ವಿಷಯಕ್ಕೆ ಹೋಗಿ

ಪತ್ತೇದಾರಿ ಕಥೆ ಬರೆವ ರಹಸ್ಯ

ಪ್ರಾರಂಭ ಹೇಗಿರಬೇಕು ?

ಸಾಧಾರಣ, ಸಾಮಾಜಿಕ ಕಥೆ ಬರೆಯುವುದು ಸುಲಭ. ಆದರೆ ಒಂದು ಪತ್ತೇದಾರಿ ಕಥೆ ಬರೆಯುವುದು ತುಂಬಾ ಕಷ್ಟ. ಸಾಮಾಜಿಕ ಕಥೆ ಬರೆಯಲು ನೂರಾರು ವಿಷಯಗಳು ಸಿಗುತ್ತವೆ. ಅವುಗಳನ್ನು ಎಲ್ಲಿಂದ ಹೇಗೆ ಬೇಕಾದರೂ ಪ್ರಾರಂಭಿಸಬಹುದು. ಹೇಗೆ ಬೇಕಾದರೂ ಮುಕ್ತಾಯ ಮಾಡಬಹುದು. ಇಂತದ್ದೇ ಅನ್ನುವಂತಹ ಅಂತ್ಯ ಕಾಣಿಸುವ ಅಗತ್ಯ ಇರುವುದಿಲ್ಲ. ಮೇಲಾಗಿ ಬರವಣಿಗೆಯ ಶೈಲಿ ಅಷ್ಟೇನೂ ಉತ್ತಮವಾಗಿರದಿದ್ದರೂ ನಡೆದೀತು, ಒಂದು ಉತ್ತಮ ವಿಷಯವನ್ನಿಟ್ಟುಕೊಂಡು ಕಥೆ ಬರೆದು ಬಿಡಬಹುದು. ಆದರೆ ಪತ್ತೇದಾರಿ ಕಥೆಗೆ ಹಾಗಲ್ಲ. ಹೇಗಾದರೂ ಬರೆದರಾದೀತು ಅನ್ನುವಂತಿಲ್ಲ. ಮೊದಲ ಪ್ಯಾರಾದಿಂದಲೇ ಓದುಗರನ್ನು ಹಿಡಿದಿಡುವ ಕುಶಲತೆ ನಮಗಿರಬೇಕು.

ಉದಾ : ವಿಶಾಲವಾದ ಸ್ನಾನಗೃಹದ ಬಕೇಟಿನಲ್ಲಿದ್ದ ಬಿಸಿ ನೀರಿನಿಂದ ಎದ್ದ ಹಬೆ ಆ ಸ್ನಾನದ ಕೋಣೆಯನ್ನು ಪೂರ್ತಿಯಾಗಿ ಮಂಜಿನಂತೆ ಆವರಿಸುತ್ತಿತ್ತು. ಎದುರಿನ ಗೋಡೆಯಲ್ಲಿದ್ದ ನಿಲುವುಗನ್ನಡಿಯ ಮೇಲೆ ಮಂದ್ರವಾಗಿ ಹಬೆ ಅಂಟಿಕೊಂಡು ಸ್ನಾನಕ್ಕಿಳಿದಿದ್ದ ನಿತ್ಯಾಳ ಸುಂದರವಾದ ನಗ್ನ ದೇಹಕ್ಕೆ ತಾನೇ ಉಡುಗೆಯಾದಂತೆ ಭಾಸವಾಗುತ್ತಿತ್ತು. ಇದ್ಯಾವುದರ ಅರಿವೇ ಇಲ್ಲದ ಹದಿನೆಂಟರ ತರುಣಿ ನಿತ್ಯಾ ತನ್ನಷ್ಟಕ್ಕೆ ತಾನು ಸ್ನಾನ ಮುಗಿಸಿ ಆ ಕನ್ನಡಿಯಿಂದ ಎರಡಡಿ ದೂರ ನಿಂತು ಅದರಲ್ಲಿ ಮಂಜು ಮಂಜಾಗಿ ಗೋಚರಿಸುತ್ತಿದ್ದ ತನ್ನ ನಗ್ನ ಪ್ರತಿಬಿಂಬವನ್ನೇ ನೋಡುತ್ತಾ ಮೈ ಒರೆಸಿಕೊಳ್ಳತೊಡಗಿದಳು. ತನ್ನ ಸೌಂದರ್ಯವನ್ನು ತಾನೇ ಸವಿಯಲೋ, ಅಥವಾ ಮೊದಲೇ ಚಂದಿರನಷ್ಟು ಬೆಳ್ಳಗಿರುವ ತನ್ನ ದೇಹ ಬಿಸಿ ನೀರಿನ ಕಾರಣಕ್ಕೆ ಇನ್ನೆಷ್ಟು ಕೆಂಪಾಗಿದೆಯೋ ಎಂದು ತಿಳಿದುಕೊಳ್ಳಲೋ ಎಂಬಂತೆ ಒಮ್ಮೆ ಆ ಕನ್ನಡಿಯತ್ತ ನಡೆದು ಅದನ್ನು ತನ್ನ ಕೈಯಿಂದ ಒರೆಸಿದಳು. ಹಾಗೆ ಒರೆಸುತ್ತಿದ್ದವಳು ಆ ಕನ್ನಡಿಯಲ್ಲಿ ಕಂಡ ಅವಳ ಹಿಂದಿನ ದೃಶ್ಯವನ್ನು ನೋಡಿ ಕಿಟಾರನೆ ಕಿರುಚಿಕೊಂಡಳು.

