ಹೌದು, ಕಳೆದ ವರ್ಷದ ಜನವರಿಯಲ್ಲಷ್ಟೇ ಕಲಬುರ್ಗಿಯ ಪ್ರಾಮಾಣಿಕ ಪೊಲಿಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡಿ ಎಂಬುವರು ಅನುಮಾನಾಸ್ಪದವಾಗಿ ರೌಡಿಯೊಬ್ಬನ ಗುಂಡಿಗೆ ಬಲಿಯಾಗಿದ್ದರು. ಅದರ ತನಿಖೆ ಸರಿ ಸುಮಾರಾಗಿ ಹಳ್ಳ ಹಿಡಿದೇ ಹೋಯ್ತು. ಅಷ್ಟರಲ್ಲಾಗಲೇ ಇನ್ನೊಬ್ಬ ನಿಷ್ಟಾವಂತೆ ಅಧಿಕಾರಿಯಾಗಿದ್ದ ಡಿ.ಕೆ. ರವಿಯವರು ಕೂಡಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದು ರಾಜ್ಯಕ್ಕಾದ ದೊಡ್ಡ ನಷ್ಟವೆಂದೇ ಹೇಳಬೇಕು.
ಅಪ್ರತಿಮ ಪ್ರಾಮಾಣಿಕ ಅಧಿಕಾರಿಯಾಗಿದ್ದ ರವಿಯವರು ಜಿಲ್ಲಾಧಿಕಾರಿಯಾಗಿ ಕೋಲಾರಕ್ಕೆ ಸಲ್ಲಿಸಿದ ಸೇವೆ ಅಪಾರ. ಅಲ್ಲಿನ ಬಡ ಬಗ್ಗರ ನೋವಿಗೆ ಮಿಡಿದ ಅವರನ್ನು ಜನ ಎಂದೆಂದೂ ಮರೆಯಲಾರರು. ಅಲ್ಲಿನ ಮರಳು ಮಫಿಯಾವನ್ನು ಬುಡ ಸಮೇತ ಕಿತ್ತು ಹಾಕಿ ರೌಡಿಗಳ, ಕಾಳದಂಧೆ ಕೋರರ ಪಾಲಿಗೆ ಸಿಂಹ ಸ್ವಪ್ನವೇ ಆಗಿದ್ದರು. ಭೂ ಒತ್ತುವರಿದಾರರನ್ನು ಅಟ್ಟಾಡಿಸಿಕೊಂಡು ಸದೆ ಬಡಿದರು. ಇದರಿಂದ ಸಂಕಷ್ಟಕ್ಕೊಳಗಾದ ಹಲಾಲುಕೋರರು ಸಿದ್ದರಾಮಯ್ಯನವರ ಮನವೊಲಿಸಿ ರವಿಯವರನ್ನು ಕೋಲಾರದಿಂದ ಎತ್ತಂಗಡಿ ಮಾಡಿಸುವ ವ್ಯವಸ್ಥೆ ಮಾಡಿದರು. ಇದನ್ನು ತಿಳಿದ ಜಿಲ್ಲೆಯ ಜನತೆ ಜಿಲ್ಲಾಧಿಕಾರಿಯ ವರ್ಗಾವಣೆ ವಿರುದ್ದ ಬೀದಿಗಿಳಿದು ಹೋರಾಟ ಮಾಡಿದರು. ಒಬ್ಬ ಜಿಲ್ಲಾಧಿಕಾರಿಯನ್ನು ಬೇರೆಡೆಗೆ ವರ್ಗಾಯಿಸದಂತೆ ಜನರೇ ಒತ್ತಾಯಿಸಿ ಹೋರಾಟ ಮಾಡಿರುವುದು ಬಹುಶಃ ರವಿಯವರಿಗಾಗಿ ಮಾತ್ರ ಅನ್ನಿಸುತ್ತದೆ.
ಕೋಲಾರದಿಂದ ಬೆಂಗಳೂರಿಗೆ
ಆದರೆ ಸಿದ್ದರಾಮಯ್ಯ ಜನರ ಬೇಡಿಕೆಗೆ ಬೆಲೆಯನ್ನೇ ಕೊಡಲಿಲ್ಲ. ರವಿಯವರನ್ನು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆಗೆ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿದರು. ಇದರಲ್ಲಿ ಸಿದ್ದರಾಮಯ್ಯನವರ ತಂತ್ರ ಎದ್ದು ಕಾಣಿಸುತ್ತಿದೆ. ಏಕೆಂದರೆ ವಾಣಿಜ್ಯ ತೆರಿಗೆ ಆಯುಕ್ತರಿಗೆ ಸಹಿ ಹಾಕುವುದು ಬಿಟ್ಟು ಹೇಳಿಕೊಳ್ಳುವಂತಹ ಕೆಲಸಗಳೇನೂ ಇರುವುದಿಲ್ಲ. ತೆರಿಗೆ ಸಂಗ್ರಹವನ್ನು ಕೆಳಗಿನ ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ. ಹಾಗಾಗಿ ರವಿಯವರನ್ನು ಉತ್ತಮ ಹುದ್ದೆ ನೀಡುವ ಸಬೂಬಿನಲ್ಲಿ ಅವರನ್ನು ಕಟ್ಟಿ ಹಾಕುವ ಹುನ್ನಾರ ಇದರಲ್ಲಿ ಇದ್ದಿತೆಂದೇ ಹೇಳಬೇಕಾಗುತ್ತದೆ.
