ವಿಷಯಕ್ಕೆ ಹೋಗಿ

ಸನಾತನಿಗಳೂ ಮತ್ತವರ ಸೀರೆಯೂ...



ಈ ಗಂಡಸರು ಹೆಂಗಸರನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು ಎಂಬ ಚಪಲ ಇನ್ನೂ ಬಿಟ್ಟಿಲ್ಲ. ಅದಕ್ಕಾಗಿ ಬೇರೆ ಬೇರೆ ಕಾರಣಗಳನ್ನು ಹುಡುಕುತ್ತಾ, ಬೇರೆ ಬೇರೆ ನೀತಿಗಳನ್ನು ಹೇರುತ್ತಾ ಸಾವಿರಾರು ವರ್ಷಗಳಿಂದಲೂ ಗಂಡಿನ ಪಾರಮ್ಯ ಮೆರೆಯುತ್ತಾ ಬಂದಿದ್ದಾರೆ. ಅದರ ಇತ್ತೀಚಿನ ಬೆಳವಣಿಗೆ 'ವಸ್ತ್ರ ಸಂಹಿತೆ' ಎಂಬ ನಾಲಾಯಕ್‌ ನೀತಿ. 

ಕೆಲವೇ ದಶಕಗಳ ಹಿಂದೆ ಕೇರಳದಲ್ಲಿ ನಂಬೂದರಿಗಳು (ಇವರು ಅಂದಿನ ಪ್ರಭಲ ಜನಾಂಗ) ಒಂದು ನೀತಿ ರೂಪಿಸಿದ್ದರಂತೆ. ಅದೇನೆಂದರೆ "ವಿದೇಶಿಯರ ಮೂಲಕ ಭಾರತಕ್ಕೆ ಬಂದ ಕುಪ್ಪಸವನ್ನು ನಂಬೂದರಿ ಹೆಂಗಸರುಗಳಲ್ಲದೇ ಬೇರೆ ಜಾತಿಯ ಹೆಂಗಸರು ಧರಿಸಬಾರದು" ಎಂದು! ಇದರರ್ಥ ತಮ್ಮ ಮನೆ ಹೆಣ್ಣು ಮಕ್ಕಳು ಬೀದಿಯಲ್ಲಿ ಎದೆ ಮುಚ್ಚಿಕೊಂಡು ಮರ್ಯಾದೆಯುತವಾಗಿ ಓಡಾಡಲಿ, ಬೇರೆ ಜಾತಿಯ ಹೆಣ್ಣು ಮಕ್ಕಳು ಬೀದಿಯಲ್ಲಿ ಎಲ್ಲರಿಗೂ ಎದೆ ತೋರಿಸಿಕೊಂಡು ಓಡಾಡಲಿ ಎಂದಲ್ಲವೇ ? ಇನ್ನೂ ಹೇಳಬೇಕೆಂದರೆ ಇತರೆ ಹೆಣ್ಣುಮಕ್ಕಳ ಎದೆ ಸೌಂದರ್ಯವನ್ನು ತಾವು ಸವಿಯೋಣ, ನಮ್ಮನೆ ಹೆಣ್ಣು ಮಕ್ಕಳನ್ನು ಮುಚ್ಚಿಡೋಣ ಎಂಬ ಮುಲ್ಲಾಗಳ ವಾದಕ್ಕೂ ಇದಕ್ಕೂ ವ್ಯತ್ಯಾಸವೇನಿಲ್ಲ. ಬ್ರಿಟೀಷರು ಬರುವ ಮುನ್ನ ಹೆಂಗಸರ ಮೇಲುಡುಗೆಗಳೇ ಇರಲಿಲ್ಲ ಅನ್ನೋದು ಕೂಡಾ ಒಪ್ಪಿಕೊಳ್ಳಲಾಗದ ಧರ್ಮಾಂಧತೆಯಲ್ಲಿ ಈ ಸನಾತನಿಗಳಿದ್ದಾರೆ.

