ವಿಷಯಕ್ಕೆ ಹೋಗಿ

ಮೂಢನಂಬಿಕೆ ಬಿತ್ತುವ ಮಾಧ್ಯಗಳು !

ಯಾವ ಟಿವಿ ವಾಹಿನಿ ನೋಡಿದರೂ ಅಲ್ಲೊಬ್ಬ ನಕಲಿ ಜ್ಯೋತಿಷಿ ಕುಳಿತು ಏನೇನೋ ಪುರಾನ ಹೇಳುತ್ತಿರುತ್ತಾನೆ. ಭಾನುವಾರವಂತೂ ಒಂದೊಂದು ವಾಹಿನಿಯಲ್ಲಿ ಒಬ್ಬೊಬ್ಬರು ತಪ್ಪದೇ ಹಾಜರಾಗುತ್ತಾರೆ. ಒಬ್ಬೊಬ್ಬರದೂ ಒಂದೊಂದು ಆಕಾರ, ವಿಚಾರ. ಒಬ್ಬ ದಢೂತಿಯಾದರೆ ಇನ್ನೊಬ್ಬ ಬಡಕಲು. ಆದರೆ ಇವರೆಲ್ಲರ ಅಜೆಂಡಾ ಮಾತ್ರ ಹಣ ಸಂಪಾದಿಸುವುದು. ಇವರ ಭೇಟಿಗೂ ತಿಂಗಳುಗಟ್ಟಲೇ ಕಾಯಬೇಕಂತೆ... ಅಪಾಯಿಂಟ್‌ ತೆಗೆದುಕೊಂಡು ! 

ಒಬ್ಬ ಜ್ಯೋತಿಷಿ ಒಂದು ರಾಶಿಯವರಿಗೆ ಈ ವಾರ ಒಳ್ಳೆಯದಾಗುತ್ತೆ ಅಂದರೆ ಇನ್ನೊಬ್ಬ ಅದೇ ರಾಶಿಯವರಿಗೆ "ಈ ವಾರ ಸರಿ ಇಲ್ಲ, ಹುಶಾರಾಗಿರಿ, ಪ್ರಾಣವೇ ಹೋದರೂ ಹೋಗಬಹುದು!" ಎಂದು ಭಯ ಹುಟ್ಟಿಸುತ್ತಾನೆ. ಈ ಜ್ಯೋತಿಷಿಗಳೆಲ್ಲಾ ನಿಜ ಹೇಳುವುದಾದರೆ ಎಲ್ಲರೂ ಒಂದೇ ರೀತಿ ಹೇಳಬೇಕಲ್ಲ ಎಂಬ ಕನಿಷ್ಟ ಜ್ಞಾನ ಜನರಲ್ಲೂ ಇಲ್ಲ. ಮೊದಲನೆಯದಾಗಿ ಜನರು ಯಾವುದಾದರೊಂದು ವಾಹಿನಿಯ ಒಬ್ಬ ಜ್ಯೋತಿಷಿಯನ್ನು ನಂಬಿದರೆ ಮುಗಿಯಿತು. ಅವನು ಹೇಳಿದ್ದು ವೇದವಾಕ್ಯ. ಬೇರೆ ವಾಹಿನಿಯವ ಹೇಳೋದೆಲ್ಲಾ ಬೊಗಳೆ. ಸ್ವಲ್ಪ ದಿನದಲ್ಲಿ ಈತನ ಅಸಲಿಯತ್ತೂ ತಿಳಿಯಿತೆಂದರೆ ಮತ್ತೊಂದು ವಾಹಿನಿಯ ಮತ್ತೊಬ್ಬ ಸುಳ್ಳುಬಾಕನ ಮಾತಿಗೆ ಕಿವಿಯೊಡ್ಡಿ ಕುಳಿತುಬಿಡುತ್ತಾರೆ. ಹೀಗಾಗಿ ಈ ವಾಹಿನಿಗಳಿಗೂ, ಸುಳ್ಳು ವಾಜ್ಮಯಿಗಳಿಗೂ ಒಳ್ಳೆಯ ಬೇಡಿಕೆ.

