ವಿಷಯಕ್ಕೆ ಹೋಗಿ

ಸಾಲವನು ಕೊಂಬಾಗ ಕೆನೆಮೊಸರುಂಡಂತೆ...



ಫೇಸ್‌ಬುಕ್ಕಿನಲ್ಲಿ ಯಾರೋ ಒಬ್ಬಾತ ಕಂಡವರ ಬಳಿಯೆಲ್ಲಾ ಸಾಲ ಪಡೆದು ಅದನ್ನು ಮರಳಿಸಲಾಗದೇ ಒದ್ದಾಡುತ್ತಿರುವ ಬಗ್ಗೆ ವಿಷಯಗಳು ಹರಿದಾಡುತ್ತಿವೆ.
ಸಾಲದ ಬಗ್ಗೆ ನನ್ನ ಅನುಭವಗಳು ಹೀಗಿವೆ.

ಕೆಲವು ವರ್ಷಗಳ ಹಿಂದೆ ಚೆನ್ನೈನಲ್ಲಿ ಒಂದು ಸಂಸ್ಥೆಯಲ್ಲಿ ಇದ್ದು ಕೆಲಸ ಮಾಡಿ ಒಂದಿಷ್ಟು ಹಣ ಸೇರಿಸಿಕೊಂಡು ಒಂದಿಷ್ಟು ಗೆಳೆಯರಿಂದ ಸಾಲ ಪಡೆದು ಪೋಟೋ ಸ್ಟುಡಿಯೋ ಒಂದನ್ನು ಅಲ್ಲೇ ಹಾಕಿದ್ದೆ. ಆದರೆ ಅದು ನಷ್ಟ ಹೊಂದಿತು. ಆಮೇಲೆ ಸಾಲ ತೀರಿಸಲಾಗದೇ ಎಷ್ಟು ಒದ್ದಾಡಿದೆ. ಯಾವುದೇ ಬೆಂಬಲವೂ ಇಲ್ಲದೇ ಚೆನ್ನೈನ ಬೀದಿಗಳಲ್ಲಿ ಅಲೆದಾಡಿದ್ದು, ಮನೆ ಮಠ ಇಲ್ಲದೇ ಫುಟ್‌ಪಾತ್‌ ಮೇಲೆ ಹಾಗೂ ಮೆರಿನಾ ಬೀಚ್‌ನ ಮರಳಿನ ಮೇಲೆ ಮಲಗುತ್ತಿದ್ದುದು (ಒಬ್ಬ ಗೆಳೆಯ ಜೊತೆಗಿದ್ದ), ಹೊಟ್ಟೆಗಿಲ್ಲದೇ ಕೇವಲ ಬೋಂಡ/ಬಜ್ಜಿ ತಿಂದುಕೊಂಡು ( ಅವನ್ನು ನಾಲ್ಕನೇ ತರಗತಿ ಓದುತ್ತಿದ್ದ ಒಬ್ಬ ಚಿಕ್ಕ ಹುಡುಗ ಕೊಡಿಸುತ್ತಿದ್ದ ! ) ದಿನಗಟ್ಟಲೇ ಬದುಕಿದ್ದು ನೆನೆಸಿಕೊಂಡರೆ ಮೈ ಜುಂ ಅನ್ನುತ್ತದೆ. ಸಾಲ ಅನ್ನುವುದು ಮನುಷ್ಯನನ್ನು ಎಂತಹ ಸ್ಥಿತಿಗೆ ಬೇಕಾದರೂ ತಳ್ಳುತ್ತದೆ ಅನ್ನುವುದನ್ನು ನಾನು ಸ್ವತಃ ಅನುಭವಿಸಿದ್ದೇನೆ. 