ಈ ರೀತಿ ಒಂದು ಕಥೆಯನ್ನು ನೀವು ಪ್ರಾರಂಭಿಸಿದಿರಾದರೆ ಕಂಡಿತಾ ಮೊದಲ ಹೆಜ್ಜೆ ಸರಿಯಾಗಿಯೇ ಇರಿಸಿದ್ದೀರೆಂದಾಯ್ತು. ಏಕೆಂದರೆ ಯಾವ ಓದುಗನೂ ಅವಳು ಏಕೆ ಹಾಗೆ ಕಿರುಚಿಕೊಂಡಳು ಎಂದು ತಿಳಿದುಕೊಳ್ಳಲು ಎರಡನೇ ಪ್ಯಾರಾವನ್ನು ಓದದೇ ಇರಲಾರ. ಹೀಗೆ ಒಂದಾದ ನಂತರ ಒಂದರಂತೆ ಪ್ಯಾರಾವನ್ನು ಓದಿಸಿಕೊಂಡು ಹೋಗುವಂತದ್ದೇ ಪತ್ತೇದಾರಿ ಕಥೆಯ ಮೊದಲ ಲಕ್ಷಣ. ಅದನ್ನು ಸಾಧಿಸುವುದು ಅಷ್ಟು ಸುಲಭವೇನಲ್ಲ.

ವಿಷಯದ ಆಯ್ಕೆ

ಪತ್ತೇದಾರಿ ಕಥೆಗಳಿಗೆ ಸೂಕ್ತ ವಿಷಯವನ್ನು ಆಯ್ಕೆ ಮಾಡುವುದೇ ಒಂದು ದೊಡ್ಡ ಸವಾಲು. ಒಂದು ಕೊಲೆಯ ವಿಷಯವನ್ನು ತೆಗೆದುಕೊಂಡು ಕಥೆ ಬರೆಯುವುದು ಉತ್ತಮ.ಯಾವುದೋ ಒಬ್ಬ ಮುಖ್ಯ ವ್ಯಕ್ತಿಯ ಕೊಲೆ ನಡೆದಲ್ಲಿಂದ ಹಿಡಿದು, ಇನ್ಸ್‌ಪೆಕ್ಟರ್ ಅಥವಾ ಖಾಸಗಿ ಪತ್ತೇದಾರ ಕೊಲೆಗಾರನ್ನನು ಹಿಡಿದು ಹಾಕುವಲ್ಲಿಗೆ ಕ್ಲೈಮ್ಯಾಕ್ಸ್ ಕೊಡಬಹುದು. ಆದರೂ ಈಗಾಗಲೇ ಬಂದಿರುವ ಸಾವಿರಾರು ಕಥೆಗಳಿಗಿಂತಲೂ ವಿಭಿನ್ನವಾಗಿ ಬರೆಯುವುದು ಕಷ್ಟ. ವಿಶಾಲ ವಿವರಣೆಯ ಅವಕಾಶವಿರುವ ಕಾದಂಬರಿಯಲ್ಲಾದರೆ ಬೇರೆ ಬೇರೆ ಮಗ್ಗುಲುಗಳನ್ನು ವಿವರಿಸುತ್ತಾ ಹೋಗಬಹುದು. ಆದರೆ ಕಥೆಯಾದರೆ ಆದಷ್ಟು ಬೇಗ ಅದನ್ನು ಮುಗಿಸಿ ಸಂಪಾದಕರು ಒಪ್ಪುವ ಪುಟಗಳಲ್ಲೇ ಕೊಲೆಗಾರನನ್ನು ಹಿಡಿದು ಹಾಕಬೇಕು... ಹಾಗೂ ಕಥೆ ವಿಭಿನ್ನವಾಗಿರಬೇಕು. ಕಥೆ ವಿಭಿನ್ನವಾಗಿರಬೇಕು ಅಂದಾಗ ಕೊಲೆಯೂ ಕೂಡಾ ವಿಭಿನ್ನವಾಗಿರಲೇ ಬೇಕು. 

