ಯಾವ ಟಿವಿ ವಾಹಿನಿ ನೋಡಿದರೂ ಅಲ್ಲೊಬ್ಬ ನಕಲಿ ಜ್ಯೋತಿಷಿ ಕುಳಿತು ಏನೇನೋ ಪುರಾನ ಹೇಳುತ್ತಿರುತ್ತಾನೆ. ಭಾನುವಾರವಂತೂ ಒಂದೊಂದು ವಾಹಿನಿಯಲ್ಲಿ ಒಬ್ಬೊಬ್ಬರು ತಪ್ಪದೇ ಹಾಜರಾಗುತ್ತಾರೆ. ಒಬ್ಬೊಬ್ಬರದೂ ಒಂದೊಂದು ಆಕಾರ, ವಿಚಾರ. ಒಬ್ಬ ದಢೂತಿಯಾದರೆ ಇನ್ನೊಬ್ಬ ಬಡಕಲು. ಆದರೆ ಇವರೆಲ್ಲರ ಅಜೆಂಡಾ ಮಾತ್ರ ಹಣ ಸಂಪಾದಿಸುವುದು. ಇವರ ಭೇಟಿಗೂ ತಿಂಗಳುಗಟ್ಟಲೇ ಕಾಯಬೇಕಂತೆ... ಅಪಾಯಿಂಟ್ ತೆಗೆದುಕೊಂಡು !
ಒಬ್ಬ ಜ್ಯೋತಿಷಿ ಒಂದು ರಾಶಿಯವರಿಗೆ ಈ ವಾರ ಒಳ್ಳೆಯದಾಗುತ್ತೆ ಅಂದರೆ ಇನ್ನೊಬ್ಬ ಅದೇ ರಾಶಿಯವರಿಗೆ "ಈ ವಾರ ಸರಿ ಇಲ್ಲ, ಹುಶಾರಾಗಿರಿ, ಪ್ರಾಣವೇ ಹೋದರೂ ಹೋಗಬಹುದು!" ಎಂದು ಭಯ ಹುಟ್ಟಿಸುತ್ತಾನೆ. ಈ ಜ್ಯೋತಿಷಿಗಳೆಲ್ಲಾ ನಿಜ ಹೇಳುವುದಾದರೆ ಎಲ್ಲರೂ ಒಂದೇ ರೀತಿ ಹೇಳಬೇಕಲ್ಲ ಎಂಬ ಕನಿಷ್ಟ ಜ್ಞಾನ ಜನರಲ್ಲೂ ಇಲ್ಲ. ಮೊದಲನೆಯದಾಗಿ ಜನರು ಯಾವುದಾದರೊಂದು ವಾಹಿನಿಯ ಒಬ್ಬ ಜ್ಯೋತಿಷಿಯನ್ನು ನಂಬಿದರೆ ಮುಗಿಯಿತು. ಅವನು ಹೇಳಿದ್ದು ವೇದವಾಕ್ಯ. ಬೇರೆ ವಾಹಿನಿಯವ ಹೇಳೋದೆಲ್ಲಾ ಬೊಗಳೆ. ಸ್ವಲ್ಪ ದಿನದಲ್ಲಿ ಈತನ ಅಸಲಿಯತ್ತೂ ತಿಳಿಯಿತೆಂದರೆ ಮತ್ತೊಂದು ವಾಹಿನಿಯ ಮತ್ತೊಬ್ಬ ಸುಳ್ಳುಬಾಕನ ಮಾತಿಗೆ ಕಿವಿಯೊಡ್ಡಿ ಕುಳಿತುಬಿಡುತ್ತಾರೆ. ಹೀಗಾಗಿ ಈ ವಾಹಿನಿಗಳಿಗೂ, ಸುಳ್ಳು ವಾಜ್ಮಯಿಗಳಿಗೂ ಒಳ್ಳೆಯ ಬೇಡಿಕೆ.