ಆದರೆ ಸಿಂಹ ಯಾವ ಕಾಡಿನಲ್ಲಿದ್ದರೂ ಸಿಂಹವಾಗಿಯೇ ಘರ್ಜಿಸುತ್ತದೆ ಎಂಬುದಕ್ಕೆ ರವಿ ನಿದರ್ಶನವಾದರು. ವಾಣಿಜ್ಯ ತೆರಿಗೆಯನ್ನು ವಂಚಿಸುತ್ತಿದ್ದ ದೊಡ್ಡ ದೊಡ್ಡ ಸಂಸ್ಥೆಗಳ ಕಚೇರಿಗಳಿಗೆ ರವಿಯವರೇ ಸ್ವತಃ ದಾಳಿ ನಡೆಸ ತೊಡಗಿದರು. ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚಿಸುತ್ತಿದ್ದ ಸಂಸ್ಥೆಗಳನ್ನು ಹೆಡೆಮುರಿ ಕಟ್ಟಿ ಅಧಿಕಾರಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ಸರ್ಕಾರಕ್ಕೆ ಬರೋಬ್ಬರಿ ೧೨೫ ಕೋಟಿ ರೂಪಾಯಿಗಳನ್ನು ವಸೂಲಿ ಮಡಿ ಕೊಟ್ಟಿದ್ದರು.
ಇದರಿಂದ ಮತ್ತೆ ಹಲಾಲುಕೋರರು ಆತಂಕಗೊಂಡಿದ್ದುದರಲ್ಲಿ ಅನುಮಾನವಿಲ್ಲ. ದುಬೈನಲ್ಲಿ ಕುಳಿತಿರುವ ಡಾನ್ಗಳಿಂದ ರವಿಯವರಿಗೆ ಬೆದರಿಕೆ ಕರೆಗಳನ್ನು ಮಾಡಿಸಿದ್ದರು ಎಂದೂ ಹೇಳಲಾಗುತ್ತಿದೆ. ಆದರೆ ರವಿ ಯಾವುದಕ್ಕೂ ಜಗ್ಗಿರಲಿಲ್ಲ.
ಆದರೆ ಏನಾಯ್ತು...?
ಆದರೆ ರವಿಯವರ ಜೀವನ ಧಗ್ಗನೆ ಮಿನುಗಿ ಮರೆಯಾಗಿ ಹೋದ ಮಿಂಚಿನಂತಾಗಿ ಹೋಯ್ತು. ಧಗಧಗಿಸಿ ಉರಿದ ಬೆಂಕಿ ನೋಡ ನೋಡುತ್ತಿರುವಂತೆಯೇ ಆರಿ ಹೋದಂತೆ ನಿನ್ನೆ (೧೬-೦೩-೨೦೧೫) ಅವರು ಅನುಮಾನಾಸ್ಪದ ರೀತಿಯಲ್ಲಿ ತಮ್ಮ ಅಪಾರ್ಟ್ಮೆಂಟ್ನಲ್ಲಿ ಸಾವನ್ನಪ್ಪಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ ಅದನ್ನು ನಂಬಲಾಗುತ್ತಿಲ್ಲ. ಅಂತಹ ಎಂಟೆದೆಯ ಬಂಟನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಾರಣಗಳಾದರೂ ಏನಿದ್ದವು? ಅಲ್ಲದೇ ಹೈಸ್ಕೂಲು ಓದುವ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡರೂ ಒಂದು ಡೆತ್ನೋಟ್ ಬರೆದಿಡುತ್ತಾರೆ. ಆ ಮೂಲಕ ತಮ್ಮ ಮನೆಯವರಿಗೆ, ಆತ್ಮೀಯರಗೆ ವಿದಾಯ ಹೇಳುತ್ತಾರೆ. ಆದರೆ ರವಿಯವರ ಕೋಣೆಯಲ್ಲಿ ಯಾವ ಪತ್ರವೂ ದೊರೆತಿಲ್ಲ. ಐಎಎಸ್ ಅಧಿಕಾರಿಯೊಬ್ಬ ಡೆತ್ನೋಟ್ ಬರೆಯದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ನಂಬಲಸಾಧ್ಯ. ಹಾಗೆಯೇ ಕೊಲೆ ನಡೆದಿದ್ದರೂ ಅವರನ್ನು ಎತ್ತಿ ನೇಣಿಗೆ ಹಾಕುವುದು ಒಬ್ಬಿಬ್ಬರಿಂದ ಆಗುವ ಕೆಲಸವೂ ಅಲ್ಲ. ಹೆಚ್ಚು ಜನರು ಸರಾಗವಾಗಿ ಒಳ ಹೋಗಿ ಬಿಡಬಹುದಾದಂತಹ ಆಪಾರ್ಟ್ಮೆಂಟ್ ಸಹ ಅದಲ್ಲ. ಹಾಗಿದ್ದರೆ ನಿಜಕ್ಕೂ ಏನು ನಡೆಯಿತು ? ಹೇಳೋದು ಕಷ್ಟ.
ಸರಿಯಾದ ತನಿಖೆ ಮಾತ್ರ ಇದಕ್ಕೆ ಉತ್ತರಿಸಬಲ್ಲುದು. ಪ್ರಶ್ನೆ ಇರೋದು ಅಂತಹ ತನಿಖೆ ನಡೆಯುತ್ತಾ ? ಅಥವಾ ಬಂಡೆ ಸಾವಿನಂತೆಯೇ ಈ ಹೆಬ್ಬಂಡೆಯ ಸಾವನ್ನೂ ಮುಚ್ಚಿ ಹಾಕುತ್ತಾರಾ ?

ಕಾಮೆಂಟ್ಗಳು