ಈ ಹೆಸರು ಕೇಳಿದರೇನೇ ಎಂತವರ ಮೈಯ್ಯಲ್ಲೂ ಒಂದು ಮಿಂಚಿನ ಸಂಚಾರವಾಗುತ್ತದೆ. ರಾಯಣ್ಣ ಅನ್ನುವುದು ಒಂದು ವ್ಯಕ್ತಿಯಲ್ಲ, ಅದೊಂದು ಈ ಕರುನಾಡಿನಲ್ಲಿ ಹುಟ್ಟಿದ ಮಹಾನ್ ಶಕ್ತಿ.
ಅಂದು ಬ್ರಿಟೀಷರು ರಾಯಣ್ಣನ ಹೆಸರು ಕೇಳಿದರೇನೇ ನಡುಗುತ್ತಿದ್ದರು. ರಾಯಣ್ಣನ ಹೆಸರು ಕೇಳಿದರೆ ಅವರ ಮೈಯ್ಯಲ್ಲಿ ಕಂಪನ ಶುರುವಾಗುತ್ತಿತ್ತು. ರಾಯಣ್ಣನಿಂದಾಗಿ ಬ್ರಿಟಿಷರು ಕಿತ್ತೂರಿನ ಕಡೆ ಕಾಲಿಡಲೂ ಹೆದರುವ ಕಾಲವೊಂದಿತ್ತು. ಅದು ರಾಯಣ್ಣನ ಶಕ್ತಿ ಮತ್ತು ಯುಕ್ತಿಯ ಹೆಚ್ಚುಗಾರಿಕೆ.
ರಾಯಣ್ಣ ಹುಟ್ಟಿದ್ದು ೧೭೯೮ ರ ಆಗಷ್ಟ್ ೧೫ ರಂದು ಈಗಿನ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ. ರಾಯಣ್ಣನ ಹಿರಿಯರು ಕಿತ್ತೂರು ಸಂಸ್ಥಾನದ ಅರಮನೆಗಳಲ್ಲಿ ವಾಲೇಕಾರ ಕೆಲಸ ಮಾಡುತ್ತಾ ಬಂದವರು. ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರೆ. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿಯಾಗಿದ್ದ. ಊರೊಳಗೆ ನುಗ್ಗಿ ಜನ ಜಾನುವಾರುಗಳಿಗೆ ತೊಂದರೆ ಕೊಡುತ್ತಿದ್ದ ಹೆಬ್ಬುಲಿಯೊಂದನ್ನು ಹೊಡೆದು ಹಾಕಿದ ಸಾಹಸಿ ಬರಮಣ್ಣ! ಅವರ ಆ ಸಾಹಸಕ್ಕೆ ಮೆಚ್ಚಿ ರಾಜರು "ರಕ್ತ ಮಾನ್ಯದ ಹೊಲ"ವನ್ನು ಬಳುವಳಿ ನೀಡಿದ್ದರು. ಅದಲ್ಲದೇ ಬರಮಣ್ಣ ಸಂಗೊಳ್ಳಿಯ ಗರಡಿ ಮನೆಯ ಗಟ್ಟಿ ಕಟ್ಟಾಳು ಕೂಡಾ ಆಗಿದ್ದರು. ಅಂತಹ ಅಂಜದೆಯ ಗಂಡಿನ ಮಗನಾಗಿ ಹುಟ್ಟಿದ ರಾಯಣ್ಣ ನೂರೆದೆಯ ಸಾಹಸಿಯಾಗಿದ್ದ.
