
ಕನ್ನಡವೂ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳೂ ಇಂದು ಇಂಗ್ಲೀಷಿನ ಜೊತೆಗೆ ಹಿಂದಿಯ ರುದ್ರ ತಾಂಡವದಿಂದಾಗಿ ನಲುಗುತ್ತಿವೆ. ಇಂಗ್ಲೀಷ್ ಮಕ್ಕಳ ಬವಿಷ್ಯದ ದೃಷ್ಟಿಯ ಕಾರಣಕ್ಕೆ ಅಗತ್ಯವಾಗಿದ್ದರೆ ಹಿಂದಿಯನ್ನು ಕೇಂದ್ರ ಸರ್ಕಾರ ಸದ್ದಿಲ್ಲದೇ ರಾಷ್ಟ್ರಭಾಷೆ ಎಂಬ ಸುಳ್ಳು ಹೇಳಿ ಹಿಂದಿಯೇತರರ ಮೇಲೆ ಹೇರುತ್ತಿದೆ. ಇವೆರಡರ ನಡುವೆ ಸಂಸ್ಕೃತವೂ ಸ್ಥಳೀಯ ಭಾಷೆಗಳ ಮೇಲೆ ಧರ್ಮದ ಕಾರಣಕ್ಕೆ ಸವಾರಿ ಮಾಡ ಹೊರಟಿದೆ. ವರ್ಷ ವರ್ಷವೂ ಕೇಂದ್ರ ಸರ್ಕಾರವು ಹಿಂದಿ ಮತ್ತು ಸಂಸ್ಕೃತವನ್ನು ಪ್ರಚಾರ ಮಾಡಲು ಬಿಡುಗಡೆ ಮಡುತ್ತಿರುವ ಕೋಟ್ಯಾಂತರ ರೂಪಾಯಿಯನ್ನು ಗಮನಿಸಿದರೆ ಇದು ಅವುಗಳ ಅಪಾಯವನ್ನು ನಾವು ಗ್ರಹಿಸಬಹುದು. ಕಳೆದ ವರ್ಷ ಬಿಜೆಪಿ ಸರ್ಕಾರವು ದೇಸದಲ್ಲಿ ಸಂಸ್ಕೃತವನ್ನು ಹರಡಲು ನಲವತ್ತು ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರೆ ದೇಶದ ಮತ್ತೊಂದು ಶಾಸ್ತ್ರೀಯ ಭಾಷೆ ಕನ್ನಡಕ್ಕೆ ನೀಡಿರುವುದು ಕೇವಲ ನಾಲ್ಕು ಕೋಟಿ ರೂಪಾಯಿ ಮಾತ್ರ. ಹಾಗೆಯೇ ದೇಶದ ಮೂರನೇ ದೊಡ್ಡ ಭಾಷೆಯಾದ ತಮಿಳಿಗೆ ನೀಡಿದ್ದು ಎಂಟು ಕೋಟಿ ಮಾತ್ರ. ಅಂದರೆ ಇದರರ್ಥ ಕೇಂದ್ರದಲ್ಲಿ ಯಾವುದೇ ಪಕ್ಷ ಆಡಳಿತದಲ್ಲಿದ್ದರೂ ಅವುಗಳಿಗೆ ರಾಜ್ಯಭಾಷೆಗಳು ಅಂದರೆ ಯಾಕಾದರೂ ಇವೆಯೋ ಎಂಬ ಅಸಡ್ಡೆ! ಅದೇ ಹಿಂದಿ ಮತ್ತು ನಿವೃತ್ತಿ ಹೊಂದಿರುವ ಸಂಸ್ಕೃತವೆಂದರೆ ಎತ್ತಿ ಮೆರೆಸುವಂತಹ ಆಧರಣೆ.
