ಬಿಜೆಪಿಯ ಭಟ್ಟಂಗಿಗಳು 'ಕಾಂಗ್ರೆಸ್ನಿಂದ ಏನೂ ಅಭಿವೃದ್ದಿ ಆಗಿಲ್ಲ' ಎಂದು ಹೇಳುತ್ತಾ ಮತ್ತೊಂದು ಕಾಂಗ್ರೆಸ್ ವಿರೋಧಿ ಸಮೂಹ ಸನ್ನಿ ಸೃಷ್ಟಿಸುತ್ತಿದ್ದಾರೆ, ಅಥವಾ ಈಗಾಗಲೇ ಸೃಷ್ಟಿಸಿದ್ದಾರೆ. ಕಾಂಗ್ರೆಸ್ನಿಂದ ಅಭಿವೃದ್ದಿಯೇ ಆಗಿಲ್ಲ ಅನ್ನೋದನ್ನ ಒಪ್ಪಲು ಸಾಧ್ಯವೇ ? ಖಂಡಿತಾ ಬೇಕಾದಷ್ಟು ಕೆಲಸಗಳಾಗಿವೆ.
ನಮ್ಮ ಹಳ್ಳಿಯಲ್ಲಿ ಅವರು ಶಾಲೆಯನ್ನು ತೆರೆಯದೇ ಹೋಗಿದ್ದರೆ ನಾನಿವತ್ತು ನಮ್ಮ ತಂದೆ ತಾಯಿಯಂತೆ ನಮ್ಮೂರಿನ ಧನಿಕರ ಮನೆ ಸೆಗಣಿ ಬಳಿದುಕೊಂಡು ಜೀವಿಸಬೇಕಾಗಿತ್ತು! ನನಗಿಂತಾ ಹಿಂದಿನವರು ಕಲಿಯುವ ಅವಕಾಶವಿಲ್ಲದೇ ಆ ಕೆಲಸ ಮಾಡಿಕೊಂಡಿದ್ದಾರೆ.
ಅಂದು ಐದನೇ ತರಗತಿ ವರೆಗೆ ಮಾತ್ರ ಇದ್ದ ಶಾಲೆಯಲ್ಲಿ ಏಳನೇ ತರಗತಿ ವರೆಗೂ ಅವಕಾಶ ಕಲ್ಪಿಸಿದಾಗ ಅದೇ ಊರಿನ ಮೇಲ್ವರ್ಗದ ಧನಿಕರು ಶಾಲೆಗೆ ಬೀಗ ಜಡಿದು ಉಪಾಧ್ಯಾಯರಿಗೆ 'ನಮ್ಮ ಅನುಮತಿ ಇಲ್ಲದೇ ಹೇಗೆ ಏಳನೇ ತರಗತಿ ವರೆಗೂ ಪಾಠ ಮಾಡ್ತೀರಿ ?' ಎಂದು ಧಮಕಿ ಹಾಕಿದ್ದನ್ನ ನಾನಿನ್ನೂ ಮರೆತಿಲ್ಲ. ಈ ಊರಿನ ಬಡ ಮಕ್ಕಳೆಲ್ಲಾ ಹೆಚ್ಚು ಓದುತ್ತಾ ಹೋದಂತೆ ತಮ್ಮ ಮನೆ-ತೋಟದ ಕೆಲಸಕ್ಕೆ ಕೂಲಿಗಳ ಬರ ಏರ್ಪಡುತ್ತದೆ ಎಂಬ ಆತಂಕ ಅಂದೇ ಅವರನ್ನು ಕಾಡಿತ್ತು!
ಕಾಂಗ್ರೆಸ್ ಸರ್ಕಾರ ಸರ್ಕಾರಿ ಬಸ್ ಸೇವೆಯನ್ನು ನಮ್ಮ ಕುಗ್ರಾಮಗಳವರೆಗೂ ನೀಡದೇ ಹೋಗಿದ್ದರೂ ಸಹ ನನ್ನ ವಿಧ್ಯಾಭ್ಯಾಸ ಏಳನೇ ತರಗತಿಗೇ ಕೊನೆಯಾಗಿರುತ್ತಿತ್ತು. ಇಂತಹ ಅನೇಕ ಸವಲತ್ತುಗಳನ್ನು ಪಡೆದು ಬೆಳೆದ ನಾನು ಕಾಂಗ್ರೆಸ್ನಿಂದ ಏನೂ ಆಗಿಲ್ಲ ಅಂತ ಹೇಳಿ ಆತ್ಮವಂಚನೆ ಮಾಡಿಕೊಳ್ಳಲಾರೆ. (ನನ್ನಂತೆಯೇ ಅವಕಾಶಗಳನ್ನು ಬಳಸಿಕೊಂಡ ಅನೇಕರು ಇಂದು ಬಿಜೆಪಿ ಭಟ್ಟಂಗಿಗಳ ಸಮೂಹ ಸನ್ನಿಗೆ ಒಳಗಾಗಿ ಕಾಂಗ್ರೆಸ್ನಿಂದ ಏನೂ ಆಗಿಲ್ಲ ಅಂತ ಹೇಳುವುದನ್ನು ಕಂಡಾಗ ಖೇದವಾಗುತ್ತದೆ.)
