ವಿಷಯಕ್ಕೆ ಹೋಗಿ

ಮೂಢನಂಬಿಕೆ ಬಿತ್ತುವ ಮಾಧ್ಯಗಳು !

ಯಾವ ಟಿವಿ ವಾಹಿನಿ ನೋಡಿದರೂ ಅಲ್ಲೊಬ್ಬ ನಕಲಿ ಜ್ಯೋತಿಷಿ ಕುಳಿತು ಏನೇನೋ ಪುರಾನ ಹೇಳುತ್ತಿರುತ್ತಾನೆ. ಭಾನುವಾರವಂತೂ ಒಂದೊಂದು ವಾಹಿನಿಯಲ್ಲಿ ಒಬ್ಬೊಬ್ಬರು ತಪ್ಪದೇ ಹಾಜರಾಗುತ್ತಾರೆ. ಒಬ್ಬೊಬ್ಬರದೂ ಒಂದೊಂದು ಆಕಾರ, ವಿಚಾರ. ಒಬ್ಬ ದಢೂತಿಯಾದರೆ ಇನ್ನೊಬ್ಬ ಬಡಕಲು. ಆದರೆ ಇವರೆಲ್ಲರ ಅಜೆಂಡಾ ಮಾತ್ರ ಹಣ ಸಂಪಾದಿಸುವುದು. ಇವರ ಭೇಟಿಗೂ ತಿಂಗಳುಗಟ್ಟಲೇ ಕಾಯಬೇಕಂತೆ... ಅಪಾಯಿಂಟ್‌ ತೆಗೆದುಕೊಂಡು ! 

ಒಬ್ಬ ಜ್ಯೋತಿಷಿ ಒಂದು ರಾಶಿಯವರಿಗೆ ಈ ವಾರ ಒಳ್ಳೆಯದಾಗುತ್ತೆ ಅಂದರೆ ಇನ್ನೊಬ್ಬ ಅದೇ ರಾಶಿಯವರಿಗೆ "ಈ ವಾರ ಸರಿ ಇಲ್ಲ, ಹುಶಾರಾಗಿರಿ, ಪ್ರಾಣವೇ ಹೋದರೂ ಹೋಗಬಹುದು!" ಎಂದು ಭಯ ಹುಟ್ಟಿಸುತ್ತಾನೆ. ಈ ಜ್ಯೋತಿಷಿಗಳೆಲ್ಲಾ ನಿಜ ಹೇಳುವುದಾದರೆ ಎಲ್ಲರೂ ಒಂದೇ ರೀತಿ ಹೇಳಬೇಕಲ್ಲ ಎಂಬ ಕನಿಷ್ಟ ಜ್ಞಾನ ಜನರಲ್ಲೂ ಇಲ್ಲ. ಮೊದಲನೆಯದಾಗಿ ಜನರು ಯಾವುದಾದರೊಂದು ವಾಹಿನಿಯ ಒಬ್ಬ ಜ್ಯೋತಿಷಿಯನ್ನು ನಂಬಿದರೆ ಮುಗಿಯಿತು. ಅವನು ಹೇಳಿದ್ದು ವೇದವಾಕ್ಯ. ಬೇರೆ ವಾಹಿನಿಯವ ಹೇಳೋದೆಲ್ಲಾ ಬೊಗಳೆ. ಸ್ವಲ್ಪ ದಿನದಲ್ಲಿ ಈತನ ಅಸಲಿಯತ್ತೂ ತಿಳಿಯಿತೆಂದರೆ ಮತ್ತೊಂದು ವಾಹಿನಿಯ ಮತ್ತೊಬ್ಬ ಸುಳ್ಳುಬಾಕನ ಮಾತಿಗೆ ಕಿವಿಯೊಡ್ಡಿ ಕುಳಿತುಬಿಡುತ್ತಾರೆ. ಹೀಗಾಗಿ ಈ ವಾಹಿನಿಗಳಿಗೂ, ಸುಳ್ಳು ವಾಜ್ಮಯಿಗಳಿಗೂ ಒಳ್ಳೆಯ ಬೇಡಿಕೆ.