ಇದರಲ್ಲಿ ಎರಡು ವಿಧ :
1. ಕೊಲೆ ಸಾಧಾರಣ ರೀತಿಯಲ್ಲಿ ನಡೆದಿದ್ದು ಕೊಲೆಗಾರ ಯಾರೆಂದು ಪತ್ತೆ ಮಾಡುವುದು. 
2. ಕೊಲೆ ನಡೆದ ರೀತಿಯೇ ವಿಶಿಷ್ಠವಾಗಿದ್ದು (ಆತ್ಮಹತ್ಯೆಯಂತೆಯೋ, ಅಪಘಾತದಂತೆಯೋ ಇದ್ದು) ಅದನ್ನು ಕೊಲೆ ಎಂದು ನಿರೂಪಿಸಿ ಕೊಲೆಗಾರನನ್ನು ಹಿಡಿಯುವುದು. 
ಹೀಗೆ ಯಾವುದನ್ನೇ ಆದರೂ ಎಚ್ಚರಿಕೆಯಿಂದ ನಿರೂಪಿಸಬೇಕಾಗುತ್ತದೆ.

ನಿರೂಪಣೆ ರಸವತ್ತಾಗಿರಲಿ

ಪತ್ತೇದಾರಿ ಕಥೆಗಳಿಗೆ ನಿರೂಪಣೆ ಅತ್ಯಂತ ಮುಖ್ಯವಾದ ಅಂಶ. ಬೇರೆ ಕಥೆಗಳಂತೆ ಏನೇನೋ ಹೇಳುತ್ತ ಎಳೆದುಕೊಂಡು ಹೋಗುವಂತಿಲ್ಲ. ಹೇಳಬೇಕಾದ್ದನ್ನು ಮಾತ್ರ ಸ್ಫುಟುವಾಗಿ ಹೇಳಬೇಕು, ಮತ್ತು ಹೇಳಬೇಕಾದ್ದನ್ನೆಲ್ಲಾ ಹೇಳಲೇ ಬೇಕು. ಕಥೆಯನ್ನು ವೇಗವಾಗಿ ಓಡಿಸಬೇಕು.  ಅಗತ್ಯ ಇಲ್ಲದೇ ಏನೇನನ್ನೋ ಹೇಳುತ್ತ ಕೂರಬಾರದು. ಉದಾಹರಣೆಗೆ ಕೆಲವು ಕಥೆಗಾರರು ವಿನಾಕಾರಣ ಆ ಕೋಣೆಯಲ್ಲಿ ಒಂದು ಟಿಫಾಯಿ. ಅದರ ಮೇಲೆ ನಾಲ್ಕು ಪತ್ರಿಕೆಗಳು. ಒಂದು ದೊಡ್ಡ ಮಂಚ. ಸೋಫಾ ಸೆಟ್, ಎರಡು ಕುರ್ಚಿ... ಹೀಗೆ ಏನೇನೋ ಹೇಳುತ್ತಾ ಹೋಗುತ್ತಾರೆ. ಕಥೆಗೆ ಅಗತ್ಯ ಇದ್ದಲ್ಲಿ ಮಾತ್ರ ಇಂತಹ ವಿವರಣೆ ಬೇಕು. ಅತ್ಯಂತ ವಿಶಾಲವಾದ ಆ ಕೋಣೆ ಶ್ರೀಮಂತಿಕೆಯಿಂದ ಕೂಡಿತ್ತು. ಅಂದರೆ ಓದುಗರಿಗೆ ಅರ್ಥವಾಗಿ ಹೋಗುತ್ತದೆ. ಅಲ್ಲಿ ಏನೇನು ಇದ್ದಿರಬಹುದು ಎಂದು. ಎಲ್ಲವನ್ನೂ ವರ್ಣಿಸುವ ಅಗತ್ಯ ಇಲ್ಲ. ಹಾಗೆಯೇ ಕಥೆಯ ಕೊನೆಯಲ್ಲೆಲ್ಲೋ ಒಂದು ವಸ್ತು ಆ ಕೋಣೆಯಲ್ಲಿ ಇದ್ದಿರಬೇಕಾದ ಅಗತ್ಯ ಬರುತ್ತದೆಂದರೆ ಅದನ್ನು ಇಲ್ಲಿ ತೋರಿಸಿರಬಹುದು. 