ಇಲ್ಲ ಸಲ್ಲದ ಕಂತೆ ಪುರಾಣ ಹೇಳಿ ನೆಮ್ಮದಿಯಾಗಿದ್ದವರ ನೆಮ್ಮದಿಯನ್ನೂ ಕೆಡಿಸುತ್ತಾರೆ. ಇವರು ಹೇಳುವ ಯಾವ ಭವಿಷ್ಯಕ್ಕೆ ಏನು ಪುರಾವೆ ಒದಗಿಸುತ್ತಾರೆ ? ಏನು ಪ್ರಯೋಗ ನಡೆಸಿದ್ದಾರೆ. ಯಾವ ಆಧಾರದಲ್ಲಿ ಭವಿಷ್ಯ ನುಡಿಯುತ್ತಾರೆ ? ಇವರು ಹೇಳಿದ್ದು ನಡೆಯುತ್ತಾ ? ಎಲ್ಲಾ ಬೊಗಳೆ. ಕೇವಲ ಊಹೆಯ ಮೇರೆಗೆ ಇವರು ಹೇಳುತ್ತಾ ಹೋಗುತ್ತಾರೆ. ಕಾಕತಾಳೀಯವೆಂಬಂತೆ ಕೆಲವರಿಗೆ ಅದು ನಿಜವೂ ಆಗುತ್ತದೆ. ಇದನ್ನು ನಾನು ಸ್ವತಃ ಕಂಡುಕೊಂಡಿದ್ದೇನೆ. ಅದೇನೆಂದರೆ ನನ್ನ ಸ್ನೇಹಿತರ ವಲಯದಲ್ಲಿ ಅನೇಕರಿಗೆ "ನಿಮಗೆ ಈ ಬಾರಿ ಗಂಡು ಮಗುವಾಗುತ್ತದೆ, ಈ ಬರಿ ಹೆಣ್ಣು ಮಗುವಾಗುತ್ತದೆ" ಎಂದು ಹೇಳಿದ್ದೇನೆ. ಇದರಲ್ಲಿ ತುಂಬಾ ಸಲ ನಾನು ಹೇಳಿದ್ದೇ ಆಗಿದೆ. ಹಾಗಂತ ನಾನು ಜ್ಯೋತಿಷಿಯಲ್ಲ. ನಾನು ತರ್ಕಕ್ಕೆ ಬಳಸಿದ್ದು ಅವರ ಮನೆಯಲ್ಲಿ ಆಗಿರುವ ಹೆಣ್ಣು-ಗಂಡು ಮಕ್ಕಳ ಜನನದ ಲೆಕ್ಕಾಚಾರವನ್ನು ಮಾತ್ರ. ಒಂದು ಅಂದಾಜಿನ ಮೇಲೆ ಹೇಳಿವ ಇಂತಹ ವಿಚಾರಗಳು ಬಹುಪಾಲು ಸತ್ಯವೇ ಆಗಿ ಬಿಡುತ್ತವೆ. ನಿಜವಾದಾಗ ಹೆಳಿದವರನ್ನು ನೆನಪಿಸಿಕೊಳ್ಳುವ ಜನ ಸುಳ್ಳಾದಾಗ ನೆನಪು ಮಾಡಿಕೊಳ್ಳುವುದಿಲ್ಲ. ಇದು ಜ್ಯೋತಿಷಿಗಳಿಗೆ ವರದಾನ. ಒಂದು ವೇಳೆ ನೆನಪಿಸಿಕೊಂಡು ಆ ಜ್ಯೋತಿಷಿಯಲ್ಲಿ ನೀವು ಹೇಳಿದ್ದು ಸುಳ್ಳಾಯ್ತಲ್ಲ ಎಂದು ಕೇಳಿದರೂ ಅದಕ್ಕೆ ಜ್ಯೋತಿಷಿ "ಕ್ಷುದ್ರ ಗ್ರಹವೊಂದು ಅಡ್ಡ ಹೋದುದರ ಪರಿಣಾಮ ನಿಮ್ಮ ರಾಶಿಫಲದಲ್ಲಿ ಕೊಂಚ ಏರುಪೇರಾಗಿ ನಾನು ಹೇಳಿದ್ದು ನಡೆದಿಲ್ಲ. ಅದನ್ನು ಸರಿ ಪಡಿಸಲು ಒಂದು ಪೂಜೆ ಮಾಡಬೇಕು" ಎಂದು ಮತ್ತೊಂದು ಖರ್ಚನ್ನು ನಿಮ್ಮ ಮುಂದಿಡುತ್ತಾನಷ್ಟೇ!
ಜ್ಯೋತಿಷಿಗಳೇನೋ ಸುಳ್ಳು ಹೇಳಿ ಬದುಕಲು ತಯಾರಿರುತ್ತಾರೆ, ಆದರೆ ಈ ಜವಾಬ್ದಾರಿಯುತ ಮಾಧ್ಯಮಗಳಿಗದರೂ ಬುದ್ಧಿ ಬೇಡವೇ ? ಊರವರಿಗೆಲ್ಲಾ ಬುದ್ಧಿ ಹೇಳುವ ಇವರು ಪ್ರಕಟಿಸುವ ದಿನ ಭವಿಷ್ಯ ಎಷ್ಟು ಸಾಚಾ ಎಂದು ಗಮನಿಸಿದ್ದಾರಾ ? ಇವರು ಕರೆಸಿ ಒಂದು ಗಂಟೆ ಕೊರೆಸುವ ಜ್ಯೋತಿಷಿಗಳಿಂದ ಏನು ಲಾಭ ಎಂದು ಯೋಚಿಸಿದ್ದಾರಾ ?