 ಇಲ್ಲ ಸಲ್ಲದ ಕಂತೆ ಪುರಾಣ ಹೇಳಿ ನೆಮ್ಮದಿಯಾಗಿದ್ದವರ ನೆಮ್ಮದಿಯನ್ನೂ ಕೆಡಿಸುತ್ತಾರೆ. ಇವರು ಹೇಳುವ ಯಾವ ಭವಿಷ್ಯಕ್ಕೆ ಏನು ಪುರಾವೆ ಒದಗಿಸುತ್ತಾರೆ ? ಏನು ಪ್ರಯೋಗ ನಡೆಸಿದ್ದಾರೆ. ಯಾವ ಆಧಾರದಲ್ಲಿ ಭವಿಷ್ಯ ನುಡಿಯುತ್ತಾರೆ ? ಇವರು ಹೇಳಿದ್ದು ನಡೆಯುತ್ತಾ ? ಎಲ್ಲಾ ಬೊಗಳೆ. ಕೇವಲ ಊಹೆಯ ಮೇರೆಗೆ ಇವರು ಹೇಳುತ್ತಾ ಹೋಗುತ್ತಾರೆ. ಕಾಕತಾಳೀಯವೆಂಬಂತೆ ಕೆಲವರಿಗೆ ಅದು ನಿಜವೂ ಆಗುತ್ತದೆ. ಇದನ್ನು ನಾನು ಸ್ವತಃ ಕಂಡುಕೊಂಡಿದ್ದೇನೆ. ಅದೇನೆಂದರೆ ನನ್ನ ಸ್ನೇಹಿತರ ವಲಯದಲ್ಲಿ ಅನೇಕರಿಗೆ "ನಿಮಗೆ ಈ ಬಾರಿ ಗಂಡು ಮಗುವಾಗುತ್ತದೆ, ಈ ಬರಿ ಹೆಣ್ಣು ಮಗುವಾಗುತ್ತದೆ" ಎಂದು ಹೇಳಿದ್ದೇನೆ. ಇದರಲ್ಲಿ ತುಂಬಾ ಸಲ ನಾನು ಹೇಳಿದ್ದೇ ಆಗಿದೆ. ಹಾಗಂತ ನಾನು ಜ್ಯೋತಿಷಿಯಲ್ಲ. ನಾನು ತರ್ಕಕ್ಕೆ ಬಳಸಿದ್ದು ಅವರ ಮನೆಯಲ್ಲಿ ಆಗಿರುವ ಹೆಣ್ಣು-ಗಂಡು ಮಕ್ಕಳ ಜನನದ ಲೆಕ್ಕಾಚಾರವನ್ನು ಮಾತ್ರ. ಒಂದು ಅಂದಾಜಿನ ಮೇಲೆ ಹೇಳಿವ ಇಂತಹ ವಿಚಾರಗಳು ಬಹುಪಾಲು ಸತ್ಯವೇ ಆಗಿ ಬಿಡುತ್ತವೆ. ನಿಜವಾದಾಗ ಹೆಳಿದವರನ್ನು ನೆನಪಿಸಿಕೊಳ್ಳುವ ಜನ ಸುಳ್ಳಾದಾಗ ನೆನಪು ಮಾಡಿಕೊಳ್ಳುವುದಿಲ್ಲ. ಇದು ಜ್ಯೋತಿಷಿಗಳಿಗೆ ವರದಾನ. ಒಂದು ವೇಳೆ ನೆನಪಿಸಿಕೊಂಡು ಆ ಜ್ಯೋತಿಷಿಯಲ್ಲಿ ನೀವು ಹೇಳಿದ್ದು ಸುಳ್ಳಾಯ್ತಲ್ಲ ಎಂದು ಕೇಳಿದರೂ ಅದಕ್ಕೆ ಜ್ಯೋತಿಷಿ "ಕ್ಷುದ್ರ ಗ್ರಹವೊಂದು ಅಡ್ಡ ಹೋದುದರ ಪರಿಣಾಮ ನಿಮ್ಮ ರಾಶಿಫಲದಲ್ಲಿ ಕೊಂಚ ಏರುಪೇರಾಗಿ ನಾನು ಹೇಳಿದ್ದು ನಡೆದಿಲ್ಲ. ಅದನ್ನು ಸರಿ ಪಡಿಸಲು ಒಂದು ಪೂಜೆ ಮಾಡಬೇಕು" ಎಂದು ಮತ್ತೊಂದು ಖರ್ಚನ್ನು ನಿಮ್ಮ ಮುಂದಿಡುತ್ತಾನಷ್ಟೇ!

