ವಿಷಯಕ್ಕೆ ಹೋಗಿ

ಡಬ್ಬಿಂಗ್ ಬೇಕೇ ಬೇಡವೇ ?

"ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಡ" ಎಂದು ಶುರುವಾದ ಹೋರಾಟ ಹಲವು ವರ್ಷಗಳ ತರುವಾಯ ಇಂದು "ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು" ಎಂಬ ಹೋರಾಟವಾಗಿ ಬದಲಾಗಿರುವುದು ಒಂದು ವಿಪರ್ಯಾಸ. ಕಾಲ ಬದಲಾಗಿದ್ದರೂ, ಹೋರಾಟಗಳ ದಿಕ್ಕೇ ಬದಲಾಗಿದ್ದರೂ, ಹೋರಾಟಗಾರರೂ ಬದಲಾಗಿದ್ದರೂ ಸಹ "ಕನ್ನಡದ ಉಳಿವು" ಎಂಬ ಪೆಡಂಭೂತ ಮಾತ್ರ ಹಾಗೆಯೇ ಉಳಿದುಕೊಂಡಿರುವುದು ದುರ್ದೈವವೇ ಸರಿ.

ಆದರೆ ಹಿಂದಿನ ಹೋರಾಟಗಾರರಿಗೂ ಇಂದಿನ ಆನ್‌ಲೈನ್ (ಫೇಸ್‌ಬುಕ್, ಟ್ವಿಟರ‍್) ಹೋರಾಟಗಾರರಿಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನುವುದನ್ನು ನಿಜಾವ ಕನ್ನಡಾಭಿಮಾನಿಗಳು ಮನಗಾಣಬೇಕು. ಈ ಆನ್‌ಲೈನ್ ( ಒನ್‌ಲೈನ್ ) ಹೋರಾಟಗಾರರು ಇಂದು "ಪರಭಾಷೆಗಳ ಚಿತ್ರಗಳು ಕನ್ನಡಕ್ಕೆ ಡಬ್ ಆಗಲಿ" ಎಂದು ಹೇಳುತ್ತಿರುವುದೇನೋ ಸರಿ. ಆದರೆ ಅದರ ಹಿಂದೆ ನಿಜಕ್ಕೂ ಕನಡದ ಕಾಳಜಿ ಇದೆಯಾ ? ಎಂಬುದನ್ನು ಸ್ವಲ್ಪ ಪರಿಶೀಲಿಸಬೇಕಾಗಿದೆ. ಏಕೆಂದರೆ ನಾನು ಗಮನಿಸಿದಂತೆ ಇಂತಹ ಡಬ್ಬಿಂಗ್ ಪರವಾದಿಗಳಲ್ಲಿ ಶೇಕಡಾ ಹತ್ತರಷ್ಟು ಜನರೂ ಕನ್ನಡ ಲಿಪಿ ಬಳಸುತ್ತಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಕನ್ನಡ ಲಿಪಿಯಲ್ಲಿ ಬರೆಯುತ್ತಾರೆ. ಉಳಿದಂತೆ ಕಂಗ್ಲಿಷ್ ಬಳಸುವವರೇ ಹೆಚ್ಚು. ಇನ್ನು ಕೆಲವರು ತಮ್ಮ ಮೊದಲ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ (ಕಷ್ಟಪಟ್ಟು) ಹಾಕಿ, ಅಲ್ಲಿಗೆ ತಮ್ಮ ಕನ್ನಡ ಕೈಂಕರ್ಯ ಮುಗಿಯಿತೆಂದು ಭಾವಿಸಿ, ನಂತರ ಆಂಗ್ಲವೇ ದೇವರು ಎಂದು ಆಂಗ್ಲಕ್ಕೆ ಮೊರೆ ಹೋಗುತ್ತಾರೆ. ಇಂತವರನ್ನು ಕನ್ನಡಾಭಿಮಾನಿಗಳು ಎನ್ನಲು ಸಾಧ್ಯವೇ ? ಇವರೆಲ್ಲಾ ಬಾಯಿ ಬಡುಕ ಕನ್ನಡಾಭಿಮಾನಿಗಳುಷ್ಟೇ. ಇವರ ಮನೆಗಳಲ್ಲಿ ಒಂದು ಕನ್ನಡ ಪತ್ರಿಕೆಯನ್ನೂ ಹಾಕಿಸುತ್ತಾರೋ ಇಲ್ಲವೋ. ಆಂಗ್ಲ ಪತ್ರಿಕೆಗಳಲ್ಲಿ ಬರುವ ಲೇಖನಗಳಿಂದ ಪ್ರೇರಿತರಾಗಿ "ಡಬ್ ಪರವಾದಿ"ಗಳಾಗಿದ್ದಾರೆ.