ಇತ್ತ ಕಿತ್ತೂರಿನ ದೊರೆ ಮಲ್ಲಸರ್ಜನು ಮರಾಠಿ ಪೇಶ್ವೆಗಳ ಮೋಸದ ಬಲೆಗೆ ಸಿಕ್ಕು ಸಾವಿಗೆ ಈಡಾಗಿದ್ದನು. ಅವನ ಸಾವಿನ ನಂತರ ಅವನ ದತ್ತು ಮಗನಿಗೆ ಪಟ್ಟ ಕಟ್ಟುವುದನ್ನು ಬ್ರಿಟಿಷ್ ಕಲೆಕ್ಟರ್ ತ್ಯಾಕರೆ ತಡೆಯುತ್ತಾನೆ. ತಮ್ಮ ಕಾನೂನಿನ ಪ್ರಕಾರ ದತ್ತು ಮಕ್ಕಳಿಗೆ ಅಧಿಕಾರ ಕೊಡಲು ಬರುವುದಿಲ್ಲ ಎನ್ನುತ್ತಾನೆ. ಇದನ್ನು ದಿಟ್ಟವಾಗಿ ಎದುರಿಸುವುದು ಮಲ್ಲಸರ್ಜನ ಎರಡನೇ ಹೆಂಡತಿ ಚೆನ್ನಮ್ಮ. ಬ್ರಿಟಿಷರಿಗೆ ಕಪ್ಪ ಕಾಣಿಕೆ ಕೊಡುವುದನ್ನು ನಿಲ್ಲಿಸಿ ಅದೇ ಹಣದಲ್ಲಿ ತನ್ನದೇ ಸೈನ್ಯವನ್ನು ಬಲಪಡಿಸತೊಡಗುತ್ತಾಳೆ. ಇದರಿಂದ ಕೆಂಡಾಮಂಡಲನಾದ ತ್ಯಾಕರೆ ಕಿತ್ತೂರು ಕೊಟೆಯ ಮೇಲೆ ದಾಳಿಗೆ ಸಜ್ಜಾಗುತ್ತಾನೆ.
ಬ್ರಿಟಿಷರ ದಾಳಿಯ ಸೂಚನೆ ತಿಳಿದು ಜನರು ಕಂಗಾಲಾಗುತ್ತಾರೆ. ಅಗ ಚೆನ್ನಮ್ಮಳ ಅಂಗರಕ್ಷಕನಾಗಿ ಮುಂದಾಳತ್ವ ವಹಿಸುವವನೇ ರಾಯಣ್ಣ. ೧೮೨೪ ರ ಅಕ್ಟೋಬರ ೨೧ ರಂದು ಥ್ಯಾಕರೆ ಕಿತ್ತೂರಿನ ಮೇಲೆ ದಾಳಿ ಮಾಡಿಯೇ ಬಿಡುತ್ತಾನೆ. ಅಗಾಧವಾದ ಬ್ರಿಟಿಷ್ ಸೇನೆಯನ್ನು ಕಿತ್ತೂರಿನ ಪುಟ್ಟ ಸೇನಾದಳ ಎದುರಿಸುವುದು ಕನಸಿನ ಮಾತು ಎಂದೇ ಎಲ್ಲರೂ ಮಾತಾಡಿಕೊಳ್ಳುತ್ತಾರೆ. ಅದರೆ ಕಿತ್ತೂರಿನ ಸೇನೆಯಲ್ಲಿ ಕಲಿಗಳ ಹಿಂಡೇ ಇತ್ತು. ಸರದಾರ ಗುರುಸಿದ್ದಪ್ಪನವರ ಮುಂದಾಳತ್ವದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಸತ್ತು ಬೀಳುತ್ತಾನೆ. ಇದನ್ನು ಕಂಡ ಬ್ರಿಟಿ಼ಷರ ಸೈನ್ಯ ದಂಗುಬಡಿದು ಹೋಗುತ್ತದೆ. ಸ್ಟೀವನ್ಸನ್ ಹಾಗು ಈಲಿಯಟ್ ಎಂಬ ಬ್ರಿಟಿಷ್ ಅಧಿಕಾರಿಗಳನ್ನು ಸೆರೆ ಹಿಡಿಯಲಾಗುತ್ತೆ. ಈ ರೀತಿ ಬ್ರಿಟಿಷ್ ಸೇನೆ ಸೋತು ಹಿಂದುರಿಗಿದ ನಂತರ ಚೆನ್ನಮ್ಮಲ ಜೊತೆ ಸಂದಾನದ ಪತ್ರ ವ್ಯವಹಾರ ಮಾಡಿ ಆ ಇಬ್ಬರು ಅಧಿಕಾರಿಗಳನ್ನು ಬಿಡಿಸಿಕೊಳ್ಳುತ್ತದೆ. ಆದರೆ ಮಾತಿಗೆ ತಪ್ಪಿ ಅತಿ ದೊಡ್ಡ ಸೇನೆಯೊಂದಿಗೆ ಮತ್ತೆ ಡಿಸೆಂಬರ್ ೩ ರಂದು ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ. ಡಿಸೆಂಬರ್ ೪ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳಾಗುತ್ತಾನೆ. ಡಿಸೆಂಬರ್ ೫ ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಸೆಂಬರ್೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ೪ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೯ ಫೆಬ್ರುವರಿ ೨ ರಂದು ನಿಧನ ಹೊಂದುತ್ತಾಳೆ. ಕಾಳಗದಲ್ಲಿ ಸೆರೆ ಸಿಕ್ಕು ಆಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ಹೋರಾಟವನ್ನು ಮುಂದುವರೆಸುತ್ತಾನೆ.