 ಇಲ್ಲ ಸಲ್ಲದ ಕಂತೆ ಪುರಾಣ ಹೇಳಿ ನೆಮ್ಮದಿಯಾಗಿದ್ದವರ ನೆಮ್ಮದಿಯನ್ನೂ ಕೆಡಿಸುತ್ತಾರೆ. ಇವರು ಹೇಳುವ ಯಾವ ಭವಿಷ್ಯಕ್ಕೆ ಏನು ಪುರಾವೆ ಒದಗಿಸುತ್ತಾರೆ ? ಏನು ಪ್ರಯೋಗ ನಡೆಸಿದ್ದಾರೆ. ಯಾವ ಆಧಾರದಲ್ಲಿ ಭವಿಷ್ಯ ನುಡಿಯುತ್ತಾರೆ ? ಇವರು ಹೇಳಿದ್ದು ನಡೆಯುತ್ತಾ ? ಎಲ್ಲಾ ಬೊಗಳೆ. ಕೇವಲ ಊಹೆಯ ಮೇರೆಗೆ ಇವರು ಹೇಳುತ್ತಾ ಹೋಗುತ್ತಾರೆ. ಕಾಕತಾಳೀಯವೆಂಬಂತೆ ಕೆಲವರಿಗೆ ಅದು ನಿಜವೂ ಆಗುತ್ತದೆ. ಇದನ್ನು ನಾನು ಸ್ವತಃ ಕಂಡುಕೊಂಡಿದ್ದೇನೆ. ಅದೇನೆಂದರೆ ನನ್ನ ಸ್ನೇಹಿತರ ವಲಯದಲ್ಲಿ ಅನೇಕರಿಗೆ "ನಿಮಗೆ ಈ ಬಾರಿ ಗಂಡು ಮಗುವಾಗುತ್ತದೆ, ಈ ಬರಿ ಹೆಣ್ಣು ಮಗುವಾಗುತ್ತದೆ" ಎಂದು ಹೇಳಿದ್ದೇನೆ. ಇದರಲ್ಲಿ ತುಂಬಾ ಸಲ ನಾನು ಹೇಳಿದ್ದೇ ಆಗಿದೆ. ಹಾಗಂತ ನಾನು ಜ್ಯೋತಿಷಿಯಲ್ಲ. ನಾನು ತರ್ಕಕ್ಕೆ ಬಳಸಿದ್ದು ಅವರ ಮನೆಯಲ್ಲಿ ಆಗಿರುವ ಹೆಣ್ಣು-ಗಂಡು ಮಕ್ಕಳ ಜನನದ ಲೆಕ್ಕಾಚಾರವನ್ನು ಮಾತ್ರ. ಒಂದು ಅಂದಾಜಿನ ಮೇಲೆ ಹೇಳಿವ ಇಂತಹ ವಿಚಾರಗಳು ಬಹುಪಾಲು ಸತ್ಯವೇ ಆಗಿ ಬಿಡುತ್ತವೆ. ನಿಜವಾದಾಗ ಹೆಳಿದವರನ್ನು ನೆನಪಿಸಿಕೊಳ್ಳುವ ಜನ ಸುಳ್ಳಾದಾಗ ನೆನಪು ಮಾಡಿಕೊಳ್ಳುವುದಿಲ್ಲ. ಇದು ಜ್ಯೋತಿಷಿಗಳಿಗೆ ವರದಾನ. ಒಂದು ವೇಳೆ ನೆನಪಿಸಿಕೊಂಡು ಆ ಜ್ಯೋತಿಷಿಯಲ್ಲಿ ನೀವು ಹೇಳಿದ್ದು ಸುಳ್ಳಾಯ್ತಲ್ಲ ಎಂದು ಕೇಳಿದರೂ ಅದಕ್ಕೆ ಜ್ಯೋತಿಷಿ "ಕ್ಷುದ್ರ ಗ್ರಹವೊಂದು ಅಡ್ಡ ಹೋದುದರ ಪರಿಣಾಮ ನಿಮ್ಮ ರಾಶಿಫಲದಲ್ಲಿ ಕೊಂಚ ಏರುಪೇರಾಗಿ ನಾನು ಹೇಳಿದ್ದು ನಡೆದಿಲ್ಲ. ಅದನ್ನು ಸರಿ ಪಡಿಸಲು ಒಂದು ಪೂಜೆ ಮಾಡಬೇಕು" ಎಂದು ಮತ್ತೊಂದು ಖರ್ಚನ್ನು ನಿಮ್ಮ ಮುಂದಿಡುತ್ತಾನಷ್ಟೇ!

ಜ್ಯೋತಿಷಿಗಳೇನೋ ಸುಳ್ಳು ಹೇಳಿ ಬದುಕಲು ತಯಾರಿರುತ್ತಾರೆ, ಆದರೆ ಈ ಜವಾಬ್ದಾರಿಯುತ ಮಾಧ್ಯಮಗಳಿಗದರೂ ಬುದ್ಧಿ ಬೇಡವೇ ? ಊರವರಿಗೆಲ್ಲಾ ಬುದ್ಧಿ ಹೇಳುವ ಇವರು ಪ್ರಕಟಿಸುವ ದಿನ ಭವಿಷ್ಯ ಎಷ್ಟು ಸಾಚಾ ಎಂದು ಗಮನಿಸಿದ್ದಾರಾ ? ಇವರು ಕರೆಸಿ ಒಂದು ಗಂಟೆ ಕೊರೆಸುವ ಜ್ಯೋತಿಷಿಗಳಿಂದ ಏನು ಲಾಭ ಎಂದು ಯೋಚಿಸಿದ್ದಾರಾ ? 

