ವಿಷಯಕ್ಕೆ ಹೋಗಿ

"ಡಿಜಿಟಲ್‌ ಇಂಡಿಯಾ" - ಮೋದಿಯ ಮತ್ತೊಂದು ಕಲರ್‌ಫುಲ್‌ ಆಟ !




ಫೇಸ್‌ಬುಕ್‌ನಲ್ಲಿ  ಯಾರ ಪ್ರೊಫೈಲ್‌ ಚಿತ್ರ ನೋಡಿದರೂ ಕಲರ್‌ ಕಲರ್‌ ! ಅರೆರೆ ಏನಿದು ಎಲ್ಲರೂ ಈ ರೀತಿ ಮಕಕ್ಕೆ ಬಣ್ಣ ಬಳಕೊಂಡವರಲ್ಲ ಅಂತ ನೋಡಿದರೆ ಅದರ ಹಿಂದಿರುವುದು ಮತ್ತದೇ ಮೋದಿಯ ಮತ್ತೊಂದು ಕಲರ್‌ಫುಲ್‌ ಆಟದ ಹಕೀಕತ್ತು. ಮಾಧ್ಯಮಗಳಿಗೆ ಅಮೇಧ್ಯ ಉಣ್ಣಿಸಿ ತನ್ನ ಪ್ರತಿ ನಡೆಯನ್ನೂ ಜಾಹೀರಾತನ್ನಾಗಿ ಮಾಡಿಕೊಳ್ಳುತ್ತಿರುವ ಪ್ರಧಾನಿ ಮೋದಿ ಇದೀಗ "ಡಿಜಿಟಲ್‌ ಇಂಡಿಯಾ" ಎಂಬ ಹೆಸರಲ್ಲಿ ದೇಶೀಯ ಡಿಜಿಟಲ್‌ ಉದ್ಯಮವನ್ನ ಬೇರು ಸಮೇತ ಕಿತ್ತೊಗೆಯಲು ವಿದೇಶಿ ಶಕ್ತಿಗಳೊಂದಿಗೆ ಕೈ ಜೋಡಿಸಿದ್ದಾರೆ.

ಏನಿದು ಡಿಜಿಟಲ್‌ ಇಂಡಿಯಾ ? ಎಂದು ಯಾರಾದರೂ ಮಕಕ್ಕೆ ಬಣ್ಣ ಬಳಕೊಂಡವರ ಬಳಿ ಕೇಳಿ ನೋಡಿ. ಅವರಿಂದ ಬರುವ ಉತ್ತರ "ಗೊತ್ತಿಲ್ವ? ಡಿಜಿಟಲ್‌ ಇಂಡಿಯಾ ಕಣ್ರೀ, ಮೋದಿಯ ಮಹತ್ವಾಕಾಂಕ್ಷೆಯ ಯೋಜನೆ. ಇಡೀ ಭಾರತಕ್ಕೇ ಉಚಿತವಾಗಿ ವೈಫೈ ಮೂಲಕ ಇಂಟರ್ನೆಟ್‌ ಕೊಡುವ ಅತ್ಯದ್ಬುತ ಯೋಜನೆ ಇದು. ನೀವು ಯಾಕೆ ಇನ್ನೂ ಬೆಂಬಲ ನೀಡಿಲ್ಲ? ಮೋದಿಯನ್ನು ವಿರೋಧಿಸೋದೇ ಕೆಲಸಾನಾ? ಇಂತಹ ಒಳ್ಳೆಯ ಕೆಲಸ ಮಾಡಿದಾಗಲೂ ಬೆಂಬಲಿಸಬಾರದಾ?" ಅಂತ ಪ್ರಶ್ನಿಸದಿದ್ದರೆ ಕೇಳಿ. ಅದು ಅವರ ಅಮಾಯಕತೆ. ಕೆಲವರಿಗೆ ವಿಷಯದ ಅರಿವಿದ್ದರೂ ಬೇರೆ ಬೇರೆ ಸ್ವಾರ್ಥ ಕಾರಣಗಳಿಗಾಗಿ ಮುಚ್ಚಿಡುತ್ತಿದ್ದಾರೆ.