ಹೀಗೆ ಒಂದು ಸಮಯದಲ್ಲಿ ದೇಶದ ಉಳಿದೆಲ್ಲಾ ಭಾಷೆಗಳನ್ನು ತುಳಿದು ಹಿಂದಿಯನ್ನು ಮಾತ್ರ ಬೆಳೆಸಲು ಕೇಂದ್ರವು ಹವಣಿಸಿದ ಸಮಯದಲ್ಲಿ ಅದನ್ನು ಸಮರ್ಥವಾಗಿ ಎದುರಿಸಿದ ರಾಜ್ಯವೆಂದರೆ ತಮಿಳುನಾಡು ಮಾತ್ರ. ಅಂದು ತಮಿಳರು ಜೀವದ ಹಂಗು ತೊರೆದು ಹಿಂದಿಯ ವಿರುದ್ದ, ಕೇಂದ್ರದ ವಿರುದ್ದ ಹೋರಾಡಿಲ್ಲದೇ ಹೋಗಿದ್ದರೆ ಅದರ ನೇರ ಪರಿಣಾಮ ನಿರಭಿಮಾನಿಗಳ ಭಾಷೆಯಾದ ಕನ್ನಡದ ಮೇಲೆಯೇ ಆಗಿರುತ್ತಿತ್ತು ಅನ್ನುವುದನ್ನೂ ಮರೆಯುವಂತಿಲ್ಲ. ಬೇರೆ ವಿಷಯಗಳಲ್ಲಿ ನಮ್ಮ-ತಮಿಳರ ನಡುವೆ ಏನೇ ತಗಾದೆಗಳಿದ್ದರೂ ಕೇಂದ್ರದ ವಿರುದ್ದದ ಹಿಂದಿ ಹೇರಿಕೆ ವಿರೋಧಿ ಹೋರಾಟಕ್ಕೆ ನಾವೂ ಅವರ ಜೊತೆಯಾಗಲೇ ಬೇಕಾಗಿದೆ. ಅಂದಿನ ತಮಿಳರ ಹೋರಾಟದ ಫಲವಾಗಿಯೇ ತ್ರಿಭಾಷಾ ಸೂತ್ರ ಅನ್ನುವ ಅಷ್ಟೊಂದು ಕ್ರೂರವಲ್ಲದ ಆದರೆ ನಾಜೂಕಿನ ವಿಷದ ಕಾನೂನು ಜಾರಿಯಾಯ್ತು. ಇಲ್ಲವೆಂದಿದ್ದರೆ ಕನ್ನಡದ ಜೊತೆಗೆ ದೇಶದ ಇನ್ನೂ ಅನೇಕ ಚಿಕ್ಕಪುಟ್ಟ ಭಾಷೆಗಳು ಇಷ್ಟರಲ್ಲಾಗಲೇ ಮೂಲೆಗುಂಪಾಗಿರುತ್ತಿದ್ದವು.
ತಮಿಳಿಗೂ ತಪ್ಪಲಿಲ್ಲ ಬಿಸಿ !
ಅಂದು ಹಿಂದಿಯ ವಿರುದ್ದ ಬೀದಿಗಿಳಿದು ತಮಿಳರು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿದ್ದೇನೋ ಸರಿ. ಆದರೆ ಹಿಂದಿ ಹಿಂದೆಯೇ ಬಂದ ಇಂಗ್ಲೀಷ್ ಹಿಂದಿಯಷ್ಟೇ ತಮಿಳನ್ನು ಮೂಲೆಗೆ ತಳ್ಳಲು ಸಮರ್ಥವಾಗತೊಡಗಿದ್ದನ್ನೂ ಅಲ್ಲಗಳೆಯುವಂತಿಲ್ಲ. ತಮಿಳರು ಭಾಷಾಭಿಮಾನಿಗಳು ಹೌದು. ಆದರೆ ಆ ಭಾಷಾಭಿಮಾನಿಗಳ ಒಂದು ತಲೆಮಾರು ಗತಿಸಿ ಇತ್ತೀಚಿನ ತಲೆಮಾರಿನವರಿಗೆ ಭಾಷಾಭಿಮಾನಕ್ಕಿಂತಾ ಬದುಕುವುದು ಮುಖ್ಯ ಅನ್ನಿಸತೊಡಗಿದೆ. ಇದಕ್ಕೆ ಕಾರಣ ಕೈಬೀಸಿ ಕರೆದು ಕೈತುಂಬಾ ಸಂಬಳ ನೀಡುವ ತಂತ್ರಾಂಶ ಸಂಸ್ಥೆಗಳು.
