ನಿನ್ನೆ ತೀರಿಕೊಂಡ ಮೈಸೂರು ರಾಜವಂಶದ ಕೊನೆಯ ಕುಡಿ ಶ್ರೀಕಂಠದತ್ತ ಒಡೆಯರ್ ಅವರಿಗೆ ನನ್ನ ಶ್ರದ್ದಾಂಜಲಿಗಳಿವೆ. ಒಬ್ಬ ವ್ಯಕ್ತಿ ತೀರಿಕೊಂಡಾಗಲೂ ಅವರ ಬಗ್ಗೆ ಋಣಾತ್ಮಕವಾಗಿ ಯೋಚಿಸಬಹುದಾ ? ಬರೆಯಬಹುದಾ ? ಅಂತ ಕೇಳಬಹುದು. ಧನಾತ್ಮಕವಾಗಿ ಯೋಚಿಸಲು ಯಾವುದೇ ವಿಷಯವನ್ನು ಬಿಟ್ಟು ಹೋಗದ ವ್ಯಕ್ತಿಯ ಬಗ್ಗೆ ಋಣಾತ್ಮಕ ಯೋಚನೆಗಳೇ ಬರುವುದು. ನಿಜ, ಎಲ್ಲಾ ವ್ಯಕ್ತಿಗಳಲ್ಲೂ ಅದರಲ್ಲೂ ಮೇಲ್ಮಟ್ಟದ ವ್ಯಕ್ತಿಗಳ ಜೀವನವನ್ನು ಅವಲೋಕಿಸಿದಾಗ ಅವರೆಷ್ಟೇ ಉತ್ತಮ ಜೀವನ ನಡೆಸಿದ್ದರೂ ಕೆಲವೊಂದು ತಪ್ಪುಗಳು ಇರಲೂ ಬಹುದು. ಆದರೆ ಅವುಗಳನ್ನು ಮರೆಸಿ ಹಾಕುವಷ್ಟು ಉತ್ತಮ ಸಾಧನೆ/ಕೆಲಸಗಳನ್ನು ಅವರು ಮಾಡಿದ್ದಾಗ ಮಾತ್ರ ಅವರ ಬಗ್ಗೆ ಧನಾತ್ಮಕವಾಗಿ ಮಾತನಾಡಲು ಸಾಧ್ಯ.
ಆದರೆ ಶ್ರೀಕಂಠದತ್ತರು ಅಂತಹ ಯಾವ ಘನಾಂಧಾರಿ ಕೆಲಸ ಮಾಡಿದ್ದಾರೆ ? ಇಂದಿನ ಪತ್ರಿಕೆಗಳನ್ನ ಹೊರಳಿಸಿದಾಗ ಒಬ್ಬ ಹಳ್ಳಿಯ ಕ್ರಿಕೆಟಿಗ 'ಒಂದು ಬಾರಿ ಚೆನ್ನೈಗೆ ನಮ್ಮೊಟ್ಟಿಗೇ ಬಂದರು, ಚೆನ್ನಾಗಿ ಬೆರೆತು ಮಾತನಾಡಿದರು' ಅನ್ನುವ ಒಂದಂಶವನ್ನು ಬಿಟ್ಟರೆ ಬೇರ್ಯಾವ ಸಮಾಜಮುಖಿ ಕೆಲಸಗಳನ್ನು ಮಾಡಿರುವ ಮಾಹಿತಿಯೂ ಸಿಗಲಿಲ್ಲ. ಅದರ ಬಗ್ಗೆ ಈ ಹಿಂದೆ ಸುದ್ದಿ ಬಂದುದರ ಬಗ್ಗೆಯೂ ನನಗೆ ತಿಳಿದಿಲ್ಲ. ಇರುವಷ್ಟು ದಿನವೂ ರಾಜವೈಭೋಗ ಅನುಭವಿಸುತ್ತಾ, ಅರಮನೆಯನ್ನು ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಕಿತ್ತಾಡುತ್ತಾ, ತಮಗೆ ಸಂಬಂಧವೇ ಇಲ್ಲದ ಕರ್ನಾಟಕ ಕ್ರಿಕೆಟ್ ಮಂಡಳಿಯ ಅಧಿಕಾರವನ್ನು ಅನುಭವಿಸುತ್ತಾ, ಅಲ್ಲಿ ಇಲ್ಲ ಸಲ್ಲದ ರಾಜಕೀಯ ತಂದು ಪ್ರತಿಭಾವಂತರನ್ನೂ ಕಡೆಗಣಿಸುತ್ತಾ, ತಂದೆ, ತಾತಂದಿರಿಂದ ಬಂದ ಪುಕ್ಕಟೆ ಆಸ್ತಿ ಹಾಗೂ ಗೌರವವನ್ನು ಅನುಭವಿಸುತ್ತಾ ಕಾಲ ಕಳೆದ 'ರಾಜ' ಈಗ ಇಲ್ಲವಾಗಿದ್ದಾರೆ. ಇದರಿಂದ ನಮ್ಮ ರಾಜ್ಯಕ್ಕೆ ಯಾವ ನಷ್ಟವೂ ಆದಂತೆ ಕಾಣಿಸುವುದಿಲ್ಲ.
ಅವರು ಮನಸ್ಸು ಮಾಡಿದ್ದರೆ ಬಿದ್ದು ಕೊಳೆಯುತ್ತಿರುವ ಕೋಟ್ಯಾಂತರ ಮೌಲ್ಯದ ಆಸ್ತಿಯಿಂದ ಮೈಸೂರು ಸುತ್ತಮುತ್ತಲಿನ ಹಳ್ಳಿಗರಿಗೆ, ಬಡ ಬಗ್ಗರಿಗೆ ಸಹಾಯ ಮಾಡಿ ಅವರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗುವ ಮೂಲಕ ನಿಜವಾದ 'ರಾಜ'ನಾಗಬಹುದಿತ್ತು. ಆದರೆ ಅದ್ಯಾವುದನ್ನೂ ಮಾಡಲಿಲ್ಲ. ಅಂದು ವಿಶ್ವೇಶ್ವರಯ್ಯ ತೀರಿಕೊಂಡಾಗ ಅಥವಾ ಜಯಚಾಮರಾಜೇಂದ್ರ ಒಡೆಯರ್ ತೀರಿಕೊಂಡಾಗ ಮೈಸೂರು, ಮಂಡ್ಯದ ಜನತೆ ಕಣ್ಣೀರು ಹಾಕಿದ್ದರು. ಆದರೆ ಇಂದು ಅಂತಹ ಸಂದರ್ಭವೇ ಜನರಿಗೆ ಎದುರಾಗಲಿಲ್ಲ! ಇವರು ಬಹುವಾಗಿ ಪ್ರೀತಿಸಿದ (?!) ಹಾಗೂ ಕಾಡಿದ ಕರ್ನಾಟಕ ಕ್ರಿಕೆಟ್ ಸಂಸ್ಥೆಯನ್ನಾದರೂ ಮಾದರಿಯನ್ನಾಗಿಸಿ ಉದ್ದಾರ ಮಾಡಬಹುದಿತ್ತು. ಅದನ್ನೂ ಮಾಡಲಿಲ್ಲ. ಹೀಗೆ ನಾಮ್ಕಾವಾಸ್ತೆಯಾಗಿ ರಾಜನ ಹೆಸರಲ್ಲಿ ಮೆರೆದ ವ್ಯಕ್ತಿ ನಿಧನರಾಗಿದ್ದಾರೆಯೇ ಹೊರತೂ ಅವರಲ್ಲಿ ಇನ್ಯಾವ ವಿಶೇಷವೂ ಕಂಡು ಬರುತ್ತಿಲ್ಲ.

ಕಾಮೆಂಟ್ಗಳು