ಇತ್ತೀಚಿನ ಬೆಳವಣಿಗೆ ಎಂದರೆ ಶಾಲಾ ಕಾಲೇಜುಗಳಲ್ಲಿ ರೂಪಿಸಲಾಗುತ್ತಿರುವ "ವಸ್ತ್ರ ಸಂಹಿತೆ". ನೆನಪಿರಲಿ, ಇದನ್ನು ರೂಪಿಸುವವರು ಗಂಡಸರು ಮತ್ತು ಇದು ಅನ್ವಯವಾಗುವುದು ಹೆಂಗಸರಿಗೆ, ಹುಡುಗಿಯರಿಗೆ!  ಅಂದರೆ ಹೆಣ್ಮಕ್ಕಳು ಯಾವ ಉಡುಗೆ ಹಾಕಬೇಕು ಅನ್ನೋದನ್ನ ಇಂದಿಗೂ ಗಂಡಸರೇ ನಿರ್ಧರಿಸುತ್ತಾರೆ ಎಂದರೆ ಎಂತಹ ವಿಷಮ ಸ್ಥಿತಿಯಲ್ಲಿ ಸ್ತ್ರೀಯರು ಬದುಕುತ್ತಿರಬಹುದು ? "ಹುಡುಗಿಯರು ಹೇಗೆ ಹೇಗೋ ವಸ್ತ್ರ ಧರಿಸುವುದರಿಂದಲೇ ಹುಡುಗರು ಕೆರಳಿ ಅತ್ಯಾಚಾರ ಮಾಡುತ್ತಾರೆ" ಎಂದು ವಾದಿಸುವ ಅವಿವೇಕಿಗಳಿಗೇನೂ ನಮ್ಮಲ್ಲಿ ಕೊರತೆ ಇಲ್ಲ. ಆದರೆ ಅಂದು ಇಂದ್ರ ಹೋಗಿ ಅಹಲ್ಯೆಯನ್ನು ಅತ್ಯಾಚಾರ ಮಾಡುವಾಗ ಆಕೆ ಯಾವ ಉದ್ರೇಕಕಾರಿ ಉಡುಗೆ ಧರಿಸಿದ್ದಳು ? ಕೀಚಕ ದ್ರೌಪದಿಯನ್ನು ಸರಸಕ್ಕೆ ಕರೆಯುವಾಗ ಆಕೆ ಯಾವ ಬ್ರಾಂಡ್‌ನ ಜೀನ್ಸ್‌ಪ್ಯಾಂಟ್‌ ಧರಿಸಿದ್ದಳು ? ಸ್ವಂತ ತಮ್ಮನ ಹೆಂಡತಿಯನ್ನು ವಾಲಿ ಹೊತ್ತೊಯ್ದು ಅರಮನೆಯಲ್ಲಿಟ್ಟು ಅತ್ಯಾಚಾರ ಮಾಡಬೇಕಾದರೆ ಆಕೆ ಯಾವ ಮಾಡರ್ನ್‌ ವಸ್ತ್ರ ಧರಿಸಿದ್ದಳು ? ಇವುಗಳಿಗೆಲ್ಲಾ ಉತ್ತರ ನೀಡಿಯಾರೇ ಸನಾತನಿಗಳು ? ಇವರದು ಕೂಡಾ ಒಂದು ಬಗೆಯ ಭಯೋತ್ಪಾದನೆಯೇ ಆಗಿದೆ.

ಸೆಕ್ಸಿ ಸೀರೆ !
ಇಂದಿನ ಪ್ರಜಾವಾಣಿಯಲ್ಲಿ (೨೦ ಜುಲೈ ೨೦೧೫) ಇಬ್ಬರು ಶಿಕ್ಷಕಿಯರು ಸೀರೆಯಿಂದ ಆಗುತ್ತಿರುವ ಕಿರಿಕಿರಿಯ ಬಗ್ಗೆ ಮನೋಜ್ಞವಾಗಿ ಬರೆದುಕೊಂಡಿದ್ದಾರೆ. ಅವೆರಡು ಪತ್ರಗಳನ್ನು ಓದಿದರೆ ಸಾಕು, ಸನಾತನಿಗಳ ಕುತಂತ್ರ ಸೀರೆಯ ಹೆಸರಲ್ಲಿ ಹೆಂಗಸರನ್ನು ಹೇಗೆ ನರಕದಲ್ಲಿ ಇಟ್ಟಿದೆ ಎಂಬುದನ್ನು ಅರಿಯಬಹುದು. 

