ದಂಡುಪಾಳ್ಯದಲ್ಲಿ ನಟಿಸಿರುವ ಕರಿಸುಬ್ಬು ಅವರು ನನಗೆ ಪರಿಚಯವಿದ್ದುದರಿಂದ ಈ ಚಿತ್ರವನ್ನು ನೋಡಿದೆ. ನಾನು ನೋಡಿದ ಅತ್ಯಂತ ಕ್ರೂರ ದೃಶ್ಯಗಳ ಚಿತ್ರ ಇಂಗ್ಲೀಷ್ನ "ರಾಂಗ್ ಟರ್ನ್". ಅದರ ನಂತರದ ಸ್ಥಾನ ಮೊನ್ನೆ ಬಿಡುಗಡೆಯಾದ "ದಂಡುಪಾಳ್ಯ"ಕ್ಕೆ ಸಲ್ಲುತ್ತದೆ. ಆದರೆ ಮೊದಲಿನದು (ಬಹುಶಃ) ಕಾಲ್ಪನಿಕ ಕಥೆಯಾದರೆ ಎರಡನೆಯದು ಸತ್ಯಕಥೆ. ಹಾಗಾಗಿಯೇ ಇದು ಹೆಚ್ಚು ಮನವನ್ನು ಕಲಕುತ್ತದೆ, ಕುಲುಕುತ್ತದೆ.
"ಇಂತಹ ಸಮಾಜ ಘಾತುಕರ ಚಿತ್ರಗಳು ಬೇಕಾ?" ಎಂದು ಕೇಳುವವರಿಗೆ ಚಿತ್ರದ ಮೂಲಕವೇ ನಿರ್ದೇಶಕ ಶ್ರೀನಿವಾಸ ರಾಜು ಉತ್ತರ ಹೇಳಿದ್ದಾರೆ. ಹಾಗೆ ನೋಡಿದರೆ ಕನ್ನಡದಲ್ಲಿ ಬಂದ ನೂರಾರು ರೌಡಿಯಿಸಂ ಚಿತ್ರಗಳಲ್ಲಿ ಓಂ, ಕರಿಯ, ಜೋಗಿ ಮುಂತಾದ ಬೆರಳೆಣಿಕೆಯ ಚಿತ್ರಗಳನ್ನುಳಿದು ಯಾವುದರಲ್ಲಿಯೂ ಒಂದು ಸಂದೇಶವಿಲ್ಲ. ಅಂತಹ ಚಿತ್ರಗಳ ಸಾಲಿಗೆ ಸೇರದಂತೆ ಕರಾರುವಾಕ್ ಆಗಿ ನೋಡಿಕೊಂಡಿದ್ದಾರೆ ಶ್ರೀನಿವಾಸರಾಜು.
ಚಿತ್ರದಲ್ಲಿ ಕೊಲೆ ಮತ್ತು ಅತ್ಯಾಚಾರದ ಸಾಲು ಸಾಲು ದೃಶ್ಯಗಳಿವೆ. ಆದರೆ ಯಾವುದನ್ನೂ ವಿನಾಕಾರಣ ತುರುಕಿಲ್ಲ. ಅಸಹ್ಯಗೊಲಿಸಿಲ್ಲ. ಬದಲಿಗೆ ಪ್ರತಿ ಕೊಲೆ, ಅತ್ಯಾಚಾರದ ದೃಶ್ಯವನ್ನು ನೋಡುವಾಗಲೂ ಸಹ ಅದು ನಿಜವಾಗಿ ನಡೆದ ಒಂದು ಹೇಯ, ಕ್ರೂರ ಕೃತ್ಯ ಎಂದು ಮನಸ್ಸಿಗೆ ನಾಟುವಂತೆ ನಮ್ಮನ್ನು ತಿವಿಯುವಲ್ಲಿ ನಿರ್ದೇಶಕರ ಜೊತೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತು ಛಾಯಾಗ್ರಾಹಕ ವೆಂಕಟ್ಪ್ರಸಾದ್ ಸಹ ಕೈ ಜೋಡಿಸಿದ್ದಾರೆ.
ಈ ಚಿತ್ರದಲ್ಲಿ ನಟಿಸಿರುವ ನಟರುಗಳಂತೂ ದಂಡುಪಾಳ್ಯ ಗಾಂಗ್ನವರನ್ನೇ ಆವಾಹಿಸಿಕೊಂಡವರಂತೆ ನಟಿಸಿದ್ದಾರೆ. ಇವರು ನಟರೋ ಅಥವಾ ನಿಜವಾದ ಕೊಲೆಗಡುಕರೇ ಇವರಾ ಎಂಬ ಸಂದೇಹ ಮೂಡುವಂತಿದೆ ಇವರ ನಟನೆ. ಪೊಲೀಸ್ ಅಧಿಕಾರಿ ಛಲಪತಿ ಅವರ ಪಾತ್ರದಲ್ಲಿ ರವಿಶಂಕರ್ ಅತ್ಯುತ್ತಮವಾಗಿ ನಟಿಸಿದ್ದಾರೆ. ಪೂಜಾಗಾಂಧಿಯ ನಟನೆಯನ್ನಂತೂ ಮೆಚ್ಚಲೇ ಬೇಕು. ಮುಂಗಾರುಮಳೆಯ ನವಿರು ಹುಡುಗಿ ಇವಳೇನಾ ಎಂಬಷ್ಟು ಸಂದೇಹ ಮೂಡುತ್ತದೆ. ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆನ್ನಬಹುದು. ಆನಂದ್ ಅವರ ಸಂಭಾಷಣೆಯಂತೂ ಕತ್ತು ಕುಯ್ಯುವಷ್ಟೇ ಹರಿತವಾಗಿದೆ.