ಜ್ಯೋತಿಷಿಗಳೇನೋ ಸುಳ್ಳು ಹೇಳಿ ಬದುಕಲು ತಯಾರಿರುತ್ತಾರೆ, ಆದರೆ ಈ ಜವಾಬ್ದಾರಿಯುತ ಮಾಧ್ಯಮಗಳಿಗದರೂ ಬುದ್ಧಿ ಬೇಡವೇ ? ಊರವರಿಗೆಲ್ಲಾ ಬುದ್ಧಿ ಹೇಳುವ ಇವರು ಪ್ರಕಟಿಸುವ ದಿನ ಭವಿಷ್ಯ ಎಷ್ಟು ಸಾಚಾ ಎಂದು ಗಮನಿಸಿದ್ದಾರಾ ? ಇವರು ಕರೆಸಿ ಒಂದು ಗಂಟೆ ಕೊರೆಸುವ ಜ್ಯೋತಿಷಿಗಳಿಂದ ಏನು ಲಾಭ ಎಂದು ಯೋಚಿಸಿದ್ದಾರಾ ? 

ಮೊನ್ನೆ (೧೦.೦೭.೨೦೧೨) ಕನ್ನಡಪ್ರಭದಲ್ಲಿ ಅದ್ಯಾರೋ ಪುಣ್ಯಾತ್ಮ ಶಂಕದ ಬಗ್ಗೆ ಒಂದು ಲೇಖನ ಬರೆದಿದ್ದರು. ಅದರಲ್ಲಿ "ಶಂಕ ಊದಿದರೆ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ" ಎಂದು ಬರೆದಿದ್ದರು. ಅದನ್ನು ಓದಿ ನಗು ಬಂತು. ಎಲ್ಲಾ ಆಸ್ಪತ್ರೆಗಳಲ್ಲೂ ವೈದ್ಯರಿಗೆ ಒಂದೊಂದು ಶಂಕ ಕೊಟ್ಟು ಊದಲು ಹೇಳಬಹುದು. ಶಂಕ ಊದಿದರೆ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ ಎಂಬುದು ಎಂಥಾ ಮೂಢನಂಬಿಕೆ.  ಅದು ಸಾಧ್ಯವಾಗುವುದಾದರೂ ಹೌದಾ ? ಅದನ್ನು ಇವರು ನಿರೂಪಿಸಬಲ್ಲರಾ ? ಒಂದು ವೇಳೆ ಹಾಗೆ ಆದರೂ ಪ್ರಕೃತಿಯಲ್ಲಿ ನಮಗೆ ಬೇಕಾದ ಸೂಕ್ಷ್ಮ ಜೀವಿಗಳೂ ಇವೆಯಲ್ಲ ? ಎಲ್ಲವೂ ಸಾಯುತ್ತವಾ? ಅಥವಾ ಬೇಡದ ಜೀವಿಗಳು ಮಾತ್ರ ಸಾಯುತ್ತವಾ ? ಇಂತಹ ಲೇಖನದಲ್ಲೂ ಅವರ ದೂರವಾಣಿ ಸಂಖ್ಯೆ ನೀಡಿರುತ್ತಾರೆ. ಅಂದರೆ ಕನ್ನಡಪ್ರಭದ ಮೂಲಕ ಒಂದಿಷ್ಟು ಅಮಾಯಕ ಓದುಗರು ಈ ನಕಲಿ ಜ್ಯೋತಿಷಿಗಳಿಗೆ ದುಡ್ಡು ಸುರಿದರು ಎಂದೇ ಅರ್ಥ. ಇದು ಎಲ್ಲಾ ಪತ್ರಿಕೆಗಳಿಗೂ ಅನ್ವಯವಾಗುತ್ತದೆ.