ಅಷ್ಟಾದ ನಂತರವೂ ಕಷ್ಟಪಟ್ಟು (ಈ ಸಮಯದಲ್ಲಿ ಒಂದೆರಡು ಅಡ್ಡದಾರಿಗಳು ಕಾಣಿಸಿದರೂ ಅತ್ತ ಹೋಗದೇ) ಎಲ್ಲಾ ಸಾಲ ತೀರಿಸಿ ಬೆಂಗಳೂರಿಗೆ ಬಂದೆ. ಆ ನಂತರ ಇಲ್ಲೂ ಕಷ್ಟ ಪಟ್ಟು ದುಡಿಯುತ್ತಿದ್ದೇನೆ. ತೀರಾ ಅನಿವಾರ್ಯದ ವಿಷಯ ಹೊರತಾಗಿ ಸಾಲ ಪಡೆಯುವುದನ್ನು ಬಿಟ್ಟಿದ್ದೇನೆ. ಅದೂ ಕೂಡಾ ಆತ್ಮೀಯರಾದ ಒಂದಿಬ್ಬರು ಗೆಳೆಯರ ಬಳಿ ಮಾತ್ರ ವ್ಯವಹಾರ. ಒಬ್ಬ ಗೆಳೆಯನಂತೂ ಆತನ ಕ್ರೆಡಿಟ್‌ ಕಾರ್ಡ್‌ ನಂಬರ್‌, ಪಾಸ್‌ವರ್ಡ್‌‌ಗಳನ್ನೇ ನನಗೆ ನೀಡಿದ್ದಾನೆ. ಅಗತ್ಯ ಬಿದ್ದಾಗ ಆನ್‌ಲೈನ್‌ ಖರೀದಿಗೆ ಅದನ್ನು ಉಪಯೋಗಿಸಿಕೊಂಡು ಹಣವಿರುವಾಗ ಅವನ ಖಾತೆಗೆ ಜಮಾ ಮಾಡುತ್ತೇನೆ. ಅವನೆಂದೂ ಲೆಕ್ಕ ಕೇಳಿಲ್ಲ, ನಾನೇ ಬರೆದಿಟ್ಟುಕೊಂಡು ಜಮಾ ಮಾಡುತ್ತೇನೆ. ಹಾಗಂತ ಅವನೇನೂ ಕೋಟ್ಯಾಧೀಶನಲ್ಲ. ನಂಬಿಕೆ ಅಷ್ಟೇ ಇಲ್ಲಿ ಕೆಲಸ ಮಾಡುತ್ತದೆ.

ಆದರೆ ಫೇಸ್‌ಬುಕ್‌ನಲ್ಲಿ ಚಾಟ್‌ ಮಾಡುವ ಮೂಲಕ ಅಥವಾ ಒಂದೆರಡು ಬಾರಿ ಭೇಟಿ ಮಾಡುವ ಮೂಲಕ ಲಕ್ಷಗಟ್ಟಲೆ ಸಾಲ ಎತ್ತಬಹುದು ಅಂದರೆ ನನಗಂತೂ ನಂಬಲು ಸಾಧ್ಯವಾಗುತ್ತಿಲ್ಲ. ಕೊಟ್ಟವನು ಕೋಡಂಗಿ, ಈಸಿಕೊಂಡವನು ಈರಭದ್ರ ಎಂಬ ಗಾದೆ ನೆನಪಗುತ್ತದೆ ಅಷ್ಟೇ. ನನಗಿಂತಾ ಕಿರಿಯರಿಗೆ ನನ್ನ ಸಲಹೆ ಏನೆಂದರೆ ಯಾವುದೇ ಕಾರಣಕ್ಕೂ ಸಾಲ ಪಡೆಯಬೇಡಿ. ವಿನಾಕಾರಣ ಕೊಡುವುದನ್ನೂ ಆದಷ್ಟು ಕಡಿಮೆ ಮಾಡಿ. ಹಾಸಿಗೆ ಇದ್ದಷ್ಟು ಕಾಲು ಚಾಚಿರಿ ಮತ್ತು ಸಾಲ ಕೇಳುವವರಿಗೂ ಅದನ್ನೇ ಹೇಳಿರಿ. ಇಂದು ಲಕ್ಷ ಕೊಡು, ನಾಳೆ ನಾನು ಕೋಟ್ಯಾಧೀಶನಾಗಿ ನಿನಗೆ ಹತ್ತು ಲಕ್ಷ ಹಿಂತಿರುಗಿಸುತ್ತೇನೆ ಅನ್ನುವಂತಹ ಮಾತನ್ನು ನಂಬಬೇಡಿ. ಹಾಗೆ ಹೇಳುವ ವ್ಯಕ್ತಿಗೆ ಈ ಮೊದಲೇ ಸಾಲ ಕೊಟ್ಟಿರುವಾತ ಕುತ್ತಿಗೆ ಹಿಸುಕುತ್ತಿರುತ್ತಾನೆ. ಅದರಿಂದ ಪಾರಾಗಲು ನಿಮಗೆ ಬಲೆ ಬೀಸುತ್ತಿದ್ದಾನೆಂದೇ ಅರ್ಥ. ಹಾಗೊಂದು ವೇಳೆ ಆತನಿಗೆ ತೀರಾ ಕಷ್ಟ ಇದೆ ಅಂತಾದರೆ ಕೈಲಾದ ಸಹಾಯ ಮಾಡಿ. ಸಾಲ ಕೊಟ್ಟು ನೀವೇ ಮುಳುಗಿ ಹೋಗುವಂತಹ ಕೆಲಸ ಮಾಡಿಕೊಳ್ಳಬೇಡಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವರದಾ ಬಸ್ಸಿಗೆ ಬೆಂಕಿ ಬಿತ್ತು !!