ಅವನಿಗೆ ಚೆನ್ನಮ್ಮ ಸ್ವಂತ ತಾಯಿಗಿಂತೂ ಹೆಚ್ಚಾಗಿರುತ್ತಾಳೆ. ಆಕೆಯ ಸವನ್ನು ಸಹಿಸಿಕೊಳ್ಳುವುದು ರಾಯಣ್ಣನಿಗೆ ಸಾಧ್ಯವಾಗುವುದಿಲ್ಲ. ಹೇಗಾದರೂ ದೊರೆಯ ದತ್ತುಪುತ್ರ ಶಿವಲಿಂಗಪ್ಪರನ್ನು ಮತ್ತೆ ಗದ್ದುಗೆಯ ಮೇಲೆ ಕೂರಿಸಲೇ ಬೇಕು ಎಂದು ಪಣ ತೊಟ್ಟು ತನ್ನ ನಂಬಿಗಸ್ತ ಕೆಲವೇ ಯುವಕರೊಂದಿಗೆ ಸೇರಿಕೊಂಡು ಗೆರಿಲ್ಲಾ ಯುದ್ದವನ್ನು ತೊಡಗಿಸುತ್ತಾನೆ. ಕಂಡ ಕಂಡಲ್ಲಿ ಬ್ರಿಟಿಷ್ ಸೇನೆಯ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಾನೆ. ಇವನ ಗೆರಿಲ್ಲಾ ತಂತ್ರಗಳಿಂದ ಬ್ರಿಟಿರು ಕಂಗಾಲಾಗಿ ಹೋಗುತ್ತಾರೆ. ಹೇಗದರೂ ಹಿಡಿದು ಗಲ್ಲಿಗೆ ಏರಿಸಲು ಸಕಲ ತಂತ್ರಗಳನ್ನೂ ಹೆಣೆಯುತ್ತಾರೆ. ಇತ್ತ ರಾಯಣ್ಣ ತನ್ನ ಆಪ್ತಬಳಗವನ್ನು ಬೆಳೆಸುತ್ತಾ ಹೋಗುವಾಗ ಬ್ರಿಟಿಷರ ಎಂಜಲು ನಾಯಿಗಳು ತನ್ನ ಪಡೆಯಲ್ಲಿ ಸೇರಿಕೊಳ್ಳುತ್ತಾ ಹೋಗುವುದನ್ನು ಕಂಡುಕೊಳ್ಳಲಾಗುವುದೇ ಇಲ್ಲ. ಕೊನೆಗೂ ೧೮೩೦ ಫೆಬ್ರುವರಿಯಲ್ಲಿ ರಾಯನ್ನನನ್ನು ಮೋಸದಿಂದ ಬ್ರಿಟಿಷರಿಗೆ ಹಿಡಿದು ಕೊಡುತ್ತಾರೆ.
ಹೀಗೆ ತನ್ನವರಿಂದಲೇ ಮೋಸಕ್ಕೆ ಒಳಗಾಗಿ ಸೆರೆ ಸಿಕ್ಕ ರಾಯಣ್ಣನನ್ನು ಬ್ರಿಟಿಷರು ೧೮೩೧ ರ ಜನವರಿ ೨೬ ರಂದು ಗಲ್ಲಿಗೆ ಹಾಕುತ್ತಾರೆ. ರಾಯಣ್ಣ ನೇಣಿನ ಕುಣಿಕೆಗೆ ಏರುವಾಗ ಅವನಿಗೆ ಕೇವಲ ೩೫ ವರ್ಷ ವಯಸ್ಸು. ಅವನ ಜೊತೆ ಅವನ ಸಹವರ್ತಿಗಳಾಗಿದ್ದ ಬಾಳಾ ನಾಯಕ, ಬಸಲಿಂಗಪ್ಪ, ಕರಬಸಪ್ಪ , ಭೀಮಾ ಜಿಡ್ಡಿಮನಿ, ಕೆಂಚಪ್ಪ , ಅಪ್ಪಾಜಿ ನಾಯಕ ಎಂಬುವವರನ್ನೂ ನೇಣಿಗೆ ಏರಿಸಲಾಗುತ್ತದೆ. ಹಾಗೆಯೆ ಅವನ ಇತರೆ ಕೆಲ ಜೊತೆಗಾರರಾದ ರುದ್ರನಾಯಕ , ಎಲ್ಲಾನಾಯಕ , ಅಪ್ಪಾಜಿ, ರಾಣಮೋಜಿಕೊಂಡ, ಕೋನೇರಿ ಮತ್ತು ನೇಮಣ್ಣ ಎಂಬುವವರನ್ನು ಜೀವಾವದಿ ಶಿಕ್ಷೆಗೆ ಒಳಪಡಿಸಲಾಗುತ್ತದೆ.