ಮೊನ್ನೆ (೧೦.೦೭.೨೦೧೨) ಕನ್ನಡಪ್ರಭದಲ್ಲಿ ಅದ್ಯಾರೋ ಪುಣ್ಯಾತ್ಮ ಶಂಕದ ಬಗ್ಗೆ ಒಂದು ಲೇಖನ ಬರೆದಿದ್ದರು. ಅದರಲ್ಲಿ "ಶಂಕ ಊದಿದರೆ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ" ಎಂದು ಬರೆದಿದ್ದರು. ಅದನ್ನು ಓದಿ ನಗು ಬಂತು. ಎಲ್ಲಾ ಆಸ್ಪತ್ರೆಗಳಲ್ಲೂ ವೈದ್ಯರಿಗೆ ಒಂದೊಂದು ಶಂಕ ಕೊಟ್ಟು ಊದಲು ಹೇಳಬಹುದು. ಶಂಕ ಊದಿದರೆ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ ಎಂಬುದು ಎಂಥಾ ಮೂಢನಂಬಿಕೆ. ಅದು ಸಾಧ್ಯವಾಗುವುದಾದರೂ ಹೌದಾ ? ಅದನ್ನು ಇವರು ನಿರೂಪಿಸಬಲ್ಲರಾ ? ಒಂದು ವೇಳೆ ಹಾಗೆ ಆದರೂ ಪ್ರಕೃತಿಯಲ್ಲಿ ನಮಗೆ ಬೇಕಾದ ಸೂಕ್ಷ್ಮ ಜೀವಿಗಳೂ ಇವೆಯಲ್ಲ ? ಎಲ್ಲವೂ ಸಾಯುತ್ತವಾ? ಅಥವಾ ಬೇಡದ ಜೀವಿಗಳು ಮಾತ್ರ ಸಾಯುತ್ತವಾ ? ಇಂತಹ ಲೇಖನದಲ್ಲೂ ಅವರ ದೂರವಾಣಿ ಸಂಖ್ಯೆ ನೀಡಿರುತ್ತಾರೆ. ಅಂದರೆ ಕನ್ನಡಪ್ರಭದ ಮೂಲಕ ಒಂದಿಷ್ಟು ಅಮಾಯಕ ಓದುಗರು ಈ ನಕಲಿ ಜ್ಯೋತಿಷಿಗಳಿಗೆ ದುಡ್ಡು ಸುರಿದರು ಎಂದೇ ಅರ್ಥ. ಇದು ಎಲ್ಲಾ ಪತ್ರಿಕೆಗಳಿಗೂ ಅನ್ವಯವಾಗುತ್ತದೆ.
ಕನ್ನಡದಲ್ಲಿ ಒಂದೇ ಒಂದು ವೈಜ್ಞಾನಿಕ ವಾಹಿನಿ ಇಲ್ಲದಿರುವುದು ದುರಂತ. ಕಡೇ ಪಕ್ಷ ಇರುವ ವಾಹಿನಿಗಳಾದರೂ ತಮ್ಮ ಸಮಯವನ್ನು ಹೊಂದಿಸಿಕೊಂಡು (ಇಂತಹ ಅವೈಜ್ಞಾನಿಕ, ಅಸತ್ಯದ ಬೊಗಳೆಕೋರರನ್ನು ದೂರವಿಟ್ಟು) ಹೆಚ್ಚು ಹೆಚ್ಚು ವೈಜ್ಞಾನಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿ. ಹೀಗಂತ ಹೇಳಿದರೂ ಕಷ್ಟ. ಏಕೆಂದರೆ ಇವರಿಗೆ ವೈಜ್ಞಾನಿಕ ಅಂದರೆ ತಟ್ಟನೆ ಪ್ರಳಯ, ಸುನಾಮಿಗಲಂತಹ ಭಯಾನಕ ವಿಷಯಗಳಷ್ಟೇ ತೋಚುತ್ತವೆ. ಚಿಕ್ಕಪುಟ್ಟ ವೈಜ್ಞಾನಿಕ ವಿಷಯಗಳನ್ನೂ ಚೆನ್ನಾಗಿ ತೋರಿಸಬಹುದು ಎಂಬುದನ್ನು ನ್ಯಾಷನಲ್ ಜಿಯಾಗ್ರಾಫಿಕ್, ಡಿಸ್ಕವರಿ ಮುಂತಾದ ವಾಹಿನಿಗಳನ್ನು ನೋಡಿ ಕಲಿಯಬಹುದು.
ಕಾಮೆಂಟ್ಗಳು