ಬಿಜೆಪಿಗೆ ಭರ್ಜರಿ ಬಹುಮತ ಇರುವುದರಿಂದ ಮೋದಿ ಈ ಬಾರಿ ದೇಶಕ್ಕೆ ಒಂದು ಉಪಕಾರವನ್ನು ಮಾಡಬಹುದು. ಅದೇನೆಂದರೆ ಭಾರತ-ಚೀನಾ ಗಡಿಯನ್ನು ಸ್ಪಷ್ಟವಾಗಿ ತೀರ್ಮಾನಿಸಿ ಸಮಸ್ಯೆಗೆ ಅಂತಿಮ ವಿದಾಯ ಹೇಳುವುದು. ಅರುಣಾಚಲ ಪ್ರದೇಶದ ಬಹುಭಾಗ ಹಿಂದೆ ಚೀನಾಕ್ಕೆ ಸೇರಿದ್ದಾಗಿಯೂ ಅದನ್ನು ತನಗೆ ಬಿಟ್ಟು ಕೊಟ್ಟಲ್ಲಿ ತಾನು ಆಕ್ರಮಿಸಿಕೊಂಡಿರುವ ಅಕ್ಸಾಯ್ ಚಿನ್ ಪ್ರಾಂತ್ಯವನ್ನು ಭಾರತಕ್ಕೆ ಬಿಡಲು ತಯಾರಿರುವುದಾಗಿ ನೆಹರು ಪ್ರಧಾನಿಯಾಗಿದ್ದ ಸಮಯದಲ್ಲಿ ಚೀನಾ ಹೇಳಿದ್ದಾಗಿ, ಅದಕ್ಕೆ ನೆಹರು ಒಪ್ಪದಿರುವುದರಿಂದಲೇ ಗಡಿ ಸಮಸ್ಯೆ ಇಂದಿಗೂ ಮುಂದುವರಿದಿರುವುದಾಗಿಯೂ ಒಂದು ಲೇಖನದಲ್ಲಿ ಓದಿದ್ದೆ. ಮೋದಿ ಸರ್ಕಾರ ಈ ವಿಷಯವನ್ನು ರಚನಾತ್ಮಕವಾಗಿ ಪರಿಶೀಲಿಸಿ ಅರುಣಾಚಲ ಪ್ರದೇಶದ ಒಂದಿಷ್ಟು ಭಾಗವನ್ನು ನಾವು ಕಳೆದುಕೊಂಡರೂ (ಅಕ್ಸಾಯ್ ಚಿನ್ ನಮ್ಮದಾಗುವುದರಿಂದ) ಸಮಸ್ಯೆಯನ್ನು ಕೊನೆಗೊಳಿಸುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು.
ಈ ಸಮಸ್ಯೆಯನ್ನು ಬಗೆ ಹರಿಸಲು ಇದು ಅತ್ಯುತ್ತಮವಾದ ಸಮಯ. ಏಕೆಂದರೆ ಚೀನಾಕ್ಕೆ ಸಹ ತನ್ನ ಬಂಡವಾಳವನ್ನು ತೊಡಗಿಸಲು ಭಾರತಕ್ಕಿಂತಾ ಪ್ರಶಸ್ತ ದೇಶ ಇನ್ನೊಂದಿಲ್ಲ ಎಂಬ ಅರಿವು ಇದೆ. ಭಾರತದಕ್ಕೂ ಬಂಡವಾಳ ಬೇಕು ಅನ್ನುವ ಸಂಕಲ್ಪದಲ್ಲಿ ಮೋದಿ ದೇಶ-ವಿದೇಶ ಸುತ್ತುತ್ತಿದ್ದಾರೆ. ಇದೇ ಸಮಯದಲ್ಲಿ ಗಡಿ ವಿಷಯವನ್ನು ಮುಂದಿಟ್ಟುಕೊಂಡು ಕೂತರೆ ಆ ದೇಶವೂ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗಬಹುದು.
ಮತ್ತು ಬಿಜೆಪಿಗೆ ಸ್ಪಷ್ಟ ಬಹುಮತ ಇರುವುದರಿಂದ ಸ್ವಂತ ನಿರ್ಧಾರದೊಂದಿಗೆ ಸಮಸ್ಯೆಗೆ ಕೊನೆ ಹಾಡಬಹುದು. ವಿರೋಧ ಪಕ್ಷಗಳ ಗೊಂದಲವಿರುವುದಿಲ್ಲ.
ಮುಂದೆಂದಾದರೂ ಯಾವ ಪಕ್ಷಕ್ಕಾದರೂ ಇಷ್ಟೊಂದು ಬಹುಮತ ಬರುತ್ತದೋ ಇಲ್ಲವೋ ಗೊತ್ತಿಲ್ಲ. ಬೇರೆ ಪಕ್ಷಗಳಿಗೆ ಬಹುಮತ ಬಂದರೂ ಅವು ಗಡಿ ವಿಷಯದಲ್ಲಿ ಮುಂದುವರಿಯುವಂತಿಲ್ಲ, ಕಾರಣ ಮೇಲೆ ತಿಳಿಸಿದ ರೀತಿಯ ಪ್ರಸ್ತಾಪವನ್ನು ಬಿಜೆಪಿಯೇತರ ಸರ್ಕಾರ ಮಾಡಿದ್ದೇ ಹೌದಾದರೆ ಮೋದಿಭಕ್ತರು ಆಕಾಶ ಭೂಮಿ ಒಂದು ಮಾಡುತ್ತಾರೆ. ಆದ್ದರಿಂದ ಈ ಬಾರಿ ಮೋದಿಯವರು ಇದನ್ನು ಮಾಡುವುದೇ ಸೂಕ್ತ. ಅರುಣಾಚಲಪ್ರದೇಶದ ಭಾಗವನ್ನು ಬಿಟ್ಟು ಕೊಡಲು ಹೊರಟರೆ ಅದೇ ಮೋದಿಭಕ್ತರು ಸುಮ್ಮನಿರುತ್ತಾರಾ? ಅನುಮಾನವೇ ಬೇಡ... ಮೋದಿ ದೇಶವನ್ನೇ ಮಾರಿದರೂ ಅವರು ಮರು ಮಾತಾಡುವುದಿಲ್ಲ ! ಕಾರಣ ಇನ್ನೂ ಮೋದಿ ಜ್ವರ ಇಳಿದಿಲ್ಲ!

ಕಾಮೆಂಟ್ಗಳು