ಮೊನ್ನೆ (೧೦.೦೭.೨೦೧೨) ಕನ್ನಡಪ್ರಭದಲ್ಲಿ ಅದ್ಯಾರೋ ಪುಣ್ಯಾತ್ಮ ಶಂಕದ ಬಗ್ಗೆ ಒಂದು ಲೇಖನ ಬರೆದಿದ್ದರು. ಅದರಲ್ಲಿ "ಶಂಕ ಊದಿದರೆ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ" ಎಂದು ಬರೆದಿದ್ದರು. ಅದನ್ನು ಓದಿ ನಗು ಬಂತು. ಎಲ್ಲಾ ಆಸ್ಪತ್ರೆಗಳಲ್ಲೂ ವೈದ್ಯರಿಗೆ ಒಂದೊಂದು ಶಂಕ ಕೊಟ್ಟು ಊದಲು ಹೇಳಬಹುದು. ಶಂಕ ಊದಿದರೆ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ ಎಂಬುದು ಎಂಥಾ ಮೂಢನಂಬಿಕೆ.  ಅದು ಸಾಧ್ಯವಾಗುವುದಾದರೂ ಹೌದಾ ? ಅದನ್ನು ಇವರು ನಿರೂಪಿಸಬಲ್ಲರಾ ? ಒಂದು ವೇಳೆ ಹಾಗೆ ಆದರೂ ಪ್ರಕೃತಿಯಲ್ಲಿ ನಮಗೆ ಬೇಕಾದ ಸೂಕ್ಷ್ಮ ಜೀವಿಗಳೂ ಇವೆಯಲ್ಲ ? ಎಲ್ಲವೂ ಸಾಯುತ್ತವಾ? ಅಥವಾ ಬೇಡದ ಜೀವಿಗಳು ಮಾತ್ರ ಸಾಯುತ್ತವಾ ? ಇಂತಹ ಲೇಖನದಲ್ಲೂ ಅವರ ದೂರವಾಣಿ ಸಂಖ್ಯೆ ನೀಡಿರುತ್ತಾರೆ. ಅಂದರೆ ಕನ್ನಡಪ್ರಭದ ಮೂಲಕ ಒಂದಿಷ್ಟು ಅಮಾಯಕ ಓದುಗರು ಈ ನಕಲಿ ಜ್ಯೋತಿಷಿಗಳಿಗೆ ದುಡ್ಡು ಸುರಿದರು ಎಂದೇ ಅರ್ಥ. ಇದು ಎಲ್ಲಾ ಪತ್ರಿಕೆಗಳಿಗೂ ಅನ್ವಯವಾಗುತ್ತದೆ.

ಕನ್ನಡದಲ್ಲಿ ಒಂದೇ ಒಂದು ವೈಜ್ಞಾನಿಕ ವಾಹಿನಿ ಇಲ್ಲದಿರುವುದು ದುರಂತ. ಕಡೇ ಪಕ್ಷ ಇರುವ ವಾಹಿನಿಗಳಾದರೂ ತಮ್ಮ ಸಮಯವನ್ನು ಹೊಂದಿಸಿಕೊಂಡು (ಇಂತಹ ಅವೈಜ್ಞಾನಿಕ, ಅಸತ್ಯದ ಬೊಗಳೆಕೋರರನ್ನು ದೂರವಿಟ್ಟು) ಹೆಚ್ಚು ಹೆಚ್ಚು ವೈಜ್ಞಾನಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿ. ಹೀಗಂತ ಹೇಳಿದರೂ ಕಷ್ಟ. ಏಕೆಂದರೆ ಇವರಿಗೆ ವೈಜ್ಞಾನಿಕ ಅಂದರೆ ತಟ್ಟನೆ ಪ್ರಳಯ, ಸುನಾಮಿಗಲಂತಹ ಭಯಾನಕ ವಿಷಯಗಳಷ್ಟೇ ತೋಚುತ್ತವೆ. ಚಿಕ್ಕಪುಟ್ಟ ವೈಜ್ಞಾನಿಕ ವಿಷಯಗಳನ್ನೂ ಚೆನ್ನಾಗಿ ತೋರಿಸಬಹುದು ಎಂಬುದನ್ನು ನ್ಯಾಷನಲ್ ಜಿಯಾಗ್ರಾಫಿಕ್, ಡಿಸ್ಕವರಿ ಮುಂತಾದ ವಾಹಿನಿಗಳನ್ನು ನೋಡಿ ಕಲಿಯಬಹುದು.

ಕಾಮೆಂಟ್‌ಗಳು

harsha ಹೇಳಿದ್ದಾರೆ…
very nice. Keep on writing like this.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...