ಇತ್ತೀಚಿಗೆ ಬಹು ಚರ್ಚಿತವಾಗುತ್ತಿರುವ ವಿಷಯ ಕುಕ್ಕೆ ಸುಬ್ರಮಣ್ಯದ ಮಡೆಸ್ನಾನದ್ದು. ಯಾರೋ ಉಂಡ ಎಂಜಲೆಲೆ ಮೇಲೆ ಇನ್ಯಾರೋ ಬಿದ್ದು ಉರುಳಾಡುವುದೇ ಹೇಯ. ಇದರಲ್ಲಿ ಮೇಲ್ಜಾತಿ ಕೆಳಜಾತಿ ಬೇಧ ನೋಡುವ ಅಗತ್ಯ ಇಲ್ಲ. ಮಾಡುತ್ತಿರುವ ಕೃತ್ಯ ಮಾತ್ರ ಅಕ್ಷಮ್ಯ. ಇದನ್ನು ಕೆಲ ಭಟ್ಟಂಗಿಗಳು ಸಮರ್ಥಿಸುತ್ತಿರುವುದು ಖೇದಕರ.
ಈ ಎಂಜಲೆಲೆ ಸ್ನಾನವನ್ನು ಸಮರ್ಥಿಸಿಕೊಳ್ಳಲು ನೂರಾರು ವರ್ಷಗಳ ಆಚರಣೆ ಅನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಕಾರಣವಿಲ್ಲ. ಅದೊಂದೇ ಒಂದು ಮೂರ್ಖ ಆಚರಣೆಗೆ ನೆಪವಾಗುವುದಾದರೆ ನಮ್ಮ ದೇಶ ಪರಕೀಯರ ಭಾವನೆಯಲ್ಲಿ ಹೇಗಿದೆಯೋ ಹಾಗೇ ಉಳಿದು ಹೋಗುತ್ತದೆ. ಇದನ್ನು ಮಾಡುತ್ತಿರುವ ಮಲೆಕುಡಿಯರು "ಕಷ್ಟ ಹಾಗೂ ರೋಗ ನಿವಾರಣೆಯಾಗುತ್ತದೆ" ಎಂದು ತಪ್ಪಾಗಿ ನಂಬಿಕೊಂಡಿದ್ದಾರೆ. ಹೀಗೆ ನಂಬಿಸಿದವರು ಮೇಲ್ಜಾತಿಯವರೇ ಇರಬೇಕು ಎಂದು ಯಾರ ಮೇಲೋ ಗೂಬೆ ಕೂರಿಸುವ ಅಗತ್ಯ ಈಗ ಇಲ್ಲ. ಆಗಬೇಕಾಗಿರುವುದು ಒಂದು ಅನಿಷ್ಟ ಆಚರಣೆಯ ನಿವಾರಣೆ. ಈ ಆಚರಣೆಗೆ ಯಾವುದೇ ವೈಜ್ಞಾನಿಕ ಕಾರಣಗಳೂ ಇಲ್ಲ. ಮೇಲಾಗಿ ಇದನ್ನು ಆಚರಿಸುತ್ತಿರುವ ಮಲೆಕುಡಿಯರು ಅನಕ್ಞರಸ್ತರು. ಇವರನ್ನು ಇದರಿಂದ ದೂರ ಮಾಡಬೇಕಾದುದು ಸರ್ಕಾರದ ಧರ್ಮ.
ಆದರೆ ಜಾತೀವಾದವನ್ನು ಪೋಷಿಸಿಕೊಂಡೇ ಬರುವ ನಮ್ಮ ಹಾಳು ರಾಜಕಾರಣಿಗಳು "ಮಡೆಸ್ನಾನಕ್ಕೆ ಯಾರದೂ ಒತ್ತಾಯವಿಲ್ಲ. ಹಾಗಾಗಿ ಅದನ್ನು ನಿಷೇಧಿಸುವ ಅಗತ್ಯ ಇಲ್ಲ" ಎಂದು ಬುರುಡೆ ಬಿಡುತ್ತಿದ್ದಾರೆ. ಒತ್ತಾಯವಿಲ್ಲದ ಆಚರಣೆಯನ್ನು ನಿಷೇಧಿಸುವ ಅಗತ್ಯ ಇಲ್ಲ ಅಂತಾದರೆ ಲಾಟರಿ, ಬಹುಪತ್ನಿತ್ವ, ವೇಶ್ಯಾವಾಟಿಕೆ, ಜೂಜು, ಬಾಲ್ಯ ವಿವಾಹ, ಸತಿಸಹಗಮನ, ದೇವದಾಸಿ ಪದ್ದತಿ ಮುಂತಾದವುಗಳನ್ನು ಯಾಕೆ ನಿಷೇಧಿಸಿದರು ? ಶಿವಮೊಗ್ಗದ ಸೊರಬ ತಾಲೂಕಿನ ಚಂದ್ರಗುತ್ತಿ ಎಂಬಲ್ಲಿ ಹಿಂದೆ ಬೆತ್ತಲೆ ಸೇವೆ ಇತ್ತು. ಅದು ಕೂಡಾ ಒತ್ತಾಯ ಪೂರ್ವಕವಾಗಿ ನಡೆಯುತ್ತಿರಲಿಲ್ಲ. ಹೆಂಗಸರು, ಗಂಡಸರು ಮಕ್ಕಳೆಲ್ಲ ಹರಕೆ ಹೊತ್ತುಕೊಂಡು ನದಿಯಲ್ಲಿ ಸ್ನಾನ ಮಾಡಿ ದೇವಸ್ಥಾನಕ್ಕೆ ಬೆತ್ತಲೆಯಾಗಿ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಇದನ್ನು ಸರ್ಕಾರ ನಿಷೇಧಿಸಿತು. ಆಗ ಸರ್ಕಾರ ಕೊಟ್ಟ ಕಾರಣ - ಇದು ಅಸಹ್ಯ ಆಚರಣೆ. ಆದರೆ ಈಗ ಸದಾನಂದ ಗೌಡರು ಕೊಡುತ್ತಿರುವ ಕಾರಣ "ಯಾರದೂ ಒತ್ತಾಯವಿಲ್ಲ!"
[ ಚಂದ್ರಗುತ್ತಿಯಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆಯ ಸಂಗ್ರಹ ಚಿತ್ರ ]



ಕಾಮೆಂಟ್ಗಳು