ಕನ್ನಡದಲ್ಲಿ ಒಂದೇ ಒಂದು ವೈಜ್ಞಾನಿಕ ವಾಹಿನಿ ಇಲ್ಲದಿರುವುದು ದುರಂತ. ಕಡೇ ಪಕ್ಷ ಇರುವ ವಾಹಿನಿಗಳಾದರೂ ತಮ್ಮ ಸಮಯವನ್ನು ಹೊಂದಿಸಿಕೊಂಡು (ಇಂತಹ ಅವೈಜ್ಞಾನಿಕ, ಅಸತ್ಯದ ಬೊಗಳೆಕೋರರನ್ನು ದೂರವಿಟ್ಟು) ಹೆಚ್ಚು ಹೆಚ್ಚು ವೈಜ್ಞಾನಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿ. ಹೀಗಂತ ಹೇಳಿದರೂ ಕಷ್ಟ. ಏಕೆಂದರೆ ಇವರಿಗೆ ವೈಜ್ಞಾನಿಕ ಅಂದರೆ ತಟ್ಟನೆ ಪ್ರಳಯ, ಸುನಾಮಿಗಲಂತಹ ಭಯಾನಕ ವಿಷಯಗಳಷ್ಟೇ ತೋಚುತ್ತವೆ. ಚಿಕ್ಕಪುಟ್ಟ ವೈಜ್ಞಾನಿಕ ವಿಷಯಗಳನ್ನೂ ಚೆನ್ನಾಗಿ ತೋರಿಸಬಹುದು ಎಂಬುದನ್ನು ನ್ಯಾಷನಲ್ ಜಿಯಾಗ್ರಾಫಿಕ್, ಡಿಸ್ಕವರಿ ಮುಂತಾದ ವಾಹಿನಿಗಳನ್ನು ನೋಡಿ ಕಲಿಯಬಹುದು.

ಕಾಮೆಂಟ್‌ಗಳು

harsha ಹೇಳಿದ್ದಾರೆ…
very nice. Keep on writing like this.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಗುರುವಿನಂತಹ ಆಂಟಿಯಿರಬೇಕು

ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ ಆದರೂ ಎಲ್ಲರಿಗೂ ಚಿಕ್ಕಮ್ಮ ಇರುವ ಸಂದರ್ಭ ಕಡಿಮೆ. ಇದ್ದರೂ ನಾವು ಬಯಸುವಂತಹ ದೇವರಂತಹ ಅಥವಾ ಗುರುವಿನಂತಹ ಆಂಟಿಯಾಗಿರಲೂ ಸಾಧ್ಯವಿಲ್ಲ. ಆಗ ಬೇರೆ ಯಾರೋ ಒಬ್ಬರು ಆ ಜಾಗಕ್ಕೆ ಬಂದರೆ ಉತ್ತಮ. ಆದರಲ್ಲೂ ಟೀನೇಜ್ನ ಹುಡುಗ ಹುಡುಗಿಯರಿಗೆ ಅಪ್ಯಾಯಮಾನಳಾದ ಒಬ್ಬ ಆಂಟಿ ಇರಲೇಬೇಕು. ಆಕೆಗೆ ಮೂವತ್ತರಿಂದ ನಲವತ್ತು ವರ್ಷ ವಯಸ್ಸಿರಬೇಕು. ಅಂದಾಗ ಮದುವೆಯಾಗಿರುತ್ತದೆ. ಮತ್ತು ಹೆಚ್ಚು ಕಡಿಮೆ ಟೀನೇಜು ಪ್ರವೇಶಿಸುವ ಅಥವಾ ಪ್ರವೇಶಿಸಿರುವ ಮಕ್ಕಳಿರುತ್ತಾರೆ. ಗೆಳೆತನದ ಅನುಭವದ ಜೊತೆಗೆ ತಾಯ್ತನದ ಅನುಭವವೂ ಇರುತ್ತದೆ. ಆಕೆಯ ಮೇಲೆ ಗೌರವವೂ ಮೂಡುತ್ತದೆ. ಅವರು ನಮ್ಮನ್ನು ಪ್ರೀತಿಸುತ್ತಾಳೆ. ಒಳ್ಳೆಯ ಗುಣಗಳನ್ನು ಹೇಳಿಕೊಡುತ್ತಾಳೆ. ತಪ್ಪು ಮಾಡಿದಾಗ ಖಂಡಿಸುತ್ತಾಳೆ, ಜೋಕು ಹೇಳಿದಾಗ ನಕ್ಕು ಪ್ರೋತ್ಸಾಹಿಸುತ್ತಾಳೆ. ಅಲ್ಪಸ್ವಲ್ಪ ಪೋಲಿತನಗಳನ್ನೂ ಸಹಿಸುತ್ತಾಳೆ. ಹೆಚ್ಚಾದರೆ ತಿವಿದು ಬುದ್ಧಿ ಕಲಿಸುತ್ತಾಳೆ. ಹೆಚ್ಚಾಗಿ ಸ್ವಂತ ಚಿಕ್ಕಮ್ಮನಿಲ್ಲದೇ ಹೋದಾಗ ಗೆಳೆಯ ಗೆಳತಿಯರ ತಾಯಿ ಈ ಪಾತ್ರ ವಹಿಸಬಲ್ಲರು. ಬಾಲ್ಯದಲ್ಲಿ ನಮ್ಮನ್ನು ಎತ್ತಿ ಮುದ್ದಾಡಿದ ಪಕ್ಕದ ಮನೆ ಆಂಟಿ ಈ ಸ್ಥಾನ ತುಂಬಲು ತೀರಾ ಯೋಗ್ಯ. ಈ ಆ...

