ಕಳೆದ ಏಳು ತಿಂಗಳಲ್ಲಿ ೫೧೬ ರೈತರು ನಮ್ಮ ರಾಜ್ಯವೊಂದರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರಂತೆ. ಇದೊಂದು ಗಾಬರಿ ಹುಟ್ಟಿಸುವ ಸುದ್ದಿಯೇ ಹೌದು. ಹೀಗೆ ಏಕಾಏಕಿ ಇಷ್ಟೊಂದು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾದರೂ ಏನು ? ನಿಜವಾದ ಸಾಲದ ಸಮಸ್ಯೆಯೇ ಇದಕ್ಕೆ ಕಾರಣವೇ ? ಅಷ್ಟೊಂದು ಸಾಲವನ್ನಾದರೂ ಯತಕ್ಕಾಗಿ ಮಾಡಿಕೊಂಡರು ? ಬರಗಾಲ ಕಾರಣವೆನ್ನಲು ಈಗಿನದಕ್ಕಿಂತಲೂ ಭೀಕರ ಬರಗಾಲ ಎಷ್ಟೋ ಸಮಯ ಬಂದು ಹೋಗಿದೆ. ಆಗೆಲ್ಲಾ ಈ ರೀತಿ ರೈತರು ಆತ್ಮಹತ್ಯೆಗೆ ಇಳಿಯುತ್ತಿರಲಿಲ್ಲ. ಆದರೆ ಇತ್ತೀಚಿಗೆ ಏನೋ ಯಡವಟ್ಟಾಗುತ್ತಿರುವುದಂತೂ ನಿಜ.
ನಿನ್ನೆಯ ಪತ್ರಿಕೆಗಳಲ್ಲಿ ಉತ್ತರ ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಹೆಂಡತಿಯ ಹೇಳಿಕೆಗಳು ಪ್ರಕಟವಾಗಿದೆ. (ಅವರ ಮನೆಗೆ ರಾಹುಲ್ಗಾಂಧಿ ಭೇಟಿ ನೀಡುವುದಿದೆಯಂತೆ). ಆ ಮಹಿಳೆ ಹೇಳಿರುವ ಪ್ರಕಾರ ಅವರಿಗೆ ಇರುವುದು ಬರೇ ೧.೩೮ ಎಕರೆ ಹೊಲ. ಆದರೆ ಆ ರೈತ ೨೦೦೫ ರಲ್ಲಿಯೇ ಟ್ರಾಕ್ಟರ್ ಕರೀದಿಸಿದ್ದಾನೆ ! ಅದರ ಸಾಲ ಮತ್ತು ಬೆಳೆ ಸಾಲ ಸೇರಿ ಈಗ ಸಾಲದ ಮೊತ್ತ ಹನ್ನೊಂದು ಲಕ್ಷವನ್ನೂ ಮೀರಿದೆ. ಈ ಕಾರಣಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಿಜ, ಒಂದೂವರೆ ಎಕರೆಯೂ ಇಲ್ಲದ ಹೊಲದ ರೈತ ಅಷ್ಟೊಂದು ಸಾಲ ತೀರಿಸುವುದು ಕನಸಿನ ಮಾತು. ಅದು ಹಾಗಿರಲಿ, ಆದರೆ ಆತ ಮಾಡಿಕೊಂಡಿರುವ ಸಾಲದ ಪರಿಯನ್ನು ಒಮ್ಮೆ ಗಮನಿಸಿ. ತನಗಿರುವ ಕೇವಲ ೧.