ಏನೂ ಮಾಡಲು ಕೆಲಸವಿಲ್ಲದ ಬಡಗಿ ಮತ್ತೇನೋ ಮಾಡಿದ್ದನಂತೆ, ಹಾಗೇ ಆಗಿದೆ ನಮ್ಮ ಹಿರಿಯ ಸಾಹಿತಿ 'ಚಂಪಾ' ಎಂದು ನಾಮಾಂಕಿತಗೊಂಡಿರುವ ಶ್ರೀ ಚಂದ್ರಶೇಖರ ಪಾಟೀಲರ ಕಥೆ. ಬೆಕ್ಕಿಗೇಕೆ ಕಬ್ಬಿಣದ ಕೆಲಸ ಅನ್ನುವಂತೆ ಇವರಿಗೆ ಯಾಕೆ ಬೇಕಿತ್ತೋ ರಾಜಕೀಯ ಕೆಲಸ? ಸಾಹಿತ್ಯದಲ್ಲೇ ಆಗಬೇಕಾದ ನೂರಾರು ಕೆಲಸಗಳು ಇವೆ. ಕನ್ನಡದ ಕೆಲಸಗಳು ಮಾಡಿದಷ್ಟೂ ತೀರದು. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ಚಂಪಾ ಏಕಾಏಕಿ ಯಡಿಯೂರಪ್ಪನವರ ಕೆಜೆಪಿಗೆ ಲಾಂಗ್ ಜಂಪ್ ಮಾಡಿರುವುದು ಆಶ್ಚರ್ಯಕ್ಕಿಂತ ಹೆಚ್ಚಾಗಿ ಕುಚೋದ್ಯವಾಗಿಯೇ ಕಾಣಿಸುತ್ತಿದೆ.
ಏಕೆಂದರೆ ಯಡಿಯೂರಪ್ಪ ಹಾಗೂ ಚಂಪಾ ಮೊದಲಿನಿಂದಲೂ ಜಿಗ್ರಿ ದೋಸ್ತ್ಗಳೇನಲ್ಲ. ಈ ಹಿಂದೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಂಡವರು. ಶಿವಮೊಗ್ಗದ ಸಾಹಿತ್ಯ ಸಮ್ಮೇಳನದಲ್ಲಿ ತಾವು ಬರುವ ಮುಂಚೆಯೆ ಕಾರ್ಯಕ್ರಮ ಪ್ರಾರಂಭಿಸಿದರು ಎಂದು ಚಂಪಾ ಮೇಲೆ ಯಡ್ಡಿ ಎಗರಾಡಿದರೆ ಅದಕ್ಕೆ ಎದಿರೇಟಾಗಿ ಚಂಪಾ ಸಿಕ್ಕ ಸಿಕ್ಕ ವೇದಿಕೆಯಲ್ಲೆಲ್ಲಾ ಯಡ್ಡಿಯನ್ನು ಹಿಗ್ಗಾ ಮುಗ್ಗಾ ಎಳೆದಾಡಿದ್ದರು. ಇದಕ್ಕೆ ಮತ್ತೆ ಎದಿರೇಟು ನೀಡಿದ ಯಡ್ಡಿ ಚಂಪಾಗೆ ದಕ್ಕಿದ್ದ 'ಪಂಪ' ಪ್ರಶಸ್ತಿಗೆ ವರ್ಷಗಟ್ಟಲೆ ಅಡ್ಡಗಾಲು ಹಾಕಿ ಸೇಡು ತೀರಿಸಿಕೊಂಡಿದ್ದರು. ಹೀಗೆ ಏಟು ಎದಿರೇಟು ಕೊಟ್ಟುಕೊಳ್ಳುತ್ತಾ ವಿರೋಧಿಗಳಾಗಿದ್ದ ಚಂಪಾಗೆ ಈಗ ಯಡ್ಡಿ ಎಷ್ಟು ರೇಟು ಕೊಟ್ಟರೋ ತಿಳಿಯದು... ಕೆಜೆಪಿ ಕೋಟು ತೊಟ್ಟು ಬೀಗಲು ತಯಾರಾಗಿದ್ದಾರೆ.
ಹಾವು ಮುಂಗುಸಿಯಾಗಿದ್ದವರನ್ನು ಹೀಗೆ ಒಂದು ಮಾಡಿದ ಆ ಮಹಾನ್ ಶಕ್ತಿಯಾದರೂ ಯಾವುದು ? ಚಂಪಾ ಏನೋ 'ನಾನು ಮೊದಲಿನಿಂದಲೂ ಪ್ರಾದೇಶಿಕ ಪಕ್ಷದ ಪರ' ಎಂದು ರೈಲು ಬಿಡುತ್ತಿದ್ದಾರಾದರೂ ಮೇಲ್ನೋಟಕ್ಕೆ ಇದೊಂದು ಜಾತಿ ಸಂಕೋಲೆಯಾಗಿಯೆ ಕಾಣಿಸುತ್ತಿದೆ. ಏಕೆಂದರೆ ಪ್ರದೇಶಿಕ ಪಕ್ಷಗಳು ಈ ಮೊದಲೆ ಎಷ್ಟೋ ಬಂದು ಹೋಗಿವೆ, ಮತ್ತು ಈಗಲೂ ಇರುವಾಗ ಏಕಾಏಕಿ ಕೆಜೆಪಿಯೇ ಯಾಕೆ 'ಏಕ ಮಾತ್ರ ಪ್ರಾದೇಶಿಕ ಪಕ್ಷವಾಗಿ ಕಾಣಿಸಿತೋ?!'
