ಅದು ನಾನು ಬೆಂಗಳೂರಿಗೆ ಬಂದ ಹೊಸತು. ಬಸವನಗುಡಿ ನೆಟ್ಟಕಲ್ಲಪ್ಪ ವೃತ್ತದ ಬಳಿಯಿದ್ದ 'ನಾಸಾ ಪ್ರಕಾಶನ'ದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಅವತ್ತು ಏನೋ ಕೆಲಸದ ಮೇಲೆ ನನ್ನನ್ನು ಬೇರೆ ಕಚೇರಿಗೆ ಕಳಿಸುವ ಸಲುವಾಗಿ ಮಾಲೀಕರು ಬೇಗನೇ ಬರಲು ತಿಳಿಸಿದ್ದರು. ಕುಂಬಳಗೋಡು ಪೆಪ್ಸಿ ಕಂಪನಿ ಬಳಿಯಿಂದ ಏಳು ಗಂಟೆಗೆಲ್ಲಾ ಹೊರಟು ಬೇಗನೆ ಬಂದು ಬಿಟ್ಟೆ. ನೆಟ್ಟಕಲ್ಲಪ್ಪ ವೃತ್ತದ ಬಳಿ ಬಸ್ ಬಂದಾಗ ಅಲ್ಲಿನ ಗಣಪತಿ ದೇವಸ್ಥಾನದ ಬಳಿ ಚಿತ್ರೀಕರಣವೊಂದು ನಡೆಯುತ್ತಿರುವುದು ಕಾಣಿಸಿತು. ಅಷ್ಟೇನೂ ಸಮಯವಾಗದ್ದರಿಂದ ಬಸ್ ಇಳಿದು ಅಲ್ಲಿ ಹೋದೆ.
ಅದು ಶಿವರಾಜ್ಕುಮಾರ್ ನಟನೆಯ ಒಂದು ಹೊಸ ಚಿತ್ರದ ಮುಹೂರ್ತದ ಕಾರ್ಯಕ್ರಮ ಅಂತ ತಿಳಿಯಿತು. ಕೆಳಗೆಲ್ಲಾ ಕಾರ್ಪೆಟ್ ಹಾಕಿ, ಹೂವುಗಳಿಂದ ಇಡೀ ದೇವಾಲಯವನ್ನೂ ಅಲಂಕರಿಸಿದ್ದರು. ಆಗಿನ್ನೂ ಬೆಳಗಿನ ಏಳೂವರೆ-ಎಂಟರ ಸಮಯವಾದ್ದರಿಂದ ಅಷ್ಟೇನೂ ಜನರಿರಲಿಲ್ಲ. ನಾನು ಒಂದು ಬದಿಯಲ್ಲಿ ನಿಂತು ಶಿವರಾಜ್ ಕುಮಾರ್ ಅವರನ್ನು ನೋಡತೊಡಗಿದೆ. ಅವರಿಗೆ ಮಹಾರಾಜರ ವೇಶ ತೊಡಿಸಿದ್ದರು.
ಆಗ ಒಬ್ಬೊಬ್ಬರೇ ಚಿತ್ರರಂಗದ ಗಣ್ಯರು ಬರತೊಡಗಿದರು. ಯಾರೋ ಒಬ್ಬ ಗಣ್ಯರು ಬಂದಾಗ ಅದುವರೆಗೂ ದೇವಾಲಯದ ಒಳಗಿದ್ದ ಒಬ್ಬರು ಕೈ ಮುಗಿಯುತ್ತಾ ಹೊರ ಬಂದರು. ಅವರನ್ನು ನೋಡಿ ನನಗೆ ರೋಮಾಂಚನವಾಗಿ ಹೋಯ್ತು. ಕಾರಣ ಹಾಗೆ ಬಂದ ವ್ಯಕ್ತಿ ರಾಜ್ಕುಮಾರ್ ಆಗಿದ್ದರು. ಬಾಲ್ಯದಿಂದಲೂ ಅವರ ಅಭಿಮಾನಿಯಾಗಿ ಬೆಳೆದ ನನಗೆ ಈ ಭೇಟಿ ಅನಿರೀಕ್ಷಿತವೇ ಆಗಿತ್ತು. ಮೂಖವಾಗಿ ಅವರನ್ನೇ ಕಣ್ತುಂಬಿಕೊಂಡೆ. ಬಿಳಿ ಪಂಚೆ, ಬಿಳಿ ಅಂಗಿ, ಕೈಲೊಂದು ಕೈಗಡಿಯಾರ! ಅವರು ನನ್ನ ಎದುರಲ್ಲೇ ನನ್ನನ್ನೂ ನೋಡಿ ಆತ್ಮೀಯ ಸ್ನೇಹಿತರನ್ನು ನೋಡಿದಾಗ ಕಿರುನಗುತ್ತೇವಲ್ಲ ಹಾಗೆ ಮುಗುಳ್ನಗುತ್ತಾ, ನನಗೂ ಸೇರಿಸಿ ಎಲ್ಲರಿಗೂ ಕೈ ಮುಗಿಯುತ್ತಾ ನನ್ನ ಎದುರಿಂದಲೇ ಹಾದು ಆಗಮಿಸಿದ ಗಣ್ಯರನ್ನು ಸ್ವಾಗತಿಸಲು ಹೋದರು. ಆ ಸಮಯದಲ್ಲಿ ಅವರಿಗೆ ಪ್ರತಿಯಾಗಿ ಕೈಮುಗಿಯುವ ಜ್ಞಾನವೂ ನನಗೆ ಬರಲೇ ಇಲ್ಲ. ಸುಮ್ಮನೇ ನಿಂತುಬಿಟ್ಟಿದ್ದೆ. ಎಷ್ಟೋ ಹೊತ್ತು ಹಾಗೆಯೇ ನಿಂತು ಅವರನ್ನು ನೋಡಿದೆ.
ಕೊನೆಗೆ ಶಿವರಾಜ್ಕುಮಾರ್ ಕುದುರೆಯೇರಿ ಬರುವ ದೃಶ್ಯಕ್ಕೆ ಅಣ್ಣವರು ಕ್ಲಾಪ್ ಮಾಡಿದರು. ಅಷ್ಅರಲ್ಲಿ ನನಗೆ ಸಮಯವಾದ್ದರಿಂದ ನಮ್ಮ ಕಚೇರಿ ಕಡೆಗೆ ಹೊರಟೆ.

ಕಾಮೆಂಟ್ಗಳು