ವಿಷಯಕ್ಕೆ ಹೋಗಿ

6-5=2

ಇದೀಗ 6-5=2 ಚಿತ್ರ ನೋಡಿ ಬಂದೆ. ಕನ್ನಡದ ಮಟ್ಟಿಗೆ ಅತ್ಯತ್ತಮ ಪ್ರಯತ್ನ. ವಿಶಿಷ್ಟ ಚಲನಚಿತ್ರಗಳನ್ನು ಆಯ್ದು ನೋಡ ಬಯಸುವ ನನ್ನಂತವರಿಗೆ ಪ್ರಿಯವಾಗುವ ಚಿತ್ರ. 

೨೦೧೦ರಲ್ಲಿ ಗುಂಡ್ಯ ಅರಣ್ಯದಲ್ಲಿ ಟ್ರೆಕ್ಕಿಂಗ್ ಹೋದ ಮೂವರು ಮಳೆಯ ಕಾರಣಕ್ಕೆ ದಾರಿ ತಪ್ಪಿಸಿಕೊಂಡು ಹೊರ ಬರಲಾರದೇ ಆಹಾರವಿಲ್ಲದೇ ಕಾಡಿನೊಳಗೇ ಸಾವನ್ನಪ್ಪಿದ್ದರು. ಈ ಸತ್ಯ ಘಟನೆಯನ್ನು ಇಟ್ಟುಕೊಂಡು ಚಲನಚಿತ್ರಕ್ಕೆ ಬೇಕಾದಂತೆ ಮೂವರನ್ನು ಆರು ಜನರನ್ನಾಗಿಸಿ ಈ ಚಿತ್ರವನ್ನು ನಿರ್ದೇಶಿಸಿದವರ ಜಾಣ್ಮೆಯನ್ನು ಮೆಚ್ಚಲೇ ಬೇಕು. ಮೃತರಾದವರಲ್ಲಿ ಒಬ್ಬನಾದ ರಮೇಶ್ ಎಂಬಾತನ ಕ್ಯಾಮೆರಾ ದೊರೆತಿದ್ದು ಅದನ್ನೇ ಚಿತ್ರ ಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ ಎಂಬ ಒಕ್ಕಣೆಯೊಂದಿಗಿನ ಭಿತ್ತಿಪತ್ರಗಳ ಆಕರ್ಷಣೆ, ಹಾಗೂ ರೋಮಾಂಚನಗೊಳಿಸುವ ಟ್ರೈಲರ್‌ಗಳ ವಿಶೇಷವೇ ನಮ್ಮನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ.

ತೆರೆಮರೆಯಲ್ಲೇ ಚಿತ್ರತಂಡ !

ಕಾಂಜಿಪೀಂಜಿ ಚಿತ್ರಗಳನ್ನು ನಿರ್ದೇಶಿಸುವ ಕೆಟ್ಟ ನಿರ್ದೆಶಕರೆಲ್ಲಾ ಹಾಡುಗಳನ್ನು ಅರ್ಧಕ್ಕೆ ನಿಲ್ಲಿಸಿ ಅದರಲ್ಲಿ ತಮ್ಮ ಹೆಸರು ದೊಡ್ಡದಾಗಿ ತೋರಿಸುವ ಈ ಕಾಲದಲ್ಲೂ 6-5=2 ಚಿತ್ರತಂಡದ ಪ್ರಮುಖರ ಹೆಸರನ್ನೂ ಪ್ರಚಾರ ಮಾಡದೇ ತಮ್ಮ ವೃತ್ತಿಪ್ರೀತಿಯನ್ನು ಮೆರೆದಿರುವುದು ಮತ್ತೊಂದು ವಿಶೇಷ. 