ಹಾಗಂತ ಡಬ್‌ ಪರವಾದಿಗಳಲ್ಲಿ ಯಾರೂ ಕನ್ನಡಾಭಿಮಾನಿಗಳೇ ಇಲ್ಲ ಎಂದಲ್ಲ. ಅಲ್ಲಿ ನಿಜಕ್ಕೂ ಕನ್ನಡದ ಕಾಳಜಿ ಇರುವ ಅನೇಕರು "ಡಬ್ ಆಗಲಿ" ಎನ್ನುತ್ತಿದ್ದಾರೆ. ಅವರ ವಾದವನ್ನೂ ಆಲಿಸಬೇಕಾಗಿದೆ. ಆದರೆ ನಮ್ಮ ಮುಂದಿರುವ ಪ್ರಶ್ನೆ ಸಾರಾ ಸಗಟಾಗಿ ಡಬ್‌ ಮಾಡಲು ಅನುಮತಿಸುವುದು ಸರಿಯೇ ? ಅನ್ನುವುದು. ಕನ್ನಡ ಚಿತ್ರರಂಗದವರು "ಡಬ್ಬಿಂಗ್ ಬೇಡ" ಎನ್ನುತ್ತಿದ್ದಾರೆ. ಇವರೆಲ್ಲಾ "ಕನ್ನಡದ ಉಳಿವಿಗಾಗಿ ಡಬ್ಬಿಂಗ್ ಬೇಕು" ಅನ್ನುತ್ತಿದ್ದಾರೆ. ಅವರು "ಡಬ್ಬಿಂಗ್ ಮಾಡಿದರೆ ಕನ್ನಡ ಚಿತ್ರರಂಗವೇ ನಶಿಸಿ ಹೋಗುತ್ತದೆ" ಅಂದರೆ ಇವರು "ಹೋದರೆ ಹೋಗಲಿ, ನೀವು ಕೊಡುವ ಕೆಟ್ಟ ಚಿತ್ರಗಳನ್ನು ನೋಡಿ ನೋಡಿ ಸಾಕಾಗಿದೆ. ಆರು ಕೋಟಿ ಕನ್ನಡಿಗರ ಆಯ್ಕೆಯೇ ಮುಖ್ಯ, ನಿಮ್ಮ ನಾಲ್ಕಾರು ಸಾವಿರ ಜನರ ಆಯ್ಕೆಯಲ್ಲ" ಅನ್ನುತ್ತಿದ್ದಾರೆ.

