ಒಲಂಪಿಕ್ನಲ್ಲಿ ಏಷ್ಯಾದಲ್ಲೇ ಚಿನ್ನ ಗಳಿಸಿದ ಮೊದಲ ರಾಷ್ಟ್ರ ಭಾರತವೇ. ಸತತ ಆರು ಬಾರಿ ಚಿನ್ನ ಗೆದ್ದ ತಂಡವೂ ಭಾರತವೇ. ಒಂದು ಬಾರಿ ನಮ್ಮವರು ಅಮೆರಿಕಾ ತಂಡದ ಮೇಲೆ ಒಂದೇ ಆಟದಲ್ಲಿ ಒಟ್ಟು ೨೪ ಗೋಲುಗಳನ್ನು ಹೊಡೆದಿದ್ದರು. ಆ ಪಂದದಲ್ಲಿ ಅಮೆರಿಕಾ ಬಾರಿಸಿದ್ದು ಒಂದೇ ಒಂದು ಗೋಲು. ಅದೂ ಹೇಗಂತೀರಾ? ನಮ್ಮ ಗೋಲ್ ಕೀಪರ್ ರಿಚಡ್ ಜೇಮ್ಸ್ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡುತ್ತಿದ್ದ ಸಮುಯದಲ್ಲಿ! ಹೀಗೆ ಮೈ ನವಿರೇಳಿಸುವ ಭಾರತದ ಹಾಕಿ ಇತಿಯಾಸವನ್ನು ಹಾಗೇ ಒಮ್ಮೆ ಓದುತ್ತಾ ಹೋಗಿ.
ನಾವು ಶಾಲೆಗೆ ಹೋಗುವ ಸಮಯದಲ್ಲಿ ಶಿಕ್ಷಕರು "ನಮ್ಮ ದೇಶದ ರಾಷ್ಟ್ರೀಯ ಆಟ ಹಾಕಿ" ಎಂದು ಮಾತನಾಡುವಾಗ ಅದನ್ನು ಹೇಗೆ ಆಡುತ್ತಾರೆಂಬುದೇ ತಿಳಿದಿರಲಿಲ್ಲ. ಆಗ ನಮ್ಮೂರಲ್ಲೆಲ್ಲೂ ಕರೆಂಟಾಗಲೀ, ಟಿ.ವಿ.ಯಾಗಲೀ ಇರಲಿಲ್ಲವಾದ್ದರಿಂದ ಹಾಕಿಯ ಗಂಧ ಗಾಳಿಯೂ ಸೋಕಲಿಲ್ಲ.
ಹೌದು, ಸರಿಯಾಗಿ ಮೂವತ್ತು ವರ್ಷಗಳೇ ಕಳೆದು ಹೋದವು... ಭಾರತ ಹಾಕಿಯಲ್ಲಿ ಬಂಗಾರ ಗೆದ್ದು! ೧೯೮೦ರ ಮಾಸ್ಕೋ ಒಲಂಪಿಕ್ ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುದೇ ಕೊನೆ. ಅದರ ನಂತರ ಚಿನ್ನವಂತಿರಲಿ ಬೆಳ್ಳಿಯೂ ಹೋಗಲಿ, ಒಂದೇ ಒಂದು ಕಂಚಿನ ಪದಕ ಕೂಡಾ ಒಲಂಪಿಕ್ನಿಂದ ಭಾರತಕ್ಕೆ ಬಂದಿಲ್ಲ. ಇದನ್ನು ಓದುವಾಗ ನಮಗೇ ಇಷ್ಟು ಬೇಸರವಾಗುವಾಗ ಹಾಕಿಯ ಅತ್ಯಂತ ಅಭಿಮಾನಿಗಳಿಗೆ ಹಾಗೂ ಅದನ್ನೇ ನೆಚ್ಚಿಕೊಂಡಿರುವ ಆಟಗಾರರಿಗೆ ಹೇಗಿರಬೇಡ?