ದಂಡುಪಾಳ್ಯ ತಂಡ ಸುಮಾರು ೮೦ಕ್ಕೂ ಹೆಚ್ಚು ಜನರನ್ನು ಕೊಲೆಗೈದಿತ್ತು. ಹೆಣ್ಣು-ಗಂಡೆಂಬ ವ್ಯತ್ಯಾಸವಿಲ್ಲದೇ ಅತ್ಯಾಚಾರವೆಸಗಿ ಕೊಲೆಗೈದು, ಅಥವಾ ಕೊಲೆಮಾಡಿ ಅತ್ಯಾಚಾರವೆಸಗುತ್ತು. ಕೇವಲ ನೂರು, ಇನ್ನೂರು, ಸಾವಿರಕ್ಕಾಗಿಯೂ ಪ್ರಾಣ ತೆಗೆಯುವ ಹೇಯ ಕೃತ್ಯ ನಡೆಸಿದ್ದರು. ಒಂದೊಂದು ಕೊಲೆಯೂ ಕರುಣಾಜನಕ. ಕತ್ತು ಕುಯ್ದು ಮಹಿಳೆ ಒದ್ದಾಡುತ್ತಿರುವಾಗ, ಅಷ್ಟೇ ಅಲ್ಲದೇ ಸತ್ತ ನಂತರವೂ ಸಹ ಸಂಭೋಗ ನಡೆಸುತ್ತಿದ್ದರು ಎಂಬ ವಿಷಯ ತಿಳಿದರೆ ಅವರೇನು ಮನುಷ್ಯರಾ? ರಾಕ್ಷಸರಾ? ಎಂಬ ಅನುಮಾನ ಮೂಡದಿರದು. ಅಮಾನವೀಯ ಅನ್ನುವುದಕ್ಕಿಂತಲೂ ಮಿಗಿಲಾದ ಅಮಾನುಷ ಕೃತ್ಯಗಳವು.
ಇನ್ನು ಮಧ್ಯೆ ಮಧ್ಯೆ ಕೆಲವು ಪದಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಪ್ರಯೋಗಿಸಿ ತನ್ನ "ಕತ್ತು ಕುಯ್ಯುವ" ಕೆಲಸವನ್ನು ನಿಭಾಯಿಸಿದೆ. ಅವರು ಕತ್ತರಿಸಿರುವ ಪದಗಳೆಲ್ಲಾ ದಿನನಿತ್ಯ ನಾವು ಬಸ್ನಲ್ಲಿ, ಅಲ್ಲಿ ಇಲ್ಲಿ ಕೇಳುವಂತಹ ಪದಗಳೇ. ಹಿಂಸಾತ್ಮಕ ದೃಶ್ಯಗಳಿವೆ ಅನ್ನೋದು ಬಿಟ್ಟರೆ ಸಾಮಾನ್ಯದ್ದೊಂದು ತೆಲುಗು, ತಮಿಳು, ಹಿಂದಿಯ ಚಿತ್ರಗಳಲ್ಲಿರುವುದಕ್ಕಿಂತಾ ಅಶ್ಲೀಲ ದೃಶ್ಯ ಇದರಲ್ಲಿ ಯಾವುದೂ ಇಲ್ಲ. ಆದರೂ ಕರ್ನಾಟಕ ಸೆನ್ಸಾರ್ ಮಂಡಳಿ ಯಾಕೆ ಹೀಗಾಡುತ್ತೋ ಗೊತ್ತಿಲ್ಲ. ಕಡೇ ಪಕ್ಷ ಇಂತಹ ಚಿತ್ರಗಳಿಗಾದರೂ "AA" ಗ್ರೇಡ್ ನೀಡಿ ಅನಗತ್ಯ ಕತ್ತರಿ ಪ್ರಯೋಗ ನಿಲ್ಲಿಸಬಹುದು.
ಹೆಂಗಸರು ಮಕ್ಕಳು ಈ ಚಿತ್ರವನ್ನು ನೋಡುವುದು ಕಷ್ಟ. ಆದರೂ ನಾನು ಹೋದಾಗ ಕೆಲವರು ಹೆಂಗಸರು ಚಿತ್ರಮಂದಿರದಲ್ಲಿ ಇದ್ದರು. ಮುಖ್ಯವಾಗಿ ಕನ್ನಡದಲ್ಲೂ ಸಿನೆಮಾ ಮೇಕಿಂಗ್ ತಿಳಿದಿರುವ ಉತ್ತಮ ತಂತ್ರಜ್ಞರಿದ್ದಾರೆಂದು ತಿಳಿಯಲು, ಮೇಕಿಂಗ್ ಅನ್ನು ಪ್ರೀತಿಸುವವರು ಈ ಚಿತ್ರವನ್ನು ನೋಡಬೇಕು. ಪೋಬಿಯಾ ಇದ್ದವರು, ಹೃದಯ ಗಟ್ಟಿ ಇಲ್ಲದವರು ದೂರ ಉಳಿಯುವುದೊಳಿತು.
ಒಟ್ಟಿನಲ್ಲಿ ಮನೆಯಲ್ಲಿ ಒಂಟಿಯಾಗಿರುವವರು "ಅಮ್ಮಾ ಕುಡಿಯಲು ಸ್ವಲ್ಪ ನೀರು ಕೊಡ್ತೀರಾ?" ಎಂದು ಅಪರಿಚಿತರು ಕೇಳುತ್ತಾ ಬಂದರೆ ಎಚ್ಚರಿಕೆಯಿಂದಿರಿ ಎಂಬ ಸಂದೇಶವನ್ನಂತೂ ಚಿತ್ರ ಸಾರುತ್ತದೆ.

ಕಾಮೆಂಟ್ಗಳು