ಇಂಟರ್ನೆಟ್‌ ಎಂಬುದು ಲಕ್ಷಾಂತರ ಕೋಟಿಯ ಉದ್ಯಮ

ಡಿಜಿಟಲ್‌ ಇಂಡಿಯಾದ ಮೂಲ ಉದ್ದೇಶ ಜನರೆಲ್ಲಾ ತಿಳಿದಿರುವಂತೆ ಉಚಿತ ಇಂಟರ್ನೆಟ್‌ ಕೊಡುವುದೇನೋ ನಿಜ. ಆದರೆ ಅದರ ಸಾಧಕ ಬಾಧಕಗಳ ಬಗ್ಗೆ ಜನ ತಲೆ ಕೆಡಿಸಿಕೊಂಡಿಲ್ಲ. ಉಚಿತ ಇಂಟರ್ನೆಟ್‌ ಅನ್ನು ಹೇಗೆ ಕೊಡಲಾಗುತ್ತದೆ ಎಂದು ಯೋಚಿಸಿಲ್ಲ. ಮೊದಲಿಗೆ ಈ ಇಂಟರ್ನೆಟ್‌ ನಮ್ಮ ದೇಶದಲ್ಲಿ ಹೇಗೆ ಬಿತ್ತರವಾಗುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯೋಣ. ನೀವು ಫೇಸ್‌ಬುಕ್‌ ಅಥವಾ ವಾಟ್ಸಾಪ್‌ ಉಪಯೋಗಿಸುತ್ತಿದ್ದೀರೆಂದು ತಿಳಿದಿದ್ದೇನೆ. ಈಗ ನೀವೇನು ಮಾಡುತ್ತಿದ್ದೀರಿ ? ನಿಮ್ಮ ಸಿಮ್‌ನ ಸೇವಾ ಸಂಸ್ಥೆ (ಏರ್‌ಟೆಲ್‌, ಸೆಲ್‌ಒನ್‌ ಇತ್ಯಾದಿ) ಯ ಮೂಲಕ ಇಂಟರ್ನೆಟ್‌ ಪ್ಯಾಕ್‌ ಹಾಕಿಸಿಕೊಳ್ಳುತ್ತಿದ್ದೀರಿ. ಅದಕ್ಕೆ ತಿಂಗಳಿಗೆ ನೂರರಿಂದ ಹಿಡಿದು ಇನ್ನೂ ಹೆಚ್ಚಿನ ಬೇರೆ ಬೇರೆ ದರವನ್ನು ಎಲ್ಲರೂ ವಿನಿಯೋಗಿಸುತ್ತಿದ್ದಾರೆ. (ಬ್ರಾಡ್‌ಬ್ಯಾಂಡ್‌ ಆಗಿದ್ದಲ್ಲಿ ಸಾವಿರ ರೂಪಾಯಿಯಷ್ಟು ತಿಂಗಳಿಗೆ ಇದೆ.) ಆ ಹಣವೂ ಕೆಲವರಿಗೆ ದುಬಾರಿ ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ಏಕೆಂದರೆ ಫೇಸ್‌ಬುಕ್‌, ವಾಟ್ಸಾಪ್‌ಗಳು ಲಾಭ ತರುವಂತವಲ್ಲ. ಸಮಯ ಕಳೆಯಲು, ಹರಟೆ ಹೊಡೆಯಲು, ಪ್ರೀತಿ ಮಾಡಲು ಉಪಯೋಗಿಸುವಂತಹ ಸಾಧನಗಳು. ಹಾಗಾಗಿ ಎಷ್ಟೋ ಜನ ಇಂದಿಗೂ ಇಂಟರ್ನೆಟ್‌ ಬಳಸುತ್ತಿಲ್ಲ. ಅಂದರೆ ಅವರಿಗೆ ವಾಟ್ಸಾಪ್‌ ಫೇಸ್‌ಬುಕ್‌ಗಳ ಅಗತ್ಯವಿಲ್ಲ. ಇನ್ನು ಇಂಟರ್ನೆಟ್‌ ಬಳಸುತ್ತಿರುವ ಬಹುತೇಕ ಮಂದಿ ಖಂಡಿತವಾಗಿಯೂ ಕೇವಲ ವಾಟ್ಸಾಪ್‌, ಫೇಸ್‌ಬುಕ್‌ಗಳಿಗಾಗಿ ಇಂಟರ್ನೆಟ್‌ ಹಾಕಿಸಿಕೊಂಡವರಲ್ಲ. ಅವರ ಪ್ರಮುಖ ಉದ್ದೇಶ ಇಮೈಲ್‌ ಬಳಕೆ, ಗೂಗಲಿಂಗ್‌ ಇತ್ಯಾದಿ ಆಗಿರುತ್ತದೆ. ಅಂದರೆ ಅವುಗಳಿಂದ ತಮ್ಮ ವ್ಯಾಪಾರ, ವ್ಯವಹಾರಕ್ಕೆ ಅಥವಾ ತಿಳುವಳಿಕೆಗೆ, ವಿದ್ಯಾರ್ಥಿಗಳಾದರೆ ಶೈಕ್ಷಣಿಕ ವಿಷಯಗಳ ಮೂಲಕ ಲಾಭವಿದೆ. ಇಂದು ಎಷ್ಟೋ ಜನ ಮನೆಯಲ್ಲೇ ಕುಳಿತು ಇಂಟರ್ನೆಟ್‌ ಮುಖಾಂತರ ಕೆಲಸ ಮಾಡಿ ದುಡಿಮೆ ಮಾಡಿಕೊಳ್ಳುತ್ತಿದ್ದಾರೆ. 