ರಾಷ್ಟ್ರೀಯ ಆಟವಾಗಿದ್ದರೂ ಅದನ್ನು ಹೇಗೆ ಆಡುತ್ತಾರೆ? ಎಷ್ಟು ಜನ ಆಡುತ್ತಾರೆ, ಅವರ ನಿಯಮಗಳೇನೆಂಬುದು ಭಾರತದ ಮುಕ್ಕಾಲು ಪಾಲು ಜನರಿಗೆ ತಿಳಿದಿಲ್ಲ. ಇದು ಇಂದಿನ ಸ್ಥಿತಿ, ಆದರೆ ಹಿಂದೊಮ್ಮೆ ಹಾಕಿಯಲ್ಲಿ ಭಾರದೆದುರು ಇನ್ನಾವ ತಂಡವೂ ತಲೆಯೆತ್ತದಂತಹ ಸ್ಥಿತಿಯಿತ್ತು ಎಂದರೆ ನಂಬುತ್ತೀರಾ?
ಒಲಂಪಿಕ್ ನಲ್ಲಿ ಏಷ್ಯಾದಿಂದ ಮೊದಲ ಚಿನ್ನಗೆದ್ದ ನಾಡು ಭಾರತ. ಆ ಚಿನ್ನದ ಪದಕವನ್ನು ತಂದಿತ್ತ ಆಟ ಹಾಕಿ. ಭಾರತ ಪ್ರವೇಶಿಸಿದ ನಂತರ ಸತತ ಆರು ಬಲಂಪಿಕ್ನಲ್ಲೂ ಚಿನ್ನವನ್ನು ಗೆದ್ದು ಉಳಿದ ತಂಡಗಳನ್ನೆಲ್ಲಾ ಮೂಲೆಗುಂಪಾಗಿಸಿತ್ತು ನಮ್ಮ ತಂಡ! ಅಂದು ಅಮ್ಸರ್ಡ್ಯಾಮ್ ಗೆ ಆಡಲು ಹೊರಟ ಆ ತಂಡವನ್ನು ಬಂದರಿನಲ್ಲಿ ಬೀಳ್ಕೊಡಲು ಇದ್ದವರು ಮೂರೇ ಮಂದಿ. ಅದರಲ್ಲಿ ಇಬ್ಬರು ಅದೀಗ ಹುಟ್ಟಿಕೊಂಡಿದ್ದ ಹಾಕಿ ಫೆಡರೇಷನ್ನ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಾದರೆ ಮತ್ತೊಬ್ಬ ಪತ್ರಿಕೆಯೊಂದರ ವರದಿಗಾರ!
ಅಂತುಹುದೊಂದು ಅಭೂತಪೂರ್ವ ಬೀಳ್ಕೋಡುಗೆಯೊಂದಿಗೆ ಹೊರಟ್ಟಿತ್ತು ದ್ಯಾನ್ಚಂದ್ ನಾಯಕತ್ವದ ಹಾಕಿ ತಂಡ. ಅಮ್ಸಟರ್ಡಾಮ್ ಲ್ಲಿ ಇಳಿದ ದಿನವೇ ಅಲ್ಲಿನ ಲೋಕಲ್ ಕ್ಲಬ್ ತಂಡದೊಂದಿಗೆ ಒಂದು ಆಟ ಆಡಬೇಕಿತ್ತು. ನಮ್ಮ ಎಂದಿನ ಕ್ರಿಕೆಟಿಗರೇ ಹೊರದೇಶದಲ್ಲಿ "ಎ" ತಂಡದೊಂದಿಗೆ ಸೋತು ಬಿಡುವುದನ್ನು ಕಾಣುತ್ತೇವೆ. ಆದರೆ ದ್ಯಾನ್ಚಂದ್ ಬಳಗ ಅಂದು