ಎರಡೂ ಕಡೆಗೂ ತಪ್ಪು ಸರಿ ಎರಡೂ ಇದೆ. ಇಷ್ಟು ದಿನ ಕನ್ನಡ ಚಿತ್ರರಂಗದವರು ಬರೀ ಕೆಟ್ಟ ಚಿತ್ರಗಳನ್ನೇ ಕೊಟ್ಟಿಲ್ಲ. ಪರ ಭಾಷೆಯವರೂ ಅಚ್ಚರಿ ಪಡುವಂತಹ ಅದ್ಬುತ ಚಿತ್ರಗಳನ್ನೂ ನೀಡಿ ನಮ್ಮನ್ನು ಸಂತೈಸಿದ್ದಾರೆ. ಹಾಗೆಯೇ ಅನೇಕ ಕೆಟ್ಟಾನು ಕೆಟ್ಟ ಚಿತ್ರಗಳನ್ನು ನೀಡಿ ನಮ್ಮ ಆಸೆಗೆ ತಣ್ಣೀರನ್ನೂ ಎರಚಿದ್ದಾರೆ. ಒಂದು ವೇಳೆ ಡಬ್ಬಿಂಗ್ ಅನುಮತಿಸಿದರೆ ಕನ್ನಡ ಚಿತ್ರರಂಗ ಬಹುತೇಕ ಚಟ್ಟ ಕಟ್ಟುವುದು ಗ್ಯಾರಂಟಿ ಎಂದೇ ಅನ್ನಿಸುತ್ತಿದೆ. ಹಾಗೊಂದು ವೇಳೆ ನಡೆದೇ ಹೋದರೆ ಆಗ ಕನ್ನಡಾಭಿಮಾನಿಗಳಾದ ನಮಗೆ ಹೇಳಿಕೊಳ್ಳಲಿಕ್ಕೂ ಒಂದು ಚಿತ್ರರಂಗ ಅಂತ ಇಲ್ಲದಾಗುತ್ತದೆ ಅನ್ನುವುದನ್ನು ಡಬ್ಬಿಂಗ್ ಪರವಾದಿಗಳು ಗಮನಿಸಬೇಕು. ಆ ನಂತರ ಈಗಿನಂತೆ ಆಗೊಂದು ಈಗೊಂದು ಬರುವ "ಮುಂಗಾರು ಮಳೆ, ದುನಿಯಾ, ಮೊಗ್ಗಿನ ಮನಸ್ಸು"ಗಳೂ ನಮ್ಮ ಪಾಲಿಗೆ ಇಲ್ಲವಾಗಿ, ಪರಭಾಷೆಯ ಚಿತ್ರಾನ್ನಗಳಿಗೇ ಕಾದು ಕುಳಿತಿರಬೇಕಾಗುತ್ತದೆ. ಆಗ ನಮ್ಮ ಸ್ವಂತಿಕೆ ಉಳಿಯುತ್ತದೆಯೇ ? ಆಗ ಒಬ್ಬ ತಮಿಳನೆದುರಲ್ಲೋ ತೆಲುಗನೆದುರಲ್ಲೋ ಎದೆ ತಟ್ಟಿ "ನಮ್ಮದೊಂದು ಚಿತ್ರ ನಿಮ್ಮ ಭಾಷೆಗೆ ಡಬ್ / ರೀಮೇಕ್ ಆಗಿದೆ ನೋಡಯ್ಯಾ" ಎಂದು ಹೇಳುವ ಅವಕಾಶ ಇರುತ್ತದೆಯೇ ? "ಕನ್ನಡ, ಕನ್ನಡತನವೆಂಬುದು ಕೇವಲ ಕನ್ನಡ ಚಿತ್ರರಂಗದವರ ಸ್ವತ್ತಲ್ಲ, ಅದು ಎಲ್ಲಾ ಆರು ಕೋಟಿ ಕನ್ನಡಿಗರ ಆಸ್ತಿ" ಎಂದು ಪರವಾದಿಗಳು ಹೇಳಿದರೂ ಅದೂ ಸಹ ಸಂಪೂರ್ಣ ಸರಿಯಲ್ಲ. ಈಗಿರುವ ಆರು ಕೋಟಿ ಕನ್ನಡಿಗರ ಆಸ್ತಿಯಷ್ಟೇ ಅಲ್ಲದೇ ಅದು ಮುಂದಿನ ಪೀಳಿಗೆಯ ಆಸ್ತಿಯೂ ಹೌದಲ್ಲವೇ ? ನಾವು ಪರಭಾಷಾ ಚಿತ್ರಗಳನ್ನು ಕನ್ನಡದಲ್ಲಿ ನೋಡುವ ಆತುರದಲ್ಲಿ ಈಗಿರುವ ಕನ್ನಡ ಚಿತ್ರರಮಗವನ್ನೂ ಸಹ ಮುಂದಿನ ಪೀಳಿಗೆಗೆ ಇಲ್ಲವಾಗಿಸಿದರೆ ಅದು ಸರಿಯೇ ?