ಕಥೆಯನ್ನು ತುಂಬಾ ಭೀಭತ್ಸವಾಗಿ ಬರೆಯಬಾರದು. "ಅಲ್ಲಿ ಸುಮಾರು ಆರು ಲೀಟರ್ ರಕ್ತ ಚೆಲ್ಲಿತ್ತು. ಎರಡು ಲೀಟರ್ ಕೆಂಪಗೆ ಹಾಸಿಗೆ ಮೇಲೂ, ಉಳಿದ ನಾಲ್ಕು ಲೀಟರ್ ನೆಲದಲ್ಲೂ ಹೊಳೆಯಂತೆ ಹರಿದು ಹೋಗಿತ್ತು. ಹೃದಯ ಕಿತ್ತು ಹೊರಗೆ ಬಿದ್ದು ವಿಲ ವಿಲ ಒದ್ದಾಡುತ್ತಿತ್ತು. ಒಂದು ಕಾಲು ಸುಟ್ಟು ದೂರ ಬಿದ್ದಿತ್ತು. ಅದರ ಮೇಲೆ ನೊಣಗಳು ಹಾರಾಡುತ್ತಿದ್ದವು." ಎಂಬಂತೆ ವರ್ಣಿಸಬಾರದು. ಇಂತಹ ಕಥೆಗಳನ್ನು ಓದಿ ಓದುಗರು ಮೂರ್ಛೆ ಹೋದರೂ ಹೋಗಬಹುದು.

