ಒಬ್ಬರು ಒಂದು ಪ್ರಬಲ ಹೋರಾಟವನ್ನು ಕೆಲವೇ ಸಮಾನ ಮನಸ್ಕರ ಜೊತೆಗೂಡಿ ಶುರು ಮಾಡುತ್ತಾರೆ. ಅದು ಸರ್ಕಾರಕ್ಕೂ ಬಿಸಿ ಮುಟ್ಟಿಸುವಂತಾ ಹೋರಾಟ. ಧರಣಿ ಸತ್ಯಾಗ್ರಹ ಶುರುವಾಗುತ್ತದೆ. ನಾಲ್ಕೈದು ದಿನ ಕಳೆದರೂ ಸರ್ಕಾರದಿಂದ ಯಾವ ಪ್ರತಿಕ್ರಿಯೆಯೂ ಬರುವುದಿಲ್ಲ. ಹಾಗೆಯೇ ಒಂದು ದಿನ ಬೆಳಗ್ಗೆ ಏಳುವಾಗ ಒಂದು ಸುದ್ದಿ ಬರುತ್ತದೆ... ಅದು ಅವರ ಒಡಹುಟ್ಟಿದ ಅಣ್ಣ ನಿದನರಾಗಿರುವ ಸುದ್ದಿ!
ಸಾವಿನ ಮನೆಗೆ ಹೋಗುವುದಾದರೆ ತಮ್ಮದೇ ನೇತೃತ್ವದ ಧರಣಿ ಸತ್ಯಾಗ್ರಹಕ್ಕೆ ಗೈರಾಗಬೇಕು. ಏನು ಮಾಡುವುದೆಂದು ಯೋಚಿಸಿದ ಅವರು ಬೇಗನೆ ತಯಾರಾಗಿ ಹೊರಡುತ್ತಾರೆ... ಸತ್ಯಾಗ್ರಹದ ಸ್ಥಳಕ್ಕೆ.
ತಮ್ಮ ಪತ್ನ ಮಗನನ್ನು ತಮ್ಮ ಅಣ್ಣನ ಮನೆಗೆ ಕಳಿಸಿ ಎಂದಿನಂತೆ ಧರಣಿಯಲ್ಲಿ ಪಾಲ್ಗೊಳ್ಳುತ್ತಾರೆ. ಅಣ್ಣ ಸತ್ತ ವಿಷಯವನ್ನೂ ಸಹ ಉಳಿದವರಿಗ್ಯಾರಿಗೂ ಹೇಳದೇ ದುಃಖ ನುಂಗಿಕೊಂಡು ಸತ್ಯಾಗ್ರಹ ಮುಂದುವರಿಯುತ್ತದೆ... ಸುಮಾರು ನಕವತ್ತು ದಿನಗಳ ವರೆಗೆ!
ಇವರ ನ್ಯಾಯ ನಿಷ್ಠುರ ಶಾಂತಿಯುತ ಹೋರಾಟಕ್ಕೆ ಸರ್ಕಾರ ಮಣಿಯುತ್ತದೆ. ಆಗ ತಮ್ಮೊಂದಿಗೆ ಭಾಗವಹಿಸಿದ ಹೋರಾಟಗಾರರಿಗೆ ತಮ್ಮ ಅಣ್ಣ ಸತ್ತು ಹೋಗಿರುವ ದುಃಖಕರ ವಿಷಯವನ್ನು ತಿಳಿಸುತ್ತಾರೆ!
ನೆನಪಿರಲಿ, ಇದು ಯಾವುದೋ ಹಳೆಯ ಕಾಲದ ಘಟನೆ ಅಲ್ಲ. ನಮ್ಮ ನಿಮ್ಮ ನಡುವೆಯೇ ಇರುವ ನ್ಯಾಯ ನಿಷ್ಟುರ ವ್ಯಕ್ತಿಯೊಬ್ಬರ ವಿಷಯ. ಅವರೇ 'ಭೂಕಬಳಿಕೆ ವಿರೋಧಿ ಹೋರಾಟ'ವನ್ನು ಪ್ರಾರಂಭಿಸಿ, ಸರ್ಕಾರದಿಂದ ಹೊಸ ಕಾನೂನು ಮತ್ತು ಪ್ರತ್ಯೇಕ ನ್ಯಾಯಾಲಯ ಸ್ಥಾಪನೆಯಾಗಲು ಕಾರಣರಾದ ಎ.ಟಿ. ರಾಮಸ್ವಾಮಿ!
ಅವರು ಹೋರಾಟ ಮಾಡಿದ್ದು ತಮ್ಮ ಸ್ವಾರ್ಥಕ್ಕಾಗಿ ಅಲ್ಲ. ಧನಿಕರು ಲೂಟಿ ಮಾಡಿರುವ ಸರ್ಕಾರಿ ಭೂಮಿ ಮತ್ತೆ ಸರ್ಕಾರಕ್ಕೆ ಮರಳಿ ಅದರಿಂದ ಬಡವರಿಗೂ ಅನುಕೂಲವಾಗಲಿ ಎಂದು. ಅವರ ನಿಸ್ವಾರ್ಥ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ನಿ. ನ್ಯಾಯಮೂರ್ತಿ ಸಂತೋಷ್ ಹೆಗಡೆ, ಕರವೇಯ ಶಿವರಾಮೇಗೌಡ ಮುಂತಾದ ಪ್ರಾಮಾಣಿಕರು ಬೆಂಬಲ ನೀಡಿದ್ದರು. ಈ ಹೋರಾಟಕ್ಕೆ ಸಿದ್ದರಾಮಯ್ಯನವರ ಸರ್ಕಾರವೂ ಮಣಿದಿದ್ದು ಭೂಕಬಳಿಕೆಯನ್ನು ಮರಳಿ ಪಡೆಯುವ ಸಲುವಾಗಿ ಇಬ್ಬರು ಜಿಲ್ಲಾಧಿಕಾರಿಗಳನ್ನು ನೇಮಿಸಲಾಗಿದೆ. ಮತ್ತು ಪ್ರತ್ಯೇಕ ನ್ಯಾಯಾಲಯಕ್ಕೂ ರಾಷ್ಟ್ರಪತಿಗಳಿಂದ ಅನುಮತಿ ದೊರೆತಿದೆ.
ಈ ಹೋರಾಟದ ವಿಜೋತ್ಸವ ಇಂದು ಬೆಳಗ್ಗೆ ಬೆಂಗಳೂರಿನ ಪುರಭವನದ ಎದರು ಇದೆ. ಇಂತಹ ಪ್ರಾಮಾಣಿಕರಿಗೆ ನಮ್ಮೆಲ್ಲರ ಬೆಂಬಲವೂ ಇರಬೇಕು.

ಕಾಮೆಂಟ್ಗಳು