ಹಾಗಂತ ನಾನು ಸಂಪೂರ್ಣ ಡಬ್ಬಿಂಗ್ ವಿರೋಧಿಯೇನಲ್ಲ. ನನ್ನ ಪ್ರಕಾರ ಪರಭಾಷೆಯ ಎಲ್ಲಾ ಹೊಡಿಬಡಿ ಚಿತ್ರಗಳನ್ನು ಡಬ್ಬಿಂಗ್ ಮಾಡಿದರೆ ಅನಾಹುತವಾದೀತು. ಏಕೆಂದರೆ ಕನ್ನಡಕ್ಕಿಂತಲೂ ಕೆಟ್ಟ ಚಿತ್ರಗಳು ಬೇರೆ ಭಾಷೆಯಲ್ಲಿ ಬರುವುದಿದೆ. ಮೇಲಾಗಿ ಎಲ್ಲವನ್ನೂ ಡಬ್ಬಿಂಗ್ ಮಾಡಿ ಇರುವ ಕನ್ನಡ ಚಿತ್ರರಂಗವನ್ನೂ ಸಾಯಿಸಿದರೆ ನಂತರ "ಮುಂಗಾರುಮಳೆ, ಸಾರಥಿ, ದುನಿಯಾ, ಮೊಗ್ಗಿನ ಮನಸ್ಸು"ಗಳಂತಹ ಕನ್ನಡ ಚಿತ್ರಗಳನ್ನೂ ನಾವು ಕಳೆದುಕೊಳ್ಳಬೇಕಾಗುತ್ತದೆ. ಕನ್ನಡ ಸಂಸ್ಕೃತಿ ಕೇವಲ  ಈಗಿರುವ ಆರು ಕೋಟಿ ಕನ್ನಡಿಗರ ಸ್ವತ್ತಷ್ಟೇ ಅಲ್ಲ. ಅದು ಮುಂದಿನ ಪೀಳಿಗೆಯ ಸ್ವತ್ತೂ ಹೌದು. ನಮ್ಮ ಭಾಷೆಯನ್ನು ಸಧೃಡವಾಗಿಯೇ ಮುಂದಿನ ಪೀಳಿಗೆಗೂ ದಾಟಿಸುವ ಜವಾಬ್ದಾರಿ ನಮ್ಮೆಲ್ಲರದ್ದು.

ಡಬ್ಬಿಂಗ್‌ಗೆ ಒಂದು ನಿರ್ದಿಷ್ಟ ಮಾನದಂಡವನ್ನು ಅನುಸರಿಸಿ ಅವಕಾಶ ಕೊಡಬಹುದು. ಉತ್ತಮ ಅಬಿರುಚಿಯ ಚಿತ್ರಗಳನ್ನು ಡಬ್ಬಿಂಗ್ ಮಾಡಬಹುದು. ಅದಕ್ಕೊಂದು ಸೆನ್ಸಾರ್‌ ಬೋರ್ಡ್‌‌ನಂತಹ ಸಂಸ್ಥೆ ಬರಲಿ. ಹಾಗೆಯೇ ಡಿಸ್ಕವರಿ, ನ್ಯಾಷನಲ್ ಜಿಯಾಗ್ರಾಫಿಕ್‌ನಂತಹ ಸದಭಿರುಚಿಯ, ವೈಜ್ಞಾನಿಕ ವಾಹಿನಿಗಳು ಕನ್ನಡಲ್ಲೆ ತರ್ಜುಮೆಯಾಗಲಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...