ಇದು ನಾನು ಹೈಸ್ಕೂಲು ಓದುತ್ತಿದ್ದಾಗ ನಡೆದ ಘಟನೆ. ಸಾಗರದಲ್ಲಿ ಶ್ರೀ ವರದಾ ಬಸ್‌ನ ಹೆಸರನ್ನು ಕೇಳದವರೇ ಇಲ್ಲ. ನನಗೆ ಬುದ್ದಿ ತಿಳಿದಾಗಿನಿಂದಲೂ ನಮ್ಮೂರಿಗೆ ಬರುತ್ತಿದ್ದುದು ಅದೇ ಬಸ್ಸು. ಅದರ ಮಾಲೀಕರಿಗೆ ಇದ್ದದ್ದು ಅದೊಂದೇ ಬಸ್ಸು. ಹಾಗಂತ ಅದೇನೂ ಐರಾವತ ಥರಾ ಇರಲಿಲ್ಲ. ಸಾಧಾರಣವಾಗೇ ಇತ್ತು. ಸಾಗರದಿಂದ ಚಂದನಹಳ್ಳಿಗೆ ಇರುವ ಹತ್ತು ಕಿಲೋ ಮೀಟರನ್ನು ಕೇವಲ ಒಂದು ಗಂಟೆಯ ಅವಧಿಯಲ್ಲೇ ಕ್ರಮಿಸಿ ದಾಖಲೆ ಮಾಡಿತ್ತು. ಯಾಕೆಂದರೆ ಅದೇ ರಸ್ತೆಯಲ್ಲಿ ಕಾರುಗಳು ಬಂದರೆ ಅವು ಎರಡು ಗಂಟೆ ತೆಗೆದುಕೊಳ್ಳುತ್ತಿದ್ದವು. ರಸ್ತೆ ಹಾಗಿತ್ತು. ಅದಕ್ಕೆ ತಕ್ಕಂತೆ ಬಸ್ಸೂ ಸಹ ಪ್ರತಿ ದಿನ ಬಿಹೆಚ್ ರಸ್ತೆಯ ಒಂದು ಗ್ಯಾರೇಜಿಗೆ ಹೋಗಿ ತಪಾಸಣೆ ಮಾಡಿಸಿಕೊಂಡೇ ಬರುತ್ತಿತ್ತು. ಸಾಗರದಲ್ಲಿ ಗುರುವಾರ ಸಂತೆ. ಗುರುವಾರ ಬಂತೆಂದರೆ ಭಯಂಕರ ರಷ್ಶು. ಅದೊಂದು ಗುರುವಾರ ಸಾಗರದ ಜ್ಯೂನಿಯರ‍್ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿಕೊಂಡು ಮಧ್ಯಾಹ್ನ ಬಿಹೆಚ್ ರಸ್ತೆಯ ಗ್ಯಾರೇಜಿನಲ್ಲೇ ಇರುತ್ತಿದ್ದ ವರದಾ ಬಸ್ಸನ್ನು ಹತ್ತಿ ಹೇಗೋ ಸೀಟು ಹಿಡಿದು ಕುಳಿತಿದ್ದೆ. ಸೀಟು ಬೇಕಾದವರೆಲ್ಲಾ ಅಲ್ಲೇ ಬಂದು ಬಸ್ ಹತ್ತುತ್ತಿದ್ದರು. ಬಸ್ ಅಂತೂ ಒಂದು ಗಂಟೆಗೆ ಹೊರಟು ಜೋಗ ಬಸ್‌ ನಿಲ್ದಾಣ ಬಂದಾಗ ಯಕ್ಕಾಮಕ್ಕಾ ಜನ ಹತ್ತಿಯೇ ಬಿಟ್ಟರು. ಬಸ್‌ನ ಟಾಪ್‌ನಲ್ಲೂ ಜನರು ಹತ್ತಿ ಕುಳಿತರು. ಒಳಗಡೆಯಂತೂ ಉಸಿರುಗಟ್ಟುವಷ್ಟು ಜನಸಂದಣಿ. ಗಂಡಸರು, ಹೆಂಗಸರು, ಮಕ್ಕಳು ಮದುಕರು, ಮುದುಕಿಯರು, ಹರೆಯದ ಹು...

