ್ತು. ಮತ್ತೊಬ್ಬ ಕಿರಿಯ ಪೊಲೀಸ್ ಅಧಿಕಾರಿ ಪ್ರಾಣಾಪಾಯದಿಂದ ಪಾರಾದರು. ಆದರೆ ಒಮ್ಮೆ ಯೋಚಿಸಿ ನೋಡಿ, ನಿಜವಾಗಿಯೂ ಪ್ರಾಣದ ಹಂಗು ತೊರೆದು ನಮಗಾಗಿ ಹೋರಾಡುವವರು ಇಂತಹ ಅಧಿಕಾರಿಗಳೂ, ಸೈನಿಕರುಗಳೇ ಅಲ್ಲವೇ ? ಧರ್ಮ-ಧರ್ಮಗಳ ನಡುವೆ ಬೆಂಕಿ ಹಾಕಿ, ಸಾರ್ವಜನಿಕರ ನೆಮ್ಮದಿ ಕೆಡಿಸಿ, ಅದರಿಂದ ರಾಜಕೀಯ ಲಾಭ ಮಾಡಿಕೊಂಡು ಓಡಾಡುವ ಕದೀಮರಿಗೆಲ್ಲಾ ಸಾವಿರಾರು ಪೊಲೀಸರ, ನೂರಾರು ಸೈನಿಕರ ರಕ್ಷಣೆ, ಆದರೆ ಜೀವದ ಹಂಗು ತೊರೆದು ಸಾರ್ವಜನಿಕರ ರಕ್ಷಣೆಗೆ ನಿಲ್ಲುವ ಅಧಿಕಾರಿಗಳಿಗೆ ಅಂತ ಕೊಡುವುದು ಒಂದು ಪಡಪೋಸಿ ಪಿಸ್ತೂಲು ಪೇದೆಗಳಿಗೆ ಓಬಿರಾಯನ ಕಾಲದ ಹಂದಿ ಹೊಡೆಯಲೂ ಯೋಗ್ಯವಲ್ಲದ ಬಂದೂಕು. ಇದಿಷ್ಟು ಸಾಕೆ ?
ಬೆಂಗಳೂರಿನ ಕೆಲವೇ ಪ್ರಮುಖ ಪೊಲೀಸ್ ಅಧಿಕಾರಿಗಳು ಹಾಗೂ ನಕ್ಸಲ್ ನಿಗ್ರಹ ಪಡೆಯ ಪೊಳಿಸರನ್ನು ಹೊರತು ಪಡಿಸಿ ಉಳಿದವರಿಗ್ಯಾರಿಗೂ ಬುಲೆಟ್ಪ್ರೋಫ್ ನೀಡಿಲ್ಲ. ಎಕೆ-೪೭ ನಂತಹ ಆಧುನಿಕ ಬಂದೂಕುಗಳನ್ನ ನಮ್ಮ ಯಾವ ಅಧಿಕಾರಿಗಳಿಗೂ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಒಂದಿಷ್ಟು ಉತ್ತಮ ಅನ್ನುವಂತಹ ರಿವಾಲ್ವಾರ್ ಬಿಟ್ಟರೆ ರೌಡಿಗಳನ್ನು ಎದುರುಗೊಳ್ಳುವ ಎಸ್.ಐ. ದರ್ಜೆಯೆ ಅಧಿಕಾರಿಗಳಿಗೆ ಬೇರೆ ರಕ್ಷಣೆಯೇ ಇಲ್ಲ. ಆದರೂ ಅವರು ರೌಡಿಗಳ ವಿರುದ್ಧ, ಸಮಾಜ ಕಂಟಕರ ವಿರುದ್ಧ ಹೋರಾಡಲೇ ಬೇಕು. ಇಷ್ಟಾದರೂ ಪೊಲೀಸರು ದಂಗೆಯೇಳುವುದಿಲ್ಲ. ಸರ್ಕಾರ ದಯಪಾಲಿಸಿದಾಗ ಕೊಟ್ಟದ್ದನ್ನು ಪಡೆದು ಕೆಲಸ ನಿರ್ವಹಿಸಬೇಕು. ಅದೇ ರಾಜಕಾರಣಿಗಳಿಗೆ ಏನಾದರೂ ಬೇಕಾಗಲಿ ? ಒಂದೇ ದಿನದಲ್ಲಿ ಮಸೂದೆಯನ್ನು ಮಂಡಿಸಿ ಜಾರಿಗೆ ತಂದು ಬೀಗುತ್ತಾರೆ. ಆದರೆ ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಇದುವರೆಗೂ ಯಾವ ಮುಖ್ಯಮಂತ್ರಿಯೂ ಗಂಭೀರವಾಗಿ ಚಿಂತನೆ ನಡೆಸಿಯೇ ಇಲ್ಲ.
ಪ್ರಾರಂಭದಲ್ಲಿ ಏನೋ ಆಶಾಭಾವನೆ ಮೂಡಿಸಿದ ಸಿದ್ದರಾಮಯ್ಯ ಈಗಾಗಲೇ ಹತ್ತರೊಳಗೆ ಹನ್ನೊಂದನೆಯವರಾಗಿ ಇತಿಹಾಸದ ಬುಟ್ಟಿಯನ್ನು ಸೇರಿಯಾಯ್ತು. ಇನ್ನು ಇವರಿಂದ ರಾಜ್ಯಕ್ಕೆ ಏನೋ ಉತ್ತಮ ಕೆಲಸ ಆಗಿ ಹೋಗುತ್ತದೆ ಎಂದು ನಿರೀಕ್ಷಿಸುವುದರಲ್ಲಿ ಪ್ರಯೋಜನವಿಲ್ಲ. ಆದರೆ ಬಂಡಿ ಅವರ ನಿಧನದಿಂದಲಾದರೂ ಮುಖ್ಯಮಂತ್ರಿಯ ಗಮನ ಇತ್ತ ಹರಿಯಲಿ. ಪ್ರತಿ ಠಾಣೆಗೂ ಕನಿಷ್ಟ ಒಂದಾದರೂ ಅತ್ಯಾಧುನಿಕ ಬಂದೂಕು ಹಾಗೂ ನಾಲ್ಕಾದರೂ ಬುಲೆಟ್ಪ್ರೂಫ್ ಜಾಕೆಟ್ ಒದಗಿಸಲಿ. ನಮ್ಮನ್ನು ನೆಮ್ಮದಿಯಾಗಿ ನಿದ್ರಿಸಲು ಪಣ ತೊಟ್ಟಿರುವ ಪೊಲೀಸರ ಪ್ರಾಣಕ್ಕಾದರೂ ನಾವು ಬೆಲೆ ಕೊಡೋಣ.

ಕಾಮೆಂಟ್ಗಳು