ಅಂತಹ ಸಂಸ್ಥೆಗಳಿಗೆ ಸೇರಿಕೊಳ್ಳುತ್ತಿರುವ ಯುವ ಸಮೂಹ ಭಾಷಾಭಿಮಾನವನ್ನು ಒಂದು ಹಂತಕ್ಕೆ ಬದಿಗಿಟ್ಟು ಜ್ಞಾನಕ್ಕಾಗಿ ಇಂಗ್ಲೀಷಿನ ಮೊರೆ ಹೋಗ ತೊಡಗಿದರು. ಹಾಗೆಯೇ ಭವಿಷ್ಯದ ಕನಸು ಬಿತ್ತುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳು ತಮಿಳುನಾಡಿನಾಧ್ಯಂತ ತಲೆ ಎತ್ತಿದವು. ಪೋಷಕರೂ ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿತೊಡಗಿದರು. ಹಾಗೆಯೇ ಕೆಲವರು ಹಿಂದಿಯನ್ನೂ ಕಲಿಸುವ ಮನಸ್ಸು ಮಾಡತೊಡಗಿದರು.
ಎಚ್ಚೆತ್ತುಕೊಂಡ ತಮಿಳು ಸರ್ಕಾರ
ಹೀಗೆ ಆಂಗ್ಲ ಮತ್ತು ಹಿಂದಿಯ ಸವಾರಿ ನಿಧಾನವಾಗಿ ತಮಿಳುನಾಡನ್ನು ಆವರಿಸಿಕೊಳ್ಳುವುದನ್ನು ಅಲ್ಲಿನ ಸರ್ಕಾರ ಬಹು ಬೇಗನೆ ಪತ್ತೆ ಹಚ್ಚಿತು. ಇಂದು ಚೆನ್ನೈಗೆ ಹೋಗಿ ನೋಡಿದರೆ ಅಂಗಡಿ, ಶಾಪಿಂಗ್ ಮಾಲ್ ಮುಂತಾದುವುಗಳ ಫಲಕಗಳಲ್ಲಿ ಬೆಂಗಳೂರಿನಲ್ಲಿ ಕನ್ನಡ ಬಳಸುವಷ್ಟೂ ತಮಿಳನ್ನು ಬಳಸುತ್ತಿಲ್ಲ. ಆಂಗ್ಲದ ಬಳಕೆ ಅಲ್ಲಿಯೂ ಮಿತಿ ಮೀರಿದೆ.
ಇದನ್ನು ಗಮನಿಸಿದ ಸರ್ಕಾರ ಹತ್ತು ವರ್ಷಗಳ ಹಿಂದೆಯೇ ಅಂದರೆ ೨೦೦೬ರಲ್ಲಿ ಒಂದು ನಿಯಮವನ್ನು ಜಾರಿಗೆ ತಂದಿತು. ಆ ವರ್ಷದ ಒಂದನೇ ತರಗತಿಯ ಮಕ್ಕಳಿಗೆ ಪ್ರಥಮ ಭಾಷೆಯಾಗಿ ತಮಿಳನ್ನೇ ತೆಗೆದುಕೊಳ್ಳಬೇಕು ಎಂಬ ನಿಯಮ ಅದಾಗಿತ್ತು. ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಏಕೆಂದರೆ ಕರ್ನಾಟಕ ಸರ್ಕಾರದಂತೆ ಕನ್ನಡ ಮಾಧ್ಯಮ ಕಡ್ಡಾಯ ಎಂಬಂತಹ ಕಾನೂನು ಬಲವಿಲ್ಲದ ನಿಯಮವನ್ನು ರೂಪಿಸದೇ ಯಾರಿಗೂ ಗಮನಕ್ಕೆ ಬಾರದಂತೆ ತಮಿಳು ರಕ್ಷಣೆಗೆ ಕೈ ಹಾಕಿತ್ತು ತಮಿಳುನಾಡು!