ಈ ಸೇವಾ ಸಂಸ್ಥೆಗಳು ತಿಂಗಳಿಗೆ ಇಂಟರ್ನೆಟ್‌ಗೆ ಅಂತ ಹಣ ಪಡೆಯುತ್ತವಲ್ಲ, ಆ ಹಣ ಪೂರ್ತಿ ಅವುಗಳಿಗೇ ಸೇರುವುದಿಲ್ಲ. ಇಂಟರ್ನೆಟ್‌ ಸೇವೆ ಒದಗಿಸಲಿಕ್ಕೆ ಈ ಸಂಸ್ಥೆಗಳು ಮೊದಲು ಸರ್ಕಾರದಿಂದ ಅದನ್ನು ಕೊಂಡುಕೊಂಡಿರಬೇಕು. (೨ಜಿ, ೩ಜಿ, ೪ಜಿ ಎಂಬ ಬೇರೆ ಬೇರೆ ವೇಗ ಮಾದರಿಗಳಿವೆ.) ಅದರ ಒಟ್ಟಾರೆ ಮೊತ್ತ ವರ್ಷಕ್ಕೆ ಲಕ್ಷ ಕೋಟಿಗಳ ಲೆಕ್ಕದಲ್ಲಿ ಇರುತ್ತದೆ. ಹಿಂದೆ ಸಾವಿರಾರು ಕೋಟಿ ರೂಪಾಯಿಗಳ ೨ಜಿ ಹಗರಣವಾದುದನ್ನು ನೆನಪಿಸಿಕೊಳ್ಳಿ. ಆ ರೀತಿ ಸರ್ಕಾರದಿಂದ ಸಾವಿರಾರು ಕೋಟಿ ರೂಪಾಯಿ ನೀಡಿ ಪರವಾನಿಗೆ ಪಡೆಯುವ ಸೇವಾ ಸಂಸ್ಥೆಗಳು ಜನರಿಗೆ ತಿಂಗಳಿಗಿಷ್ಟು ಎಂಬಂತೆ ಮಾರಿಕೊಳ್ಳುತ್ತವೆ. ಈ ರೀತಿ ಮಾರುವಾಗಲೂ ಸರ್ಕಾರ ಮತ್ತೊಮ್ಮೆ ಸೇವಾ ತೆರಿಗೆ ವಿಧಿಸಿ ಜನರಿಂದ ಮತ್ತೊಂದಿಷ್ಟು ಸಾವಿರ ಕೋಟಿಗಳನ್ನು ಬಾಚಿಕೊಳ್ಳುತ್ತದೆ. ಮುಖ್ಯವಾಗಿ ಇಂಟರ್ನೆಟ್‌ ಸಂಪರ್ಕವು ಆಕಾಶದಲ್ಲಿ ಸುತ್ತುತ್ತಿರುವ ಇನ್ಸಾಟ್‌ ಉಪಗ್ರಹಗಳ ಮೂಲಕ ಬಿತ್ತರಗೊಳ್ಳುವುದರಿಂದ ಸರ್ಕಾರಕ್ಕೂ ಅವನ್ನು ನಡೆಸಲು (ಇಸ್ರೋ) ತುಂಬಾ ಖರ್ಚು ತಗುಲುತ್ತದೆಂಬುದರಲ್ಲಿ ಅನುಮಾನವಿಲ್ಲ.

