ವಿಷಯಕ್ಕೆ ಹೋಗಿ

ಮತದಾನದ ಗುರುತಿನ ಚೀಟಿ ಪಡೆಯುವ ಯಮ ಸಾಹಸ


ಈ ದೇಶದ ನಾಗರಿಕರು ಅಂತ ಹೇಳಿಕೊಳ್ಳಲು ಎಷ್ಟು ಆಧಾರಗಳಿದ್ದರೂ ಸಾಲದು. ಹತ್ತಾರು ಗುರುತಿನ ಚೀಟಿಗಳಿದ್ದರೂ ಒಂದೊಂದು ಕಡೆ ಒಂದೊಂದನ್ನು ಕೇಳುತ್ತಾ ಗೊಂದಲ ಹುಟ್ಟಿಸುವುದೇ ಸರ್ಕಾರದ ಕರ್ತವ್ಯವಾಗಿದೆ. ಅವುಗಳನ್ನು ಪಡೆಯಲು ಯಾವುದೇ ಸರಳ ವಿಧಾನಗಳೇ ಇಲ್ಲ. ಅಂತಹುದರಲ್ಲಿ ಪ್ರಮುಖವಾದ 'ಮತದಾರರ ಗುರುತಿನ ಚೀಟಿ' ಪಡೆಯಲಿಕ್ಕಂತೂ ನಾನಾ ತೊಂದರೆಗಳು.

ನಾನು ಈ ಹಿಂದೆಯೇ ಇದನ್ನು ಪಡೆದಿದ್ದರೂ ಮನೆಯನ್ನು ಬದಲಾಯಿಸಿದ್ದರಿಂದ ಹೊಸ ವಿಳಾಸಕ್ಕೆ ಅದನ್ನು ಬದಲಾಯಿಸಬೇಕಾಗಿತ್ತು. ಒಂದೇ ಕ್ಷೇತ್ರದ ಬೇರೆ ವಾರ್ಡ್‍ಗೆ ವಿಳಾಸ ಬದಲಾಯಿಸುವುದಷ್ಟೇ ಕೆಲಸ. ಎರಡು ವರ್ಷದಿಂದ ಇದರ ಬಗ್ಗೆ ತನಿಖೆಗೆ ಇಳಿದಿದ್ದೆ... ಹೇಗೆ ಬದಲಾಯಿಸುವುದು ಎಂದು ತಿಳಿಯಲು.  

ಚುನಾವಣಾ ಇಲಾಖೆಯ ಜಾಲತಾಣದಲ್ಲಿ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು ಎಂದುಕೊಂಡು ಅವರ ಜಾಲತಾಣವಾದ http://ceokarnataka.kar.nic.in/ ನಲ್ಲಿ ಒಂದು ಖಾತೆಯನ್ನು ತೆರೆದು ಅಲ್ಲಿ ಪ್ರಯತ್ನಿಸಿದೆ. ಅಲ್ಲಿ ತಿಳಿದು ಬಂದ ವಿಷಯವೇನೆಂದರೆ ಸಧ್ಯಕ್ಕೆ ಆನ್‍ಲೈನ್‍ನಲ್ಲಿ ವಿಳಾಸ ಬದಲಾವಣೆ ಸಾಧ್ಯವಿಲ್ಲ, ಆದ್ದರಿಂದ ಕಚೇರಿಗೆ ತೆರಳಿ ಮಾಡಿಸಿಕೊಳ್ಳಬೇಕು ಎಂಬುದು.



ಆ ವಿಷಯವನ್ನು ಕೈ ಬಿಟ್ಟು ಯಾವ ಕಚೇರಿಯಲ್ಲಿ ಸಾಧ್ಯ ಎಂದು ತನಿಖೆ ಕೈಗೊಂಡೆ. ಏಕೆಂದರೆ ಚುನಾವಣಾ ಇಲಾಖೆಯ ಕಚೇರಿ ಎಲ್ಲಿದೆ ಅಂತ ಗೊತ್ತಿರಲಿಲ್ಲ. ಸತತ ತನಖೆಯ ನಂತರ ಮಹಾನಗರ ಪಾಲಿಕೆಯ ಸ್ಥಳೀಯ ಕಚೇರಿಯಲ್ಲೇ ಇದನ್ನು ಮಾಡಿಕೊಡುತ್ತಾರೆ ಎಂಬ ಸುಳಿವು ಸಿಕ್ಕಿತು. ಒಂದು ಶುಭ ಮುಹೂರ್ತದಲ್ಲಿ ಪತ್ರಿಕೆಯಲ್ಲಿ ಮತದಾರರ ಹೊಸ ಚೀಟಿ, ವಿಳಾಸ ಬದಲಾವಣೆ ಮುಂತಾದ ಕೆಲಸಗಳು ಶುರುವಾಗಿವೆ ಎಂಬ ಮಾಹಿತಿ ಬಂತು. ಕೂಡಲೆ ನನ್ನ ವಾರ್ಡ್‍ಗೆ ಸಂಬಂಧಿಸಿದ ವಾರ್ಡ್ ಕಚೇರಿಗೆ ಹೋಗಿ ವಿಚಾರಿಸಿದೆ. ಅಲ್ಲಿದ್ದ ಅಧಿಕಾರಿ ಅತ್ಯಂತ ಕಳಪೆ ಮಟ್ಟದ ಮುಖಭಾವದೊಂದಿಗೆ 'ಈಗ ಫಾರಂ ಇಲ್ಲ, ಮುಂದಿನ ಗುರುವಾರ ಬನ್ನಿ' ಎಂದು ಹೇಳಿ ಸಾಗ ಹಾಕಿದ. ಯಾರಪ್ಪನ ಮನೆಯ ಸಂಬಳ ತಿಂದು ಈ ಸೋಮಾರಿಗಳು ಬದುಕುತ್ತಿದ್ದಾರೆ ಎಂಬ ಜ್ಞಾನ ಅವರಿಗೇ ಇಲ್ಲ.

ಈ ಕಚೇರಿಗೆ ತಿರುಗಾಡುತ್ತಿದ್ದರೆ ನನ್ನ ಸಮಯ ವ್ಯರ್ಥವಾಗುತ್ತದೆ ಎಂದು ಮತ್ತೆ ಜಾಲತಾಣದಲ್ಲೆ ಪ್ರಯತ್ನಕ್ಕಿಳಿದೆ. ಈ ಬಾರಿ ಅದೃಷ್ಟ ಕುಲಾಯಿಸಿತೇನೋ ಎಂಬಂತೆ ಆನ್‍ಲೈನ್‍ನಲ್ಲೆ ವಿಳಾಸ ಬದಲಾಯಿಸಲು ಅವಕಾಶ ನೀಡಿದ್ದರು. ಸುಲಭವಾಗಿ ಐದೇ ನಿಮಿಷದಲ್ಲಿ ಮಾಡಿ ಮುಗಿಸಿ ಬಿಡಬಹುದು ಎಂದುಕೊಂಡು ಕಾರ್ಯಾಚರಣೆಗಿಳಿದೆ... ನಂತರವೇ ತಿಳಿದಿದ್ದು ಅದು ಕಾರ್ಗಿಲ್ ಕಾರ್ಯಾಚರಣೆಗಿಂತ ಬಿಗಿ ಎಂದು. ಒಮ್ಮೆ ಗುಪ್ತಪದವನ್ನು ಬದಲಾಯಿಸಿಕೊಳ್ಳೋಣ ಎಂದು ಪ್ರಯತ್ನಿಸಿದೆ ನೋಡಿ, ಅಷ್ಟೇ... ನಂತರ ಸರಿಯಾದ ಗುಪ್ತಪದ ಹಾಕಿದರೂ ತಾಣದಲ್ಲಿ ಪ್ರವೇಶ ಮಾಡಲು ಆಗಲಿಲ್ಲ. 
ಮತ್ತೆ ಸುಮಾರು ದಿನ ಈ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿ ಸುಮ್ಮನಾದೆ. ಮತ್ತೊಂದು ದಿನ ಪ್ರಯತ್ನಿಸಿದಾಗ ತಾಣದೊಳಗೆ ಪ್ರವೇಶಿಸಲು ಅವಕಾಶ ದೊರೆಯಿತು. ಆಗ ಗುಪ್ತಪದವನ್ನು ಬದಲಾಯಿಸುವ ಯೋಚನೆ ಕೈಬಿಟ್ಟು ನೇರ ಹೋರಾಟಕ್ಕೆ ಇಳಿದೆ. ಆನ್‍ಲೈನ್‍ನಲ್ಲೆ ವಿಳಾಸದ ಅರ್ಜಿ ತುಂಬಲು ತೊಡಗಿದೆ. ಅದಕ್ಕೂ ಅನೇಕ ದಾಖಲೆಗಳನ್ನು ನೀಡಬೇಕಾಯ್ತು. ಎಲ್ಲವನ್ನೂ ನೀಡಿಯಾದ ಮೇಲೆ ಪೂರ್ತಿಯಾಯ್ತು ಅಂದುಕೊಂಡಾಗ ತಾಣವೇ ಹ್ಯಾಂಗ್ ಆಯ್ತು! ಅವತ್ತಿನ ಕಾರ್ಯಚರಣೆಯನ್ನು ಮತ್ತೆ ಸ್ಥಗಿತಗೊಳಿಸಿದೆ.

