ವಿಷಯಕ್ಕೆ ಹೋಗಿ

ನೂರರ ಗಡಿ ದಾಟಿದ "ನಿಮ್ಮೆಲ್ಲರ ಮಾನಸ"


​ಒಂದು ಪತ್ರಿಕೆಯನ್ನು ನಡೆಸುವುದು ಎಷ್ಟು ಕಷ್ಟ ಅನ್ನೋದು ನನ್ನನ್ನೂ ಸೇರಿದಂತೆ ಕೈ ಸುಟ್ಟುಕೊಂಡ ಎಲ್ಲರಿಗೂ ಗೊತ್ತು. ಆದರೂ ಗೆಳೆಯ ಗಣೇಶ್‌ ಕೋಡೂರು ಛಲ ಬಿಡದ ತ್ರಿವಿಕ್ರಮನಂತೆ "ನಿಮ್ಮೆಲ್ಲರ ಮಾನಸ" ತಿಂಗಳ ಪತ್ರಿಕೆಯನ್ನು ನೂರು ಸಂಚಿಕೆಯ ಗಡಿ ದಾಟಿಸಿದ್ದು ಮೆಚ್ಚುವ ಕೆಲಸ. ಈ ಶುಭ ಸಂದರ್ಭದಲ್ಲಿ ಗಣೇಶ್‌ ಇಂದು ಒಂದು ಸಣ್ಣ ಕಾರ್ಯಕ್ರಮವನ್ನೂ ಇಟ್ಟುಕೊಂಡಿದ್ದರು. ಅವರ ಪತ್ರಿಕೆಯ ಓದುಗ ಮಿತ್ರರು ದೂರದೂರುಗಳಿಂದೆಲ್ಲಾ ಬಂದು ಸೇರಿದ್ದು ಎಲ್ಲರಿಗೂ ಕುಶಿ ನೀಡಿತು.

ಹಾಗೆಯೇ ಇಂದು ಗಣೇಶ್‌ ತುಂಬಾ ಭಾವುಕರಾಗಿದ್ದರು. ಅದಕ್ಕೆ ಕಾರಣ ತಾನಂದುಕೊಂಡಿದ್ದನ್ನು ಸಾಧಿಸಿದ ತೃಪ್ತಿಗಿಂತಲೂ ಹೆಚ್ಚಾಗಿ ಇಷ್ಟು ಸಾಧಿಸಲು ಎಷ್ಟು ಕಷ್ಟ ಪಡಬೇಕಾಯ್ತು ಅನ್ನೋದು ಅವರ ಮಾತುಗಳಿಂದಲೇ ತಿಳಿಯುತ್ತಿತ್ತು. ಅವರ ಮಾತು ಕೇಳುತ್ತಾ ನನ್ನ ಕಣ್ಣು ಸಹ ತೇವಗೊಂಡದ್ದು ಸುಳ್ಳಲ್ಲ. ಕಾರಣ ಗಣೇಶ್‌ ಕೋಡೂರು ಹೆಸರು ನಾನು ಮೊದಲಿಗೆ ನೋಡಿದ್ದು ತರಂಗದಲ್ಲಿ ಅವರ ಒಂದು ಕಥೆಯನ್ನು ನೋಡಿದಾಗ. ಮುಖತಃ ಭೇಟಿಯಾಗಿದ್ದು "ಪ್ರೇಮ ಸಾಮ್ರಾಜ್ಯ" ಎಂಬ ಪತ್ರಿಕೆಯ ಕಚೇರಿಯಲ್ಲಿ. ಹೊಟ್ಟೆ ಪಾಡಿಗಾಗಿ ನಾನು ಆ ಪತ್ರಿಕೆಗೂ ಲೇಖನ ಬರೆದು ಕೊಡಲು ಹೋದಾಗ ಅಲ್ಲಿ ಅದೇ ಕಾರಣಕ್ಕೆ ಬರೆಯುತ್ತಿದ್ದ ಗಣೇಶ್‌ ಇದ್ದರು. ಅದರ ಹಿಂದಿನ ಸಂಚಿಕೆಗೆ ನಾನು ಕೊಟ್ಟಿದ್ದ "ಸವಿ ನೆನಪುಗಳು ಬೇಕು" ಕತೆಯನ್ನು ಓದಿದ್ದ ಗಣೇಶ್‌ "ಅಷ್ಟೊಳ್ಳೆ ಕತೆಯನ್ನು ಯಾಕೆ ಈ ಪತ್ರಿಕೆಗೆ ಕೊಟ್ರಿ? ತರಂಗಕ್ಕೆ ಕಳಿಸಬೇಕಿತ್ತು, ತುಂಬಾ ಚೆನ್ನಾಗಿದೆ" ಅಂದರು. ತರಂಗಕ್ಕೆ ಕಳಿಸಿದ್ದರೆ ಅದು ಖಂಡಿತಾ ಪ್ರಕಟವಾಗುತ್ತಿತ್ತು. ಆದರೆ ಅದು ಪ್ರಕಟವಾಗಲು ಒಂದೆರಡು ತಿಂಗಳು ಮತ್ತು ಅಲ್ಲಿಂದ ಸಂಭಾವನೆ ಬರಲು ಕನಿಷ್ಟ ಮೂರು ತಿಂಗಳು ಕಾಯಬೇಕಿತ್ತು. ಆದರೆ ಮನೆಯ ಹತ್ತಿರವೇ ಇರುವ ಈ ಪತ್ರಿಕೆಯ ಕಚೇರಿಯಿಂದ ಪ್ರತಿ ತಿಂಗಳೂ ಪುಟಕ್ಕೆ ಇಷ್ಟು ಅಂತ ಹಣ ಕೈ ಸೇರುತ್ತಿತ್ತು. ಬಡತನದಲ್ಲೇ ಇದ್ದ ನನಗೆ ಅದು ಅಗತ್ಯವೂ ಇತ್ತು.


