ವಿಷಯಕ್ಕೆ ಹೋಗಿ

ಧನ್ಯವಾದಗಳು ‘ಪ್ರಜಾವಾಣಿ ಮೆಟ್ರೋ‘



ಪ್ರಜಾವಾಣಿ ಪತ್ರಿಕೆಯ ಮೆಟ್ರೋ ಪುರವಣಿಯ ಇಂದಿನ ಸಂಚಿಕೆಯ ಮೂರನೆ ಪುಟದಲ್ಲಿ ನನ್ನ ಬ್ಲಾಗ್ ಬಗ್ಗೆ ಲೇಖನ ಪ್ರಕಟವಾಗಿದೆ. ನಾನಿಲ್ಲಿ ಅನೇಕ ಋಣಾತ್ಮಕ ವಿಷಯಗಳ ಬಗ್ಗೆ ಬರೆದರೂ 'ಸಾಕ್ಷಿ'ಯವರು ಮತ್ರ ಬ್ಲಾಗ್ ಬಗ್ಗೆ ಧನಾತ್ಮಕವಾಗಿಯೇ ಬರೆದಿದ್ದಾರೆ. ಇದಕ್ಕಾಗಿ ಲೇಖಕರು ಹಾಗೂ ಪ್ರಜಾವಾಣಿಗೆ ನನ್ನ ಧನ್ಯವಾದಗಳು.

ಈ ಲೇಖನದಲ್ಲಿ ಎರಡು ವಿಷಯಗಳ ಪ್ರಸ್ತಾಪದ ಬಗ್ಗೆ ಕೊಂಚ ವಿವರಣೆ ಕೊಡಬೇಕು ಅನ್ನಿಸಿದೆ. ಮೊದಲನೆಯದು 'ಬ್ಲಾಗ್ ಶೀರ್ಷಿಕೆಯ ಲಾಲಿತ್ಯಕ್ಕೆ ವಿರುದ್ಧವಾಗಿ ಶ್ರೀಪತಿ ಅವರು ಸಮಕಾಲೀನ ಸಂಗತಿಗಳನ್ನು ಗಟ್ಟಿ ದನಿಯಲ್ಲಿ ಚರ್ಚಿಸಿರುವುದು ಬ್ಲಾಗ್‌ನ ವಿಶೇಷ.' ಎಂದು ಸಾಕ್ಷಿಯವರು ಹೇಳಿದ್ದಾರೆ. ನಿಜ, 'ಪಿಸುಮಾತು' ಹೆಸರಿಗೂ ನಾನು ಬರೆಯುತ್ತಿರುವ ವಿಷಯಗಳಿಗೂ ಬಹಳಷ್ಟು ವೈರುಧ್ಯವಿದೆ. ಪಿಸುಮಾತು ಹೆಸರಿನ ಮಾಸ ಪತ್ರಿಕೆ ಶುರು ಮಾಡಿದಾಗಿನಿಂದ (೨೦೦೪) ಈ ಹೆಸರು ನನ್ನೊಂದಿಗೆ ತಳಕು ಹಾಕಿಕೊಂಡಿದೆ. ಅದರಿಂದ ಬಿಡಿಸಿಕೊಳ್ಳಲು ಆಗಿಲ್ಲ. ಮೊದಲಿಗೆ ಈ ಬ್ಲಾಗ್ ಶುರು ಮಾಡುವಾಗ ಕಥೆ, ಕವನ, ಲಘು ಲೇಖನಗಳನ್ನೇ ಬರೆಯಬೇಕು ಅಂತ ಅಂದುಕೊಂಡಿದ್ದೆ. ಆದರೆ ಈ ಸಮಾಜದ ಕ್ರೂರತೆಗಳನ್ನು, ವಂಚನೆಗಳನ್ನ ನೋಡುತ್ತಾ ನೋಡುತ್ತಾ ಋಣಾತ್ಮಕ ವಿಷಯಗಳನ್ನ ಬರೆಯದೇ ಇರಲು ಆಗಲಿಲ್ಲ. ಅಂತಹ ವಿಷಯಗಳಿಗಾಗಿ ಮತ್ತೊಂದು ಬ್ಲಾಗ್ ರಚಿಸುವ ಯೋಚನೆ ಬಂದರೂ 'ಆಗಿದ್ದಾಗ್ಲಿ, ಓದೋದು ಓದ್ತಾರೆ, ಬಿಡೋರು ಬಿಡ್ತಾರೆ' ಎಂಬ ಉಡಾಪೆಯಿಂದಲೇ ಇದನ್ನು ಮುಂದುವರಿಸಿದೆ. 