ದೈವಜ್ಞರು ತಂದಿಟ್ಟ ಪಜೀತಿ!

ಇದು ನಿನ್ನೆ ತಾನೆ ನಡೆದ ಘಟನೆ. ನನ್ನ ಆತ್ಮೀಯ ಸ್ನೇಹಿತನೊಬ್ಬ ಸ್ವಲ್ಪ ಆರ್ಥಿಕ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಆತನ ಸಂಬಂಧಿಕರು ಯಾರೋ ಪರಿಹಾರಕ್ಕಾಗಿ ಹಿರಿಯ ಆಧ್ಯಾತ್ಮಿಕವಾದಿಯಾದ ದೈವಜ್ಞ ಬಿರುದಾಂಕಿತ ಶ್ರೀ ಸೋಮಯಾಜಿಯವರ ಬಳಿ ಹೋಗಿ ಸಲಹೆ ಕೇಳುವಂತೆ ತಿಳಿಸಿದ್ದಾರೆ. ಅದರ ಪ್ರಕಾರ ನನ್ನ ಸ್ನೇಹಿತ ಮತ್ತು ಅವನ ಪತ್ನಿ ನಿನ್ನೆ ಇವರ ಬಳಿ ತೆರಳಿದ್ದಾರೆ. ಸಮಸ್ಯೆಯನ್ನು ಪೂರ್ತಿ ಆಲಿಸಿದ ಬಳಿಕ ಅವರು ನನ್ನ ಸ್ನೇಹಿತನಿಗೆ ಅವನ ಪತ್ನಿಯ ಎದುರೇ ಹೇಳಿದ್ದು "ನಿಮಗೆ ಈಗ ಅಥವಾ ಹಿಂದೆ ಬೇರೆ ಹೆಣ್ಣಿನೊಂದಿಗೆ ಸಂಬಂಧ ಇದ್ದುದರಿಂದ ಆಕೆಯ ಶಾಪ ತಟ್ಟಿದೆ. ಆ ಕಾರಣದಿಂದಲೇ ನೀವು ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದೀರ. ಇದರ ಪರಿಹಾರಕ್ಕೆ ಒಂದು ಪೂಜೆ ಮಾಡಬೇಕು." ಎಂದು. ನನ್ನ ಆ ಸ್ನೇಹಿತನನ್ನು ನಾನು ಹತ್ತು ವರ್ಷದಿಂದ ತೀರಾ ಹತ್ತಿರದಿಂದ ಬಲ್ಲೆ. ಆತನ ಖಾಸಗಿ ವಿಷಯ ಎಲ್ಲವೂ ನನಗೆ ಗೊತ್ತು. ಆತನಿಗೆ ಯಾವ ಹೆಣ್ಣಿನ ಸಂಬಂಧವೂ ಇರಲಿಲ್ಲ ಮತ್ತು ಇಲ್ಲ. ಅವರು ಇಂತಹ ಸುಳ್ಳು ಹೇಳುವ ಅಗತ್ಯ ಇರಲಿಲ್ಲ. ಒಂದು ವೇಳೆ ಅಂತಹುದೊಂದು ಸಂಬಂಧ ಇತ್ತು ಎಂದೇ ಭಾವಿಸಿದರೂ ಹಿರಿಯರಾದ ಸೋಮಯಾಜಿಯವರು ಅದನ್ನು ಆತನ ಪತ್ನಿಯ ಎದುರೇ ಹೇಳುವ ಅಗತ್ಯ ಏನಿತ್ತು ? ( ನಿಜಕ್ಕೂ ಗೆಳೆಯನ ಪತ್ನಿ ಗಂಡನ ಮೇಲೆ ಮುನಿಸಿಕೊಂಡಿದ್ದಾರೆ ) ಸಮಸ್ಯೆಯನ್ನು ಬಗೆ ಹರಿಸಿ ಎಂದು ಇಂತವರ ಬಳಿ ತೆರಳಿದರೆ ಹೊಸ ಸಮಸ್ಯೆಯನ್ನು ಹುಟ್ಟು ಹಾಕಿ ಕಳಿಸ್ತಾರಲ್ಲ...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...