ವಿಷ್ಣುವರ್ಧನ್ ಮತ್ತು ಸುಹಾಸಿನಿ ಅವರ ಅಮೋಘ ನಟನೆಯ ಮುತ್ತಿನ ಹಾರ ಚಿತ್ರದಲ್ಲಿ ಒಂದು ಹಾಡು ಬರುತ್ತದೆ, "ದೇವರು ಹೊಸೆದಾ ಪ್ರೇಮದ ದಾರಾ..." ಅಂತ. ನನಗೆ ಈ ಹಾಡನ್ನು ಕೇಳುವಗೆಲ್ಲ ಅನ್ನಿಸೋದು, ಇದನ್ನು ಅಣ್ಣೋರು ಹಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ. ಬಾಲ ಮುರುಳಿ ಕೃಷ್ಣ ಅವರು ಹಾಡಿದ್ದು ಚೆನ್ನಾಗಿದೆ ಆದರೂ ಅದನ್ನು ರಾಜ್ ರಿಂದ ಹಾಡಿಸಿದ್ದರೆ ಕನ್ನಡದಲ್ಲಿ ಮತ್ತೊಂದು ಅಪೂರ್ವ ಸಂಗಮ ಆದಂತೆ ಇರುತ್ತಿತ್ತು.
ಅದಾಗಲೇ ರಾಜ್ ಬೇರೆ ನಾಯಕರಿಗೆ ಆಗೊಂದು ಈಗೊಂದು ಹಾಡುಗಳನ್ನು ಹಾಡುತ್ತ ಇದ್ದರು. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಪ್ರಜಾವಾಣಿ ಯಲ್ಲಿ ಆ ಚಿತ್ರದ ನಿರ್ಮಾಣದ ಬಗ್ಗೆ ಬರೆದಿದ್ದರು, ಅದರಲ್ಲಿ ಕಷ್ಟ ಪಟ್ಟು ಹೈದರಾಬಾದ್ ಹೋಗಿ ಬಾಲ ಮುರುಳಿ ಕೃಷ್ಣ ಅವರ ಹತ್ತಿರ ಹಾಡಿಸಿದೆವು ಅಂತ ಬರೆದಿದ್ದರು. ಆದರೆ ಎಲ್ಲಿಯೂ ರಾಜ್ ರಿಂದ ಅದನ್ನು ಹಾಡಿಸಬಹುದೇ ಎಂಬುದರ ಬಗ್ಗೆ ಯೋಚಿಸಿದ ಪ್ರಸ್ತಾಪವೇ ಇರಲಿಲ್ಲ! ಯಾಕೆ ಅಷ್ಟು ದೊಡ್ಡ ನಿರ್ದೇಶಕರಿಗೆ ಅಂತಹ ಯೋಚನೆ ಬರಲಿಲ್ಲ ಅಂತ ಆಶ್ಚರ್ಯ ಆಗುತ್ತದೆ. ಒಂದು ವೇಳೆ ಬಾಬು ಮತ್ತು ವಿಷ್ಣು ಇಬ್ಬರೂ ಹೋಗಿ ರಾಜ್ ರಲ್ಲಿ ಕೇಳಿಕೊಂಡಿದ್ದರೆ ರಾಜ್ ಹಾಡಲು ಒಪ್ಪದೇ ಇರುತ್ತಿರಲಿಲ್ಲ. ಸಂಗೀತ ನಿರ್ದೇಶಕ ಹಂಸಲೇಖ ಕೂಡ ಅದಾಗಲೇ ರಾಜ್ ಬ್ಯಾನರ್ ನಲ್ಲಿ ಗುರುತಿಸಿಕೊಂಡಿದ್ದರು. ಆದರೆ ನಿರ್ದೇಶಕರು ಅಂತಹ ಪ್ರಯತ್ನವನ್ನೇ ಮಾಡಲಿಲ್ಲ.
ಡಾ. ರಾಜ್ ಮತ್ತೆ ವಿಷ್ಣುವರ್ಧನ್ ಗಂಧದಗುಡಿಯ ನಂತರ ಮತ್ತೆ ಒಂದಾಗದಂತೆ ತಡೆದಿದ್ದು ಯಾರು ? ಸ್ವತಃ ಅವರಿಬ್ಬರ ನಡುವೆ ಯಾವುದೇ ವೈಮನಸ್ಯ ಇದ್ದ ಬಗ್ಗೆ ಮಾಹಿತಿ ಇಲ್ಲ, ಇಬ್ಬರೂ ಎಲ್ಲಿಯೂ ಆ ರೀತಿ ಹೇಳಿದ್ದಾಗಲಿ, ನಡೆದುಕೊಂಡಿದ್ದಾಗಲಿ ದಾಖಲೆ ಇಲ್ಲ. ಹಾಗಿದ್ದರೆ ಇಬ್ಬರ ನಡುವೆ ತಡೆಯಾಗಿ ನಿಂತವರು ಯಾರು ? ಎಂದೆಲ್ಲ ಯೋಚಿಸಿದರೆ ಸಿಗುವ ಉತ್ತರ ಇವರಿಬ್ಬರ ಸುತ್ತ ಮುತ್ತ ಇದ್ದವರೇ ಅನ್ನೋದು ಆಗಿರುತ್ತದೆ. ಒಟ್ಟಿನಲ್ಲಿ ಯಾರು ಯಾರದೋ ಚಿತಾವಣೆಗೆ ಇಬ್ಬರು ಮಹಾನ್ ನಟರು ದೂರವೇ ಇದ್ದು ಬಿಡಬೇಕಾಯ್ತು ಅನ್ನಿಸುತ್ತೆ.

ಕಾಮೆಂಟ್ಗಳು