ಮನಸ್ಸಿನೊಳಗಿರುವುದನ್ನು ಹೊರ ಹಾಕಲಿಕ್ಕೆ ಒಂದು ವೇದಿಕೆ ಬೇಕು. ಅದು ಬ್ಲಾಗ್ ಆದರೆ ಹೆಚ್ಚು ನಿರುಪದ್ರವಿ ಎಂದೇ ಅರ್ಥ. ಏಕೆಂದರೆ ಇದನ್ನು ಯಾರೂ ಹಣ ಕೊಟ್ಟು ಓದುವುದಿಲ್ಲ. ಇಷ್ಟ ಇದ್ದರೆ ಮಾತ್ರ ಬಂದು ಓದಬಹುದು. ಹಾಗಾಗಿಯೇ ಧೈರ್ಯವಾಗಿ ಬರೆಯುತ್ತಿರುವೆ. ಈ ನಡುವೆ ಒಂದೆರಡು ವಿಷಯಗಳ ಬಗ್ಗೆ ಬೆದರಿಕೆ ಕರೆಗಳು ಬಂದುದೂ ಇದೆ. 

ಇನ್ನು ಎರಡನೆಯ ವಿಷಯ ದಂಡುಪಾಳ್ಯ ಚಿತ್ರದ ವಿಮರ್ಶೆ ಬಗೆಗಿನದು. 'ಈ ಸಿನಿಮಾ ತೆರೆ ಕಂಡ ನಂತರ ಘಟಿಸಿದ ಅಪರಾಧ ಪ್ರಕರಣಗಳ ವರದಿಗಳನ್ನು ಬ್ಲಾಗಿಗರು ಗಮನಿಸಿದಂತಿಲ್ಲ. ಹಿಂಸೆ-ಕ್ರೌರ್ಯದ ಕಥೆಗಳನ್ನು ಅಂಥ ದೃಶ್ಯಗಳ ಮೂಲಕವೇ ನಿರೂಪಿಸಬೇಕಾಗಿಯೂ ಇಲ್ಲ. ರೋಚಕತೆಯನ್ನೇ ಬಂಡವಾಳ ಆಗಿಸಿಕೊಂಡ ಇಂಥ ದೃಶ್ಯಗಳು ಯಾವ ವರ್ಗವನ್ನು ಗಮನದಲ್ಲಿಟ್ಟುಕೊಂಡಿರುತ್ತವೆ ಎನ್ನುವುದನ್ನು ಸಹೃದಯರು ಸುಲಭವಾಗಿ ಊಹಿಸಬಹುದಾಗಿದೆ.' ಎಂದು ಬರೆದಿದ್ದಾರೆ ಲೇಖಕರು. ಹಿಂಸಾತ್ಮಕ ಚಲನಚಿತ್ರಗಳನ್ನು ನೋಡುವುದರಿಂದ ಯಾರಾದರೂ ಹಿಂಸೆಗಿಳಿಯುತ್ತಾರೆಯೇ ? ಅನ್ನುವುದಕ್ಕೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ. ಹಾಗೇನಾದರೂ ನಡೆಯುವುದಿದ್ದರೆ ಕನ್ನಡದ ಪುಂಕಾನುಪುಂಕ ರೌಡಿಯಿಸಂ ಚಿತ್ರಗಳನ್ನು ನೋಡಿ ಟನ್ನುಗಟ್ಟಲೇ ರೌಡಿಗಳು ಹುಟ್ಟಿಕೊಳ್ಳಬೇಕಿತ್ತು. ದಂಡುಪಾಳ್ಯ ತೆರೆಕಂಡ ನಂತರ ನಡೆದ ಒಂದು ದರೋಡೆ/ಕೊಲೆಯ ಸಂದರ್ಭದಲ್ಲಿ ಮಾತ್ರ ಕೊಲೆಗಾರರು 