ಯಾವ ರೀತಿ ಆಡಿತ್ತೆಂದರೆ ಚೆಂಡು ಭಾರತೀಯ ತಂಡದ ಆವರಣದೊಳಕ್ಕೆ ಒಮ್ಮೆಯೂ ಬರಲೇ ಇಲ್ಲ! ಅದನ್ನು ಕಂಡ ಬ್ರಿಟಿಷ್ ಆಟಗಾರರಿಗೆ ಚಳಿ ಹಿಡಿದು ಹೊಯ್ತು! ಅಷ್ಟು ದಿನವೂ ಬ್ರಿಟಿಷ್ ತಂಡವೇ ಚಾಂಪಿಯನ್ ಆಗಿ ವಿಜ್ರಂಭಿಸುತ್ತಲಿತ್ತು. ಅಂತಹ ತನ್ನ ವಿರಾಜಮಾನತನಕ್ಕೆ ತನ್ನದೇ ಆಳ್ವಿಕೆಯಲ್ಲಿರುವ ಭಾರತ ತಂಡ ತೆರೆಯೆಳೆದು ಬಿಡುವ ಭಯ ಅವರನ್ನು ಕಾಡಿತು. ಭಾರತ ಎದುರಿಸಿದ್ದ ಲೋಕಲ್ ಕ್ಲಬ್ ತಂಡವೂ ಪ್ರಬಲವಾದುದೇ ಆಗಿತ್ತು. ಅವರ ಚೆಂಡನ್ನು ಆವರಣದೊಳಕ್ಕೆ ಬರಗೊಡಲಿಲ್ಲಿವೆಂದರೆ ತಮ್ಮ ಸೋಲು ನಿಶ್ಚಿತವೆಂಬುದು ಬ್ರಿಟಿಷರಿಗೆ ತಿಳಿದೇ ಹೋಯ್ತು.
ಭಾರತ ಅಂದಿನ ಪಂದ್ಯ ಆರಂಭಿಸುವ ಹೊತ್ತಿಗೆ ಇಂಗ್ಲೆಂಡ್ ಹಾಕಿ ತಂಡ ಆ ಒಲಂಪಿಕ್ನಲ್ಲಿ ತಾನು ಆಡುವುದಿಲ್ಲ ಎಂದು ತಿಳಿಸಿ ಹೊರ ನಡೆಯಿತು! ತನ್ನ ಆಳ್ವಿಕೆಯಲ್ಲಿರುವ ದೇಶದ ಜೊತೆ ಆಟದಲ್ಲೂ ಸೋಲಲು ಅವರು ತಯಾರಿರಲಿಲ್ಲ!. ಅದೊಂದು ಒಲಂಪಿಕ್ ಮಾತ್ರವೇ ಅಲ್ಲದೇ ಭಾರತಕ್ಕೆ ಸ್ವಾರ್ತತ್ರ್ಯ ಸಿಗುವವರೆಗೂ ಬ್ರಿಟಿಷ್ ತಂಡ ಎಂದೂ ಭಾರತಕ್ಕೆ ಮುಖಾಮುಖಿಯಾಗಲೇ ಇಲ್ಲ! ಅಮ್ಸಟರ್ ಡಾಮ್ನ ಒಲಂಪಿಕ್ಸ್ನಲ್ಲಿ ಅಂದಿನ ಭಾರತ ಪರ ಗೋಲ್ಕೀಪರ್ ರಿಚರ್ಡ್ ಜೇಮ್ಸ್ ಆಲನ್ ಒಂದು ದಾಖಲೆ ನಿರ್ಮಿಸಿದರು. ಅದೇನೆಂದರೆ ಭಾರತ ಫೈನಲ್ ಗೆಲ್ಲುವವರೆಗೂ ಆ ಒಲಂಪಿಕ್ಸ್ನಲ್ಲಿ ಬೇರಾದ ತಂಡವೂ ಸಹ ಆಲನ್ರ ಕಣ್ತಪ್ಪಿಸಿ ಗೋಲು ಹಾಕಲಾಗಲೇ ಇಲ್ಲ! ಬದಲಿಗೆ ಭಾರತ ಪರ ಪ್ರತಿ ಆಟದಲ್ಲೂ ಹತ್ತಾರು ಗೋಲುಗಳು ಬಂದಿರುತ್ತಿದ್ದವು. ಭಾರತದೊಂದಿಗೆ ಮುಖಾಮುಖಿಯಾಗುತ್ತಿದ್ದ ಎದುರು ತಂಡದ ನಾಯಕರು ಸಹ ಆಟಗಾರರಿಗೆ ಗೆಲ್ಲಲೇಬೇಕು ಎಂದು ಹೇಳುತ್ತಲೇ ಇರಲಿಲ್ಲ. ಬದಲಿಗೆ ಹೇಗಾದರೂ ಒಂದು ಗೋಲು ಹಾಕಿ ಮಾನ ಉಳಿಸಿ ಎನ್ನುತ್ತಿದ್ದರು. ಆ ಪಂದ್ಯಗಳಲ್ಲಿ ಭಾಗವಹಿಸಿದ ಎಲ್ಲಾ ಹಾಕಿ ತಂಡಗಳಿಗೂ ಭಾರತ ದುಃಸ್ವಪ್ನವಾಗಿ ಕಾಡಿತು. ಪ್ರಪಂಚದಾಧಂತ ಎಲ್ಲಾ ಪತಿಕೆಗಳೂ ಭಾರತದ ಆಟವನ್ನು ಕಂಡು ದಿಗ್ಭ್ರಮೆಗೊಂಡು ಅಂಕಣ ಬರೆದವು. ಹೊಗಳಿಕೆಯ ಮಹಾಪೂರವೇ ಹರಿಯಿತು.
ನಂತರ ೧೯೩೨ರಲ್ಲಿ ಅಮೆರಿಕಾದ ಏಂಜಲ್ಸನಲ್ಲಿ ಭಾರತ ತಂಡ ಫೈನಲ್ನಲ್ಲಿ ಅಮೇರಿಕಾದೊಂದಿಗೆ ಕಣಕ್ಕಿಳಿಯಿತು. ಅಂದಿನ ಆಟವನ್ನು ನೋಡಲು ನಾವು ನೀವೂ ಇರಬೇಕಿತ್ತು. ಭಾರತ ಬರುತ್ತದೆಂದು ಅಮೆರಿಕಾ ತಂಡ ಭಯಂಕರ ಸಿದ್ಧತೆಯನ್ನು ಮಾಡಿಕೊಡಿತ್ತು. ಸೋತರೂ ಕಡಿಮೆ ಅಂತರದಲ್ಲಿ ಸೋಲಬೇಕೆಂಬುದು ಅವರ ಹಂಬಲ. ಅವರ ತರಬೇರುದಾರ ತಮ್ಮವರೇ ಗೆಲ್ಲುವುದುಎಂದು ಹೇಳಿಕೊಂಡಿದ್ದ. ಆದರೆ ಅದದ್ದೇನು ಗೋತ್ತೇ? ಆ ಆಟದಲ್ಲಿ ಭಾರತ ತಂಡ ಭಾರಿಸಿದ್ದು ಬರೋಬ್ಬರಿ ಇಪ್ಪತ್ತನಾಲ್ಕು ಗೋಲುಗಳನ್ನು! ಭಾರತದ ಭಯಂಕರ ಆಟದೆದುರು ಅಮೆರಿಕಾದವರು ಕಾಲ ಕಸದಂತೆ ಸೋತು ಸುಣ್ಣವಾಗಿದ್ದರು. ಭಾರತದ ೨೪ ಗೋಲುಗಳಿಗೆ ವಿರುದ್ಥವಾಗಿ ಅವರು ಹಾಕಿದ್ದು ಒಂದೇ ಒಂದು ಗೋಲು! ಅದಾದರೂ ಹೇಗೆ ಬಂತೆಂದು ಕೊಂಡಿರಿ?