೩೮ ಎಕರೆ ಹೊಲಕ್ಕಾಗಿ ಟ್ರಾಕ್ಟರ್ ಕೊಳ್ಳುವ (ಅದೂ ಸಾಲ ಮಾಡಿ) ಅಗತ್ಯವಾದರೂ ಏನಿತ್ತು ? ಇಷ್ಟು ಹೊಲವನ್ನು ಉಳುಮೆ ಮಾಡಲು ಟ್ರಾಕ್ಟರ್ಗೆ ಒಂದೆರಡು ದಿನ ಸಾಕು. ಕುಂಟೆ ಹೊಡೆಯುವುದು, ಅದೂ ಇದೂ ಸೇರಿದರೂ ಐದು ದಿನದ ಕೆಲಸ ಎಂದು ಇಟ್ಟುಕೊಳ್ಳಬಹುದು. ಬೆಳೆ ಹಾಕಿದ ನಂತರ ಹೊಲದಲ್ಲಿ ಅದಕ್ಕೆ ಕೆಲಸವಿರುವುದಿಲ್ಲ. ಒಂದು ಬೆಳೆ ಅಂದರೆ ಸುಮರು ಮೂರ್ನಾಲ್ಕು ತಿಂಗಳಂತೂ ಬೇಕೇ ಬೇಕು. ಅಂದರೆ ಒಂದು ಬೆಳೆಗೆ ಐದು ದಿನದ ಕೆಲಸ ಅಂತ ಹಿಡಿದರು ಅವನ ಟ್ರಾಕ್ಟರ್ಗೆ ವರ್ಷಕ್ಕೆ ಹೆಚ್ಚೆಂದರೆ ಹದಿನೈದು ದಿನದ ಕೆಲಸ. ಆದರೂ ಸಾಲ ಮಾಡಿ ಟ್ರಾಕ್ಟರ್ ಕೊಂಡಿದ್ದಾನೆ! ಯಾರದು ತಪ್ಪು ? ಆತ ಟ್ರಾಕ್ಟರ್ ಇಟ್ಟುಕೊಂಡು ಬೇರೆಯವರಿಗೆ ಬಾಡಿಗೆಗೆ ದುಡಿದಿದ್ದರೂ ಅದಕ್ಕೆ ಮಾಡಿರುವ ಸಾಲ ಇಷ್ಟರಲ್ಲೇ ತೀರುತ್ತಿತ್ತು. ಆದರೆ ಆತ ಹಾಗೇನೂ ಮಾಡಿದಂತೆ ಕಾಣಿಸುತ್ತಿಲ್ಲ.
ಶೋಕಿಗಾಗಿಯೋ ಅಥವಾ ಬೇರೆಯವರು ಕೊಂಡಿದ್ದಾರೆ, ನಾನೇಕೆ ಕೊಳ್ಳಬಾರದು ಎಂದೋ, ಅಥವಾ ಮಾರಾಟಗಾರರ ಮಾತಿಗೆ ಮರುಳಾಗಿಯೋ ಒಟ್ಟಿನಲ್ಲಿ ರೈತರು ಇಂತಹ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಇದನ್ನು ಅವರ ಅಮಾಯಕತೆ ಅನ್ನಬೇಕೋ, ದುರ್ದೈವ ಅನ್ನಬೇಕೋ, ಅತಿ ಬುದ್ದಿವಂತಿಕೆ ಅನ್ನಬೇಕೋ ಗೊತ್ತಾಗುವುದಿಲ್ಲ. ಸರ್ಕಾರ ರೈತರು ಸಾಲ ಮಾಡದಿರುವಂತೆ ಜಾಹೀರಾತುಗಳನ್ನು ಮಾಡುತ್ತಾ, ಟ್ರಾಕ್ಟರ್ ಮುಂತಾದ ರೈತ ಸಂಬಂಧಿ ವಸ್ತುಗಳ ಜಾಯೀರಾತು ನಿಯಂತ್ರಿಸುವತ್ತ ಮನಸ್ಸು ಮಾಡಿ ರೈತರು ಅನಾವಶ್ಯಕವಾಗಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯತ್ತ ಮುಖ ಮಾಡುವುದನ್ನು ತಡೆಯಬೇಕಾಗಿದೆ.

ಕಾಮೆಂಟ್ಗಳು