ಇವರು ಜಾತಿ ನೋಡಿಯಾದರೂ ಹೋಗಿರಲಿ, ನೋಟು ನೋಡಿಯಾದರೂ ಹೋಗಿರಲಿ, ಆದರೆ ಸಾಹಿತಿಗಳಾದವರಿಗೆ ರಾಜಕೀಯ ಸರಿನಾ ? ಹಾಗಂತ ಸಾಹಿತಿಗಳೆಲ್ಲಾ ರಾಜಕೀಯ ಮಾಡದೇ ಸುಮ್ಮನಿದ್ದಾರೆ ಅಂತಲ್ಲ. ಒಳಗಿಂದೊಳಗೆ ರಾಜಕೀಯ ಪಿತೂರಿ ಮಾಡುವುದರಲ್ಲಿ ಕೆಲವು ಸಾಹಿತಿಗಳೇನೂ ಹಿಂದೆ ಬಿದ್ದಿಲ್ಲ. ಆದರೆ ಈ ರೀತಿ ನೇರ ರಾಜಕೀಯಕ್ಕಿಳಿಯುವುದು ಎಷ್ಟರ ಮಟ್ಟಿಗೆ ಸರಿ ? ಇಂತಹ ಸಾಹಿತಿಗಳಿಂದ ಶ್ರೇಷ್ಟ ಸಾಹಿತ್ಯ ನಿರೀಕ್ಷಿಸುವುದಾದರೂ ಹೇಗೆ ? ರಾಜಕೀಯವಾಗಿ ಒಂದು ಪಕ್ಷಕ್ಕೆ ಸೀಮಿತವಾದವರು ಸಾಮಾಜಿಕವಾಗಿ ನ್ಯಾಯಯುತ ಸಾಹಿತ್ಯ ರಚಿಸುತ್ತಾರೆ ಎನ್ನಲು ಹೇಗೆ ಸಾಧ್ಯ ? ಇಷ್ಟು ದಿನ ರಚಿಸಿದ ಇವರ ಸಾಹಿತ್ಯ ಎಷ್ಟು ಕಳಂಕ ರಹಿತವಾದದ್ದು ಇರಬಹುದು ? ಹಿರಿಯ ಸಾಹಿತಿಗಳೆ ಹೀಗೆ ಕುಲಗೆಟ್ಟ ರಾಜಕೀಯಕ್ಕೆ ಧುಮುಕುತ್ತಾರೆಂದ ಮೇಲೆ ನಾವು ಸುಖಾಸುಮ್ಮನೆ ರಾಜಕಾರಣಿಗಳನ್ನು ದೂರಿ ಏನು ಪ್ರಯೋಜನ ?
ಸಾಹಿತಿಗಳಿಗೆ ಸ್ವಾಭಿಮಾನ ಹೆಚ್ಚು ಎಂದು ಕೇಳಿದ್ದೇವೆ. ಅದು ನಿಜವಾಗಿದ್ದರೆ ಇವರ ನಡತೆ ಹೀಗಿರಲು ಸಾಧ್ಯವಿತ್ತೆ ? ತಮ್ಮ ಸ್ವಾಭೀಮಾನವನ್ನು ಅಡವಿಟ್ಟು ಇನ್ನೊಬ್ಬ ಮುಖಂಡನ ಕೈ ಕೆಳಗೆ 'ಜೀ ಹುಜೂರ್' ಅನ್ನುವ ಅಗತ್ಯವಿತ್ತೇ ? ರಾಜಕೀಯವೆಂದ ಮೇಲೆ ನಾಯಕ ಏನು ಮಾಡಿದರೂ ಅದನ್ನು ಆ ಪಕ್ಷದ ಎಲ್ಲರೂ ಒಪ್ಪಿಕೊಳ್ಳಬೇಕು. ಇಲ್ಲವೆಂದರೆ ಆ ಪಕ್ಷ ಹದಗೆಟ್ಟು ಹೋಗುತ್ತದೆ. ಯಾರಾದರೂ ವಿರೋಧಿಸಿದರೆ ಅವರನ್ನು ಪಕ್ಷದಿಂದ ಹೊರ ಹಾಕುತ್ತಾರೆ. ಹಾಗಾದರೆ ಯಡಿಯೂರಪ್ಪ ಮುಂದೆ ಏನಾದರೂ ತಪ್ಪು ಮಾಡಿದರೆ ಚಂಪಾ ಏನು ಮಾಡುತ್ತಾರೆ ? ಯಡಿಯೂರಪ್ಪನವರ ಪಕ್ಷದ ಉಪ್ಪು ತಿಂದ ಕಾರಣಕ್ಕೆ ಅವರು ಮಾಡುವ ತಪ್ಪುಗಳನ್ನು ಸಹಿಸಿಕೊಂಡು ಸ್ವಾಭೀಮಾನ ಕಳೆದುಕೊಂಡು ಜೀವಂತ ಶವದಂತೆ ಬದುಕುತ್ತಾರಾ ? ಅಥವಾ ವೀರಾವೇಶದಿಂದ ವಿರೋಧಿಸಿ ಪಕ್ಷದಿಂದ ಉಚ್ಚಾಟನೆಗೊಂಡು ಮಾನ ಮರ್ಯಾದೆ ಕಳೆದುಕೊಳ್ಳುತ್ತಾರಾ ? ಅಥವಾ ಯಡಿಯೂರಪ್ಪ ತಪ್ಪೇ ಮಾಡದ ಪರಮ ಪ್ರಾಮಾಣಿಕ ಅನ್ನೋದು ಚಂಪಾರಿಗೆ (ಅದೂ ಇಷ್ಟು ದಿನ ವಿರೋಧಿಸಿಕೊಂಡಿದ್ದವರಿಗೆ) ಮನವರಿಕೆ ಆಗಿ ಹೋಯ್ತಾ ?

ಕಾಮೆಂಟ್ಗಳು