ಆಹ್ಲಾದತೆ ಮತ್ತು ಕುತೂಹಲ

ಓದುತ್ತಾ ಹೋದಂತೆ ಓದುಗ ಆಹ್ಲಾದಗೊಳ್ಳಬೇಕು ಮತ್ತು ಮುಂದೇನು ಎಂದು ಕುತೂಹಲಗೊಳ್ಳಬೇಕು. ಪತ್ತೇದಾರಿ ಕಥೆಗಳಲ್ಲಿ ಶೃಂಗಾರ ಸಾಮಾನ್ಯ. ಅದನ್ನು ಅಗತ್ಯಕ್ಕೆ ತಕ್ಕಂತೆ, ಅಧಿಕವೂ ಆಗದಂತೆ ಬಳಸಿಕೊಳ್ಳುವ ಜಾಣ್ಮೆ ನಮಗಿರಬೇಕು. ಅಗತ್ಯಕ್ಕೆ ತಕ್ಕಂತೆ ಹೆಣ್ಣಿನ ಸೌಂದರ್ಯವನ್ನು ವರ್ಣಿಸಿ ಓದುಗರನ್ನು ಖುಷಿ ಪಡಿಸುವುದನ್ನೂ ತಿಳಿದಿರಬೇಕು. ಇನ್ನೊಮ್ಮೆ ಈ ಲೇಖನದ ಎರಡನೇ ಪ್ಯಾರಾದಲ್ಲಿ ನೀಡಿರುವ ಉದಾಹರಣೆಯ ಕಥೆ ಓದಿ ನೋಡಿ.. ಅಲ್ಲಿ ಅತಿರೇಕವಾಗದಂತೆ ಶೃಂಗಾರವನ್ನು ನೀಡಲಾಗಿದೆ. ಓದುಗರು ಶೃಂಗಾರದ ರಸಾನುಭವ ಪಡೆಯುತ್ತಿರುವಾಗಲೇ ಏಕಾಏಕಿ ಆತಂಕದ ವಾತಾವರಣ ಸೃಷ್ಟಿಸಲಾಗಿದೆ. ಇದು ಓದುಗರನ್ನು ಹಿಡಿದಿಡುವ ಉಪಾಯ. ಶೃಂಗಾರದ ಹೆಸರಲ್ಲಿ ಹೆಚ್ಚು ಅತಿರೇಕವಾಗಿ ಬರೆಯಬಾರದು. ಏಕೆಂದರೆ ಪತ್ತೇದಾರಿ ಕಥೆಗಳಿಗೆ ಮಹಿಳಾ ಓದುಗರೂ ಹೆಚ್ಚಾಗೇ ಇದ್ದಾರೆ. ಅವರು ಪುಸ್ತಕವನ್ನು ಕೆಳಗಿಡುವ ಅಪಾಯವಿರುತ್ತದೆ. ಆದರೆ ಆಹ್ಲಾದಕರ ಶೃಂಗಾರವನ್ನು ಎಲ್ಲರೂ ಇಷ್ಟ ಪಡುತ್ತಾರೆ. ಪತ್ತೇದಾರಿ ಕಥೆಗಳಿಗೆ ಚೂರು ಮಾತ್ರ ಹೆಚ್ಚು ಶೃಂಗಾರ ಸೇರಿಸಿದರೆ ತಪ್ಪೇನಿಲ್ಲ.
ನಿತ್ಯಾಳ ಹಿಂದೆ ಏನು ಬೇಕಾದರೂ ಇರಬಹುದು. ಒಂದು ಹೆಣ, ಅಪರಿಚಿತ ವ್ಯಕ್ತಿ, ಯಾರದೋ ಕೈ, ದೆವ್ವ, ರಕ್ತ... ಏನಾದರೂ. ಅಂದರೆ ಆತಂಕ, ಕುತೂಹಲ, ಭಯಾನಕ ಹಾಗೂ ಶೃಂಗಾರಮಯ ದೃಶ್ಯಗಳನ್ನು ಒಂದಕ್ಕೊಂದು ಪೋಣಿಸುತ್ತಾ ಹೋಗುವುದೇ ಪತ್ತೇದಾರಿ ಕಥೆಯ ತಿರುಳು.

