ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿರುವ 'ದೇವಕಣ' ಪದ ಕಾಲಾನುಕಾಲದಿಂದ 'ದೇವರ' ಹೆಸರಲ್ಲೇ ಮೋಸ, ವಂಚನೆ, ಭಯೋತ್ಪಾಧನೆಗಳೆಲ್ಲವನ್ನೂ ಮಾಡುತ್ತಾ ಬಂದವರಿಗೆಲ್ಲಾ ದುಗುಡ ತಂದಿಟ್ಟಿದೆ. ದೇವರು ಎಂಬ ನಂಬಿಕೆ ಎಷ್ಟೆಲ್ಲಾ ಒಳ್ಳೆಯದನ್ನು ಮಾಡಿದೆಯೋ ಅಷ್ಟೇ ಅನಾಹುತಗಳನ್ನು ಮಾಡಿರುವುದೂ ಸತ್ಯ. ವೈಕ್ತಿಕವಾಗಿ ವ್ಯಕ್ತಿಯೊಬ್ಬ ದೇವರ ಅಸ್ಥಿತ್ವವನ್ನು ನಂಬುವುದರಿಂದ ಸಮಾಜಕ್ಕೆ ಯಾವ ಅಪಾಯವೂ ಇಲ್ಲ. ಅಪಾಯವಿರುವುದು ಆ ನಂಬಿಕೆ ಸಾಮೂಹಿಕವಾಗಿ ಪ್ರಕಟಗೊಳ್ಳುವಾಗ. ಇದರಿಂದಾಗಿಯೇ ದೇವರ ಹೆಸರಲ್ಲೇ ಧರ್ಮಗಳೂ ಹುಟ್ಟಿಕೊಂಡಿರುವುದು. ಇದರ ಅಪಾಯವನ್ನು ಕಂಡೇ ಕುವೆಂಪುರವರು "ಜಗತ್ತಿನ ಎಲ್ಲರಿಗೂ ಧರ್ಮ ಬೇಕು, ಆದರೆ ಅದು ವೈಯಕ್ತಿಕವಾಗಿರಬೇಕು. ಅಂದರೆ ಪ್ರಪಂಚದಲ್ಲಿ ಎಷ್ಟು ಜನರಿದ್ದಾರೋ ಅಷ್ಟು ಧರ್ಮಗಳಿರಬೇಕು. ಯಾವಾಗ ಜನ ಧರ್ಮದ ಹೆಸರಲ್ಲಿ ಗುಂಪು ಕಟ್ಟುತ್ತಾರೋ ಆಗ ಅನಾಹುತವಾಗುತ್ತದೆ" ಎಂದಿದ್ದರು. ಅದೇ ರೀತಿ ಸ್ವಾಮಿ ವಿವೇಕಾನಂದರು "ಧರ್ಮ ಪುಸ್ತಕಗಳಲ್ಲಾಗಲೀ, ದೇವಸ್ಥಾನಗಳಲ್ಲಾಗಲೀ ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡಾಗ ಈ ಕೋಮು ಗಲಭೆ, ಧಾರ್ಮಿಕ ಭೇದ ಭಾವನೆಗಳೆಲ್ಲ ಹೊರಟು ಹೋಗುವವು. ಧರ್ಮವೆಂದರೆ ಪ್ರತ್ಯಕ್ಷಾನುಭವ. ದೇವರ ಮತ್ತು ಆತ್ಮನ ಪ್ರತ್ಯಕ್ಷ ದರ್ಶನವನ್ನು ಪಡೆದವನು ಮಾತ್ರ ಧರ್ಮವನ್ನು ಹೊಂದಿರುವನು." ಎಂದು ಎಚ್ಚರಿಸಿದ್ದರು.
ಸರಿಯಾಗಿ ವಿವೇಚಿಸಿದರೆ ದೇವರಿಗೂ ಧರ್ಮಕ್ಕೂ ಸಂಬಂಧವಿಲ್ಲ. ಧರ್ಮ ಎನ್ನುವುದು ಮನಷ್ಯನ ಬಾಳ್ವೆಗೆ ಬೇಕಾದ ಒಂದು ಸಂವಿಧಾನ. ಆತನ ನಡವಳಿಕೆಯನ್ನು ನಿರ್ಧರಿಸುವ ಪುಸ್ತಕವಾಗಬೇಕಿತ್ತು. ಆದರೆ ಅದು ಹಾಗೆ ಆಗದೇ ಧರ್ಮ ಹಾಗೂ ದೇವರನ್ನು ಒಂದುಗೂಡಿಸಿ ಅದ್ವಾನವಾಗುವ ಹಾಗೆ ಮಾಡಲಾಗಿದೆ. ರಾಮ, ಕೃಷ್ಣ, ಪೈಗಂಬರ, ಏಸು - ಇವರೆಲ್ಲಾ ಮಾನವರೇ ಆಗಿದ್ದರು. ಆದರೆ ವಿಶೇಷ ಬುದ್ಧಿಮತ್ತೆ ಮತ್ತು ಗುಣಸಂಪನ್ನರಾಗಿದ್ದುದರಿಂದ ಅವರನ್ನು ದೇವರ ಸ್ಥಾನಕ್ಕೆ ಏರಿಸಲಾಯ್ತು. ಕಾಲಾಂತರದಲ್ಲಿ ಅವರನ್ನು ದೇವರೆಂದೇ ನಂಬಲಾಯ್ತು. ಅವತಾರಗಳ ಕತೆಯೆಲ್ಲಾ ಕೆಲಸವಿಲ್ಲದ ಮೇಧಾವಿಗಳು ಬರೆದ ಸಾಹಿತ್ಯವಷ್ಟೇ.