೨೦೦೬ ರಲ್ಲಿ ಒಂದನೇ ತರಗತಿಗೆ ತಮಿಳನ್ನು ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಿದ ನಂತರ (ಮಾಧ್ಯಮ ಯಾವುದಾದರೂ ಇರಲಿ) ೨೦೦೭-೦೮ ಕ್ಕೆ ಒಂದು ಮತ್ತು ಎರಡನೇ ತರಗತಿಗಳೆರಡಕ್ಕೂ ತಮಿಳನ್ನು ಪ್ರಥಮ ಭಾಷೆಯಾಗಿ ಕಡ್ಡಾಯ ಮಾಡಿದರು. ಅಂದರೆ ಅದೊಂದು ಹತ್ತು ವರ್ಷದ ಧೀರ್ಘ ಯೋಜನೆಯಾಗಿತ್ತು. ಅಂದರೆ ಒಂದೊಂದು ವರ್ಷಕ್ಕೂ ಒಂದೊಂದು ತರಗತಿಗೆ ಅದನ್ನು ಏರಿಸುತ್ತಾ ಬಂದಿದ್ದು, ೨೦೦೬ ರಿಂದ ತಮಿಳನ್ನು ಪ್ರಥಮ ಭಾಷೆಯಾಗಿ ಓದುತ್ತಾ ಬಂದಿರುವ ಮಕ್ಕಳು ಈ ವರ್ಷ ಹತ್ತನೇ ತರಗತಿ ಪ್ರವೇಶಿಸಿದ್ದಾರೆ! ಅಂದರೆ ತಮಿಳು, ಇಂಗ್ಲೀಷ್ ಅಥವಾ ಇನ್ನಾವುದೇ ಮಾಧ್ಯಮದಲ್ಲಿ ಓದಿದ್ದರೂ ಸಹ ತಮಿಳನ್ನು ಪ್ರಥಮ ಭಾಷೆಯಾಗಿ ಓದಿರುವುದರಿಂದ ಎಲ್ಲಾ ವಿದ್ಯಾರ್ಥಿಗಳು ತಮಿಳನ್ನು ಉತ್ತಮವಾಗಿ ಬಲ್ಲವರಾಗಿದ್ದಾರೆ!
ಹೀಗಿದ್ದಾಗಿಯೂ ಕೆಲವೆಡೆ ಬೇರೆ ಭಾಷೆಯಲ್ಲಿ ಕಲಿತ ಮಕ್ಕಳು ತಮಿಳನ್ನು ಚೆನ್ನಾಗಿ ಕಲಿತಿರುವರೋ ಇಲ್ಲವೋ ಎಂಬ ಅನುಮಾನ ಸರ್ಕಾರಕ್ಕೆ ಕಾಡಿದೆ. ಏಕೆಂದರೆ ಹತ್ತನೆ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಅವರು ಈ ವರ್ಷ ಬರೆಯಬೇಕಾಗಿದೆ. ಅದಕ್ಕಾಗಿ ಎಲ್ಲಾ ಶಾಲೆಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿರುವ ಸರ್ಕಾರ ಪ್ರಥಮ ಭಾಷೆ ತಮಿಳಿನಲ್ಲಿ ಯಾವ ವಿದ್ಯಾರ್ಥಿಯೂ ಅನುತ್ತೀರ್ಣ ಆಗಬಾರದು. ಹಾಗೊಂದು ವೇಳೆ ಆದಲ್ಲಿ ಅದಕ್ಕೆ ಆಯಾ ಶಾಲೆಯ ಶಿಕ್ಷಕರೂ ಮತ್ತು ಪ್ರಾಂಶುಪಾಲರುಗಳೇ ಹೊಣೆಯಾಗಿರುತ್ತಾರೆ ಎಂಬ ಎಚ್ಚರಿಕೆ ನೀಡಿದೆ.
ಇದಲ್ಲವೇ ಒಂದು ರಾಜ್ಯಭಾಷೆಯನ್ನು ರಕ್ಷಿಸಿಕೊಳ್ಳುವ ಜಾಣತನ ? ತಮಿಳುನಾಡು ೨೦೦೬ ರಲ್ಲೇ ಯಾರೂ ವಿರೋಧಿಸದಂತೆ ನಿಯಮ ರೂಪಿಸಿ ಅದನ್ನು ಸತತ ಹತ್ತು ವರ್ಷ ಜಾರಿಗೊಳಿಸಿ ಇದೀಗ ಚೆನ್ನಾಗಿ ತಮಿಳು ಕಲಿತ ವಿದ್ಯಾರ್ಥಿಗಳನ್ನು ಕಾಲೇಜು ಮೆಟ್ಟಿಲು ಹತ್ತಿಸಲು ಹೊರಟಿದೆ. ಆದರೆ ನಮ್ಮ ಸರ್ಕಾರ ಮಾತೃಭಾಷೆಯ ಹೆಸರಲ್ಲಿ ಕಾನೂನು ಮಾಡುತ್ತಾ, ನ್ಯಾಯಾಲಯಗಳಲ್ಲಿ ಛೀಮಾರಿ ಹಾಕಿಸಿಕೊಳ್ಳುತ್ತಾ, ಖಾಸಗಿಯವರ ಮುಂದೆ ಡೊಗ್ಗಾಲು ಮಂಡಿ ಊರುತ್ತಾ, ಕನ್ನಡದ ಮರ್ಯಾದೆಯನ್ನೂ ಕಳೆಯುತ್ತಾ ಹೊರಟಿವೆ.