ಅದರ ನಂತರ ನಾನೂ "ಪಿಸುಮಾತು" ಪತ್ರಿಕೆ ಮಾಡಿ ಕೈ ಸುಟ್ಟುಕೊಂಡೆ. ಅದಾದ ನಂತರ ಗಣೇಶ್‌ "ನಿಮ್ಮೆಲ್ಲರ ಮಾನಸ" ಪ್ರಾರಂಭಿಸಿದರು. ನಾನೂ ಆಗಾಗ ಲೇಖನ ಬರೆಯುತ್ತಿದ್ದೆ. ಪ್ರತಿ ತಿಂಗಳೂ ಒಂದೊಂದು ಬರೆದು ಕೊಡಿ ಅಂತ ಅವರು ಕೇಳಿದರೂ ಹೊಟ್ಟೆ ಪಾಡಿಗಾಗಿ ಎಲ್ಲೆಲ್ಲೋ ದುಡಿಯುತ್ತಾ ಲೇಖನ ಬರೆದು ಕೊಡಲು ಸಾಧ್ಯವಾಗದೇ ಹೋಯ್ತು. ನಾನು ಬರೆದ ಕೆಲವೇ ಲೇಖನಗಳಿಗೂ ಒಟ್ಟಾಗಿ ಒಂದು ಬಾರಿ ಸಂಭಾವನೆ ಕೊಟ್ಟು ಋಣ ತೀರಿಸಿಕೊಂಡರು. ಅವರ ಪತ್ರಿಕೆಗೆ ಲೇಖನ ಬರೆಯದೇ ಹೋದರೂ ಸಹ ಅವರ ಪತ್ರಿಕೆಯನ್ನು ಗಮನಿಸುತ್ತಾ "ಏನೋ ಮಾಡುತ್ತಿದ್ದಾರೆ, ಮಾಡಲಿ" ಎಂದುಕೊಂಡಿದ್ದೆ. ಒಂದೆರಡು ವರ್ಷ ನಡೆಸಿದ್ದರೇನೋ, ಒಂದು ದಿನ ಸಿಕ್ಕಾಗ "ಪತ್ರಿಕೆ ಮುಂದುವರಿಸುವುದು ಸಾಧ್ಯವಾಗುತ್ತಿಲ್ಲ, ಒಂದೆರಡು ಸಂಚಿಕೆಯಲ್ಲಿ ನಿಲ್ಲಿಸಲಿದ್ದೇನೆ" ಅಂದರು. ತುಂಬಾ ಬೇಸರವಾದರೂ ಏನೂ ಮಾಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಕೊನೆಗೆ ಅವರ ಗೆಳೆಯರ‍್ಯಾರೋ ಕೈ ಹಿಡಿದು "ಡೆಲ್ಲಿ ಪ್ರೆಸ್‌"ನವರಿಗೆ ಪರಿಚಯಿಸಿ "ನಿಮ್ಮೆಲ್ಲರ ಮಾನಸ" ನಿಲ್ಲದಂತೆ ಮಾಡಿದರು. ಆಗ ಅವರಿಗೆ ಹಾರೈಸಿ ನಾನು ಬರೆದ ಪತ್ರವನ್ನು ಸಂಪಾದಕೀಯದಲ್ಲಿ ಪ್ರಕಟಿಸಿದ್ದಲ್ಲದೇ "ನನ್ನ ಮೆಚ್ಚಿನ ಲೇಖಕ ಶ್ರೀಪತಿ ಗೋಗಡಿಗೆ" ಎಂದು ಹೊಗಳಿದರು. 

