ವಿಷಯಕ್ಕೆ ಹೋಗಿ

ಸಾಹಿತಿಗಳಿಗೂ ರಾಜಕೀಯ ಯೋ(ರೋ)ಗ!



ಏನೂ ಮಾಡಲು ಕೆಲಸವಿಲ್ಲದ ಬಡಗಿ ಮತ್ತೇನೋ ಮಾಡಿದ್ದನಂತೆ, ಹಾಗೇ ಆಗಿದೆ ನಮ್ಮ ಹಿರಿಯ ಸಾಹಿತಿ 'ಚಂಪಾ' ಎಂದು ನಾಮಾಂಕಿತಗೊಂಡಿರುವ ಶ್ರೀ ಚಂದ್ರಶೇಖರ ಪಾಟೀಲರ ಕಥೆ. ಬೆಕ್ಕಿಗೇಕೆ ಕಬ್ಬಿಣದ ಕೆಲಸ ಅನ್ನುವಂತೆ ಇವರಿಗೆ ಯಾಕೆ ಬೇಕಿತ್ತೋ ರಾಜಕೀಯ ಕೆಲಸ? ಸಾಹಿತ್ಯದಲ್ಲೇ ಆಗಬೇಕಾದ ನೂರಾರು ಕೆಲಸಗಳು ಇವೆ. ಕನ್ನಡದ ಕೆಲಸಗಳು ಮಾಡಿದಷ್ಟೂ ತೀರದು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಚಂಪಾ ಏಕಾಏಕಿ ಯಡಿಯೂರಪ್ಪನವರ ಕೆಜೆಪಿಗೆ ಲಾಂಗ್ ಜಂಪ್ ಮಾಡಿರುವುದು ಆಶ್ಚರ್ಯಕ್ಕಿಂತ ಹೆಚ್ಚಾಗಿ ಕುಚೋದ್ಯವಾಗಿಯೇ ಕಾಣಿಸುತ್ತಿದೆ.

ಏಕೆಂದರೆ ಯಡಿಯೂರಪ್ಪ ಹಾಗೂ ಚಂಪಾ ಮೊದಲಿನಿಂದಲೂ ಜಿಗ್ರಿ ದೋಸ್ತ್‍ಗಳೇನಲ್ಲ. ಈ ಹಿಂದೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡವರು. ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಲ್ಲಿ ತಾವು ಬರುವ ಮುಂಚೆಯೆ ಕಾರ್ಯಕ್ರಮ ಪ್ರಾರಂಭಿಸಿದರು ಎಂದು ಚಂಪಾ ಮೇಲೆ ಯಡ್ಡಿ ಎಗರಾಡಿದರೆ ಅದಕ್ಕೆ ಎದಿರೇಟಾಗಿ ಚಂಪಾ ಸಿಕ್ಕ ಸಿಕ್ಕ ವೇದಿಕೆಯಲ್ಲೆಲ್ಲಾ ಯಡ್ಡಿಯನ್ನು ಹಿಗ್ಗಾ ಮುಗ್ಗಾ ಎಳೆದಾಡಿದ್ದರು. ಇದಕ್ಕೆ ಮತ್ತೆ ಎದಿರೇಟು ನೀಡಿದ ಯಡ್ಡಿ ಚಂಪಾಗೆ ದಕ್ಕಿದ್ದ 'ಪಂಪ' ಪ್ರಶಸ್ತಿಗೆ ವರ್ಷಗಟ್ಟಲೆ ಅಡ್ಡಗಾಲು ಹಾಕಿ ಸೇಡು ತೀರಿಸಿಕೊಂಡಿದ್ದರು. ಹೀಗೆ ಏಟು ಎದಿರೇಟು ಕೊಟ್ಟುಕೊಳ್ಳುತ್ತಾ ವಿರೋಧಿಗಳಾಗಿದ್ದ ಚಂಪಾಗೆ ಈಗ ಯಡ್ಡಿ ಎಷ್ಟು ರೇಟು ಕೊಟ್ಟರೋ ತಿಳಿಯದು... ಕೆಜೆಪಿ ಕೋಟು ತೊಟ್ಟು ಬೀಗಲು ತಯಾರಾಗಿದ್ದಾರೆ.