ಸೀರೆ ಉಟ್ಟೊಡನೆಯೇ ಹೆಂಗಸರು ಮಹಾ ಮರ್ಯಾದೆಯುತವಾಗಿ ಕಂಡು ಬಿಡುತ್ತಾರೆ ಎಂಬ ಬೊಗಳೆ ವಾದವನ್ನು ಒಪ್ಪಲು ಸಧ್ಯವೇ ಇಲ್ಲ. ನಾನು ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ಮೇಡಂಗಳು ಸೀರೆಯುಟ್ಟು ಬಂದು ಅವಸ್ಥೆ ಪಡುವುದನ್ನು ಗಮನಿಸಿದ್ದೆ. ಎಷ್ಟೇ ನಾಜೂಕಾಗಿ ಸೀರೆಯುಟ್ಟು ಬಂದರೂ ಒಂದೆರಡು ತರಗತಿಗಳಲ್ಲಿ ಪಾಠ ಮಾಡುವ ಹೊತ್ತಿಗೆ ಅದು ಸಾಕಷ್ಟು ವ್ಯತ್ಯಾಸಗೊಂಡಿರುತ್ತದೆ. ಓಡಾಡಿಕೊಂಡು ಪಾಠ ಮಾಡುವಾಗ ಆ ಕಡೆ ಈ ಕಡೆ ತಿರುಗುವಾಗ ಎಡ ಭಾಗದಿಂದ ಕಾಣಿಸುವ ಹೊಟ್ಟೆ - ಸ್ತನಗಳ ಗಾತ್ರವನ್ನು ಮರೆ ಮಾಚಲಾಗದೇ, ಪಡ್ಡೆ ಹುಡುಗರ ಕಳ್ಳ ನೋಟವನ್ನು ಎದುರಿಸಲಾಗದೇ ತೊಂದರೆ ಅನುಭವಿಸುತ್ತಿದ್ದರು. ಅದರಲ್ಲೂ ಸ್ವಲ್ಪ ದೊಡ್ಡ ಸ್ತನಗಳಿರುವವರಾದರೆ ಅವರ ಅವಸ್ಥೆಯನ್ನು ನಾವು ವರ್ಣಿಸಲಾಗದು. ಸ್ವಲ್ಪ ಹಳಬರು ಹೇಗೋ ಸುಧಾರಿಸಿಕೊಳ್ಳುತ್ತಿದ್ದರಾದರೂ ಹೊಸ ಶಿಕ್ಷಕಿಯರು ಬಹಳ ತೊಂದರೆ ಅನುಭವಿಸುವುದು ಕಂಡು ಬರುತ್ತಿತ್ತು. ಒಂದೆಡೆ ಅನುಭವ ಇಲ್ಲದೇ ಉಟ್ಟು ಬರುವ ಸೀರೆಯ ಕಿರಿಕಿರಿಯಾದರೆ ಮತ್ತೊಂದೆಡೆ ಯಾವ ಭಾಗದಿಂದ ಏನು ಕಾಣಿಸುತ್ತದೋ, ಸೊಂಟದಲ್ಲಿ ಯಾವಾಗ ಜಾರುತ್ತದೋ ಎಂಬ ತಳಮಳದಲ್ಲೇ ಅವರು ಇರಬೇಕು. ಎಡಗೈ ಎತ್ತುವುವಾಗಲೂ ಯೋಚಿಸಿ, ಬಲಗೈ ಇಂದ  ಸೆರಗನ್ನು ಸರಿಯಾಗಿ ಎಳೆದು ಹಿಡಿದುಕೊಂಡು ಎತ್ತಬೇಕು. ಎಷ್ಟೋ ಸಮಯ ಇದನ್ನೆಲ್ಲಾ ಮರೆತು ತನ್ಮಯರಾಗಿ ಪಾಠ ಮಾಡುತ್ತಾ ಓಡಾಡುವಾಗ, ಹಲಗೆಯ ಮೇಲೆ ಬರೆಯುವಾಗ ಕಾಣಿಸುವ ಒಂದು ಬದಿಯ ನೋಟವನ್ನು ತಡೆಯಲು ಸಾಧ್ಯವಾಗುವುದೇ ಇಲ್ಲ. ಒಬ್ಬರು ಮೇಡಂ ಅಂತೂ ಅದೆಷ್ಟೋ ಉದ್ದದ ಸೀರೆಯಿಂದ ಹೊಟ್ಟೆ ಮತ್ತು ಸ್ತನದ ಭಾಗಕ್ಕೆ ಮತ್ತೊಂದು ಸುತ್ತು ಬರುವಂತೆ ಸುತ್ತಿಕೊಂಡು ಬಿಗುಮ್ಮಾಗಿ ಪಿನ್‌ ಹಾಕಿಕೊಂಡು ಬರುತ್ತಿದ್ದರು! 