ಹೆಚ್ಚು ಹೆಚ್ಚು ಓದಿ ತಿಳಿದುಕೊಳ್ಳಿ

ಪತ್ತೇದಾರಿ ಕಥೆಗಳನ್ನು ಬರೆಯಬೇಕೆಂದರೆ ನೀವು ಹೆಚ್ಚು ಹೆಚ್ಚು ಅಂತಹ ಕಥೆ ಕಾದಂಬರಿಗಳನ್ನು ಓದಲೇಬೇಕು. ನಮ್ಮ ಕನ್ನಡದ ಎನ್. ನರಸಿಂಹಯ್ಯ, ಕೌಂಡಿನ್ಯ, ಸಾಸ್ಕಾರ್ತಿ, ಸಿ.ಎಸ್. ರಾವ್, ಜಿಂದೆ ನಂಜುಂಡಸ್ವಾಮಿ, ಜಿ. ಪ್ರಕಾಶ್ ಮುಂತಾದ ಅನೇಕ ಕಥೆಗಾರರು ಪತ್ತೆದಾರಿಕೆಯಲ್ಲೇ ಹೆಸರು ಮಾಡಿರುವವರು. ಷೆರ್ಲಾಕ್ಸ್ ಹೋಮ್ಸ್  ಪಾತ್ರವನ್ನು ಸೃಷ್ಟಿಸಿದ ಸರ್. ಅರ್ಥರ್ ಕಾನನ್ ಡೈಲ್ ಪ್ರಪಂಚಕ್ಕೇ ಚಿರ ಪರಿಚಿತ. ಇವರ ಕಥೆ ಕಾದಂಬರಿಗಳನ್ನು ಓದಬೇಕು. ಹಾಗೆಯೇ ಅಪರಾಧ ಜಗತ್ತಿನ ಅನೇಕ ವಿಷಯಗಳನ್ನು ತಿಳಿದುಕೊಂಡಿರಬೇಕು. ಐ.ಪಿ.ಸಿ. ಸೆಕ್ಷನ್ 302 ಕೊಲೆಗೆ ಸಂಬಂಧಿಸಿದ್ದು ಎಂಬಂತಹ ತಿಳುವಳಿಕೆ ಇರಬೇಕು. ಪೋಸ್ಟ್ ಮಾರ್ಟಮ್ ರಿಪೋರ್ಟ್‌ಗೂ ಪೋರೆನ್ಸಿಕ್ ಲ್ಯಾಬ್ ರಿಪೋರ್ಟ್‌ಗೂ ಇರುವ ವ್ಯತ್ಯಾಸ ಅರಿತಿರಬೇಕು. ಒಬ್ಬ ವ್ಯಕ್ತಿಯ ಸಾವು ವಿಷದಿಂದ ಆಗಿದೆ ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್‌ ಹೇಳಿದರೆ, ಅದು ಯಾವ ವಿಷ, ಎಷ್ಟು ಪ್ರಮಾಣದಿಂದ ಎಂದು ಹೇಳಲು ಪೊರೆನ್ಸಿಕ್ ಲ್ಯಾಬ್ ರಿಪೋರ್ಟ್‌ ಬೇಕಾಗುತ್ತದೆ. ಇಂತಹ ವಿಷಯಗಳ ಅರಿವು ನಮಗಿರಬೇಕು.
ಹಾಗೆಯೇ ಸ್ಥಳಗಳ ಪರಿಚಯವೂ ಇರಬೇಕು. ಕೆಲವೊಂದು ಸ್ಥಳಗಳನ್ನು ನೇರವಾಗಿ ನೋಡದೇ ಹೋದರೂ ಕೇಳಿಯಾದರೂ, ಓದಿಯಾದರೂ, ಟಿವಿಯಲ್ಲಿ ನೋಡಿಯಾದರೂ ತಿಳಿದುಕೊಂಡಿದ್ದರೇನೇ ಆ ಸ್ಥಳದ ಬಗ್ಗೆ ಬರೆಯಬೇಕು. ಅದಿಲ್ಲದೆ ನೀವೊಂದು ದೇಶದ ಕಥೆಯನ್ನು ಬರೆಯುತ್ತಾ ಅಲ್ಲಿ ರೈಲಿನಲ್ಲಿ ನಡೆವ ಒಂದು ಘಟನೆ ಬರೆದಿರೆಂದು ಇಟ್ಟುಕೊಳ್ಳಿ. ಅಲ್ಲಿ ಅಕಸ್ಮಾತ್ ರೈಲ್ವೆ ಹಳಿಯೇ ಇಲ್ಲದೇ ಹೋದರೆ ?  ಈ ರೀತಿ ತಪ್ಪಾಗಿ ಬರೆದಿರುವುದು ಓದುಗರಿಗೆ ಗೊತ್ತಾದರೆ ಇವನ್ಯಾರೋ ಪ್ರಪಂಚ ಜ್ಞಾನವಿಲ್ಲದವ ಎಂದುಕೊಂಡು ಬಿಡುತ್ತಾರೆ. ನಾನೊಂದು ಕಾದಂಬರಿಯಲ್ಲಿ ಸಂಜೆ ಗಲ್ಲಿಗೇರಿಸಿದರು ಎಂದು ಬರೆದು ಬಿಟ್ಟಿದ್ದೆ. ನನಗೆ ನಂತರವೇ ತಿಳೀದಿದ್ದು ಸಂಜೆ ಸಮಯ ಯಾರನ್ನೂ ಗಲ್ಲಿಗೆ ಹಾಕುವುದಿಲ್ಲ, ಮುಂಜಾನೆ ಸೂರ್ಯ ಮೂಡುವ ಮುನ್ನ ಅದನ್ನು ಮಾಡುತ್ತಾರೆ ಎಂದು. ವಿಷಯ ಜ್ಞಾನವಿಲ್ಲದೇ ಬರೆಯಲು ಹೋದರೆ ಇಂತಹ ಎಡವಟ್ಟುಗಳಾಗಿ ಬಿಡುತ್ತವೆ. ಲೇಖಕರು ಆದಷ್ಟೂ ಜಾಗೃತೆ ವಹಿಸಬೇಕು.