ಸರಿ, ಇದೀಗ ನಿಮಗೆ ಕೆಲವು ವಿಷಯಗಳು ಸ್ಪಷ್ಟವಾಗಿರುತ್ತದೆ. ಅದೇನೆಂದರೆ ೧. ಇಂಟರ್ನೆಟ್‌ ಸೇವೆ ನೀಡಲು ಸರ್ಕಾರಕ್ಕೆ ಸಾವಿರಾರು ಕೋಟಿ ವೆಚ್ಚವಾಗುತ್ತದೆ. ೨. ಇಂಟರ್ನೆಟ್‌ ಮೇಲೆ ಸೇವಾ ಸಂಸ್ಥೆಗಳು ಲಕ್ಷಾಂತರ ಕೋಟಿ ಹೂಡಿಕೆ ಮಾಡುತ್ತವೆ. ೩. ಬಳಕೆದಾರರಿಂದ ಸರ್ಕಾರಕ್ಕೆ ಸೇವಾ ತೆರಿಗೆ ರೂಪದಲ್ಲಿ ಮತ್ತೆ ಸಾವಿರಾರು ಕೋಟಿಗಳ ಆದಾಯವಿದೆ. ೪. ಒಟ್ಟಿನಲ್ಲಿ ಇಂಟರ್ನೆಟ್‌ ಉದ್ಯಮ ಅನ್ನುವುದು ವರ್ಷಕ್ಕೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಹರಿದಾಡಿಸುತ್ತದೆ.

ಇಷ್ಟು ಸ್ಪಷ್ಟವಾದ ನಂತರ ನಿಮಗೆ ಒಂದು ಪ್ರಶ್ನೆ ಕೇಳುತ್ತೇನೆ, ದಯವಿಟ್ಟು ಮನಸಿನಲ್ಲೆ ಉತ್ತರಿಸಿ -  ಹೀಗೆ ಸಾವಿರಾರು ಕೋಟಿ ಲಾಭವಿರುವ, ಅಥವಾ ಅಷ್ಟೇ ಖರ್ಚೂ ಇರುವ ಇಂಟರ್ನೆಟ್‌ ಸಂಪರ್ಕವನ್ನು ಈ ಕಲರ್‌ಫುಲ್‌ ಮೋದಿ ಹೇಗೆ ತಾನೇ ಉಚಿತವಾಗಿ ಕೊಡಬಲ್ಲ ? ಸಾವಿರಾರು ಕೋಟಿ ಸುರಿದು ೨ಜಿ, ೩ಜಿ ದತ್ತಾಂಶ ಕೊಂಡುಕೊಂಡಿರುವ ಸೇವಾ ಸಂಸ್ಥೆಗಳಿಗೆ ಹಣ ಯಾರು ಕೊಡುತ್ತಾರೆ ? ಸರ್ಕಾರಕ್ಕೆ ಆದಾಯ ಎಲ್ಲಿಂದ ? ಅದಾಯ ನಿಂತು ಹೋದರೆ ಇಸ್ರೋದ ನಿರ್ವಹಣೆ ಹೇಗೆ? ಮುಂದಿನ ಉಪಗ್ರಹಗಳ ಅಭಿವೃದ್ದಿ ಹೇಗೆ ?
ಇದಕ್ಕೆಲ್ಲಾ ನೀವು ಒಂದು ಉತ್ತರ ನೀಡಬಹುದು, ಅದೇನೆಂದರೆ "ಉಚಿತ ಇಂಟರ್ನೆಟ್‌ ಸಂಪರ್ಕ ಹಳ್ಳಿಗಳಿಗೆ ಮಾತ್ರ. ಪಟ್ಟಣದ ಲಾಭದಲ್ಲಿ ಹಳ್ಳಿಗಳಿಗೆ ನೀಡಲಾಗುತ್ತೆ". ಹಾಗಿದ್ದಲ್ಲಿ ಇದರಲ್ಲಿ ಜುಗರ್‌ ಬರ್ಗನ ಪಾತ್ರವೇನು ? ನಮ್ಮ ಪಟ್ಟಣದಿಂದ ಬರುವ ಲಾಭದಲ್ಲಿ ನಮ್ಮ ಹಳ್ಳಿಯವರಿಗೆ ಉಚಿತ ಇಂಟರ್ನೆಟ್‌ ನೀಡುವುದಕ್ಕೆ ಅದ್ಯಾರೋ ಅಮೆರಿಕದ ದೊಣ್ಣೆ ನಾಯಕನ ಕಚೇರಿಯಲ್ಲಿ ಕುಳಿತು ನಮ್ಮ ಪ್ರಧಾನಿ ಕಣ್ಣೀರು ಹಾಕಬೇಕೆ? 

ಅಸಲೀಯತ್ತೇನು ?