ಡೆಲ್ಲಿ ಪ್ರೆಸ್‌ನೊಂದಿಗೆ ಸೇರಿದ ನಂತರ ಬಹುಶಃ ಅವರ ಪತ್ರಿಕೆ ಬಗೆಗಿನ "ಆರ್ಥಿಕ ಚಿಂತೆ" ಕಡಿಮೆ ಆಗಿ ಕೇವಲ ಅದರ ಗುಣಮಟ್ಟದ ಬಗ್ಗೆ ಮಾತ್ರ ಯೋಚಿಸುವಂತಾಗಿರಬಹುದು. ಆ ಕಾರಣಕ್ಕೆ ಪತ್ರಿಕೆಯಲ್ಲಿ ಅವರ ತಂಡದಿಂದ ಒಳ್ಳೊಳ್ಳೆಯ ಲೇಖನಗಳು ಬರುವುದನ್ನು ಗಮನಿಸಿದೆ. ಈ ನಡುವೆ ರವಿ ಬೆಳಗೆರೆಯವರ "ಓ ಮನಸೇ" ಮೂರನೆಯದೋ ನಾಲ್ಕನೆಯದೋ ಮರು ಹುಟ್ಟು ಕಂಡು ಮಾನಸಕ್ಕೆ ಸ್ವಲ್ಪ ತೊಂದರೆ ನೀಡಿರಲಿಕ್ಕೂ ಸಾಕು. ಅಷ್ಟಾದರೂ ಮಾನಸ ಮುಂದುವರಿಯಲು ಕಾರಣ ಗಣೇಶ್‌ರ ಓದುಗ ಬಳಗ ಮತ್ತವರ ಬರಹದ ಶಕ್ತಿ. ಒಂದು ಸಮಯದಲ್ಲಿ ಕಾಲಿಗೆ ಹವಾಯಿ ಚಪ್ಪಲಿ ಕೊಳ್ಳಲು ಹಿಂದೆ ಮುಂದೆ ನೋಡುವಂತ ಸ್ಥಿತಿಯಿಂದ (ಇಂದೇನೂ ಅವರು ಕಾರಿನಲ್ಲಿ ಓಡಾಡುತ್ತಿಲ್ಲ) ಇಲ್ಲಿಯವರೆಗೆ ಏರಿ ಬಂದ ಗಣೇಶ್‌ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಇಂದು ಅವರ ಮತುಗಳನ್ನು ಕೇಳುತ್ತಾ ಹೋದಾಗ ನಾನೂ ಸಹ ಅವರ ರೀತಿಯೆ ಕಷ್ಟ ಪಟ್ಟೆನಲ್ಲ ಎಂಬ ನೆನಪಾಗಿ ಒಂದು ಕ್ಷಣ ಭಾವುಕನಾಗಬೇಕಾಯ್ತು. 

ಏನಾದರೂ "ನಿಮ್ಮೆಲ್ಲರ ಮಾನಸ" ನೂರ‍್ಕಾಲ ಬಾಳಲಿ. ಕನ್ನಡದ ಓದುಗರ ಮನೆ ಮಾತಾಗಲಿ. ಹಾಗೆಯೇ ಅವರ "ಅರುಡೊ" NGO ಮೂಲಕ ಹಳ್ಳಿಯ ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಲೂ ಇದ್ದಾರೆ. ಅದಕ್ಕಾದರೂ ಧನಿಕರು ಕೈ ಜೋಡಿಸಿ ಅವರ ಕೆಲಸದಲ್ಲಿ ಭಾಗಿಯಾಗಲಿ ಎಂದು ಆಶಿಸುವೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...