ಹಾಗೆಯೇ ನಾನು ಫೋಟೋ ಸ್ಟುಡಿಯೋ ಮಾಡಿದ್ದ ಸಮಯದಲ್ಲಿ ಅನೇಕ ಮದುವೆ ಸಮಾರಂಭಗಳಿಗೆ ಫೋಟೋ ಮತ್ತು ವೀಡಿಯೋ ಚಿತ್ರೀಕರಣಕ್ಕೆ ಹೋಗುತ್ತಿದ್ದೆ. ಅಲ್ಲಿಯೂ ಇದೇ ಸಮಸ್ಯೆ ಎದುರಾಗುತ್ತಿತ್ತು. ಆರತಕ್ಷತೆ ಸಮಯದಲ್ಲಿ ಮದುಮಕ್ಕಳ ಕೈ ಮೇಲೆ ತೆಂಗಿನ ಕಾಯಿ ಇರಿಸಿ ಹಾಲು ಸುರಿಯುವಾಗ, ಬಾಗಿ ಆರತಿ ಎತ್ತುವಾಗ ಅನೇಕ ಹೆಂಗಸರು ಉಟ್ಟು ಬರುವ ಸೀರೆಯ ಬದಿಯಿಂದ ಕಾಣಿಸುವ ನೋಟ ಚಿತ್ರೀಕರಿಸುವುದು ಮುಜುಗರ ಉಂಟು ಮಾಡುತ್ತಿತ್ತು. ಅಲ್ಲಿ ಸುತ್ತಲೂ ಜನರು ಮುತ್ತಿಕೊಂಡು ಸಾಕಷ್ಟು ಸ್ಥಳವೂ ಇರುವುದಿಲ್ಲ. ಅವರು ಮದುಮಕ್ಕಳಿಗೆ ಹತ್ತಿರದ ಸಂಬಂಧಿಗಳಾಗಿರುವುದರಿಂದ ಚಿತ್ರಿಸದೇ ಬಿಡುವಂತೆಯೂ ಇಲ್ಲ. ಅದನ್ನು ಅಲ್ಲಿ ಹೇಳುವಂತೆಯೂ ಇಲ್ಲ. 

ಸೀರೆಗೂ ಮೊದಲು ಏನಿತ್ತು ?