ನಿಜವಾಗಿಯೂ ಇದೆಲ್ಲಾ ಶುರುವಾಗಿದ್ದು ಆ ಮಾರ್ಕ್‌ ಜುಗರ್‌ ಬರ್ಗ್‌‌ನಿಂದಲೇ. ಇಂದು ಫೇಸ್‌ಬುಕ್‌ ಉಪಯೋಗಿಸದವರು ಅಥವಾ ಅದರ ಬಗ್ಗೆ ತಿಳಿಯದವರು ವಿರಳ. ಅದೊಂದು ಸಾಮಾಜಿಕ ಜಾಲತಾಣ. ಆದರೆ ಫೇಸ್‌ಬುಕ್‌ ಬರುವುದಕ್ಕೂ ಮೊದಲು ಗೂಗಲ್‌ನವರ "ಆರ್ಕುಟ್‌" ಎಂಬ ಜಾಲತಾಣ ಕೂಡಾ ಇಷ್ಟೇ ಪ್ರಭಾವಿಯಾಗಿತ್ತು. ಆದರೆ ಅದು ಆರ್ಕುಟ್‌ ಎಂಬ ತಂತ್ರಜ್ಞನ ಹಿಡಿತದಲ್ಲೇ ಇದ್ದುದರಿಂದ ಗೂಗಲ್‌ ಆತನೊಂದಿಗೆ ಲಾಭವನ್ನು ಹಂಚಿಕೊಳ್ಳಬೇಕಿತ್ತು. ಇದನ್ನು ತಪ್ಪಿಸಲು ಗೂಗಲ್‌ನವರು ಅರ್ಕುಟನ್ನು ಸ್ಥಗಿತಗೊಳಿಸಿ "ಗೂಗಲ್‌ ಪ್ಲಸ್‌" ಅನ್ನು ಜಾರಿಗೆ ತಂದರು. ಅಲ್ಲೇ ಅವರು ಎಡವಿದ್ದು. ಈ ನಡುವೆಯೇ ಹುಟ್ಟಿಕೊಂಡು ಕುಂಟುತ್ತಾ ಸಾಗಿದ್ದ ಫೇಸ್‌ಬುಕ್‌ ಗೂಗಲ್‌ನವರ ಈ ಹುಚ್ಚಾಟದ ಕಾರಣಕ್ಕೆ ಇದ್ದಕ್ಕಿದ್ದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಹೋಯ್ತು. 

ಸಧ್ಯಕ್ಕೆ ಈಗ ಫೇಸ್‌ಬುಕ್‌ ಅನ್ನು ಹಿಡಿಯುವವರೇ ಇಲ್ಲ. ಆದರೆ ಭವಿಷ್ಯದಲ್ಲಿ ತನ್ನಂತೆಯೇ ಮತ್ತೊಂದು ಜಾಲತಾಣ ತನ್ನನ್ನು ಹಿಂದಿಕ್ಕದು ಎಂಬ ಭರವಸೆ ಜುಕರ್‌ ಬರ್ಗ್‌‌ನಿಗೆ ಇಲ್ಲ. ಐಗ ಮುಗಿ ಬಿದ್ದು ಉಪಯೋಗಿಸುತ್ತಿರಿವ ಜನರು ಯಾವುದೇ ಸಮಯದಲ್ಲಿ ಮತ್ತೊಂದು ಜಾಲತಾಣದತ್ತ ಜಾರಬಹುದು.  ಯಾವುದೇ ಸಮಯದಲ್ಲಿ ಫೇಸ್‌ಬುಕ್‌ನ ಈ ಅದ್ದೂರಿ ಜಾತ್ರೆ ಕೊನೆಗೊಳ್ಳಬಹುದು. ಈ ಭಯ ಆತನಿಗೆ ಇದ್ದೇ ಇದೆ. ಅದಕ್ಕಾಗಿಯೇ ತನಗೆ ಹೊಡೆತ ಕೊಡುತ್ತಿದ್ದ ವಾಟ್ಸಾಪ್‌ ಅನ್ನು ಕೇಳಿದಷ್ಟು ಹಣ ಕೊಟ್ಟು ಕೊಂಡುಕೊಂಡಿದ್ದು. ಆದರೆ ಯಾವಾಗಲೂ ಇದೇ ರೀತಿ ಕೊಳ್ಳುತ್ತಾ ಹೋಗಲು ಸಾಧ್ಯವಿಲ್ಲ. ಹೊಸ ಹೊಸ ಹುಡುಗರು ಹೊಸ ಕಲ್ಪನೆ, ಯೋಜನೆಗಳೊಂದಿಗೆ ಹೊಸ ಜಾಲತಾಣ ನಿರ್ಮಿಸಿ ಫೇಸ್‌ಬುಕ್‌ಗೆ ಮುಳುಗು ನೀರು ತೋರಿಸುವ ಅಪಾಯ ಇದ್ದೇ ಇದೆ. ಭವಿಷ್ಯದಲ್ಲಿ ಇಂತಹ ಅಪಾಯವನ್ನು ತಡೆಯಲು ಫೇಸ್‌ಬುಕ್‌ನ ಸಂಸ್ಥಾಪಕ ಜುಗರ್‌ಬರ್ಗ್‌‌ನಿಗೆ ಒಂದು ಉಪಾಯ ಹೊಳೆಯಿತು. ಅದುವೇ ಬೇರೆ ಯಾರೂ ಬೆಳೆಯದಂತೆ ತಡೆಯುವುದು!