ಇನ್ನು ದೊಡ್ಡ ದೊಡ್ಡ ವಿಷಯಗಳಿಗೆ ಬಂದಾಗ, ಇತರೆ ದೇಶಗಳ ಎದುರು ಎದೆ ತಟ್ಟಿ ನಿಲ್ಲುವ ಮಟ್ಟಕ್ಕೆ ನಮ್ಮ ಸೇನೆ ಬಲಿಷ್ಟವಾಗಿರುವುದು ಕಾಂಗ್ರೆಸ್ನ ಅವಧಿಯಲ್ಲೇ ಅಲ್ಲವೇ ? ಮೂರು ಯುದ್ಧಗಳಲ್ಲಿ ಪಾಕಿಸ್ತಾನದ ಸೊಕ್ಕನ್ನು ಅಡಗಿಸಿದ್ದು ಕಂಗ್ರೆಸ್ ಸರ್ಕಾರ ಅಲ್ಲವೇ ? ಮೊದಲ ಅಣುಬಾಂಬ್ ಪರೀಕ್ಷೆ ನಡೆದದ್ದು ಕಾಂಗ್ರೆಸ್ ಅವಧಿಯಲ್ಲಿ ಅಲ್ಲವೇ ? ಇನ್ಸಾಟ್ ಉಪಗ್ರಹಗಳನ್ನು ಹಾರಿಸಿ ಜಗತ್ತಿನ ಕೆಲವೇ ದೇಶಗಳ ಪಟ್ಟಿಯಲ್ಲಿ (ಉಪಗ್ರಹ ಅಭಿವೃದ್ದಿ/ಉಡಾವಣೆ) ಭಾರತವೂ ಸ್ಥಾನ ಪಡೆಯಲು ಕಾಂಗ್ರೆಸ್ ಸರ್ಕಾರ ಕಾರಣವಲ್ಲವೇ ? ಹೀಗೆ ಇನ್ನೂ ಪಟ್ಟಿ ಮಾಡಬಹುದು.
ನಿಜ, ಅವರಿಂದಲೂ ಯಡವಟ್ಟುಗಳಾಗಿವೆ, ತಪ್ಪುಗಳಾಗಿವೆ, ಭ್ರಷ್ಟಾಚಾರಗಳಾಗಿವೆ, ಇನ್ನೂ ಒಂದಿಷ್ಟು ಅಭಿವೃದ್ದಿ ಮಾಡಬಹುದಿತ್ತು. ನೆಹರು ಕುಟುಂಬದಿಂದ ಪಕ್ಷ ಹೊರ ಬರಬೇಕಾಗಿತ್ತು. ಮುಸ್ಲಿಂ ತುಷ್ಟೀಕರಣವನ್ನು ಮಾಡಬಾರದಿತ್ತು. ಆದರೆ ಇವೆಲ್ಲವನ್ನೂ ಬಿಜೆಪಿ ಈಗ ಮತ್ತೊಂದು ಬಗೆಯಲ್ಲಿ ಮಾಡುತ್ತಿದೆ ಅನ್ನೋದು ಕೂಡಾ ನಿಜವಲ್ಲವೇ ? ಕಾಂಗ್ರೆಸ್ ಅಂದರೆ ದೇಶದ್ರೋಹಿಗಳು ಅಂತ ಬಿಂಬಿಸೋದು ಎಷ್ಟು ಸರಿ ?
ಬಿಜೆಪಿಯಿಂದ ಏನೂ ಅಭಿವೃದ್ದಿ ಆಗಲ್ಲ ಅಂತ ನಾನು ಹೇಳಲಾರೆ. ಇವರೂ ಮಾಡುತ್ತಾರೆ. ಇವರಿಂದಲೂ ತಪ್ಪುಗಳಾಗುತ್ತವೆ, ಭ್ರಷ್ಟಾಚಾರಗಳಾಗುತ್ತವೆ, ಏಕೆಂದರೆ ಎಲ್ಲರೂ ಮನುಷ್ಯರೆ. ಬಿಜೆಪಿಯವರು ದೇವರಲ್ಲ, ಕಾಂಗ್ರೆಸ್ನವರು ರಾಕ್ಷಸರಲ್ಲ. ಪಕ್ಷಗಳ ನಡುವೆ ಅಭಿವೃದ್ದಿಯಲ್ಲಿ ಪೈಪೋಟಿ ಇರಲಿ, ಎಲ್ಲರೂ ಸೇರಿ ದೇಶವನ್ನು ಮುನ್ನಡೆಸುವ ಬಗ್ಗೆ ಗಮನ ಹರಿಸಲಿ. ಈ ಮಾತು ಗೆದ್ದ ನಂತ ಮೋದಿಯ ಬಾಯಿಂದಲೇ ಬಂದಿದೆ, ಆದರೆ ಮೋದಿ ಬ್ರಿಗೇಡುಗಳು ಮಾತ್ರ ಇನ್ನೂ ಅಂಧಕಾರದ ಅಹಂನಲ್ಲೇ ಇದ್ದಾರೆ!

ಕಾಮೆಂಟ್ಗಳು