ಹೆಂಗಸರಿಗೆ ಸೀರೆಯನ್ನೇ ಉಡಿ ಎಂದು ಹೇಳುವ ಯಾವನಾದರೂ ತಾನು ಪಂಚೆ ಉಟ್ಟು ಬರುವುದನ್ನು ನೋಡಿದ್ದೀರಾ ? ಪ್ಯಾಂಟ್‌ ಏನು ಭಾರತೀಯ ಸಂಸ್ಕೃತಿಯೇ ? ಕೂತರೆ ತೊಡೆ ಕಾಣಿಸುವ ದೊಗಲೆ ಚೆಡ್ಡಿ ಭಾರತದ್ದೇ ? ಹೆಂಗಸರ ಮೇಲೆ ಮಾತ್ರ "ವಸ್ತ್ರ ಸಂಹಿತೆ" ಹೇರುವ ಇವರುಗಳ ಮಕ್ಕಳು ಇನ್ಯಾವುದೋ ಕಾಲೇಜಿಗೆ ಜೀನ್ಸ್‌ ತೊಟ್ಟು ಹೋಗುವುದೂ ಇದೆ. ಸೀರೆ ಉಡುವುದನ್ನು ಇವರುಗಳು "ಭಾರತೀಯ ಸಂಸ್ಕೃತಿ" ಎಂದು ಬೊಗಳೆ ಹೊಡೆದು ಪ್ರಚಾರ ಮಾಡುತ್ತಾರೆ. ಸೀರೆ ಇದ್ದಕ್ಕಿದ್ದಂಗೆ ಭಾರತದಲ್ಲಿ ಶುರುವಾದದ್ದಲ್ಲ. ಅದಕ್ಕೂ ಮೊದಲು ಮಾನವರು ತಮ್ಮ ಮರ್ಮಾಂಗ ಮುಚ್ಚಿಕೊಳ್ಳಲು ಪ್ರಾಣಿಗಳ ಚರ್ಮ, ಎಲೆ, ಮರದ ತೊಗಟೆಗಳನ್ನು ಉಪಯೋಗಿಸುತ್ತಿದ್ದರು. ಅದು ಮಾನ ಮುಚ್ಚಿಕೊಳ್ಳುವುದಕ್ಕಲ್ಲ, ಹುಳ ಹುಪ್ಪಟೆಗಳಿಂದ ತೊಂದರೆ ನಿವಾರಿಸಲು ಮಾತ್ರ. ಕಾಲ ಕಳೆದಂತೆ ಅವುಗಳು ಅಭ್ಯಾಸವಾಗುತ್ತಾ ಹೋಗಿ ಮರ್ಮಾಂಗಕ್ಕೆ ಏನಾದರೂ ಮರೆ ಇಲ್ಲದಿದ್ದರೆ ಸಂಕೋಚ ಪಡುವಂತಹ ಭಾವನೆ ಬೆಳೆಯಿತು. ಇದು ಮುಂದೆ 'ಮಾನ ಮುಚ್ಚುವ' ವಸ್ತ್ರ ಧರಿಸಲು ಕಾರಣವಾಯ್ತು. ತೀರಾ ಇತ್ತೀಚಿನ ದಶಕಗಳ ವರೆಗೂ ಹಳ್ಳಿಯ ಹೆಂಗಸರು ಕುಪ್ಪಸವನ್ನು ದಿನನಿತ್ಯ ಧರಿಸುತ್ತಿರಲಿಲ್ಲ. ತಮಿಳುನಾಡಿನ ಹಲವಾರು ಹಳ್ಳಿಗಳಲ್ಲಿ ಮುದುಕಿಯರು ಮೇಲುಡುಗೆ ಧರಿಸದೇ ಬರೇ ಸೀರೆ ಸುತ್ತಿಕೊಂಡು ಓಡಾಡುವುದನ್ನು ನೋಡಬಹುದು. ಹಾಗೆಯೇ ಅಮೆಜಾನ್‌ ಕಾಡುಗಳಲ್ಲಿರುವ ಟ್ರೈಬ್‌ ಮಾನವರು ಇಂದಿಗೂ ಯಾವುದೇ ಉಡುಪು ಧರಿಸುವುದಿಲ್ಲ, ಮತ್ತು ಅವರಿಗೆ ಸಂಕೋಚವೂ ಇಲ್ಲ. ಅಂದರೆ ಇದರರ್ಥ ವಸ್ತ್ರ ಅನ್ನುವುದು ಆಧುನಿಕ ಮಾನವನ ಬಳಕೆಯ ಒಂದು ವಸ್ತು ಮಾತ್ರ. ಅದನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು ಅನ್ನುವುದು ಅವರವರ ವಿವೇಚನೆಗೆ ಬಿಟ್ಟ ವಿಷಯ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.