ನಾನು ಇಪ್ಪತ್ತು ವರ್ಷದವನಿದ್ದಾಗ ಚೆನ್ನೈ ಸಮೀಪದ ವೆಳ್ಳವೇಡು ಎಂಬ ಸ್ಥಳದಲ್ಲಿ ಪೋಟೋ ಸ್ಟುಡಿಯೋ ಹಾಕಿದ್ದೆ. ಹೆದ್ದಾರಿ ಪಕ್ಕದಲ್ಲಿದ್ದರೂ ಆ ಊರಿಗೆ ಪೋಟೋ ಸಟುಡಿಯೋ ಅಂತ ಬಂದಿದ್ದು ಅದೇ ಮೊದಲು. (ಇದರ ಪೂರ್ಣ ಕತೆ ಬರೆದರೆ ಒಂದು ಹಾಸ್ಯ ಪ್ರಬಂಧವೇ ಆಗುತ್ತದೆ.)
ಒಂದು ದಿನ ವ್ಯಕ್ತಿ ಬಂದು ತಮ್ಮೂರಿನಲ್ಲಿ ಸಟುಡಿಯೋ ಹಾಕಿದ್ದಕ್ಕೆ ಸಂತೋಷದಿಂದ ಕೃತಜ್ಞತೆ ಹೇಳಿ 'ತುಂಬಾ ಅನುಕೂಲವಾಯಿತು. ಇಲ್ಲಾಂದರೆ ಯಾವುದಾದರೂ ಕಾರ್ಯಕ್ರಮ ನಡೆದರೆ ದೂರದಿಂದ ಕ್ಯಾಮೆರಾಮೆನ್ ಕರೆಸಬೇಕಿತ್ತು. ಚಿಕ್ಕ ಪುಟ್ಟ ಕಾರ್ಯಗಳಿಗೆ ದೂರ ಅಂತ ಅವರೂ ಬರುತ್ತಿರಲಿಲ್ಲ.' ಎಂದೆಲ್ಲಾ ಹೇಳಿ ಕೊನೆಗೆ 'ತನಗೆ ಇಬ್ಬರು ಮಕ್ಕಳು, ಒಂದು ಹೆಣ್ಣು, ಮತ್ತು ಗಂಡು. ದೊಡ್ಡವಳು ಇನ್ನೇನು ವಯಸ್ಸಿಗೆ ಬರುವವಳಿದ್ದಾಳೆ, ಪೂ ಪೂಕ್ಕುಂ ವಿಳಾಗೆ (ಹೆಣ್ಣು ಮಕ್ಕಳು ವಯಸ್ಸಿಗೆ ಬಂದಾಗ ತಮಿಳುನಾಡಲ್ಲಿ ಬಡವರಾದರೂ ಸಹ ಸ್ವಲ್ಪ ಅದ್ದೂರಿಯಾಗಿಯೇ ಕಾರ್ಯಕ್ರಮ ಮಾಡುತ್ತಾರೆ.) ಬಂದು ಒಳ್ಳೊಳ್ಳೆ ಫೋಟೋ ತೆಗೆದು ಕೊಡು. ನಂತರ ಮದುವೆಗೂ ನೀನೇ ಬರುವಂತೆ' ಎಂದು ಹೇಳಿ ಹೋದ.