ಇಡೀ ಆಟದಲ್ಲು ಚೆಂಡು ಅಮೆರಿಕಾದ ಆವರಣದೊಳಗೇ ಇತ್ತು. ಇದರಿಂದ ನಮ್ಮ ಗೋಲ್ ಕೀಪರ್ ರಿಚರ್ಡ್ ಜೇಮ್ಸ್ರಿಗೆ ಕೆಲಸವೇ ಇಲ್ಲದೇ ಬ್ಯಾಸರಿಕೆ ಉಂಟಾಗಿತ್ತು. ಅವರು ಹಾಕಿ ದಾಂಡನ್ನು ಅಲ್ಲೇ ಬದಿಗಿಟ್ಟು ಅತ್ತಿತ್ತ ನಡೆದಾಡಿ ಅಭಿಮಾನುಗಳಿಗೆ ವಿಷ್ ಮಾಡುತ್ತಲಿದ್ದರು! ಅದಾಗಲೇ ಭಾರತದ ಆಟಗಾರರಿಗೆಲ್ಲಾ ಸ್ಟಾರ್ ವ್ಯಾಲ್ಯು ಬಂದಿದ್ದರಿಂದ ಅವರ ಆಟೋಗ್ರಾಫ್ ಪಡೆಯಲು ಜನ ಮುಗಿಬೀಳಿತ್ತಿದ್ದರು. ತನಗೇನೂ ಕೆಲಸವಿಲ್ಲದ್ದರಿಂದ ರಿಚರ್ಡ್ ಈ ಕಡೆ ಬಂದು ಅಭಿಮಾನಿಗಳ ಆಟೋಗ್ರಾಫ್ಗೆ ಸಹಿ ಮಾಡುತ್ತಿರುವ ಸಂದರ್ಭದಲ್ಲಿ ಅಮೆರಿಕಾ ಪರ ಒಂದು ಗೋಲು ಬಂದುಬಿಟ್ಟಿತು!
ಆಗ ಇಡೀ ಜನ ಸಮೂಹವೂ ನಕ್ಕು ನಕ್ಕು ಸುಸ್ತಾಗಿತ್ತಂತೆ. ಆ ಪಂದ್ಯದಲ್ಲಿ ಭಾರತ ತಂಡದ ನಾಯಕ ದ್ಯಾನ್ಚಂದ್ ಎಂಟು ಗೋಲ್ ಬಾರಿಸಿದ್ದರೆ, ಅವರ ತಮ್ಮ ರೂಪ್ಸಿಂಗ್ ಹತ್ತು ಗೋಲ್ ಹಾಕಿದ್ದರು! ಒಂದೇ ಆಟದಲ್ಲಿ ತಂಡವೊಂದು ೨೪ ಗೋಲು ಹಾಕಿದ್ದು ಭಾರತದ ದಾಖಲೆಯಾದರೆ ವೈಯಕ್ತಿಕವಾಗಿ ಹತ್ತು ಗೋಲ್ ಹಾಕಿದ್ದ ರೂಪ್ಸಿಂಗ್ರದ್ದೂ ದಾಖಲೆಯಾಯ್ತು. ಆ ಆಟ ಮುಗಿಯುತ್ತಿದ್ದಂತೆಯೇ ದ್ಯಾನ್ಚಂದ್ ಹಾಗೂ ರೂಪ್ಸಿಂಗ್ರ ಹಾಕಿ ದಾಂಡುಗಳನ್ನು ಅಮೆರಿಕಾದವರು ಮುರಿದು ಪರಿಶೀಲಿಸಿದ್ದರು. ದಾಂಡುಗಳಲ್ಲಿ ಅಯಾಸ್ಕಾಂತ ಅಳವಡಿಸಿಕೊಂಡಿದ್ದಾರೆ ಎಂಬ ವದಂತಿಯನ್ನು ಹಬ್ಬಿಸುವ ಪ್ರಯತ್ನವೂ ನಡೆದಿತ್ತು!