ಮರುದಿನ ಪ್ರಯತ್ನಿಸಿದಾಗಲೂ ಹೀಗೇ ಆಯ್ತು. ಮತ್ತೆ ಕಚೇರಿಗೆ ಹೋಗಿ ಅಧಿಕಾರಿಯ ಮುಖ ನೋಡುವ ಆಸಕ್ತಿ ಇರಲಿಲ್ಲ. ಆದರೆ ಭಾರತದ ಪ್ರಜೆಯಾಗಿ ಮತ ಚಲಾಯಿಸುವ ಹಕ್ಕನ್ನು ಇಷ್ಟು ಕೆಟ್ಟದಾಗಿ ಕಳೆದುಕೊಳ್ಳಲೂ ತಯಾರಿಲ್ಲದೆ ಮತ್ತೆ ಮತ್ತೆ ಆನ್‍ಲೈನ್‍ನಲ್ಲೇ ಪ್ರಯತ್ನಿಸಿದೆ. ಒಂದು ಬಾರಿ ಅರ್ಜಿಯು ಸಬ್‍ಮಿಟ್ ಆಗಿ ಬಿಟ್ಟರೆ ಮುಗಿಯಿತು, ನಂತರ ಅವರು ಯಾವಾಗ ಬೇಕಾದರೂ ನನ್ನ ವಿಳಾಸಕ್ಕೆ ಗುರುತಿನ ಚೀಟಿ ಕಳಿಸುತ್ತಾರೆ ಎಂಬ ವಿಶ್ವಾಸ ನನ್ನದು. ಸತತ ಪ್ರಯತ್ನದ ನಂತರ ಒಂದು ದಿನ ಕೊನೆಗೂ ನನ್ನ ಅರ್ಜಿ ಸಬ್‍ಮಿಟ್ ಆಗೇ ಹೋಯ್ತು. ಖುಶಿಯಿಂದ ಇನ್ನೇನು ಕುಣಿಯಬೇಕು ಅನ್ನುವಾಗ ಅಲ್ಲಿ ತೋರಿಸಿದ ವಾಕ್ಯ "ನೀವು ನೀಡಿದ ಎಲ್ಲಾ ದಾಖಲೆಗಳ ಪ್ರತಿಯೊಂದಿಗೆ ಈ ಅರ್ಜಿಯ ಪ್ರತಿಯನ್ನೂ ಸೇರಿಸಿ ಈ ಕೆಳ ಕಂಡ ವಿಳಾಸಕ್ಕೆ ಅಂಚೆ ಮುಖಾಂತರ ಕಳಿಸಬೇಕು!"

ಚುನಾವಣಾ ಆಯೋಗವೂ ಇಷ್ಟು ಎಡವಟ್ಟಾಗಿರುತ್ತದೆ ಎಂದು ತಿಳಿದುದೆ ಆಗ. ಚುನಾವಣೆಯನ್ನೇನೋ ನಿರ್ಭೀತಿಯಿಂದ, ಸುಲಲಿತವಾಗಿ ನಡೆಸಲು ಪ್ರಯತ್ನಿಸುತ್ತಾರೆ. ಆದರೆ ಮತದಾನದ ಗುರುತಿನ ಚೀಟಿ ವಿತರಣೆಯನ್ನು ಮಾತ್ರ ಮಹಾ ಅದ್ವಾನದಿಂದ ವಿತರಿಸುತ್ತಾರೆ. ಯಾಕೆ ಹೀಗೆ ? ಆನ್‍ಲೈನ್‍ನಲ್ಲಿ ಎಲ್ಲಾ ಭರ್ತಿ ಮಾಡಿದ ನಂತರ ಮತ್ತೆ ಅದನ್ನು ಅಂಚೆ ಮುಖಾಂತರ ಯಾಕೆ ಕಳಿಸಬೇಕು ? ಹಾಗಿದ್ದರೆ ನಮ್ಮ ಸಮಯವನ್ನು ವ್ಯರ್ಥ ಮಾಡಿಕೊಂಡು ಆನ್‍ಲೈನ್ ಸರ್ಕಸ್ ಮಾಡುವ ಅಗತ್ಯವಾದರೂ ಏನು ? ನನ್ನ ಪ್ರಕಾರ ಆಧಾರ್ ಸಂಖ್ಯೆ, ವಾಹನ ಚಾಲನ ಪತ್ರ ಹೀಗೆ ಸರ್ಕಾರದ ಪ್ರಮುಖ ಯಾವುದಾದರೊಂದು ದಾಖಲೆಯ ಸಂಖ್ಯೆಯನ್ನು ಆನ್‍ಲೈನ್‍ನಲ್ಲಿ ಪಡೆದು ಮತದಾನದ ಗುರುತಿನ ಚೀಟಿಯನ್ನು ನೀಡಬಹುದು. ಅದರಲ್ಲೂ ಆಧಾರ್ ಇದ್ದರೆ ಬೇರೆ ಯಾವುದೇ ದಾಖಲೆ ಕೇಳದೆಯೇ ನೀಡಬೇಕು. ಆದರೂ ಈ ಯಡವಟ್ಟು ಸರ್ಕಾರಿ ಅಧಿಕಾರಿಗಳಿಗೆ ಏನಾಗಿದೆ ? ಇವರು ಹೊಟ್ಟೆಗೆ ಅದೇನು ತಿನ್ನುತ್ತಾರೆ ? 'ಸರಳ' ಅನ್ನುವ ಪದವೇ ಇವರ ಶಬ್ದಕೋಶದಲ್ಲಿ ಇಲ್ಲ ಯಾಕೆ ?

