ಜ್ಞಾನಪೀಠ ಬಂದಿದ್ದು ಕಂಬಾರರಿಗಾದರೆ ಅದರಿಂದ ತಲೆ ಬಿಸ ಮಾಡಿಕೊಂಡಿರುವ ವ್ಯಕ್ತಿಗಳೇ ಬೇರೆಯವರು. ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿ ಬಂತು ಎಂದು ನಾವು ಖುಷಿ ಪಡುವ ಹೊತ್ತಿಗೇ ಅದರಲ್ಲೊಂದು ಕಿಡಿ ಮತ್ತು ಹೊಗೆ ಶುರುವಾಗಿ ಕನ್ನಡ ಸಾಹಿತ್ಯ ಲೋಕವನ್ನು ಮಸುಕಾಗಿಸುತ್ತಿರುವುದು ವಿಪರ್ಯಾಸ. ಪೀಠ ಬಂದ ಖುಷಿಯಲ್ಲಿ ಕಂಬಾರರಿದ್ದರೆ ಭೈರಪ್ಪರಿಗೆ ಎಲ್ಲಿ ಬಂದು ಬಿಡುತ್ತೋ ಅನ್ನುವ ಆತಂಕದಲ್ಲಿ ಅನೇಕರಿರುವಂತೆ ತೋರುತ್ತಿದೆ.
ಕಂಬಾರರಿಗೆ ಪ್ರಶಸ್ತಿ ಕೊಟ್ಟಿದ್ದಕ್ಕೇ ಪಾಟೀಲ ಪುಟ್ಟಪ್ಪ ಗರಮ್ ಆಗಿ ಮೊದಲಿಗೆ ತಲ್ಲಣ ಉಂಟು ಮಾಡಿದರು. "ಹೋಗಿ ಹೋಗಿ ಇವರಿಗೆ ಕೊಡೋದಾ ?" ಎಂಬ ಪಾಪುರವರ ಪಾಪದ ಮಾತಲ್ಲಿ ತನಗೆ ಬರಲಿಲ್ಲ ಅನ್ನುವ ನೋವಿತ್ತೋ, ಅಥವಾ ಕಂಬಾರರಿಗೆ ಬಂದೋಯ್ತಲ್ಲ ಅನ್ನುವ ಹೊಟ್ಟೆಕಿಚ್ಚು ಇತ್ತೋ ಗೊತ್ತಾಗಲಿಲ್ಲ. ಆದರೆ ಅಗ್ನಿ ಶ್ರೀಧರ್ ಮತ್ತು ನಿಡುಮಾಮಿಡಿ ಸ್ವಾಮೀಜಿಗಳಂತವರು ಜ್ಞಾನಪೀಠ ಹೊತ್ತು ತಂದ ಕಂಬಾರರ ತಲೆಯನ್ನು ನೇವರಿಸುವುದು ಬಿಟ್ಟು ಬೈರಪ್ಪರ ಜುಟ್ಟು ಹಿಡಿದು ಅಲ್ಲಾಡಿಸ ಹೊರಟಿದ್ದು ಅತಿರೇಕವೆನ್ನಿಸದಿರದು. ಹೇಳಿ ಕೇಳಿ ಅದು ಖಾಸಗಿ ಸಂಸ್ಥೆ ನೀಡುವ ಒಂದು ಪ್ರಶಸ್ತಿ. ಅದನ್ನು ಅವರಿಗೆ ಕೊಡಬಾರದು, ಇವರು ಸತ್ತ ನಂತರ ಬೇಕಾದರೆ ಕೊಡಲಿ ಎಂದೆಲ್ಲಾ ಹೇಳಿದ್ದು ಸರಿಯಲ್ಲ. ಪ್ರಶಸ್ತಿಯ ಬಗ್ಗೆ ಈಗಾಗಲೇ ಲಾಬಿಯ ಕಳಂಕ ತಟ್ಟಿರುವುದೇನೋ ಹೌದು. ಹಾಗಂತ ಅವರೇನೂ ಕಣ್ಣು ಮುಚ್ಚಿಕೊಂಡು