ತಮಿಳುನಾಡಿನ ಕುತಂತ್ರಿಗಳು ಕಮಲಹಾಸನರ "ವಿಶ್ವರೂಪಂ" ಚಿತ್ರಕ್ಕೂ ಕೊಕ್ಕೆ ಹಾಕಿ ಕೇಕೆ ಹಾಕಿದ್ದಾರೆ. ಅದು ಭಯೋತ್ಪಾದನೆಯ ವಿಷಯವನ್ನು ಒಳಗೊಂಡಿದೆ ಅನ್ನುವುದು ಕುಮಾರಿ (?!) ಜಯಲಲಿತ ಸರ್ಕಾರ ನೀಡಿರುವ ಕಾರಣವಾದರೂ ಅದರ ಹಿಂದಿನ ನಿಗೂಢ ವಿಷಯಗಳು ಬೇರೆಯೇ ಇವೆ.
ಭಯೋತ್ಪಾದನೆಯ ವಿಷಯವಿರುವುದಕ್ಕೂ ಮುಸ್ಲಿಮರಿಗೂ ಏನು ಸಂಬಂಧ ? ದೇಶದಲ್ಲಿ ಅಷ್ಟೇ ಅಲ್ಲದೇ ಪ್ರಪಂಚದಲ್ಲೆಲ್ಲಾ ಭಯೋತ್ಪಾದನೆ ಹರಡಿರುವುದು ಸುಳ್ಳೇ ? ತಮಿಳು ಭಯೋತ್ಪಾದನೆ ಈ ಕುಮರಿಯನ್ನೇ ಉಡಾಯಿಸುವಷ್ಟು ಬೆಳೆದಿದ್ದರಿಂದಲೇ ಅಲ್ಲವೇ ಈಕೆ ಝಡ್ + ಕಾವಲು ಹಾಕಿಸಿಕೊಂಡಿದ್ದು?
ವಿಶ್ವರೂಪಂ ಚಿತ್ರವು ತಯಾರಾಗುತ್ತಲೇ ಕಮಲ್ ಒಂದು ವಿವಾದವನ್ನು ಮೈಮೇಲೆಳೆದುಕೊಂಡಿದ್ದರು. ಅದು ಹಂಚಿಕೆ ವಿವಾದ. ಏರ್ಟೆಲ್ ನವರಿಗೆ ಚಿತ್ರದ ಸ್ಯಾಟಲೈಟ್ ಬಿತ್ತರಣೆ ಹಕ್ಕನ್ನು ಮಾರಿಕೊಂಡಿದ್ದು ತಮಿಳುನಾಡಿನ ಚಿತ್ರ ವಿತರಕರ ಕಣ್ಣು ಕೆಂಪಾಗಿಸಿತ್ತು. ಆದರೆ ಅವರಿಗೆ ಕಮಲ್ ಬಗ್ಗಿರಲಿಲ್ಲ. ಆದನ್ನೇ ನೆಪವಾಗಿಟ್ಟುಕೊಂಡ ವಿತರಕ ಮಹಾಷಯರು ಈಗ ಜಯಾ ಮೂಲಕ ಮುಸ್ಲಿಮರ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಪೋಲಕಲ್ಪಿತ ವದಂತಿಯನ್ನು ಹರಿಯ ಬಿಟ್ಟು ಚಿತ್ರ ಬಿಡುಗಡೆಯನ್ನು ಮುಂದೂಡಿದ್ದಾರೆ. ಮುಸ್ಲಿಂ ಮತಗಳ ಬೇಟೆಯ ಚಿಕ್ಕ ಅವಕಾಶವನ್ನೂ ಕಳೆದುಕೊಳ್ಳಲಿಚ್ಚಿಸದ ಲಜ್ಜೆಗೆಟ್ಟ ರಾಜಕಾರಣಿಗಳಿಗೆ ಇಂತಹ ಸುವರ್ಣಾವಕಾಶ ಸಿಕ್ಕರೆ ಕೇಳಬೇಕೆ? ಈಗ ನಡೆದಿರುವುದೂ ಅದೇನೆ. ಇಲ್ಲವೆಂದರೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿರುವ ಚಿತ್ರಕ್ಕೆ ಸರ್ಕಾರ ತಡೆ ಹಾಕುವುದಂದರೇನು? ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ತೀರ್ಮಾನ ಏನಾಗುವುದೆಂದು ಕಾದು ನೋಡಬೇಕಾಗಿದೆ. ಆದರೂ ಕಮಲ್ರಂತಹ ಶ್ರೇಷ್ಟ ನಟರಿಗೂ ಈ ರೀತಿ ತೊಂದರೆ ಕೊಡುವುದು ಅಕ್ಷಮ್ಯ.
ಮುಸ್ಲಿಮರೇ ದೇವರನ್ನು ಅವನಷ್ಟಕ್ಕೆ ಬಿಡಿ..