'ದಂಡುಪಾಳ್ಯ ಚಿತ್ರದ ಪ್ರೇರಣೆಯಿಂದ ಹೀಗೆ ಮಾಡಿದೆವು' ಎಂದು ಹೇಳಿದ್ದು ವರದಿ ಆಯ್ತು. ಹಾಗಂತ ಅವರೇನೂ ಸಭ್ಯರಲ್ಲ. ಅವರ ಮನಸ್ಥಿತಿ ದರೋಡೆ/ಕೊಲೆ ಮಾಡುವುದೇ ಆಗಿತ್ತು. ಅವರು ದಂಡುಪಾಳ್ಯ ನೋಡದಿದ್ದರೂ ಇನ್ನೊಂದು ರೀತಿಯಲ್ಲಿ ಕೊಲೆ, ದರೋಡೆ ಮಾಡಿಯೇ ಮಾಡುತ್ತಿದ್ದರು. ಹಿಂಸಾತ್ಮಕ ಚಿತ್ರವೊಂದು ಯಾರಿಗಾದರೂ ಪ್ರೇರಣೆ ನೀಡಿತು ಎಂದಾದರೆ ಆ ಗುಣ ಅವರಲ್ಲಿ ಮೊದಲೇ ಇದ್ದಿರಲೇ ಬೇಕು. ಹಾಗಂತ ದಂಡುಪಾಳ್ಯದಂತಹ ಚಿತ್ರಗಳು ಹೆಚ್ಚಾಗಿ ಬರಲಿ ಅಂತ ನಾನು ಹೇಳುತ್ತಿಲ್ಲ. ಯಥಾವತ್ ತೋರಿಸುವ ಹಾಗೂ ನೋಡುವ ಧಾಷ್ಟ್ಯ ನಮಗಿರಬೇಕು ಅಂತ ಅಷ್ಟೇ. ಹಾಲಿವುಡ್‌, ಚೀನಾ ಹಾಗೂ ಇತರೆ ಕೆಲವೆಡೆಯ ಚಲನಚಿತ್ರಗಳಲ್ಲಿ ಎಲ್ಲಾ ವಿಷಯಗಳೂ ಯಥಾವತ್ ತೋರಿಸಲ್ಪಡುತ್ತವೆ. ಆದರೆ ಭಾರತದಲ್ಲಿ ಅದರಲ್ಲೂ ಕನ್ನಡದಲ್ಲಿ ಸೆನ್ಸಾರ‍್ ಕೊಕ್ಕೆ ಬಹಳ ಕೆಟ್ಟದಾಗಿದೆ. ಯಾವುದನ್ನು ನೋಡಬೇಕು, ನೋಡಬಾರದು ಅಂತ ತೀರ್ಮಾನಿಸುವ ಅವಕಾಶ ಪ್ರೇಕ್ಷಕನಿಗಿರಬೇಕು ಅನ್ನೋದು ನನ್ನ ಆಶಯ.

ಪ್ರಜಾವಾಣಿಯಂತಹ ಪತ್ರಿಕೆಗಳೂ ಸಹ 'ಪಿಸುಮಾತು'ವಿನಂತಹ ಬ್ಲಾಗ್‌ಗಳ ಕಡೆಗೆ ಕಣ್ಣು ಹಾಯಿಸುವುದು ಹೆಮ್ಮೆಯ ವಿಷಯದೊಂದಿಗೆ ನಮ್ಮ ಜವಾಬ್ದಾರಿಯನ್ನೂ ಸಹ ಹೆಚ್ಚಿಸಿದೆ. ಪತ್ರಿಕೆಗೆ, ಲೇಖಕ ಸಾಕ್ಷಿಯವರಿಗೆ ಹಾಗೂ ನನ್ನ ಬ್ಲಾಗ್‌ ಓದುಗರಿಗೆ ನನ್ನ ಅನಂತ ಧನ್ಯವಾದಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...