ಅದರ ನಂತರ ಒಲಂಪಿಕ್ನಲ್ಲಿ ೧೯೩೬ರಲ್ಲಿ ಬರ್ಲಿನ್ನ ಫೈನಲ್ನಲ್ಲಿ ಜರ್ಮನಿಯನ್ನು ಎದುರಿಸಿತ್ತು ಭಾರತ. ಆಗ ಜರ್ಮನಿ ಹಿಟ್ಲರ್ನ ಸರ್ವಾಧಿಕಾರದಲ್ಲಿತ್ತು. ಅದೊಂದು ಆಟ ರಣಭಯಂಕರವಾಗಿ ಸಾಗಿತ್ತು. ಏಕೆಂದರೆ, ಸೋತರೆ ಎಲ್ಲಿ ತಮ್ಮ ತಲೆಗೇ ಬಂದೂಕು ಗುರಿ ಇಡುತ್ತಾನೇನೋ ಹಿಟ್ಲರ್? ಎಂಬ ಅಳುಕು ಜರ್ಮನಿ ಆಟಗಾರರದ್ದಾಗಿತ್ತು. ಭಾರತ ಕ್ಷಣಕ್ಷಣಕ್ಕೂ ಮೇಲುಗೈ ಸಾಧಿಸತ್ತಿದ್ದಂತೆಯೇ ಅವರ ಸಹನೆ ಮೀರಿ ಬೇಕೆಂದೇ ತಲೆಯಿಂದ ದ್ಯನ್ಚಂದ್ರ ಮುಖಕ್ಕೆ ಗುದ್ದಿ ಅವರ ಹಲ್ಲು ಮುರಿದುಬಿಟ್ಟರು. ಆದರೇನು ಬಂತು? ಜರ್ಮನಿ ಹೊಡೆದದ್ದು ಬಂದೇ ಗೋಲು! ಭಾರತಕ್ಕೆ ಬಂದಿದ್ದವು ಎಂಟು ಗೋಲುಗಳು!
ಚಿನ್ನದ ಪದಕ ಭಾರತದ ಪಾಲಾಯ್ತು! ಹಿಟ್ಲರ್ರಿಂದಲೇ ಪದಕ ಸ್ವೀಕರಿಸಲಾಯ್ತು. ಆಗ ದ್ಯಾನ್ಚಂದ್ ಭಾರತದಲ್ಲಿದ್ದ ಬ್ರಿಟಿಷ್ ಸೈನ್ಯದ ಮೇಜರ್ ಕೂಡಾ ಆಗಿದ್ದರು. ಭಾರತ ತಂಡವನ್ನು ಔತಣಕ್ಕೆ ಆಹ್ವಾನಿಸಿದರು ಹಿಟ್ಲರ್. ಅಲ್ಲಿ ದ್ಯಾನ್ ಚಂದ್ರಿಗೆ ನೀವು ಜರ್ಮನಿಗೆ ಬಂದು ಬಿಡಿ. ಕರ್ನಲ್ ಪದವಿ ಕೊಡೊತ್ತೇನೆ ಎಂದು ಹೇಳಿದರು ಹಿಟ್ಲರ್. ಆದರೆ ದ್ಯಾನ್ಚಂದ್ ತಾಯ್ನಾಡನ್ನು ತೊರೆಯಲಿಲ್ಲ.
