ಇತ್ತೀಚಿನ ದಿನಗಳಲ್ಲಿ ದೇಶದ ಮುಂಚೂಣಿ ವ್ಯಂಗ್ಯಚಿತ್ರಕಾರರ ಸಾಲಿಗೆ ಕುಂದಾಪುರದ ಸತೀಶ್ ಆಚಾರ್ಯ ಸಹ ಸೇರ್ಪಡೆಯಾಗಿದ್ದಾರೆ. ಇವರ ವ್ಯಂಗ್ಯಚಿತ್ರಗಳ ಸಂಗ್ರಹದ ಮೊದಲ ಪುಸ್ತಕ 'ಮೈನ್, ಹಮ್ & ಆಪ್' ಇತ್ತೀಚಿಗೆ ಬಿಡುಗಡೆಯಾಗಿದೆ.
ನಿನ್ನೆ ತಾನೆ ಪುಸ್ತಕವನ್ನು ತರಿಸಿಕೊಂಡೆ. ಇದೀಗ ಎದುರಾಗಿರುವ ಲೋಕಸಭೆಯ ಚುನಾವಣೆಯ ಹೊಸ್ತಿಲಲ್ಲಿರುವುದರಿಂದ ಚುನಾವಣೆ ಹಾಗೂ ರಾಜಕೀಯಕ್ಕೆ ಸಂಬಂಧಿಸಿದ ವಸ್ತುಗಳೇ ಇಲ್ಲಿನ ವ್ಯಂಗ್ಯಚಿತ್ರಗಳಲ್ಲಿ ಇರುವುದು.
ಡೆಮಿ ಅಳತೆಯ ಪುಸ್ತಕವನ್ನು ಅತ್ಯುತ್ತಮವಾಗಿ ಬಣ್ಣದಲ್ಲಿ ಆರ್ಟ್ ಪೇಪರ್ ಬಳಸಿ ಕುಂದಾಪುರದಲ್ಲಿಯೇ ಮುದ್ರಿಸಲಾಗಿದೆ ಅನ್ನುವುದು ವಿಶೇಷ. ಹಾಗೆಯೆ ಈ ಪುಸ್ತಕವನ್ನು ಆನ್ಲೈನ್ನಲ್ಲಿ ಕೊಂಡರೆ ಜೊತೆಗೆ ಆಚಾರ್ಯರು ಬಿಡಿಸಿದ ವ್ಯಂಗ್ಯಚಿತ್ರದ ಅಸಲಿ ಪ್ರತಿಯೊಂದು ಸಹ ನಮಗೆ ಸಿಗಲಿದೆ.
ಕುಂದಾಪುರದಲ್ಲಿ ಹುಟ್ಟಿ ಬೆಳೆದ ಸತೀಶ್ ಅವರು ಓದಿದ್ದು ಬಿ.ಕಾಂ, ಹಾಗೂ ಎಂಬಿಎ. ಕಾಲೇಜು ದಿನಗಳಲ್ಲೇ ಕನ್ನಡದ ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ಬರೆಯಲಾರಂಬಿಸಿದರು. ನಂತರ ವ್ಯಂಗ್ಯಚಿತ್ರದ ಗೀಳು ಹತ್ತಿಸಿಕೊಂಡು ಮುಂಬೈಗೆ ತೆರಳಿ ಅಲ್ಲಿ ಹತ್ತಾರು ವರ್ಷಗಳ ಕಾಲ ಕಂಡ ಕಂಡ ಪತ್ರಿಕೆಗಳಿಗೆ ಗೆರೆ ಗೀಚಿದ ನಂತರ ಮಿಡ್-ಡೇ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಉದ್ಯೋಗ ದೊರೆಯಿತು. ಕಳೆದ ಒಂಬತ್ತು ವರ್ಷಗಳಿಂದಲೂ ಆ ಪತ್ರಿಕೆಗೆ ದಿನನಿತ್ಯ ವ್ಯಂಗ್ಯಚಿತ್ರಗಳನ್ನು ಬರೆಯುತ್ತಿದ್ದಾರೆ. ಹಾಗೆಯೆ ಹೆಸರಾಂತ ಜಾಲತಾಣಗಳಿಗೂ, ಅನೇಕ ಕನ್ನಡ ಪತ್ರಿಕೆಗಳಿಗೂ ವ್ಯಂಗ್ಯಚಿತ್ರ ಬರೆಯುತ್ತಿದ್ದಾರೆ.
ರಾಜಕೀಯ ವ್ಯಕ್ತಿಗಳೇ ಇವರ ಪ್ರಮುಖ ವಿಷಯಗಳು. ಇವರ ಗೆರೆಗಳು ಹೆಚ್ಚು ಸ್ಫುಟವಾಗಿದ್ದು ವ್ಯಕ್ತಿಗಳ ಚಿತ್ರಣ ಸ್ಪಷ್ಟವಾಗಿರುತ್ತದೆ. ಹಾಗೂ ವಾಸ್ತವಕ್ಕೆ ಕನ್ನಡಿ ಹಿಡಿವ ಇವರ ಚಿತ್ರಗಳ ಹಿಂದೆ ಕೇವಲ ಹಾಸ್ಯವಷ್ಟೇ ಇರದೇ ರಾಜಕಾರಣಿಗಳ ಗೋಸುಂಬೆತನ, ಮೋಸ, ವಂಚನೆ, ಮೂರ್ಖತನಗಳು ಅನಾವರಣಗೊಂಡಿರುತ್ತವೆ.
ವ್ಯಂಗ್ಯಚಿತ್ರಗಳಿಗೆ ಭಾಷೆ ಬೇಡವಾಗಿದ್ದರೂ 'ಮೈನ್, ಹಮ್ & ಆಪ್' ಪುಸ್ತಕದ ಚಿತ್ರಗಳ ಸಂಭಾಷಣೆ, ಅಡಿ ಬರಹಗಳು ಆಂಗ್ಲದಲ್ಲಿವೆ. ಕನ್ನಡದಲ್ಲಿ ಈ ರೀತಿಯ ಪುಸ್ತಕಗಳು ಕಡಿಮೆಯೇ. ಆದುದರಿಂದ ಸತೀಶ್ ಅವರು ಆದಷ್ಟು ಬೇಗನೆ ಕನ್ನಡದಲ್ಲೂ ತಮ್ಮ ವ್ಯಂಗ್ಯಚಿತ್ರಗಳ ಪುಸ್ತಕವನ್ನು ಪ್ರಕಟಿಸಲಿ ಎಂದು ಆಶಿಸೋಣ.

ಕಾಮೆಂಟ್ಗಳು