ಪ್ರಥಮ ಭಾಷೆಯಾಗಿ ಕನ್ನಡ ಕಡ್ಡಾಯವಾಗಲಿ
ಇನ್ನೂ ಕಾಲ ಮಿಂಚಿಲ್ಲ. ತಮಿಳುನಾಡು ತಂದಿರುವ ಅದೇ ಮಾದರಿಯನ್ನು ರಾಜ್ಯದಲ್ಲೂ ಜಾರಿಗೆ ತರಬೇಕು. ಪ್ರಥಮ ಭಾಷೆಯಾಗಿ ಕನ್ನಡ ಕಡ್ಡಾಯವಾಗಲಿ ಎಂದ ತಕ್ಷಣ ಇವರು ಒಂದರಿಂದ ಹತ್ತನೇ ತರಗತಿ ವರೆಗೆ ಪ್ರಥಮ ಭಾಷೆಯಾಗಿ ಕನ್ನಡ ಕಡ್ಡಾಯ ಎಂಬ ಕಾನೂನು ಮಾಡಿ ಬಿಡುತ್ತಾರೆ. ಮತ್ಯಾರೋ ನ್ಯಾಯಾಲಯಕ್ಕೆ ಹೋಗುತ್ತಾರೆ. ಮತ್ತೆ ಛೀಮಾರಿಯಾಗುತ್ತದೆ. ನಿಯಮ ಮುರಿದು ಬೀಳುತ್ತದೆ. ಆದರೆ ಹಾಗೆ ಮಾಡದೇ ಬರುವ ವರ್ಷದಿಂದ ಒಂದನೇ ತರಗತಿಗೆ ಮಾತ್ರ ಪ್ರಥಮ ಭಾಷೆಯಾಗಿ ಕನ್ನಡ ಕಡ್ಡಾಯ ಮಾಡಬೇಕು. ಅದರ ಮುಂದಿನ ವರ್ಷ ಅದನ್ನು ಎರಡನೇ ತರಗತಿಗೆ ಏರಿಸಬೇಕು. ಹೀಗೆ ಒಂದೊಂದು ವರ್ಷಕ್ಕೆ ಒಂದೊಂದು ತರಗತಿಗೆ ಪ್ರಥಮ ಭಾಷೆಯಾಗಿ ಕನ್ನಡವನ್ನು ಮಾಡುತ್ತಾ ಹೋದರೆ ಇನ್ನು ಹತ್ತು ವರ್ಷದ ನಂತರ ಎಲ್ಲಾ ತರಗತಿಗಳಲ್ಲೂ ಕನ್ನಡವು ಪ್ರಥಮ ಭಾಷೆಯಾಗಿರುತ್ತದೆ. ಮತ್ತು ಮಕ್ಕಳು ಯಾವ ಮಾಧ್ಯಮದಲ್ಲಿ ಕಲಿತರೂ ಪ್ರಥಮ ಭಾಷೆಯಾಗಿ ಕನ್ನಡವನ್ನು ಕಲಿಯುವುದರಿಂದ ಕನ್ನಡವನ್ನೂ ಚೆನ್ನಾಗಿ ಕಲಿಯುತ್ತಾರೆ. ವಿದ್ಯಾ ಮಂತ್ರಿಗಳು ಇದನ್ನು ಗಮನಿಸುವಂತಾಗಲಿ.
ಕಾಮೆಂಟ್ಗಳು