ಅದರ ನಂತರ ಎರಡನೇ ಮಹಾಯುದ್ಧ ಪ್ರಾರಂಭವಾಯ್ತು. ಈ ಕಾರಣಕ್ಕೆ ಒಲಂಪಿಕ್ ಕ್ರೀಡೋತ್ಸವ ನಿಂತೇ ಹೊಯ್ತು. ೧೯೪೭ರಲ್ಲಿ ಸ್ವಾತಂತ್ರ್ಯ ಬಂತಲ್ಲ. ಭಾರತದ ಹಾಕಿಯ ಉಚ್ಛ್ರಾಯ ಸ್ಥಿತಿಯನ್ನು ಕಂಡೇ ಅದನ್ನು ರಾಷ್ಟ್ರೀಯ ಕ್ರೀಡೆಯೆಂದು ಘೋಷಿಸಿದರು. ಆದರೆ ಭಾರತ ಇಬ್ಬಾಗವಾಗುವುದರೊಂದಿಗೆ ಹಾಕಿ ತಂಡವೂ ಒಡೆಯಿತು. ಅತ್ಯುತ್ತಮ ಆಟಗಾರರು ನಾಲ್ಕು ಜನ ಪಾಕಿಸ್ತಾನಕ್ಕೆ ಸೇರಿದರು. ಭಾರತದ ಪರ ದ್ಯಾನ್ಚಂದ್ ಹಾಗೂ ರೂಪ್ಸಿಂಗ್ ಬಿಟ್ಟರೆ ಬೇರೆ ಅನುಭವಸ್ಥ ಆಟಗಾರರೇ ಉಳಿಯಲಿಲ್ಲ. ಆದರೂ ಭಾರತದ ವಿಜಯೋತ್ಸವಕ್ಕೇನೂ ಧಕ್ಕೆಯಾಗಲಿಲ್ಲ.
ದಾಯಾದಿ ಕಲಹ !
೧೯೪೮ರಲ್ಲಿ ಮತ್ತೆ ಪ್ರಾರಂಭವಾಯ್ತು ಒಲಂಪಿಕ್. ಅದು ನಡೆದುದು ಲಂಡನ್ನಲ್ಲಿ. ಅದರಲ್ಲೂ ಅಂತಿಮ ಘಟ್ಟ ಪ್ರವೇಶಿಸಿದ ಭಾರತ ಬ್ರಿಟನ್ನೊಂದಿಗೆ ಹೋರಾಟ ನಡೆಸಬೇಕಾಯ್ತು. ಅದನ್ನು ಸೋಲಿಸಿ ಬಂಗಾರದ ಪದಕ ಗೆದ್ದುಕೊಂಡಿತು. ಅದರ ನಂತರದ ೧೯೫೨ರ ಒಲಂಪಿಕ್ನಲ್ಲೂ ಹೆಲ್ಸಿಂಕ್ನಲ್ಲೂ ಭಾರತವೇ ಚಿನ್ನ ಗಳಿಸಿತು. ಆದರೆ ಭಾರತದ ಮೊದಲಿನ ಮೊನಚು ಕಡಿಮೆಯಾಗುತ್ತಿರುವುದು ಎಲ್ಲರ ಗಮನಕ್ಕೂ ಬಂದಿತ್ತು. ಮೊದಲಿನಷ್ಟು ಗೋಲುಗಳು ಬರುತ್ತಲೇ ಇರಲಿಲ್ಲ. ಚಿನ್ನ ಗೆಲ್ಲುತ್ತಿದ್ದರಾದರೂ ಅದು ಮೊದಲಿನಂತೆ ನಿರರ್ಗಳವಾಗೇನೂ ದಕ್ಕುತ್ತಿರಲಿಲ್ಲ.