ದೇವರಿದ್ದಾನೆ ಎಂದು ನಂಬಿರುವ, ಹಾಗೂ ಹಾಗೆ ವಾದಿಸುವವರ ದೊಡ್ಡ ಅಸ್ತ್ರವಾಗಿದ್ದುದೇ ಈ ಲೋಕದ ಸೃಷ್ಟಿ. ಏಕೆಂದರೆ ಶೂನ್ಯದಿಂದ ಈ ಲೋಕ ಸೃಷ್ಟಿಯಾಯ್ತು ಎಂಬುದನ್ನು ಎಂಥವರೂ ಅರಗಿಸಿಕೊಳ್ಳುವುದು ಕಷ್ಟ. ಇದೊಂದು ಕಾರಣದಿಂದಲೇ ದೇವರಿಲ್ಲ ಅನ್ನಿಸಿದರೂ ಸಹ 'ಈ ಬ್ರಹ್ಮಾಂಡ ಸೃಷ್ಟಿ ಆಗಿದೆಯೆಂದರೆ ಒಂದು ವೇಳೆ ದೇವರಿದ್ದರೂ ಇರಬಹುದು' ಎಂಬ ಅನುಮಾನವನ್ನು ಹುಟ್ಟು ಹಾಕದಿರದು. ವಿಜ್ಞಾನಿಗಳಿಗೂ ಈ ನಿಗೂಢವನ್ನು ಬೇಧಿಸುವುದು ಸಾಧ್ಯವಾಗದೇ ಇದ್ದಾಗ ಆಸ್ಥಿಕರ ಕೈ ಮೇಲಾಗಿತ್ತೆನ್ನಬಹುದು. ಈ ಕಾರಣವೇ ದೇವರ ಅಸ್ಥಿತ್ವವನ್ನು ಸಾಧಿಸಲು ಹೊರಡುವವರ ದೊಡ್ಡ ಅಸ್ತ್ರವಾಗಿ ಇಷ್ಟು ದಿನವೂ ಇತ್ತು.
ಆದರೆ ಕಡೆಗೂ ವಿಜ್ಞಾನಿಗಳು ಗೆಲುವಿನ ಹೊಸ್ತಿಲಿಗೆ ಬಂದಿದ್ದಾರೆ. ಈ ಬ್ರಹ್ಮಾಂಡದ ಸೃಷ್ಟಿಗೆ ದೇವರು ಕಾರಣವಲ್ಲ... ದೇವಕಣ ಕಾರಣ ಎಂಬ ಮಾಹಿತಿಯನ್ನು ಹೊರ ಹಾಕಿದ್ದಾರೆ. ಎರಡು ಅಣುಗಳು ಬೆಳಕಿಗಿಂತಲು ಹೆಚ್ಚಿನ ವೇಗದಲ್ಲಿ ಒಂದಕ್ಕೊಂದು ಢಿಕ್ಕಿ ಹೊಡೆದಾಗ ಅಪಾರ ದ್ರವ್ಯರಾಶಿ ಬಿಡುಗಡೆಯಾಗುತ್ತದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಜನ ಸಾಮಾನ್ಯರಿಗೂ ಅರ್ಥವಾಗುವಂತೆ ಇದನ್ನು ವಿಜ್ಞಾನಿಗಳು ಸಾದರಪಡಿಸಲು ಇನ್ನಷ್ಟು ಕಾಲ ಹಿಡಿಯಬಹುದು. ಆದರೆ ದೇವರ ಹೆಸರಲ್ಲೇ ಬದುಕುತ್ತಾ, ದೇವರ ಹೆಸರಲ್ಲೇ ಧರ್ಮ ಕಟ್ಟಿ, ದೇವರ ಹೆಸರಲ್ಲೇ ಯುದ್ಧ ಬಯೋತ್ಪಾಧನೆ ಮಾಡುವವರಿಗೆಲ್ಲಾ ಈ 'ದೇವಕಣ' ಸಣ್ಣಗೆ ನಡುಕ ತಂದಿರಬಹುದು... ತಮ್ಮ ಬಂಡವಾಳ ಬಯಲಾದೀತೆಂದು !


ಕಾಮೆಂಟ್ಗಳು