ವಿಷಯಕ್ಕೆ ಹೋಗಿ

ಸಾಹಿತಿಗಳಿಗೂ ರಾಜಕೀಯ ಯೋ(ರೋ)ಗ!



ಏನೂ ಮಾಡಲು ಕೆಲಸವಿಲ್ಲದ ಬಡಗಿ ಮತ್ತೇನೋ ಮಾಡಿದ್ದನಂತೆ, ಹಾಗೇ ಆಗಿದೆ ನಮ್ಮ ಹಿರಿಯ ಸಾಹಿತಿ 'ಚಂಪಾ' ಎಂದು ನಾಮಾಂಕಿತಗೊಂಡಿರುವ ಶ್ರೀ ಚಂದ್ರಶೇಖರ ಪಾಟೀಲರ ಕಥೆ. ಬೆಕ್ಕಿಗೇಕೆ ಕಬ್ಬಿಣದ ಕೆಲಸ ಅನ್ನುವಂತೆ ಇವರಿಗೆ ಯಾಕೆ ಬೇಕಿತ್ತೋ ರಾಜಕೀಯ ಕೆಲಸ? ಸಾಹಿತ್ಯದಲ್ಲೇ ಆಗಬೇಕಾದ ನೂರಾರು ಕೆಲಸಗಳು ಇವೆ. ಕನ್ನಡದ ಕೆಲಸಗಳು ಮಾಡಿದಷ್ಟೂ ತೀರದು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಚಂಪಾ ಏಕಾಏಕಿ ಯಡಿಯೂರಪ್ಪನವರ ಕೆಜೆಪಿಗೆ ಲಾಂಗ್ ಜಂಪ್ ಮಾಡಿರುವುದು ಆಶ್ಚರ್ಯಕ್ಕಿಂತ ಹೆಚ್ಚಾಗಿ ಕುಚೋದ್ಯವಾಗಿಯೇ ಕಾಣಿಸುತ್ತಿದೆ.

ಏಕೆಂದರೆ ಯಡಿಯೂರಪ್ಪ ಹಾಗೂ ಚಂಪಾ ಮೊದಲಿನಿಂದಲೂ ಜಿಗ್ರಿ ದೋಸ್ತ್‍ಗಳೇನಲ್ಲ. ಈ ಹಿಂದೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡವರು. ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಲ್ಲಿ ತಾವು ಬರುವ ಮುಂಚೆಯೆ ಕಾರ್ಯಕ್ರಮ ಪ್ರಾರಂಭಿಸಿದರು ಎಂದು ಚಂಪಾ ಮೇಲೆ ಯಡ್ಡಿ ಎಗರಾಡಿದರೆ ಅದಕ್ಕೆ ಎದಿರೇಟಾಗಿ ಚಂಪಾ ಸಿಕ್ಕ ಸಿಕ್ಕ ವೇದಿಕೆಯಲ್ಲೆಲ್ಲಾ ಯಡ್ಡಿಯನ್ನು ಹಿಗ್ಗಾ ಮುಗ್ಗಾ ಎಳೆದಾಡಿದ್ದರು. ಇದಕ್ಕೆ ಮತ್ತೆ ಎದಿರೇಟು ನೀಡಿದ ಯಡ್ಡಿ ಚಂಪಾಗೆ ದಕ್ಕಿದ್ದ 'ಪಂಪ' ಪ್ರಶಸ್ತಿಗೆ ವರ್ಷಗಟ್ಟಲೆ ಅಡ್ಡಗಾಲು ಹಾಕಿ ಸೇಡು ತೀರಿಸಿಕೊಂಡಿದ್ದರು. ಹೀಗೆ ಏಟು ಎದಿರೇಟು ಕೊಟ್ಟುಕೊಳ್ಳುತ್ತಾ ವಿರೋಧಿಗಳಾಗಿದ್ದ ಚಂಪಾಗೆ ಈಗ ಯಡ್ಡಿ ಎಷ್ಟು ರೇಟು ಕೊಟ್ಟರೋ ತಿಳಿಯದು... ಕೆಜೆಪಿ ಕೋಟು ತೊಟ್ಟು ಬೀಗಲು ತಯಾರಾಗಿದ್ದಾರೆ.

