ಸಿದ್ದರಾಮಯ್ಯ ಸರ್ಕಾರ ಮತ್ತೊಂದು ಬಡವರ ವಿರೋಧಿ ನಿರ್ಣಯ ಜಾರಿ ಮಾಡಿದೆ. ಅದೇನೆಂದರೆ ಶೇ. ೨೫% ರಷ್ಟು ಅಲ್ಪ ಸಂಖ್ಯಾತ ಮಕ್ಕಳಿದ್ದರೂ ಸಾಕು, ಆ ಶಾಲೆ/ಕಾಲೇಜಗೆ 'ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆ' ಎಂದು ಮಾನ್ಯತೆ ನೀಡುವುದು. (ಈ ಹಿಂದೆ ಈ ಮಾನ್ಯತೆ ಪಡೆಯಲು ಕನಿಷ್ಟ ಶೇ. ೭೫% ರಷ್ಟು ಅಲ್ಪ ಸಂಖ್ಯಾತ ಮಕ್ಕಳಿರಬೇಕಿತ್ತು).
ಈ ನಿಯಮ ಮೇಲ್ನೋಟಕ್ಕೆ ಅಲ್ಪ ಸಂಖ್ಯಾತರ ಪರ ಅನ್ನಿಸಿದರೂ ದೊಡ್ಡ ನಷ್ಟ ಅಲ್ಪ ಸಂಖ್ಯಾತ ಬಡವರಿಗೇ ಆಗುತ್ತದೆ. ಉದಾ : ಖಾಸಗಿ ಶಿಕ್ಷಣ ಸಂಸ್ಥೆಗಳೆಲ್ಲಾ ದುಡ್ಡಿಗಾಗಿಯೇ ನಡೆಯುತ್ತಿರುವಂತಹವು ಎಂದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಒಂದು ಶಾಲೆಯ ವಿದ್ಯಾರ್ಥಿಗಳ ಸಾಮರ್ಥ್ಯ ೧೦೦ ಎಂದು ಇಟ್ಟುಕೊಳ್ಳೋಣ. ಈ ಶೈಕ್ಷಣಿಕ ವರ್ಷದಲ್ಲಿ ಆ ಶಾಲೆಗೆ ಕನಿಷ್ಟ ೨೫ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳು ಸೇರಿದರೂ ಸಾಕು. ಆ ಸಂಸ್ಥೆಯು 'ತಾನು ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆ' ಎಂದು ಪ್ರಮಾಣ ಪತ್ರ ಪಡೆಯಬಹುದು. ಅವರು ಆ ಪ್ರಮಾಣ ಪತ್ರ ಪಡೆಯುವುದರಿಂದ ಬಡವರಿಗಾಗುವ ನಷ್ಟ ಏನು ? ಅದು ವಿಷಯ. ಒಂದು ಸಂಸ್ಥೆ ಈ ಪ್ರಮಾಣ ಪತ್ರ ಪಡೆದ ನಂತರ ಅದು 'ಸಮಾನ ಶಿಕ್ಷಣ ಹಕ್ಕು' ಆರ್.ಟಿ.ಇ. ನಿಂದ ಹೊರಗುಳಿಯುತ್ತದೆ. ಅಂದರೆ ಮೇಲ್ಕಂಡ ಶಾಲೆಗೆ ಕನಿಷ್ಟ ೨೫ ಧನಿಕರ ಮಕ್ಕಳು ಸಿಕ್ಕರೆ ಸಾಕು, (ಅದೇನೂ ದೊಡ್ಡ ವಿಷಯವಲ್ಲ) ನಂತರ ಬಡ ಮಕ್ಕಳನ್ನು (ಅವರು ಅಲ್ಪಸಂಖ್ಯಾತರಿದ್ದರೂ) ಪ್ರವೇಶ ನಿರಾಕರಿಸಬಹುದು! ಏಕೆಂದರೆ ಆರ್ಟಿಇ ಕಾಯ್ದೆ ಇವರಿಗೆ ಅನ್ವಯವೇ ಆಗುವುದಿಲ್ಲ!
ಈಗ ಯೋಚಿಸಿ, ಸಿದ್ದರಾಮಯ್ಯ ಎಂತಾ ಯಡವಟ್ಟು ಮಾಡಿ ಬಡ ಅಲ್ಪ ಸಂಖ್ಯಾತರಿಗೂ ವಂಚನೆ ಮಾಡುತ್ತಿದ್ದಾರೆ ಅಂತ. ನೂರಕ್ಕೆ ೨೫ ರಷ್ಟು ಧನಿಕರನ್ನು ಶಾಲೆಗೆ ಸೇರಿಸಿಕೊಂಡು ಉತ್ತಮ ಶಿಕ್ಷಣ ನೀಡುತ್ತಾ ೭೫ ರಷ್ಟು ಬಡವರಿಗೆ ಮೋಸ ಮಾಡುವ ದಂಧೆಯಲ್ಲವೇ ಇದು ? ಒಮ್ಮೆ ಒಂದು ಸಂಸ್ಥೆ ಈ ಪ್ರಮಾಣ ಪತ್ರ ಪಡೆದ ಮೇಲೆ ಅವರು ಬಡವರನ್ನೂ ಬಿಡದೇ ಡೊನೇಷನ್ ರೂಪದಲ್ಲಿ ಸುಲಿಯುತ್ತಾರೆ. ಹಿಂದೆ ಇದ್ದ ಶೇ. ೭೫%ರ ನಿಯಮದ ವಿರುದ್ದ ಈ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ನ್ಯಾಯಾಲಯವು 'ಈ ಕಾಯ್ದೆಯನ್ನು ಪರಿಶೀಲಿಸಿ' ಎಂದಷ್ಟೇ ಸರ್ಕಾರಕ್ಕೆ ಹೇಳಿತ್ತು. ಸರ್ಕಾರವು ಕಾಯ್ದೆಯ ಪರಿಣಾಮದ ಬಗ್ಗೆ ನ್ಯಾಯಾಲಯಕ್ಕೆ ಮನದಟ್ಟು ಮಾಡಿ ಕೊಡಬೇಕಾಗಿತ್ತು. ಅದನ್ನು ಬಿಟ್ಟು ಅಲ್ಪ ಸಂಖ್ಯಾತ ಬಡ ಮಕ್ಕಳ ಶಿಕ್ಷಣಕ್ಕೆ ಕಲ್ಲು ಹಾಕಿದ್ದು ಸಮಂಜಸವಲ್ಲ.

ಕಾಮೆಂಟ್ಗಳು