ನನ್ನ ಸ್ಟುಡಿಯೋ ಎದುರು ರಸ್ತೆ. ಮತ್ತು ರಸ್ತೆಯನ್ನು ದಾಟಿದರೆ ಪೊಲೀಸ್ ಠಾಣೆ ಇತ್ತು. ಸುಮಾರು ದಿನಗಳ ನಂತರ ಒಬ್ಬ ಪೇದೆ ಬಂದು 'ಆಕ್ಸಿಡೆಂಟ್ ಆಗಿದೆ ಬಾ' ಎಂದು ಕರೆದ. ಅದು ವಿಭಾಗ ಮಾಡಿರದ ಹೆದ್ದಾರಿಯಾದುದರಿಂದ ತಿಂಗಳಿಗೆ ಒಂದಾದರೂ ಪ್ರಾಣಹಾನಿಯ ದುರಂತಗಳು ನಡೆಯುತ್ತಿದ್ದವು. ಕ್ಯಾಮೆರಾ ಬ್ಯಾಗ್ ಹೆಗಲಿಗೇರಿಸಿಕೊಂಡು ಅವನ ಬೈಕ್ ಹತ್ತಿ ಹೊರಟೆ. ಒಂದೆರಡು ಕಿ.ಮೀ. ದೂರದಲ್ಲೇ ಜನ ಸೇರಿರುವುದು ಕಾಣಿಸಿತು. ಹತ್ತಿರ ಹೋದಾಗ ಒಂದು ಮರಳು ಲಾರಿ ರಸ್ತೆ ಪಕ್ಕದ ಗುಡಿಸಲಿನ ಮೇಲೆ ಏರಿ ನಿಂತಿತ್ತು. ಜನರೆಲ್ಲಾ ಸೇರಿ ಮತ್ತೊಂದು ಲಾರಿಯ ಮೂಲಕ ಇದನ್ನು ಹಿಂದೆ ಎಳೆದು ಗುಡಿಸಲೊಳಗೆ ಸಿಕ್ಕಿಕೊಂಡವರನ್ನು ಹೊರ ತೆಗೆಯುತ್ತಿದ್ದರು. ನಾನು ವಿವಿಧ ಕೋನಗಳಿಂದ ಪೊಲೀಸರು ತಿಳಿಸದಂತೆ ಫೋಟೋ ತೆಗೆಯತೊಡಗಿದೆ.
ಲಾರಿಯಡಿ ಸಿಕ್ಕಿ ನಾಲ್ಕು ಜನ ಸಾವನ್ನಪ್ಪಿದ್ದರು. ಅದರಲ್ಲಿ ಇಬ್ಬರು ಮಕ್ಕಳು. ಒಂದು ಏಳೆಂಟು ವರ್ಷದ ಹುಡುಗಿ, ಮತ್ತೊಂದು ಐದಾರು ವರ್ಷದ ಹುಡುಗ. ಅವರ ದೇಹವನ್ನು ತಂದು ಒಂದು ಬದಿ ಮಲಗಿಸಿದಾಗ ಅವನ್ನೂ ಫೋಟೋ ತೆಗೆಯತೊಡಗಿದೆ. ಆಗ ಓಡೋಡಿ ಬಂದು ರೋಧಿಸತೊಡಗಿದ ಆ ವ್ಯಕ್ತಿ ಹಿಂದೆ ನನ್ನ ಬಳಿ ಮಾತಾಡಿದವನೇ ಆಗಿದ್ದು, ಸತ್ತಿದ್ದು ಆತನ ಹೆಂಡತಿ, ಬಾವ, ಮತ್ತು ಮಕ್ಕಳೇ ಆಗಿದ್ದರು.
ರಕ್ತ ಮೆತ್ತಿದ ಆ ಎಳೆ ದೇಹಗಳ ಚಿತ್ರ ತೆಗೆಯುವಾಗ ಅವನು ಬಂದು ನನ್ನ ಕಾಲು ಹಿಡಿದು 'ನನ್ನ ಮಗಳ ನಗುವ ಫೋಟೋ ತೆಗೆದುಕೊಡು ಅಂದಿದ್ದೆ, ಈಗ ಸತ್ತ ಫೋಟೋ ತೆಗಯುವಂತಾಯ್ತಲ್ಲಾ...' ಎಂದು ಅಳುತ್ತಿರುವಾಗ ನನ್ನ ಕಣ್ಣಿಂದ ಉದುರಿದ ನೀರು ಕ್ಯಾಮೆರಾ ನೆನೆಸಿದ್ದವು!

ಕಾಮೆಂಟ್ಗಳು