ಪ್ರಶಸ್ತಿ ನೀಡುತ್ತಾರೆಯೇ ? ನೂರಕ್ಕೆ ನೂರಲ್ಲದಿದ್ದರೂ 80 - 90 % ರಷ್ಟಾದರೂ ಅರ್ಹರಿಗೇ ನೀಡಬೇಕಲ್ಲವೇ ? ಅದನ್ನೇ ಸಂಸ್ಥೆಯವರು ಮಾಡುತ್ತಿದ್ದಾರೆ. ಸರ್ಕಾರದಿಂದಲೂ ಸಾಧ್ಯವಿಲ್ಲದ ಒಂದು ಅತ್ಯುನ್ನತ ಪ್ರಶಸ್ತಿಯನ್ನು ಖಾಸಗಿ ಸಂಸ್ಥೆಯವರು ನೀಡುತ್ತಿರುವುದೇ ಒಂದು ಘನಕಾರ್ಯ. ಅದರಲ್ಲೂ ಕನ್ನಡಕ್ಕೆ ಹೆಚ್ಚು ಪ್ರಶಸ್ತಿಗಳು ಬಂದಿರುವುದು ಕನ್ನಡಿಗರಾದ ನಾವೆಲ್ಲಾ ಹೆಮ್ಮೆ ಪಡುವ ವಿಷಯ. ಹಾಗಿರುವಾಗ ಅದರ ಬಗ್ಗೆ ಕೊಂಕು ನುಡಿಯುವುದು ಸರಿಯಲ್ಲ. ಅಕಸ್ಮಾತ್ ಬೈರಪ್ಪರಿಗೂ ಒಂದು ಜ್ಞಾನಪೀಠ ಬಂದರೆ ಬಂದೇ ಬಿಡಲಿ, ಏನಂತೆ? ಅದು ಅವರಿಗಷ್ಟೇ ಅಲ್ಲದೇ ಕನ್ನಡಕ್ಕೂ ಗರಿಮೆಯೇ ಅಲ್ಲವೇ? ಅವರಿಗೆ ಏಕೆ ಕೊಟ್ಟೆವು ಎಂಬುದನ್ನು ಪ್ರಶಸ್ತಿ ಪ್ರದಾನ ಸಮಿತಿಯವರು ವಿವರಿಸುತ್ತಾರೆ.
ಕನ್ನಡಕ್ಕೆ ಎಂಟು ಜ್ಞಾನಪೀಠಗಳನ್ನು ತಂದುಕೊಟ್ಟ ಸಾಹಿತಿಗಳಿಗೆ ವಂದಿಸಲೇ ಬೇಕು. ಏಕೆಂದರೆ ಇದರಿಂದ ನಮ್ಮ ಭಾಷೆಯ ಹಿರಿಮೆ ಹೆಚ್ಚುತ್ತಿದೆ. ಉಳಿದ ಭಾಷಿಕರೂ ಕನ್ನಡದತ್ತ ತಿರುಗಿ ನೋಡುತ್ತಾರೆ. ಎಂಟು ಜ್ಞಾನಪೀಠ ಪಡೆಯುವಂತಾ ಸಮೃದ್ದಿ ಕನ್ನಡದಲ್ಲಿ ಏನಿದೆಯಪ್ಪಾ ? ಎಂದು ಅವಲೋಕಿಸುತ್ತಾರೆ. ಇದು ಕನ್ನಡಕ್ಕೆ ಬಹುದೊಡ್ಡ ಕೊಡುಗೆಯೇ ಸರಿ. ಇಷ್ಟಕ್ಕೂ ಇದನ್ನು ನೀಡುತ್ತಿರುವವರು ಕನ್ನಡೇತರ ಸಂಸ್ಥೆ. ಆದುದರಿಂದ ಅವರು ಯಾರಿಗೆ ನೀಡಿದರೂ ಸಂತೋಷದಿಂದಲೇ ಸ್ವೀಕರಿಸೋಣ. ಅರ್ಹರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಅವರಿಗೇ ಬಿಡೋಣ.
ಕಾಮೆಂಟ್ಗಳು