ಇದು ಶುರುವಾಗಿದ್ದು ಮಾರ್ಕ್‌ ಜುಗರ್‌ ಬರ್ಗ್‌ನಿಂದ
ಫೇಸ್‌ಬುಕ್‌ನ ಸಂಸ್ಥಾಪಕನೇ ಮೋದಿಯ ಈ ತಲೆ ತಿರುಕ ಯೋಜನೆಗೆ ಮೂಲ ಪುರುಷ. ಅತ್ಯಂತ ಕ್ರಿಯಾಶೀಲವಾದ ಈ ಜಗತ್ತಿನಲ್ಲಿ ಯಾವುದೇ ಸಮಯದಲ್ಲಿ ಯಾವುದೇ ದೇಶದ ಯಾವುದೇ ಯುವಕರ ತಲೆಯಲ್ಲಿ ಫೇಸ್‌ಬುಕ್‌ಗಿಂತಾ ವಿಭಿನ್ನವಾದ ಯೋಜನೆ ಹೊಳೆಯದು ಎನ್ನಲಾಗದು. ಅದರಲ್ಲೂ ಬಹುಸಂಖ್ಯೆಯ ಸದಸ್ಯರಿರುವ ಭಾರತ ಫೇಸ್‌ಬುಕ್‌ಗೆ ಹೇಳಿ ಮಾಡಿಸಿದ ಜಾಗ. ಹೊಸ ತಲೆಮಾರಿನ ಯೋಜನೆಯೊಂದು ಈ ದೇಶದಿಂದಲೇ ಉದಯಿಸಿ ಫೇಸ್‌ಬುಕ್‌ಗೆ ಮುಳುಗು ನೀರು ಕಾಣಿಸಿದರೆ ? ಹೀಗೆಂದು ಹೆದರಿದ ಜುಕರ್‌ಬರ್ಗ್‌ ಇಂತಹ ಹೊಸಬರನ್ನು ಬೆಳೆಯಲೇ ಬಿಡಬಾರದು ಎಂದು ಒಂದು ಯೋಜನೆ ರೂಪಿಸಿದ. ಅದಕ್ಕೆ "ಉಚಿತ ಅಂತರ್ಜಾಲ" ಅಂತ ಸುಂದರವಾದ ಹೆಸರನ್ನೂ ಇರಿಸಿದ. ಸಧ್ಯಕ್ಕೆ ಇವನ ಯೋಜನೆ ಹೀಗಿದೆ. ಫೇಸ್‌ಬುಕ್‌ ಸೇರಿದಂತೆ ಸುಮಾರು ಐವತ್ತು ಜಾಲತಾಣಗಳನ್ನು ಯಾವುದೇ ಮೊಬೈಲ್‌ನಲ್ಲಿ ಉಪಯೋಗಿಸಿದರೂ ಉಪಯೋಗಿಸುವವರಿಗೆ ಯಾವುದೇ ಅಂತಜಾಲ ದರ ಅನ್ವಯವಾಗದೇ ಉಚಿತವಾಗಿ ದೊರೆಯಲಿದೆ. ಅಂದರೆ ಈಗಿನಂತೆ ತಿಂಗಳಿಗಿಷ್ಟು ಅಂತ ಇಂಟರ್ನೆಟ್‌ ಪ್ಯಾಕ್‌ ಹಾಕಿಸಿಕೊಳ್ಳುವ ಅಗತ್ಯವಿಲ್ಲ. ಆ ಐವತ್ತು ಜಾಲತಾಣಗಳನ್ನು ಬಿಟ್ಟು ಬೇರೆ ತಾಣಗಳನ್ನು ನೋಡುವುದಾದರೆ ಮಾತ್ರ ನೀವು ಇಂಟರ್ನೆಟ್‌ ಪ್ಯಾಕ್‌ ಹಾಕಿಸಿಕೊಳ್ಳಬೇಕು. 