ಒಬ್ಬ ಕಥಾ ನಾಯಕನನ್ನು ಸೃಷ್ಟಿಸಿ

ಇದು ಪತ್ತೇದಾರಿ ಕತೆಗಾರರಿಗೆ ತುಂಬಾ ಮುಖ್ಯ. ಷೆರ್ಲಾಕ್ಸ್ ಹೋಮ್ಸ್ ಎಂದರೆ ಆತ ಕಾನನ್ ಡೈಲ್ ಅವರ ಕಥಾನಾಯಕ ಎಂದು ಎಲ್ಲರಿಗೂ ಗೊತ್ತು. ಅದೇ ರೀತಿ ಎನ್. ನರಸಿಂಹಯ್ಯನವರ ಕಥಾನಾಯಕ ಮೃತ್ಯಂಜಯ ಮತ್ತು ಗಾಳೀರಾಯ. ಪತ್ತೇದಾರಿ ಕಥೆ ಓದುವ ಅಭ್ಯಾಸ ಇರುವವರಿಗೆ ಜಿಂಕೆ ಅಂದರೆ ಜಿ. ಪ್ರಕಾಶ್ ನೆನಪಾಗುತ್ತಾರೆ. ಹಾಗೆಯೇ ನಿಮ್ಮದೇ ಒಂದು ನಾಯಕ ಪಾತ್ರವನ್ನು ಸೃಷ್ಟಿಸಿಕೊಳ್ಳುವುದು ಉತ್ತಮ. ಆ ಮೂಲಕ ಓದುಗರನ್ನು ನಿಮ್ಮ ಕಥೆಗಳಿಗಾಗಿ ಹಿಡಿದಿಡಬಹುದು. 

ಮೊದಲೇ ನಿರ್ಧರಿಸಿಕೊಳ್ಳಿ ಕ್ಲೈಮ್ಯಾಕ್ಸ್ !

ಇದು ಅತ್ಯಂತ ಮುಖ್ಯ. ನೀವು ಎಷ್ಟೇ ಚೆನ್ನಾಗಿ ಪ್ರಾರಂಭಿಸಿದರೂ, ಎಷ್ಟೇ ಚೆನ್ನಾಗಿ ನಿರೂಪಿಸಿದರೂ ಓದುಗರ ಮನಸಲ್ಲಿ ಕಥೆ ನಿಲ್ಲಬೇಕೆಂದರೆ ಕ್ಲೈಮ್ಯಾಕ್ಸ್ ಅದ್ಬುತವಾಗಿರಲೇ ಬೇಕು. ಯಾವುದನ್ನೂ ಗೊಂದಲಗೊಳಿಸುವಂತಿಲ್ಲ. ಏನೇ ಗೊಂದಲಗಳಿದ್ದರೂ ಅದನ್ನು ಕ್ಲೈಮ್ಯಾಕ್ಸ್ನಲ್ಲಿ ಪರಿಹರಿಸಲೇ ಬೇಕು. ಆರೇಳು ಪುಟಗಳ ಕಥೆ ಮುಗಿದಾಗ ಓದುಗ ನಿಟ್ಟುಸಿರಿಡುವಂತೆ ಇರಬೇಕು.
ನೀವೊಂದು ಕೊಲೆಯ ಕಥೆಯನ್ನು ಬರೆದಿದ್ದರೆ, ಅದು ಹೇಗೆ ? ಯಾಕೆ? ಯಾರಿಂದ ನಡೆಯಿತೆಂಬ ವಿಷಯ ನಿಮಗೆ ಸ್ಪಷ್ಟವಾಗಿ ತಿಳಿದಿರಲೇ ಬೇಕು. ಇಲ್ಲವೆಂದರೆ ಕ್ಲೈಮ್ಯಾಕ್ಸ್ನಲ್ಲಿ ಸೋಲು ಅನುಭವಿಸಬೇಕಾಗುತ್ತದೆ. "ನಾನೊಂದು ಪತ್ತೇದಾರಿ ಕಥೆಯನ್ನು ಅರ್ಧ ಬರೆದಿದ್ದೇನೆ. ಹೇಗೆ ಕೊನೆ ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ" ಎಂದು ಕೆಲವು ಹೊಸ ಕತೆಗಾರರು ಹೇಳುವುದನ್ನು ಕೇಳಿದ್ದೇನೆ. ಇವರು ಅದನ್ನು ಕೊನೆ ಮಾಡಲು ಸಾಧ್ಯವೇ ಇಲ್ಲದಂತೆ ಪ್ರಾರಂಭಿಸಿ ಮುಂದುವರಿದಿದ್ದರೆ ಹೇಗೆ ತಾನೇ ಕೊನೆ ಹಾಡಲು ಸಾಧ್ಯ ?