ಕನ್ನಡದಲ್ಲೊಂದು ಗಾದೆ ಮಾತಿದೆ, "ದೇವರು ಕೊಟ್ಟರೂ ಪೂಜಾರಿ ಕೊಡ" ಅಂತ, ಅದನ್ನು ಇಸ್ಲಾಮಿನ ಮುಲ್ಲಾಗಳಿಗೆ ಅನ್ವಯಿಸಿದರೆ "ಅಲ್ಲಾಹ್ ಕೊಟ್ಟರೂ ಮುಲ್ಲಾ ಬಿಡ !" ಎಂದು ಹೇಳಬಹುದು. ಹಿಂದುಗಳಲ್ಲಿ ಇರುವಂತೆಯೇ ಪುರೋಹಿತಶಾಯಿ ವರ್ಗ ಈ ಮುಲ್ಲಾಗಳದ್ದು. ಮಾತೆತ್ತಿದರೆ ಇವರು ಪತ್ವಾ ಹೊರಡಿಸುತ್ತಾರೆ, ತಲೆ ಕಡಿಯಲು ಹೇಳುತ್ತಾರೆ. ವಿಮರ್ಶೆಯನ್ನು ಎದುರಿಸುವ ತಾಕತ್ತು ಇವರಿಗೆ ಇಲ್ಲ. ಇಸ್ಲಾಮಿನ ಬಗ್ಗೆಯೋ ಅಥವಾ ಆ ಧರ್ಮದ ಪ್ರಮುಖರ ಬಗ್ಗೆಯೋ ಚಿಕ್ಕ ಟೀಕೆ ವ್ಯಕ್ತವಾದರೂ ಸಾಕು, ಇವರು ಫತ್ವಾ ಪುಸ್ತಕವನ್ನು ಎದುರಿಗಿಟ್ಟುಕೊಂಡು ಕುಳಿತುಬಿಡುತ್ತಾರೆ.
ನಾನು ಖುರಾನ್ನ ಕನ್ನಡ ಅವತರಣಿಕೆಯನ್ನು ಓದಿದ್ದೇನೆ. ಅದರಲ್ಲಿ ಎಲ್ಲಿಯೂ ಈ ಮುಲ್ಲಾಗಳು ಹೇಳುವ ಷರಿಯತ್ ಕಾನೂನಿನ ಉಲ್ಲೇಖವಿಲ್ಲ. ಖುರಾನ್ನಲ್ಲಿ ಸ್ಪಷ್ಟಪಡಿಸಿರುವುದೇನೆಂದರೆ "ಮನುಷ್ಯ ಮಾಡುವ ತಪ್ಪಿಗೆ ಶಿಕ್ಷೆ ಕಡ್ಡಾಯ, ಆದರೆ ಅದನ್ನು ದೇವರೇ ತೀರ್ಮಾನಿಸಿ ಶಿಕ್ಷೆ ವಿಧಿಸುತ್ತಾನೆ. ಆ ಶಿಕ್ಷೆ ಜಾರಿಯಾಗುವುದು ಮನುಷ್ಯನ ಈ ಜೀವನ ಮುಗಿದ ನಂತರ. ಹಾಗಾಗಿ ಭೂಮಿಯ ಮೇಲೆ ಮಾಡುವ ತಪ್ಪಿಗೆ ಸರ್ಕಾರ ಯಾವುದೇ ಶಿಕ್ಷೆ ಕೊಟ್ಟರೂ ಅದು ಅವನು ಮಾಡಿರುವ ಅಪರಾಧಕ್ಕೆ ದಂಡನೆಯಾಗುವುದಿಲ್ಲ. ಅವನು ಮಾಡಿರುವ ಅಪರಾಧಕ್ಕೆ ನಿಜವಾದ ಶಿಕ್ಷೆ ನೀಡುವವನು ದೇವರು ಮಾತ್ರ" ಎಂದಿರುವುದನ್ನು ಓದಿದ್ದೇನೆ. ಹಾಗಿದ್ದ ಮೇಲೆ ಈ ಮುಲ್ಲಾಗಳ ಪ್ರತ್ಯೇಕ ಶಿಕ್ಷೆ ಅನ್ನುವುದು ಅರ್ಥವಿಲ್ಲದ್ದಾಗುತ್ತದೆ.
ನಿಜ, ಸಮಾಜವು ಹದ್ದುಬಸ್ತಿನಲ್ಲಿರಬೇಕಾದರೆ ಇಲ್ಲಿನ ಅಪರಾಧಕ್ಕೆ ಶಿಕ್ಷೆಯ ವ್ಯವಸ್ಥೆ ಇರಲೇ ಬೇಕು, ಆದರೆ ಅದು ಆಯಾ ದೇಶಗಳ ಕಾನೂನು ವ್ಯವಸ್ಥೆಯಲ್ಲೇ ಇರುವಾಗ ಈ ಮುಲ್ಲಾಗಳ ಮತ್ತೊಂದು ಕಾನೂನು ಯಾಕೆ ? ಒಟ್ಟಿನಲ್ಲಿ ಈ ಮುಲ್ಲಾಗಳು ಅಮಾಯಕ ಮುಸ್ಲಿಮರ ಮನಸ್ಸನ್ನು ಕೆಡಿಸಿ ದಾರಿ ತಪ್ಪಿಸುತ್ತಿದ್ದಾರೆ. ದೇವರ ಹೆಸರಲ್ಲಿ, ಧರ್ಮದ ಹೆಸರಲ್ಲಿ ಒಂದೇ ದೇಶದೊಳಗೆ ವಿಷ ಬೀಜ ಬಿತ್ತುವ ಇಂತಹ ಕದೀಮರನ್ನು ಮೊದಲು ಆಯಾ ಧರ್ಮದವರೇ ಒದ್ದೋಡಿಸಬೇಕು.

ಕಾಮೆಂಟ್ಗಳು