ಹೌದಾ, ಹಾಗಿದ್ದರೆ ಇದು ಒಳ್ಳೆಯದೇ ಆಯ್ತಲ್ಲ. ಉಚಿತವಾಗಿ ಫೇಸ್‌ಬುಕ್‌, ವಾಟ್ಸಾಪ್‌, ಗೂಗಲ್‌ಗಳು ದೊರೆತರೆ ಇನ್ನೇನು ಬೇಕು. ಎಂದು ನೀವು ಕೇಳಬಹುದು. ಆದರೆ ಒಮ್ಮೆ ಯೋಚಿಸಿ. ಇವನು ನೀಡುವ ಈ ಐವತ್ತು ತಾಣಗಳನ್ನು ಬಹು ನಾಜೂಕಾಗಿ ಆಯ್ಕೆ ಮಾಡಲಾಗುತ್ತದೆ. ಅಂದರೆ ಭಾರತದಲ್ಲಿ ಹೆಚ್ಚು ಹೆಚ್ಚು ಬಳಕೆಯಲ್ಲಿರುವ ತಾಣಗಳು ಮಾತ್ರ ಇವರ ಪಟ್ಟಿಯಲ್ಲಿ ಬರಲಿವೆ. ಅವುಗಳಿಂದ ಫೇಸ್‌ಬುಕ್‌ನವನು ಹಣ ಪಡೆದು ತಾನೂ ಲಾಭ ಮಾಡಿಕೊಂಡು ಅಂತಜಾಲ ಸೇವೆ ನೀಡುವ ಸಂಸ್ಥೆಗಳಿಗೆ ಅವುಗಳ ದರವನ್ನು ಕಟ್ಟುತ್ತಾನೆ. ಅಂದರೆ ಇದರರ್ಥ ಜನರು ಇವರು ನೀಡುವ ಐವತ್ತು ತಾಣಗಳಿಗೆ ಹೊಂದಿಕೊಳ್ಳುತ್ತಾರೆ. ಇವೆಲ್ಲಾ ಉಚಿತವಾಗಿ ದೊರೆಯುವುದರಿಂದ ಬೇರೆ ತಾಣಗಳನ್ನು ಉಪಯೋಗಿಸಲು ಮನಸ್ಸು ಮಾಡುವುದಿಲ್ಲ. ಇಂತಹ ಪರಿಸ್ಥಿತಿ ಸೃಷ್ಟಿಯಾದ ನಂತರ ಯಾರೋ ಒಬ್ಬ ಯುವಕ ಒಂದು ಹೊಸ ಯೋಜನೆಯೊಂದಿಗೆ ಒಂದು ಹೊಸ ತಾಣವನ್ನು ನಿರ್ಮಿಸಿದ ಅಂತಿಟ್ಟುಕೊಳ್ಳಿ. ಅವನ ಆ ತಾಣವನ್ನು ಯಾರು ನೋಡುತ್ತಾರೆ ? ಯಾರೂ ಇಲ್ಲ. ಏಕೆಂದರೆ ಯಾರ ಮೊಬೈಲಿನಲ್ಲೂ ಅವನ ತಾಣ ತೆರೆದುಕೊಳ್ಳುವುದೇ ಇಲ್ಲ. ಅಲ್ಲಿಗೆ ಅವನ ಯೋಚನೆ, ಯೋಜನೆ, ಪರಿಶ್ರಮ, ದುಡ್ಡು ಎಲ್ಲಾ ಮೋದಿ ಹೆಸರಲ್ಲಿ ಜುಗರ್‌ಬರ್ಗನಿಗೆ ಹೋಮ ಮಾಡಿದಂತಾಯ್ತಲ್ಲವೆ? ಅಥವಾ ಅವನು ಈ ಜುಗರ್‌ಬರ್ಗ್‌ ಕೇಳುವಷ್ಟು ಹಣ ನೀಡಿ ಇವನ ಲಿಸ್ಟಿನಲ್ಲಿ ಬರಬೇಕು. ಹೊಸ ಪ್ರತಿಭೆಗಳಿಗೆ ಅಷ್ಟೆಲ್ಲಾ ದುಡ್ಡು ಕೊಟ್ಟು ಪೈಪೋಟಿ ನಡೆಸಲು ಸಾಧ್ಯವೇ ? ತನ್ನ ತಾಣವನ್ನು ಎಷ್ಟು ಜನ ನೋಡುತ್ತಾರೋ ಅಷ್ಟಕ್ಕೂ ತಾಣವನ್ನು ನಿರ್ಮಿಸಿದವನೇ ಹಣ ನೀಡಬೇಕು. ಪ್ರಾರಂಭದಲ್ಲಿ ಲಾಭವೂ ಇಲ್ಲದೇ, ಜಾಹೀರಾತೂ ದೊರೆಯದೇ ಇಂತಹ ಪೈಪೋಟಿಯನ್ನು ಹೊಸಬರು ಎದುರಿಸುವುದಾದರೂ ಹೇಗೆ ? ಜುಗರ್‌ಬರ್ಗನಿಗೆ ಬೇಕಾಗಿರುವುದೇ ಇದು. 