ಮಾಡಿದ್ದುಣ್ಣೋ ಮಹರಾಯ ಎಂಬಂತೆ ಎಲ್ಲಾ ದಾಖಲೆಗಳನ್ನೂ ಮುದ್ರಿಸಿ ನನ್ನ ಬಳಿಯಿದ್ದ ಸ್ಟಾಂಪ್ ಅಂಟಿಸಿ ಅಂಚೆ ಡಬ್ಬಿಯನ್ನು ಹುಡುಕಿ ಹೊರಟೆ. ಆಗೀಗ ನೋಡಿದ ಡಬ್ಬಿಗಳೆಲ್ಲಾ ಮಾಯವಾಗಿದ್ದವು. ಕೊನೆಗೂ ಒಂದು ಡಬ್ಬಿ ಕಾಣಿಸಿತು ಎಂದು ಓಡೋಡಿ ಹೋಗಿ ಅದರೊಳಗೆ ಹಾಕಲು ನೋಡಿದರೆ ಅದು ಒಳಗೇ ಹೋಗಲಿಲ್ಲ. ಪರಿಶೀಲಿಸದಾಗ ಅದರೊಳಗಿನ ಪತ್ರಗಳನ್ನು ಖಾಲಿ ಮಾಡದೆ ಅದೆಷ್ಟೋ ಸಮಯವಾದಂತಿತ್ತು. ಇದರಲ್ಲಿ ಹಾಕಿದರೆ ಚುನಾವಣೆ ಮುಗಿದರೂ ನನಗೆ ಗುರುತಿನ ಚೀಟಿ ಸಿಗದು ಎಂದು ಕೊರಿಯರ್ ಮಾಡಲು ಹೋದೆ. ಅಲ್ಲಿನ ವ್ಯಕ್ತಿ 'ಏನ್ ಸರ್, ಕೊರಿಯರ್‍ಗೆ ಸ್ಟಾಂಪ್ ಹಚ್ಚಿ ತಂದಿದೀರಾ.. ಅದೇನೂ ಬೇಡವಾಗಿತ್ತು.' ಎಂದು ಪೆದ್ದನನ್ನು ನೋಡುವಂತೆ ನನ್ನನ್ನು ನೋಡಿದ. 'ಅದು ನನಗೂ ಗೊತ್ತು ರೀ.., ಆದ್ರೆ ವಿಷಯ ಹೀಗಾಯ್ತು..' ಎಂದು ನಡೆದುದನ್ನು ತಿಳಿಸಿ, ನಾನು ಪೆದ್ದನಲ್ಲ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸಿದೆ. ಅಂತೂ ಕೊರಿಯರ್ ಮಾಡಿ ಮನೆಗೆ ಬಂದು ಉಸ್ಸಪ್ಪಾ ಎಂದು ಕುಳಿತೆ. 

ಅದನ್ನು ಕಳಿಸಿ ಅದಾಗಲೆ ಎರಡು ತಿಂಗಳು ಕಳೆಯಿತು. ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದೇನೆ... ಆದರೆ ಇನ್ನೂ ನನ್ನ ಗುರುತಿನ ಚೀಟಿ ಇದುವರೆಗೂ ಬಂದಿಲ್ಲ. ಚುನಾವಣೆ ಬೇರೆ ಹತ್ತಿರ ಬಂತು... ಅಷ್ಟರೊಳಗೆ ಬರುತ್ತೋ ಅಥವಾ ನನ್ನ ಮತ ಈ ಸಾರಿ ಹೊಗೆಯೋ ಏನೋ ಗೊತ್ತಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...