ಈ ಚಿತ್ರದ ಪ್ರಕಾರ ಮೃತ ರಮೇಶನ ಕ್ಯಾಮೆರಾದಲ್ಲಿ ಸಿಕ್ಕ ವೀಡಿಯೋವನ್ನೇ ಸಂಕಲನ ಮಾಡಿ ಚಿತ್ರಮಂದಿರದಲ್ಲಿ ತೋರಿಸಲಾಗುತ್ತಿದೆ. ಇಂತಹ ಕ್ಲಿಷ್ಟಕರವಾದ ಸ್ಕ್ರಿಪ್ಟ್ ಇಟ್ಟುಕೊಂಡು ಚಿತ್ರ ನಿರ್ದೇಶಿಸಿದ ವ್ಯಕ್ತಿ ಅತ್ಯಂತ ಕ್ರಿಯಾಶೀಲರು ಅನ್ನುವುದು ಚಿತ್ರವನ್ನು ನೋಡುತ್ತಾ ಹೋದಂತೆ ತಿಳಿಯುತ್ತದೆ. ಆರು ಜನರು ಟ್ರೆಕ್ಕಿಂಗ್ ಹೊರಟಲ್ಲಿಂದ ಶುರುವಾಗುವ ವೀಡಿಯೋ ಅದರಲ್ಲಿ ಐವರು ವಿವಿಧ ರೀತಿಯಲ್ಲಿ ಮೈನವಿರೇಳಿಸುವಂತೆ ಸಾವನ್ನಪ್ಪುವಲ್ಲಿಯ ವರೆಗೂ ಸಾಗುತ್ತದೆ. ಈ ನಿಟ್ಟಿನಲ್ಲಿ ನಿರ್ದೇಶಕರು ಅತ್ಯಂತ ಗಮನ ವಹಿಸಿ ನಿರ್ದೇಶಿಸಿದ್ದರೂ ಸಹ ಚಿತ್ರದ ಮಧ್ಯೆ ಮಧ್ಯೆ ಚಿಕ್ಕಪುಟ್ಟ ಸಂಶಯಗಳು ಉಳಿದುಕೊಳ್ಳುವುದನ್ನು ತಪ್ಪಿಸಲಾಗಿಲ್ಲ. ಉದಾ : ಶುರುವಾತಿನಿಂದಲೂ ತೆರೆಯ ಮೇಲೆ Rec ಹಾಗೂ ಸಮಯ ಗೋಚರವಾಗುತ್ತಿದೆಯಾದರೂ ಅವರು ಬೆಟ್ಟವನ್ನು ಏರಿ ಕೆಳಗಿಳಿಯುವ ಸಮಯದಲ್ಲಿ ಸ್ವಲ್ಪ ಹೊತ್ತು ಇವೆರಡೂ ಮರೆಯಾಗುತ್ತವೆ. ಇನ್ನೊಂದೆಡೆ ಮೊದಲು ಸಿಡಿಯುವ ಊಟದ ಬಾಕ್ಸ್ ಘಾಸಿಯಾಗಿರುವುದಿಲ್ಲ, ಆದರೆ ಮತ್ತೊಮ್ಮೆ ಅವರು ಅದೇ ಸ್ಥಳಕ್ಕೆ ಬಂದಾಗ ಅದು ಹೆಚ್ಚು ಘಾಸಿಯಾದಂತೆ ಇದೆ. ಹಾಗೆಯೆ ೨೦೧೦ರಲ್ಲಿ ಮೂವರು ಕಾಣೆಯಾದ ದಿನ ಅಲ್ಲಿ ಭೀಕರ ಮಳೆ ಬಂದಿತ್ತು. [ಅವರು ನಿಜವಾಗಿಯೂ ದಾರಿ ತಪ್ಪಿ ಮೃತರಾಗಲು ಕಾರಣ ಮಳೆಯೆ], ಆದರೆ ಚಿತ್ರದಲ್ಲಿ ಮಳೆಯ ಯಾವ ಕುರುಹೂ ಇಲ್ಲ.  ಆದರೆ ಇವೆಲ್ಲಾ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಕಂಡು ಬರುತ್ತವಾದ್ದರಿಂದ ಚಿತ್ರದ ಓಗಕ್ಕೆ ಯಾವ ಧಕ್ಕೆಯೂ ಆಗುವುದಿಲ್ಲ. 

ಚಿತ್ರದ ಮೊದಲಾರ್ಧ ಹಾಸ್ಯಮಯವಾಗಿ ಕಳೆದು ಹೋಗುತ್ತದೆ. ದ್ವಿತೀಯಾರ್ಧ ಅತ್ಯಂತ ಕುತೂಹಲಭರಿತವಾಗಿ, ರೋಚಕವಾಗಿ, ದಿಗಿಲು ಬೀಳಿಸುತ್ತಾ ಸಾಗುತ್ತದೆ.  ಕೊನೆಗೊಮ್ಮೆ ಚಿತ್ರ ಮುಗಿದಾಗ ಮಾತ್ರ ಇಷ್ಟು ಬೇಗ ಮುಗಿದೋಯ್ತಾ ಎಂದೆನಿಸದಿರದು. ನಡು ನಡುವೆ ಏನೂ ನಡೆಯುತ್ತಿಲ್ಲ ಬಿಡು ಎಂದು ನಿರಾಳವಾಗಿರುವ ಸಮಯದಲ್ಲೇ ಎದೆಗೆ ಗುಂಡು ಹೊಡೆದಂತೆ ಏನಾದರೂ ಘಟನೆಗಳು ನಡೆದು ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತವೆ. 

ಒಟ್ಟಿನಲ್ಲಿ ಚಿತ್ರವು ಪ್ರೇಕ್ಷಕರನ್ನು ದಿಗಿಲುಗೊಳಿಸಿ ಮನ ಮುಟ್ಟುವಲ್ಲಿ ಯಶಸ್ವಿಯಾಗುವುದರೊಂದಿಗೆ ಟ್ರೆಕ್ಕಿಂಗ್ ಹೋಗುವವರು ಎರಡೆರಡು ಬಾರಿ ಯೋಚಿಸುವಂತೆ ಮಾಡುವಲ್ಲಿ ಕೂಡಾ ಯಶಸ್ವಿಯಾಗಿದೆ. 'ಸರಿಯಾದ ಮಾರ್ಗದರ್ಶನ, ದಾರಿ, ವ್ಯವಸ್ಥೆಗಳಿಲ್ಲದೇ ಅಪರಿಚಿತ ಸ್ಥಳಕ್ಕೆ ಟ್ರೆಕಿಂಗ್ ಹೋಗುವುದು ಅಪಾಯಕಾರಿ' ಎಂಬ ಸಂದೇಶವನ್ನಂತೂ 6-5=2 ಸಾರುತ್ತದೆ. ಕನ್ನಡಕ್ಕೊಂದು ವಿಶಿಷ್ಟ ಚಿತ್ರ ನೀಡಿದ ಚಿತ್ರ ತಂಡಕ್ಕೆ ಅಭಿನಂದನೆಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...