ರಾಯಣ್ಣನನ್ನು ನೇಣಿಗೆ ಹಾಕುವ ಹೊತ್ತಿನಲ್ಲಿ ಅವನ ಗೆಳೆಯ ಕತ್ತಿ ಚನ್ನಬಸವಣ್ಣ ಆರು ವೇಶದಲ್ಲಿ ಅಲ್ಲಿಗೆ ಬಂದು ಗೆಳೆಯನ ಸಾವನ್ನು ಅತ್ಯಂತ ದುಖದಿಂದ ಕಣ್ತುಂಬಿಕೊಳ್ಳುತ್ತಾನೆ. ಅಲ್ಲಿಂದ ಎಲ್ಲರೂ ತೆರಳಿದ ನಂತರ ರಾಯಣ್ಣನ ಸಮಾಧಿಯ ಮೇಲೆ ಒಂದು ಪುಟ್ಟ ಆಲದ ಸಸಿಯನ್ನು ನೆಟ್ಟು ಅಲ್ಲಿಂದ ಮರೆಯಾಗುತ್ತಾನೆ. ಆ ಪುಟ್ಟ ಸಸಿ ಇಂದು ಹೆಮ್ಮರವಾಗಿ ಬೆಳೆದು ರಾಯಣ್ಣನ ತ್ಯಾಗ ಬಲಿದಾನಗಳನ್ನು ಸಾರುತ್ತಾ ನಿಂತಿದೆ.
ಈ ರೀತಿಯಾಗಿ ಸಂಗೊಳ್ಳಿ ರಾಯಣ್ಣು ಆಗಷ್ಟ್ ೧೫ ರಂದು ಹುಟ್ಟಿ ಜನವರಿ ೨೬ ರಂದು ಮರಣ ಹೊಂದುತ್ತಾನೆ. ಸರಿಯಾಗಿ ನೋಡಿದರೆ ಸಂಗೊಳ್ಳಿ ರಾಯಣ್ಣನೇ ನಮ್ಮ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ಕಾಕತಾಳಿಯವೆಂಬಂತೆ ಅವನ ಹುಟ್ಟಿದ ದಿನವಾದ ಆಗಷ್ಟ್ ೧೫ ರಂದೇ ನಮ್ಮ ದೇಶವು ಸ್ವಾತಂತ್ರ್ಯ ಪಡೆಯಿತು ಮತ್ತು ಅವನ ಸಾವಿನ ದಿನವಾದ ಜನವರಿ ೨೬ ರಂದೇ ಗಣರಾಜ್ಯವೂ ಆಯಿತು.
ಆದರೆ ಇಂದು ನಾವು ರಾಯಣ್ಣನಂತಹ ನಿಸ್ವಾರ್ಥ ಹೋರಾಟಗಾರನನ್ನು ಮರೆಯುತ್ತಿದ್ದೇವೆ. ನಮ್ಮ ನಾಡಿನ ಹೆಮ್ಮೆಯ ನಾಯಕನ್ನು ನೆನಪಿಸಿಕೊಳ್ಳುವವರು ಕಡಿಮೆಯೇ. ಬ್ರಿಟಿಷರ ಎದುರು ನಿಂತು ಕೆಚ್ಚೆದೆಯಿಂದ ತಾಯಿನಾಡಿಗಗಿ ಹೋರಾಡಿದ ಈ ಕಲಿಯು ಹುಟ್ಟಿದ ಈ ದಿನದಂದು ಮನಸಾರಿ ಸ್ಮರಿಸೋಣ, ಮನಸಾರೆ ನಮಿಸೋಣ.
ಜೈ ಕರ್ನಾಟಕ ಮಾತೆ.
ವಿಡಿಯೋ ನೋಡಿ :
ಕಾಮೆಂಟ್ಗಳು