"ಇಲ್ಲ" ಅಂತೀರಾ ಅಂತ ಗೊತ್ತು. ಆದ್ರೂ ಕೇಳದೇ ವಿಧಿ ಇಲ್ಲ ನೋಡಿ. ಈ ರಾಜಕಾರಣ ಅಂದರೇನೇ ಮೂರೂ ಬಿಟ್ಟವರ ಸ್ವರ್ಗ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯವೇ. ಆದರೂ ನಿಮ್ಮನ್ನು ಮೆಚ್ಚಲೇ ಬೇಕು. ಯಾಕೆ ಗೊತ್ತಾ ? ನಾಚಿಕೆ, ಮಾನ, ಮರ್ಯಾದೆಗಳು ಇಲ್ಲದಿದ್ದರೂ ಇವೆಯೆಂಬಂತಾದರೂ ನಟಿಸುವ ರಾಜಕಾರಣಿಗಳ ಮಧ್ಯೆ "ಅವ್ಯಾವೂ ನನಗಿಲ್ಲ ಕಣ್ರೀ? ಏನ್ರೀ ಈವಾಗ?" ಅಂತ ರಾಜಾರೋಷವಾಗಿ ಕುರ್ಚಿ ಹಿಡಿದು ಕುಳಿತಿದ್ದೀರಲ್ಲ... ಅದಕ್ಕೆ.
ಆರೋಪಗಳು ರಾಜಕಾರಣಿಗಳ ಮೇಲೊಂದೇ ಅಲ್ಲ. ಹಳ್ಳಿಯ ಮುಗ್ದ ಜನರ ಮೆಲೂ ಆಗಾಗ ಬರುತ್ತಲೇ ಇರುತ್ತವೆ. ಆಗ ಅವರು ಆಣೆ-ಪ್ರಮಾಣ ಮಾಡುವುದು ಸಾಧಾರಣ ವಿಷಯ. ಏಕೆಂದರೆ ಅವರಿಗೆ ಕೋರ್ಟು-ಕಚೇರಿ ಸುತ್ತುವುದು ಸಾಧ್ಯವಿಲ್ಲ. ದೇವರ ಮೇಲೆ ಅಪಾರ ನಂಬಿಕೆ. ಅದೇನಿದ್ದರೂ ದೇವರು ನೋಡಿಕೊಳ್ಳಲಿ ಎಂದು ಆಣೆ ಮಾಡುತ್ತಾರೆ. ಹಾಗಂತೆ ಅದನ್ನು ಕಂಡವರ ದುಡ್ಡಲ್ಲಿ ಜಾಹೀರಾತು ನೀಡಿ ಎಲ್ಲರಿಗೂ ತಿಳಿಸುವುದಿಲ್ಲ. ತಮ್ಮ ಆಪ್ತೇಷ್ಟರಲ್ಲಿ ಹೇಳಿಕೊಂಡು ಮಾಡುತ್ತಾರೆ. ಅದು ಅವರ ಪರಿಮಿತಿ. ಆದರೆ ರಾಜ್ಯದ ಮುಖ್ಯಮಂತ್ರಿಯಾಗಿ ನಿಮಗೇನಾಗಿದೇರಿ ದಾಡಿ ? ಕುಮಾರಸ್ವಾಮಿ ಸುಳ್ಳು ಹೇಳುತ್ತಿದ್ದರೆ, ವೃಥಾ ಆರೋಪ ಮಾಡುತ್ತಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಕೆ ಯಾಕೆ ? ಅವರು ಬಹಿರಂಗ ಮಾಡುತ್ತಿರುವ ದಾಖಲೆಗಳು ನಕಲಿ ಆಗಿದ್ದರೆ ಮಾನನಷ್ಟ ಮೊಖದ್ದಮೆ ಹೂಡಬಹುದಲ್ಲ? ಜಾಹೀರಾತಿಗೆ ಸರ್ಕಾರದ ಬೊಕ್ಕಸದಿಂದ ಕೋಟಿ ಕಳೆಯುವ ಬದಲು ಒಬ್ಬ ಮುಖ್ಯಮಂತ್ರಿಯಾಗಿ ಕಾನೂನು ಕ್ರಮ ಕೈಗೊಳ್ಳಲು ಕಷ್ಟವೇನು ? ನ್ಯಾಯಾಲಯಕ್ಕೆ ಹೋದರೆ ಈಗಿನದಕ್ಕಿಂತಾ ಮೂರು ಪಟ್ಟು ಮಾನ ಹರಾಜು ಆಗುತ್ತದೆ ಎಂಬ ಭಯವೇ ? ಥೂ ನಿಮ್ಮ ಮುಖಕ್ಕೆ.