ಹೀಗೆ ಕುತಂತ್ರ ಮಾಡಿರುವ ಜುಗರ್‌ ಬರ್ಗ್ ಪ್ರಚಾರಕ್ಕಾಗಿ ಏನು ಬೇಕಾದರೂ ಮಾಡಲು ತಯಾರಾಗಿರುವ ಮೋದಿಯನ್ನು ಬುಟ್ಟಿಗೆ ಹಾಕಿಕೊಂಡು ಹೊಸ ರೂಪದಲ್ಲಿ ಭಾರತದ ಪ್ರತಿಬೆಗಳನ್ನು ಬಗ್ಗು ಬಡಿಯಲು ಬರುತ್ತಿದ್ದಾನೆ. ಸ್ವಲ್ಪ ದಿನದ ಕೆಳಗೆ ಫೇಸ್‌ಬುಕ್‌ ತೆರೆದಾಗ "ಉಚಿತ ಅಂತಜಾಲಕ್ಕೆ ಬೆಂಬಲ ನೀಡಿ" ಅಂತ ಒಂದು ಮನವಿ ತೋರಿಸುತ್ತಿತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದ್ದರೆ ಅದರಲ್ಲಿ ಎರಡು ಬಟನ್‌ಗಳಿದ್ದವು. ಒಂದು "ಬೆಂಬಲಿಸಿ" ಮತ್ತೊಂದು "ಈಗ ಬೇಡ". ಇವೆರಡೇ ಬಟನ್ನುಗಳು ಇದ್ದುದು. ಅಂದರೆ ಒಂದೋ ಈಗಲೇ ಬೆಂಬಲಿಸಿರಿ ಅಥವಾ ಆಮೇಲೆ ಯಾವಾಗಲಾದರೂ ಬೆಂಬಲಿಸಿರಿ. ಒಟ್ಟಿನಲ್ಲಿ ಬೆಂಬಲಿಸಲೇ ಬೇಕಾದ್ದು ನಿಮ್ಮ ಕರ್ತವ್ಯ, ತಿರಸ್ಕರಿಸುವಂತಿಲ್ಲ. ಇದು ಜುಕರ್‌ಬರ್ಗನ ಕಾರ್ಯ ವೈಖರಿ. ಆಗ ಎಷ್ಟೋ ಜನ ಅದೇನೇಂದೇ ತಿಳಿಯದೇ ಬೆಂಬಲದ ಬಟನ್‌ ಒತ್ತಲೇ ಇಲ್ಲ. ಆದರೆ ಮೋದಿಯ ಕಲರ್‌ಫುಲ್‌ ಜಾಹೀರಾತಿನೊಂದಿಗೆ "ಡಿಜಿಟಲ್ ಇಂಡಿಯಾ" ಹೆಸರಲ್ಲಿ ಯಾವಾಗ ಇದೇ ಆಯ್ಕೆ ಬೇರೆ ವಿಧದಲ್ಲಿ ಬಂತೋ ಎಲ್ಲರೂ ನಾಮುಂದು ತಾಮುಂದು ಎಂದು ಮುಖದ ಬಣ್ಣವನ್ನು ಕೆಡಿಸಿಕೊಂಡಿದ್ದೇ ಕೊಂಡಿದ್ದು. ಅತ್ತ ಬೆಂಬಲಿಗರ ಸಂಖ್ಯೆ ಏರುತ್ತಾ ಹೋದಂತೆ ಜುಗರ್‌ಬರ್ಗನ ಮುಖದಲ್ಲಿ ಅದ್ಯಾವ ವಿಕೃತ ನಗೆ ಮೂಡಿತ್ತೋ ಕಂಡವರಿಲ್ಲ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...