ಹಾವು ಮುಂಗುಸಿಯಾಗಿದ್ದವರನ್ನು ಹೀಗೆ ಒಂದು ಮಾಡಿದ ಆ ಮಹಾನ್ ಶಕ್ತಿಯಾದರೂ ಯಾವುದು ? ಚಂಪಾ ಏನೋ 'ನಾನು ಮೊದಲಿನಿಂದಲೂ ಪ್ರಾದೇಶಿಕ ಪಕ್ಷದ ಪರ' ಎಂದು ರೈಲು ಬಿಡುತ್ತಿದ್ದಾರಾದರೂ ಮೇಲ್ನೋಟಕ್ಕೆ ಇದೊಂದು ಜಾತಿ ಸಂಕೋಲೆಯಾಗಿಯೆ ಕಾಣಿಸುತ್ತಿದೆ. ಏಕೆಂದರೆ ಪ್ರದೇಶಿಕ ಪಕ್ಷಗಳು ಈ ಮೊದಲೆ ಎಷ್ಟೋ ಬಂದು ಹೋಗಿವೆ, ಮತ್ತು ಈಗಲೂ ಇರುವಾಗ ಏಕಾಏಕಿ ಕೆಜೆಪಿಯೇ ಯಾಕೆ 'ಏಕ ಮಾತ್ರ ಪ್ರಾದೇಶಿಕ ಪಕ್ಷವಾಗಿ ಕಾಣಿಸಿತೋ?!'
ಇವರು ಜಾತಿ ನೋಡಿಯಾದರೂ ಹೋಗಿರಲಿ, ನೋಟು ನೋಡಿಯಾದರೂ ಹೋಗಿರಲಿ, ಆದರೆ ಸಾಹಿತಿಗಳಾದವರಿಗೆ ರಾಜಕೀಯ ಸರಿನಾ ? ಹಾಗಂತ ಸಾಹಿತಿಗಳೆಲ್ಲಾ ರಾಜಕೀಯ ಮಾಡದೇ ಸುಮ್ಮನಿದ್ದಾರೆ ಅಂತಲ್ಲ. ಒಳಗಿಂದೊಳಗೆ ರಾಜಕೀಯ ಪಿತೂರಿ ಮಾಡುವುದರಲ್ಲಿ ಕೆಲವು ಸಾಹಿತಿಗಳೇನೂ ಹಿಂದೆ ಬಿದ್ದಿಲ್ಲ. ಆದರೆ ಈ ರೀತಿ ನೇರ ರಾಜಕೀಯಕ್ಕಿಳಿಯುವುದು ಎಷ್ಟರ ಮಟ್ಟಿಗೆ ಸರಿ ? ಇಂತಹ ಸಾಹಿತಿಗಳಿಂದ ಶ್ರೇಷ್ಟ ಸಾಹಿತ್ಯ ನಿರೀಕ್ಷಿಸುವುದಾದರೂ ಹೇಗೆ ? ರಾಜಕೀಯವಾಗಿ ಒಂದು ಪಕ್ಷಕ್ಕೆ ಸೀಮಿತವಾದವರು ಸಾಮಾಜಿಕವಾಗಿ ನ್ಯಾಯಯುತ ಸಾಹಿತ್ಯ ರಚಿಸುತ್ತಾರೆ ಎನ್ನಲು ಹೇಗೆ ಸಾಧ್ಯ ? ಇಷ್ಟು ದಿನ ರಚಿಸಿದ ಇವರ ಸಾಹಿತ್ಯ ಎಷ್ಟು ಕಳಂಕ ರಹಿತವಾದದ್ದು ಇರಬಹುದು ? ಹಿರಿಯ ಸಾಹಿತಿಗಳೆ ಹೀಗೆ ಕುಲಗೆಟ್ಟ ರಾಜಕೀಯಕ್ಕೆ ಧುಮುಕುತ್ತಾರೆಂದ ಮೇಲೆ ನಾವು ಸುಖಾಸುಮ್ಮನೆ ರಾಜಕಾರಣಿಗಳನ್ನು ದೂರಿ ಏನು ಪ್ರಯೋಜನ ? 

ಸಾಹಿತಿಗಳಿಗೆ ಸ್ವಾಭಿಮಾನ ಹೆಚ್ಚು ಎಂದು ಕೇಳಿದ್ದೇವೆ. ಅದು ನಿಜವಾಗಿದ್ದರೆ ಇವರ ನಡತೆ ಹೀಗಿರಲು ಸಾಧ್ಯವಿತ್ತೆ ? ತಮ್ಮ ಸ್ವಾಭೀಮಾನವನ್ನು ಅಡವಿಟ್ಟು ಇನ್ನೊಬ್ಬ ಮುಖಂಡನ ಕೈ ಕೆಳಗೆ 'ಜೀ ಹುಜೂರ್' ಅನ್ನುವ ಅಗತ್ಯವಿತ್ತೇ ? ರಾಜಕೀಯವೆಂದ ಮೇಲೆ ನಾಯಕ ಏನು ಮಾಡಿದರೂ ಅದನ್ನು ಆ ಪಕ್ಷದ ಎಲ್ಲರೂ ಒಪ್ಪಿಕೊಳ್ಳಬೇಕು. ಇಲ್ಲವೆಂದರೆ ಆ ಪಕ್ಷ ಹದಗೆಟ್ಟು ಹೋಗುತ್ತದೆ. ಯಾರಾದರೂ ವಿರೋಧಿಸಿದರೆ ಅವರನ್ನು ಪಕ್ಷದಿಂದ ಹೊರ ಹಾಕುತ್ತಾರೆ. ಹಾಗಾದರೆ ಯಡಿಯೂರಪ್ಪ ಮುಂದೆ ಏನಾದರೂ ತಪ್ಪು ಮಾಡಿದರೆ ಚಂಪಾ ಏನು ಮಾಡುತ್ತಾರೆ ? ಯಡಿಯೂರಪ್ಪನವರ ಪಕ್ಷದ ಉಪ್ಪು ತಿಂದ ಕಾರಣಕ್ಕೆ ಅವರು ಮಾಡುವ ತಪ್ಪುಗಳನ್ನು ಸಹಿಸಿಕೊಂಡು ಸ್ವಾಭೀಮಾನ ಕಳೆದುಕೊಂಡು ಜೀವಂತ ಶವದಂತೆ ಬದುಕುತ್ತಾರಾ ? ಅಥವಾ ವೀರಾವೇಶದಿಂದ ವಿರೋಧಿಸಿ ಪಕ್ಷದಿಂದ ಉಚ್ಚಾಟನೆಗೊಂಡು ಮಾನ ಮರ್ಯಾದೆ ಕಳೆದುಕೊಳ್ಳುತ್ತಾರಾ ? ಅಥವಾ ಯಡಿಯೂರಪ್ಪ ತಪ್ಪೇ ಮಾಡದ ಪರಮ ಪ್ರಾಮಾಣಿಕ ಅನ್ನೋದು ಚಂಪಾರಿಗೆ (ಅದೂ ಇಷ್ಟು ದಿನ ವಿರೋಧಿಸಿಕೊಂಡಿದ್ದವರಿಗೆ) ಮನವರಿಕೆ ಆಗಿ ಹೋಯ್ತಾ ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...