ಹಾವು ಮುಂಗುಸಿಯಾಗಿದ್ದವರನ್ನು ಹೀಗೆ ಒಂದು ಮಾಡಿದ ಆ ಮಹಾನ್ ಶಕ್ತಿಯಾದರೂ ಯಾವುದು ? ಚಂಪಾ ಏನೋ 'ನಾನು ಮೊದಲಿನಿಂದಲೂ ಪ್ರಾದೇಶಿಕ ಪಕ್ಷದ ಪರ' ಎಂದು ರೈಲು ಬಿಡುತ್ತಿದ್ದಾರಾದರೂ ಮೇಲ್ನೋಟಕ್ಕೆ ಇದೊಂದು ಜಾತಿ ಸಂಕೋಲೆಯಾಗಿಯೆ ಕಾಣಿಸುತ್ತಿದೆ. ಏಕೆಂದರೆ ಪ್ರದೇಶಿಕ ಪಕ್ಷಗಳು ಈ ಮೊದಲೆ ಎಷ್ಟೋ ಬಂದು ಹೋಗಿವೆ, ಮತ್ತು ಈಗಲೂ ಇರುವಾಗ ಏಕಾಏಕಿ ಕೆಜೆಪಿಯೇ ಯಾಕೆ 'ಏಕ ಮಾತ್ರ ಪ್ರಾದೇಶಿಕ ಪಕ್ಷವಾಗಿ ಕಾಣಿಸಿತೋ?!'
ಇವರು ಜಾತಿ ನೋಡಿಯಾದರೂ ಹೋಗಿರಲಿ, ನೋಟು ನೋಡಿಯಾದರೂ ಹೋಗಿರಲಿ, ಆದರೆ ಸಾಹಿತಿಗಳಾದವರಿಗೆ ರಾಜಕೀಯ ಸರಿನಾ ? ಹಾಗಂತ ಸಾಹಿತಿಗಳೆಲ್ಲಾ ರಾಜಕೀಯ ಮಾಡದೇ ಸುಮ್ಮನಿದ್ದಾರೆ ಅಂತಲ್ಲ. ಒಳಗಿಂದೊಳಗೆ ರಾಜಕೀಯ ಪಿತೂರಿ ಮಾಡುವುದರಲ್ಲಿ ಕೆಲವು ಸಾಹಿತಿಗಳೇನೂ ಹಿಂದೆ ಬಿದ್ದಿಲ್ಲ. ಆದರೆ ಈ ರೀತಿ ನೇರ ರಾಜಕೀಯಕ್ಕಿಳಿಯುವುದು ಎಷ್ಟರ ಮಟ್ಟಿಗೆ ಸರಿ ? ಇಂತಹ ಸಾಹಿತಿಗಳಿಂದ ಶ್ರೇಷ್ಟ ಸಾಹಿತ್ಯ ನಿರೀಕ್ಷಿಸುವುದಾದರೂ ಹೇಗೆ ? ರಾಜಕೀಯವಾಗಿ ಒಂದು ಪಕ್ಷಕ್ಕೆ ಸೀಮಿತವಾದವರು ಸಾಮಾಜಿಕವಾಗಿ ನ್ಯಾಯಯುತ ಸಾಹಿತ್ಯ ರಚಿಸುತ್ತಾರೆ ಎನ್ನಲು ಹೇಗೆ ಸಾಧ್ಯ ? ಇಷ್ಟು ದಿನ ರಚಿಸಿದ ಇವರ ಸಾಹಿತ್ಯ ಎಷ್ಟು ಕಳಂಕ ರಹಿತವಾದದ್ದು ಇರಬಹುದು ? ಹಿರಿಯ ಸಾಹಿತಿಗಳೆ ಹೀಗೆ ಕುಲಗೆಟ್ಟ ರಾಜಕೀಯಕ್ಕೆ ಧುಮುಕುತ್ತಾರೆಂದ ಮೇಲೆ ನಾವು ಸುಖಾಸುಮ್ಮನೆ ರಾಜಕಾರಣಿಗಳನ್ನು ದೂರಿ ಏನು ಪ್ರಯೋಜನ ? 

ಸಾಹಿತಿಗಳಿಗೆ ಸ್ವಾಭಿಮಾನ ಹೆಚ್ಚು ಎಂದು ಕೇಳಿದ್ದೇವೆ. ಅದು ನಿಜವಾಗಿದ್ದರೆ ಇವರ ನಡತೆ ಹೀಗಿರಲು ಸಾಧ್ಯವಿತ್ತೆ ? ತಮ್ಮ ಸ್ವಾಭೀಮಾನವನ್ನು ಅಡವಿಟ್ಟು ಇನ್ನೊಬ್ಬ ಮುಖಂಡನ ಕೈ ಕೆಳಗೆ 'ಜೀ ಹುಜೂರ್' ಅನ್ನುವ ಅಗತ್ಯವಿತ್ತೇ ? ರಾಜಕೀಯವೆಂದ ಮೇಲೆ ನಾಯಕ ಏನು ಮಾಡಿದರೂ ಅದನ್ನು ಆ ಪಕ್ಷದ ಎಲ್ಲರೂ ಒಪ್ಪಿಕೊಳ್ಳಬೇಕು. ಇಲ್ಲವೆಂದರೆ ಆ ಪಕ್ಷ ಹದಗೆಟ್ಟು ಹೋಗುತ್ತದೆ. ಯಾರಾದರೂ ವಿರೋಧಿಸಿದರೆ ಅವರನ್ನು ಪಕ್ಷದಿಂದ ಹೊರ ಹಾಕುತ್ತಾರೆ. ಹಾಗಾದರೆ ಯಡಿಯೂರಪ್ಪ ಮುಂದೆ ಏನಾದರೂ ತಪ್ಪು ಮಾಡಿದರೆ ಚಂಪಾ ಏನು ಮಾಡುತ್ತಾರೆ ? ಯಡಿಯೂರಪ್ಪನವರ ಪಕ್ಷದ ಉಪ್ಪು ತಿಂದ ಕಾರಣಕ್ಕೆ ಅವರು ಮಾಡುವ ತಪ್ಪುಗಳನ್ನು ಸಹಿಸಿಕೊಂಡು ಸ್ವಾಭೀಮಾನ ಕಳೆದುಕೊಂಡು ಜೀವಂತ ಶವದಂತೆ ಬದುಕುತ್ತಾರಾ ? ಅಥವಾ ವೀರಾವೇಶದಿಂದ ವಿರೋಧಿಸಿ ಪಕ್ಷದಿಂದ ಉಚ್ಚಾಟನೆಗೊಂಡು ಮಾನ ಮರ್ಯಾದೆ ಕಳೆದುಕೊಳ್ಳುತ್ತಾರಾ ? ಅಥವಾ ಯಡಿಯೂರಪ್ಪ ತಪ್ಪೇ ಮಾಡದ ಪರಮ ಪ್ರಾಮಾಣಿಕ ಅನ್ನೋದು ಚಂಪಾರಿಗೆ (ಅದೂ ಇಷ್ಟು ದಿನ ವಿರೋಧಿಸಿಕೊಂಡಿದ್ದವರಿಗೆ) ಮನವರಿಕೆ ಆಗಿ ಹೋಯ್ತಾ ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...