
ಅದು ನಾನು ಚಿಕ್ಕಮಗಳೂರಿನ ಒಂದು ಸ್ಥಳಿಯ ಪತ್ರಿಕೆಯಲ್ಲಿ ಸಹ ಸಂಪಾದಕನಾಗಿ ಇದ್ದ ಸಮಯ. ಆಗ ಸಿ.ಟಿ. ರವಿ ಅವರು ಬರಿ ಶಾಸಕರಾಗಿದ್ದರು. ನಮ್ಮ ಪತ್ರಿಕೆಯ ಮಾಲೀಕರು ದೊಡ್ಡ ಗಾರ್ಮೆಂಟ್ಸ್ ಸಹ ಹೊಸದಾಗಿ ಮಾಡಿದ್ದರು. ಬೇರೆ ಬೇರೆ ಕಾರಣಗಳಿಂದ ಅವರಿಗೆ ಶಾಸಕರ ಸಹಾಯ ಬೇಕೇ ಆಗಿತ್ತು.
ಒಂದು ದಿನ ರವಿ ಅವರನ್ನು ಕಚೇರಿಗೆ ಕರೆದು, ಪಕ್ಕದಲ್ಲೇ ಇದ್ದ ಗಾರ್ಮೆಂಟ್ಸ್ ಅನ್ನೂ ತೋರಿಸಲು ನಿರ್ಧರಿಸಿದರು. ಹಾಗೆ ಬರುವ ರವಿ ಅವರದೊಂದು ಸಂದರ್ಶನ ಮಾಡಿ ಪತ್ರಿಕೆಯಲ್ಲಿ ಹಾಕುವಂತೆ ನನಗೂ ಹೇಳಿದರು. ಆಗಷ್ಟೇ ಬಾಬಾ ಬುಡನ್ ಗಿರಿ ವಿವಾದ ಭುಗಿಲೆದ್ದ ಸಮಯ, ಮತ್ತು ಅದರಲ್ಲಿ ರವಿ ಅವರೂ ಸಹ ಸಕ್ರಿಯರಾಗಿದ್ದರು.
ಸಂದರ್ಶನ ಶುರು ಮಾಡಿದ ನಾನು ಅವರ ರಾಜಕೀಯ ಜೀವನದ ಬಗ್ಗೆ ಎಲ್ಲಾ ಕೇಳಿ ಆದ ನಂತರ ಸಹಜವಾಗಿ ದತ್ತ ಪೀಠದ ಬಗ್ಗೆ ಪ್ರಶ್ನೆ ಎತ್ತಿದೆ. ಒಂದು ಕ್ಷಣ ಮೌನವಾದ ರವಿ ಅವರು ಪಕ್ಕದಲ್ಲೇ ಕುಳಿತಿದ್ದ ಪರಕಾಶಕರನ್ನು ನೋಡಿದರು. ಪ್ರಕಾಶಕರು (ಸಂಪಾದಕ, ಮಾಲೀಕ) ಸಾವರಿಸಿಕೊಂಡು ನನ್ನಲ್ಲಿ "ಈಗ ಆ ವಿಶಯ ಬೇಡ ಬಿಡಿ." ಅಂದರು. ಅಲ್ಲಿಗೆ ಸಂದರ್ಶನ ಮುಕ್ತಾಯವಾಯ್ತು.
ಶಾಸಕರು ಹೋದ ನಂತರ ಸಂಪಾದಕರು ನನ್ನಲ್ಲಿ ಹೇಳಿದರು.. "ಯಾವುದೇ ಪ್ರಶ್ನೆಗೆ ಸಮಯ ಸಂದರ್ಭ ಇರುತ್ತೆ. ಈಗ ಅವರಿಂದ ನಮಗೆ ಕೆಲಸ ಆಗಬೇಕಾಗಿದೆ. ಇಂತಹ ಸಮಯದಲ್ಲಿ ಅವರಿಗೆ ಮುಜುಗರ ಮಾಡಬಾರದು... ನಮ್ಮ ಕೆಲಸ ಆಗಿಲ್ಲ ಅಂದರೆ ಮುಂದೆ ನೋಡುವ.." ಅಂದರು.
ಅವರ ಕೆಲಸ ಅಯ್ತೋ ಬಿಡ್ತೋ ಗೊತ್ತಾಗಲಿಲ್ಲ. ಸ್ವಲ್ಪ ದಿನಕ್ಕೆ ನಾನೇ ಕೆಲಸ ಬಿಟ್ಟೆ. ಆಮೇಲೆ ಅವರ ಗಾರ್ಮೆಂಟ್ಸ್ ಸಹ ಮುಚ್ಚಿ ಹೋಯ್ತು ಅಂತ ಗೊತ್ತಾಯ್ತು.
ನಿನ್ನೆ ಪ್ರಕಾಶ್ ರೈ ಅವರನ್ನು ವಾಹಿನಿ ಒಂದರ ನಿರೂಪಕಿ ಯಾವುದೋ ಹೊತ್ತಲ್ಲಿ ಯಾವುದೋ ಪ್ರಶ್ನೆ ಕೇಳಿ ರಾದ್ದಾಂತ ಮಾಡಿಕೊಂಡ ಘಟನೆ ನೋಡಿ ಇದು ನೆನಪಾಯ್ತು.
ಕಾಮೆಂಟ್ಗಳು