ನಾಲ್ಕು ಎರಡು ಸಾಲಿನ ಕತೆಗಳು

1. ಕಾಡಿನಲ್ಲಿ ದಾರಿ ಕಾಣದೇ ಅತ್ತಿತ್ತ ಅಲೆದಾಡುತ್ತಿದ್ದವನ ಪಕ್ಕದಲ್ಲೇ ಒಂದು ಕಾರು ಬಂದು ನಿಂತಿತು. ಅದರಿಂದ ಇಣುಕಿದ ಸುಂದರ ಯುವತಿ "ಬನ್ನಿ ಡ್ರಾಪ್ ಮಾಡ್ತೀನಿ" ಎಂದು ಉಲಿದಳು. ಸಂತೋಷದಿಂದ ಹತ್ತಿ ಕುಳಿತ.... ಮರುಕ್ಷಣವೇ ಎಚ್ಚರಾಗಿ ಹೋಯ್ತು. 2. "ನೀನು ತುಂಬಾ ಸುಂದರಿ" "ನೀನು ತುಂಬಾ ತುಂಟ" 3."ನಿನಗೆ ವಯಸ್ಸಾಯ್ತು ಕಣೆ" "ನಿಮಗೆ ಕೈಲಾಗಲ್ಲ" 4. ಆತ ತಡವರಿಸಿ ತಡವರಿಸಿ "ಐ ಲವ್ ಯೂ" ಅಂದ. ಆಕೆ ತಡವರಿಸದೇ ನುಡಿದಳು.. "ನೀನು ಇನ್ನೂ ಶುರುನಲ್ಲೇ ಇದೀಯಲ್ಲೋ" 5. ನೀರಿನಲ್ಲಿ ಮೀನಿನ ಹೆಜ್ಜೆ ಗುರುತನ್ನು ಹುಡುಕುತ್ತಾ ಹೊರಟ ಅವನಿಗೆ ಅವಳು ಅವನ ಹೃದಯದೊಳಗೆ ಬಂದು ಹೋದ ಗುರುತು ಕಾಣಿಸಲೇ ಇಲ್ಲ. 6. "ಹೆಣ್ಣೇ ಆದರೂ ಈ ಸಲ ಭ್ರೂಣ ಹತ್ಯೆ  ಮಾಡಿಸುವುದು ಬೇಡ" ಅವರು ಮಾತಾಡಿಕೊಂಡರು. ಆದರೆ ಅದೇಕೋ ಅವಳ ಮುಟ್ಟು ನಿಲ್ಲಲೇ ಇಲ್ಲ. 7. "ಅಮ್ಮಾ... ಯಾವ ಸೀಮೆಯ ರಾಜಕುಮಾರ ಬಂದು ಕರೆದರೂ ನಾ ನಿನ್ನ ಬಿಟ್ಟು ಹೋಗಲಾರೆ" ಅಂದಿದ್ದ ಮಗಳು ಗಮಾರನೊಬ್ಬನ ಪ್ರೇಮಕ್ಕೆ ಸಿಲುಕಿ ಓಡಿ ಹೋದಳು. 8. ಜೀವನದಲ್ಲಿ ಏನೂ ಸಾಧಿಸಲಾಗದೆ ಅವನು ಜಿಗುಪ್ಸೆಗೊಂಡು ಕಾಡಿಗೆ ಹೋಗಿ ದೊಡ್ಡ ಮರವೊಂದಕ್ಕೆ ಹಗ್ಗ ಕಟ್ಟಿ ನೇಣು ಹಾಕಿಕೊಂಡ. ಹಗ್ಗ ತುಂಡಾದ ಕಾರಣ ಸಾವನ್ನೂ ಸಾಧಿಸಲಾಗೆದೇ ಮನೆಗೆ ಹಿಂದಿರುಗಿದ. 9. ಎರಡು ಸಾಲಿನ ಕಥೆ ಹೇಳ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.