ಒಬ್ಬ ಕೊಲೆಗಾರ ಕೊನೆಯಲ್ಲಿ ಹೇಗೆ ಸಿಕ್ಕಿ ಹಾಕಿಕೊಳ್ಳುತ್ತಾನೆ ಎಂಬುದನ್ನು ಸರಿಯಾಗಿ ನಿರ್ಧಾರ ಮಾಡಿಕೊಳ್ಳಿ. ಅದಕ್ಕೆ ತಕ್ಕಂತೆ ವಿವರಣೆ ನೀಡುತ್ತಾ ಹೋಗಿ. ಆಗ ಕ್ಲೈಮ್ಯಾಕ್ಸ್ನಲ್ಲಿ ಯಾವುದೇ ಗೊಂದಲ ಆಗುವುದಿಲ್ಲ. ಅದಿಲ್ಲವಾದರೆ ಕಥೆಯನ್ನು ಹೇಗೆ ಹೇಗೋ ನೀರಸವಾಗಿ ಮುಗಿಸಬೇಕಾಗುತ್ತದೆ.

ಪರಿಶೀಲನೆ

ಕಥೆಯೊಂದನ್ನು ಬರೆದಾದ ನಂತರ ಅದನ್ನು ನೀವೇ ಒಂದೆರಡು ಬಾರಿ ಓದಿ ನೋಡಿ. ಪ್ರತಿ ವಿಷಯವನ್ನೂ ಪರಿಶೀಲಿಸಿ. ಬರೆದಿರುವುದು ಏನಾದರೂ ತಪ್ಪಿದೆಯೇ ನೋಡಿ ಸರಿ ಪಡಿಸಿ. ಪತ್ತೇದಾರಿ ಕಥೆ ಓದುವಂತಹ ನಿಮ್ಮ ಸ್ನೇಹಿತರಿಗೆ ಕೊಟ್ಟು ಓದಿಸಿ. ಅವರು ಯಾವುದಾದರೂ ಸಂದೇಹವನ್ನು ವ್ಯಕ್ತ ಪಡಿಸಿದರೆ ಅದನ್ನು ಕಥೆಯಲ್ಲಿ ಯಾವ ಭಾಗದಲ್ಲಿ ಪರಿಹರಿಸಬಹುದೋ ಅಲ್ಲಿ ಒಂದೆರಡು ವಾಕ್ಯಗಳನ್ನು ಅತವಾ ಪ್ಯಾರಾವೊಂದನ್ನು ಸೇರಿಸುವ ಮೂಲಕ ಪರಿಹರಿಸಿ. ಪ್ರಾರಂಭದಲ್ಲಿ ಓದುಗರಲ್ಲಿ ನೀವು ಉಂಟು ಮಾಡಿದ ಗೊಂದಲ, ಅನುಮಾನಗಳನ್ನೆಲ್ಲ ಕ್ಲೈಮ್ಯಾಕ್ಸ್ನಲ್ಲಿ ಪರಿಹರಿಸಲಾಗಿದೆಯಾ ನೋಡಿ. ಒಂದು ಚಿಕ್ಕ ಅನುಮಾನವೂ ಉಳಿಯಬಾರದು. ಹಾಗೆ ನೋಡಿಕೊಳ್ಳಿ.

ಇನ್ನೇಕೆ ತಡ, ಆಸಕ್ತಿ ಇದ್ದರೆ ಈಗಲೇ ಒಂದು ಚಿಕ್ಕ ಕಥೆ ಪತ್ತೇದಾರಿ ಕಥೆ ಬರೆದು ಯಾವುದಾದರೂ ಪತ್ರಿಕೆಗೆ ಕಳಿಸಿ. ಕಥೆ ಪುಟ್ಟದಾಗಿ, ಕುತೂಹಲ ಭರಿತವಾಗಿ ಇದ್ದರೆ ಸಂಪಾದಕರು ಕಂಡಿತಾ ಪ್ರಕಟಿಸುತ್ತಾರೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...