ವಿಷಯಕ್ಕೆ ಹೋಗಿ

ಕನ್ನಡಿಗರು ಕನ್ನಡವನ್ನು ಕೇಳಿ... ದೊರೆಯುತ್ತದೆ.


ಮೊನ್ನೆ ಸಾಗರದಿಂದ ನಾನೂ ಮತ್ತಿಬ್ಬರು ನಮ್ಮ ಸ್ನೇಹಿತರೂ ಶಿವಮೊಗ್ಗಕ್ಕೆ ಖಾಸಗಿ ಬಸ್‌ ಒಂದರಲ್ಲಿ ಹೊರಟೆವು. ಸಾಗರದ ಜೋಗ ನಿಲ್ದಾಣದಿಂದ ಹೊರಟಾಗ ಬಸ್‌ನಲ್ಲಿ ಹಿಂದಿ ಹಾಡು ಹಾಕಿರುವುದು ಕಂಡು ಬಂತು. ಸ್ವಲ್ಪ ದೂರದ ಬಿಹೆಚ್‌ ರಸ್ತೆ ನಿಲ್ದಾಣದಲ್ಲಿ ಬಸ್‌ ನಿಂತಾಗ ಮೂರೂ ಜನ ಕೆಳಗಿಳಿದೆವು. ನಾವು ಇಳಿದುದು ನೋಡಿ ಮತ್ತೊಬ್ಬ ತಮಿಳನೂ ಇಳಿದುಕೊಂಡ.

ಕಂಡಕ್ಷರ್‌ ಓಡೋಡಿ ಬಂದು ಹೆದರಿಸುವವನಂತೆ "ಯಾಕ್ರೀ ಇಳೀತೀರಾ, ಹತ್ರಿ ಹೊರಡ್ತೀವಿ ಈಗ' ಎಂದು ಗದರಿದ. 

ನಾನೂ ಕೂಡಾ 'ಎಷ್ಟೊತ್ತಿಗೆ ಹೊರಡ್ತೀಯಾ?" ಎಂದು ಅಷ್ಟೇ ಜೋರಾಗಿ ಕೇಳಿದೆ.

'ಈಗ ಹೊರಡ್ತೀವಿ ಹತ್ರೀ ಬಸ್‌ನ" ಅಂದ.

"ನಿನ್ನ ಹಿಂದಿ ಹಾಡು ತೆಗೆದು ಕನ್ನಡ ಹಾಕು, ಇಲ್ಲಾ ಆಫ್‌ ಮಾಡು ಹತ್ತುತೀವಿ" ಅಂದೆ.

ಅವನಿಗೆ ಶಾಕ್‌ ಆದಂತಾಯ್ತು. ಕನ್ನಡ ಹಾಡಿಗಾಗಿ ಈ ರೀತಿ ಬಸ್‌ ಬಿಟ್ಟು ಇಳಿಯುವವರೂ ಇದ್ದಾರಾ ಅಂದುಕೊಂಡಿರಬೇಕು. ಕೂಡಲೇ ಮೆತ್ತಗಾದ ಅವನು 'ಸರಿ ಅದಕ್ಕೇನು, ಹಾಕಿಸುತ್ತೀನಿ ಹತ್ತಿ" ಎಂದ ನಂತರ ಬಸ್‌ ಹತ್ತಿದೆವು.

ಆತ ಚಾಲಕನಿಗೆ ಹೇಳಿ ಹಿಂದಿ ಹಾಡುಗಳನ್ನ ನಿಲ್ಲಿಸಿದ. ನಂತರ ಟಿಕೇಟ್‌ ಪಡೆದುಕೊಂಡ. ಬಸ್‌ ಕೂಡಾ ಹೊರಟಿತು. ಈ ನಡುವೆ ಕಂಡಕ್ಷರ್‌ ಕೂಡಾ ಬದಲಾದ. ಸ್ವಲ್ಪ ದೂರ ಹೋಗುವುದರೊಳಗೆ ಚಾಲಕ ಮತ್ತೆ ಹಿಂದಿ ಹಾಡು ಹಾಕಿದ. ನನಗೆ ರೇಗಿತು, ಇದೆ ಇರು ಇವರಿಗೆ ಹಬ್ಬ ಎಂದುಕೊಂಡು ನಿರ್ವಾಹಕ ನಮ್ಮ ಬಳಿ ಬರುವುದನ್ನೇ ಕಾದು 'ಹಿಂದಿ ಹಾಡು ನಿಲ್ಲಿಸಿ ಕನ್ನಡ ಹಾಕಿ' ಎಂದೆ. ಅವನು ಏನೂ ಹೇಳದೇ ಚಾಲಕನ ಬಳಿ ಹೋಗಿ ತಿಳಿಸಿದ. ಆ ನಂತರ ಚಾಲಕ ಕನ್ನಡ ಹಾಡುಗಳಿಗಾಗಿ ಹುಡುಕಾಡಿದ್ದು ತಿಳಿಯಿತು. ಆದರೆ ಅವನ ಬಳಿ ಕನ್ನಡ ಹಾಡುಗಳ ಸಿಡಿ ಇರಲೇ ಇಲ್ಲ! ಎಲ್ಲವನ್ನೂ ನಿಲ್ಲಿಸಿ ಸುಮ್ಮನಾದ.

ಅಷ್ಟರಲ್ಲಿ ಆನಂದಪುರ ನಿಲ್ದಾಣ ಬಂತು. ಅಲ್ಲಿ ಅವರ ಪರಿಚಯದ ಯಾರಿಂದಲೋ ಕನ್ನಡ ಹಾಡುಗಳ ಸಿಡಿ ಪಡೆದು ಹಾಕಿದರು. ಅದೂ ಕೂಡಾ ಸುಮಧುರವಾದ ಹಳೆಯ ಕನ್ನಡ ಹಾಡುಗಳು. ಅಲ್ಲಿಂದ ಎಲ್ಲರೂ ಹಾಯಾಗಿ ಕನ್ನಡ ಹಾಡುಗಳನ್ನು ಕೇಳುತ್ತಾ ಶಿವಮೊಗ್ಗ ತಲುಪಿದೆವು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...