ಒಂದಾದ ಮೇಲೊಂದರಂತೆ ಕೆಸರನ್ನೇ ಮೈಮೇಲೆಳೆದುಕೊಳ್ಳುತ್ತಿರುವ ನಿಮ್ಮಂತಾ ವೃದ್ದರಿಗೆ ಸ್ವಲ್ಪವಾದರೂ ಸಾಮಾಜಿಕ ಕಳಕಳಿ, ಜವಾಬ್ದಾರಿ ಇಲ್ಲವೇ ? ಸುಳ್ಳು ಹೇಳುವುದನ್ನು, ಲೂಟಿ ಮಾಡುವುದನ್ನು ೬೦ ವರ್ಷ ಆಳಿದ ಕಾಂಗ್ರೆಸ್ಸಿಗರು ಸಹ ನಿಮ್ಮಿಂದಲೇ ಕಲಿಯಬೇಕಾಗಿದೆಯಲ್ಲ ? ಇಷ್ಟಾದರೂ ಬುದ್ದಿ ಬಂದಿಲ್ಲವೆಂದರೆ ಅದೆಂಥಹ ಹೀನ ಜನ್ಮಕುಂಡಲಿ ನಿಮ್ಮದು ? ಅದನ್ನಾದರೂ ನಿಮ್ಮನ್ನು ಸಮರ್ಥಿಸುತ್ತಿರುವ ಲಿಂಗಾಯಿತ ನಕಲಿ ಸ್ವಾಮೀಜಿಗಳಾಗಲೀ, RSS ಬೆಂಬಲಿತ ಪೇಜಾವರ ಸ್ವಾಮಿಗಳಾಗಲೀ ಹೇಳಿದರೆ ಒಳಿತು. ರಾಜಕಿಯದಲ್ಲಿ ಜಾತಿ ರಾಜಕಾರಣ ಇದೆಯೆಂಬುದು ಎಲ್ಲರಿಗೂ ಗೊತ್ತು. ಜಾತಿಯನ್ನು ತಮ್ಮ ಗೆಲುವಿಗಾಗಿ ಎಲ್ಲರೂ ಉಪಯೋಗಿಸಿಕೊಳ್ಳುವವರೇ. ಆದರೆ ಅದನ್ನು ತನ್ನ ತೆವಲಿಗಾಗಿ, ತನ್ನ ತಪ್ಪನ್ನು ಮುಚ್ಚಿ ಹಾಕಲು, ಪಕ್ಷದ ವರಿಷ್ಠರನ್ನು ಬ್ಲಾಕ್ಮೇಲ್ ಮಾಡಲು ಉಪಯೋಗಿಸಿದ ಏಕೈಕ ರಾಜಕಾರಣಿ ಅಂದರೆ ನೀವೇ. ಹೀಗಾಗಿ ಇತರ ಸಮುದಾಯಗಳ ಮನಸ್ಸಿನಲ್ಲಿ ಲಿಂಗಾಯಿತ ಸಮುದಾಯದ ಮೇಲೆ ಅಪನಂಬಿಕೆ ಮೂಡುವಂತಾಗಿದೆ. ಈ ಲಿಂಗಾಯಿತರು ಜಾತಿಗೋಸ್ಕರ ಯಾವ ಕಡು ಭ್ರಷ್ಟನನ್ನಾದರೂ ಸಮರ್ಥಿಸಿಕೊಳ್ಳುತ್ತಾರೆ ಎಂಬಂತಾಗಿದೆ.
ಇಷ್ಟಾದ ಮೇಲೂ ಯಾಕೆ ಈ ದುರಾಸೆ ? ಮಾಡಿಕೊಂಡಿರುವ ಆಸ್ತಿ ಸಾಲದಾ ? ಇನ್ನೆಷ್ಟು ವರ್ಷ ಬದುಕಬಲ್ಲಿರಿ ? ಈಗಾಗಲೇ ಎಪ್ಪತ್ತರ ಹೊಸ್ತಿಲಲ್ಲಿ ಇರುವ ನೀವು ನೂರು ವರ್ಷ ಬದುಕಿದರೂ ಉಳಿದಿರುವುದು ಮೂವತ್ತು ಮಾತ್ರ. ಒಬ್ಬ ಮನುಷ್ಯ ೩೦ ವರ್ಷ ಬದುಕಲು ಎಷ್ಟು ದುಡ್ಡು ಬೇಕು ? ಈಗಾಗಲೇ ಲೂಟಿ ಮಾಡಿರುವುದು ಸಾಕಾಗಲ್ವಾ ? ಮಕ್ಕಳನ್ನು ಬೆಳೆಸಿದ್ದು, ಅವರನ್ನು ರಾಜಕೀಯವಾಗಿ ಸುಸ್ತಿರಗೊಳಿಸಿದ್ದು ಸಾಕಾಗಲ್ವಾ ? ಹಾಗಂತ ರಾಜಕಾರಣ ಬಿಡಿ ಅಂತ ಯಾರೂ ಹೇಳಲ್ಲ... ಇನ್ನಾದರೂ ಲೋಭ ಮತ್ಸರ ಬಿಟ್ಟು ಉತ್ತಮ ರಾಜಕಾರಣ ಮಾಡಿ. ರಾಜ್ಯಕ್ಕೆ ಏನಾದರೂ ಒಳ್ಳೇದು ಮಾಡಿ... ಇಲ್ಲವೆಂದರೆ ಜನ ಬೀದಿ ಬೀದೀಲಿ ಅಟ್ಟಾಡಿಸಿಕೊಂಡು ಹೊಡೆದಾರು.
ಕಾಮೆಂಟ್ಗಳು