ಅದು ೧೯೫೬ನೇ ಇಸವಿ. ಅಂದಿನ ವರ್ಷದ ಒಲಂಪಿಕ್ ನಡೆದುದು ಮೇಲ್ಬೋರ್ನ್ನಲ್ಲಿ. ಅಲ್ಲೂ ಭಾರತ ಫೈನಲ್ಗೆ ಹೋಗೆ ಬಿಟ್ಟಿತು. ಆದರೆ ಅಲ್ಲಿ ಎದುರಾದುದು ಬೇರಾವುದೇ ದೇಶವಾಗಿರಲಿಲ್ಲ. ಭಾರತದಿಂದ ಇಭ್ಬಾಗವಾಗಿ ಹೋಗಿದ್ದ ಪಾಕಿಸ್ತಾನವಾಗಿತ್ತು! ಅದಾಗಲೇ ಭಾರತ-ಪಾಕಿಸ್ತಾನದ ನಡುವೆ ಒಂದು ಯುದ್ಧವೂ ನಡೆದು ಹೋಗಿತ್ತು. ಎರಡೂ ದೇಶಗಳಲ್ಲಿ ಭಯಂಕರ ದ್ವೇಶ ಹೊಗೆಯಾಡುತ್ತಿತ್ತು. ಅದೊಂದು ಪಂದ್ಯ ಹೇಗಿತ್ತೆಂದರೆ ಯುದ್ಧರಂಗದಷ್ಟೇ ರೋಮಾಂಚನ ದಾಯಕವಾಗಿತ್ತು. ಇನ್ನೊಂದು ಅಹಿಂಸಾ ಯುದ್ಧದಂತೆಯೇ ನಡೆದ ಆ ಪಂದ್ಯದ ಕೊನೆಯ ಸಮಯ ಹತ್ತಿರವಾಗುವವರೆಗೂ ಯಾವ ತಂಡವೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಕೊನೆಗೂ ಭಾರತದ ಪರ ಒಂದು ಗೋಲು ಬಂದೇ ಬಿಟ್ಟಿತು. ಚಿನ್ನ ಮತ್ತೆ ಭಾರತಕ್ಕೇ ಬಂತು. ಆದರೆ ಕೇವಲ ಒಂದೇ ಒಂದು ಗೋಲು ಗಳಿಸುವ ಮೂಲಕ ಅನ್ನೋದು ಎಲ್ಲರಿಗೂ ಬೇಸರವನ್ನುಂಟು ಮಾಡಿತು!
ಆದರೆ ಅದೇ ಭಾರತ ಹಾಕಿ ತಂಡದ ಕೊನೆಯ ವಿಜಯೊತ್ಸವವಾಗಿತ್ತು. ಸತತವಾಗಿ ಇಪ್ಪತ್ತನಾಲ್ಕು ಆಟಗಳಲ್ಲಿ ಗೆದ್ದು ಆರು ಬಾರಿ ಚಿನ್ನ ಸಂಪಾದಿಸಿದ ಭಾರತದ ಹಾಕಿಯ ವಿಜಯ ಪತಾಕೆ ಇತಿಹಾಸ ಸೇರಿಬಿಡುವುದೆಂದು ಅಂದು ಯಾರಿಗೂ ತಿಳಿದಿರಲಿಲ್ಲ. ಆದರೂ ಅದು ನಡೆದೇ ಹೋಯ್ತು. ನಂತರದ್ದು ಏಳು ಬೀಳಿನ ಆಟವಷ್ಟೇ. ಅದೂ ೧೯೮೦ ರವರೆಗೆ. ಅದರ ನಂತರ ಭಾರತ ಒಂದೇ ಒಂದು ಪಂದವನ್ನೂ ಗೆದ್ದು ಚಿನ್ನ ತರಲೇ ಇಲ್ಲ. ೧೯೫೬ರ ಒಲಂಪಿಕ್ನಲ್ಲಿ ಪಾಕಿಸ್ತಾನವನ್ನು ಮಣಿಸಿ ಚಿನ್ನ ಗೆದ್ದಾದ ನಂತರ ಭಾರತ ಹಾಕಿ ತಂಡದ ಕಥೆ ಏನಾಯ್ತೆಂಬುದು ಮುಂದಿನ ಸಂಚಿಕೆಗಿರಲಿ.

ಕಾಮೆಂಟ್ಗಳು