ರಾಜಕೀಯ ಪಕ್ಷವೊಂದು ಮಾಡಿದ ಒಂದೇ ಒಂದು ಯಡವಟ್ಟು ಈ ರೀತಿ ರಾಜ್ಯದ ಬುಡಕ್ಕೇ ಕೊಡಲಿ ಏಟು ಬೀಳುವಂತೆ ಮಾಡುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ. ಬಳ್ಳಾರಿಯ ಗಣಿ ಧಣಿಗಳ ಹಣದ ಥೈಲಿಯನ್ನು ಪಕ್ಷದ ಬೆಳವಣೀಗೆಗೆ ಉಪಯೋಗಿಸಿಕೊಳ್ಳಲು ಹೊಂಚು ಹಾಕಿದ ಬಿಎಸ್ವೈ ಧಣಿಗಳನ್ನ್ನು ಇನ್ನಿಲ್ಲದಂತೆ ಎತ್ತಿ ಕೊಂಡಾಡಿದರು. ಈ ಪಕ್ಷದಲ್ಲಿದ್ದೂ ಪಕ್ಕದ ರಾಜ್ಯದ ಆ ಪಕ್ಷಕ್ಕೆ ನಿಷ್ಟರಾಗಿದ್ದ ಧಣಿಗಳು ಇಲ್ಲಿನ ಗಣಿ ಸಂಪತ್ತನ್ನು ಲೂಟಿ ಮಾಡಲು ಬಿಎಸ್ವೈ ಮಾತಿಗೆ ಹೂಂಗುಟ್ಟಿದ್ದೂ ಹೌದು.
ಆಡು ಕೊಬ್ಬಿತ್ತು, ತೋಳ ಹಸಿದಿತ್ತು ಎಂಬಂತೆ ಧಣಿ ಬಳಗ ಈ ಪಕ್ಷವನ್ನು ಎರಡು ಚುನಾವಣೆಗಳಲ್ಲಿ ಗೆಲ್ಲಿಸಲೂ ಕೂಡಾ ಸಫಲವಾದವು. ಕೇವಲ ಐದಾರು ವರ್ಷಗಳ ಹಿಂದೆ ಅಬ್ಬೇಪಾರಿಗಳಂತೆ ಇದ್ದ ಧಣಿಗಳು ಇಂದು ಸಾವಿರಾರು ಕೋಟಿ ರೂಪಾಯಿಗಳ ಒಡೆಯರಾಗಿದಾರೆಂದರೆ ಅಲ್ಲಿ ಈ ನೆಲದ ಋಣವಿದೆ. ಆದರೆ ಆ ಋಣವನ್ನು ತೀರಿಸುವುದಂತಿರಲಿ, ಇಲ್ಲಿನ ರೈತರನ್ನೇ ನೆಲಕ್ಕೆ ಹಾಕಿ ತುಳಿಯಲು ಹೊರಟ ಇವರು ಮೊನ್ನೆ ಮೊನ್ನೆ ತಿರುಪತಿ ತಿಮ್ಮಪ್ಪನಿಗೆ ಬರೋಬ್ಬರಿ ನಲವತ್ತೈದು ಕೋಟಿ ರೂಪಾಯಿಗಳ ವಜ್ರದ ಕಿರೀಟವನ್ನೇ ತೊಡಿಸಿ ಆಂಧ್ರ ಜನರಿಂದ ಜೈ ಅನ್ನಿಸಿಕೊಂಡಿರುವುದು ನಮ್ಮ ದುರಂತ! ಇನ್ನೊಬ್ಬ ಧಣಿ ಹೋಗಿ ಅದೇ ಆಂಧ್ರದ ಇನ್ನೊಂದು ದೇವಾಲಯ ಶ್ರೀ ಕಾಳಹಸ್ತಿಗೂ ಇರಲಿ ಅಂತ ಏಳು ಕೋಟಿ ರೂಪಾಯಿಗಳದ್ದೊಂದು ಕಿರೀಟ ಹಾಕಿ ಬಂದಿದ್ದಾರೆ. ಆ ಮೂಲಕ ಓಟು ನೀಡಿದ ಕನ್ನಡಿಗರಿಗೆ ಭ್ಹರ್ಜರಿ ಬಿಳಿ ಟೋಪಿ ಹಾಕಿದ್ದಾರೆ.
ವಜ್ರದ ಕಿರೀಟವೇ ಬೇಕಿತ್ತಾ??
ಗಣಿ ಧಣಿಗಳು ಸಕ್ರಿಯವಾಗಿರುವುದು ಕರ್ನಾತಕದಲ್ಲಿ. ಅನ್ನ, ನೀರು, ಗಾಳಿ ಜೊತೆಗೆ ಎನಿಸಲಾಗದಷ್ಟು ದುಡ್ಡು ಗಳಿಸುತ್ತಿರುವುದು ಕೂಡಾ ನಮ್ಮ ರಾಜ್ಯದಲ್ಲೇ. ಆದರೆ ಇಲ್ಲಿನ ಕಿಂಚಿತ್ ಋಣ ತೀರಿಸಲಾಗದ ಇವರಿಗೆ ವಜ್ರದ ಕಿರೀಟ ತೊಡಿಸಲು ತಿರುಪತಿ ತಿಮ್ಮಪ್ಪನೇ ಸಿಕ್ಕಿದನಾ? ಅದೇ ಹಣವನ್ನು ಇಲ್ಲಿ ಬೇರೆ ರೀತಿ ಬಳಸಲು ಇವರಿಗೇಕೆ ಮನಸ್ಸು ಬರಲಿಲ್ಲ?
ರಾಜ್ಯದಲ್ಲೇ ಅನೇಕ ದೇವಾಲಯಗಳಿವೆ. ಧರ್ಮಸ್ಥಳದಿಂದ ಅನೇಕ ಸಮಾಜ ಸೇವಾ ಕಾರ್ಯಗಳೂ ನಡೆಯುತ್ತಿವೆ. ಗ್ರಾಮೋದ್ಯೋಗ, ಸ್ತ್ರೀ ಸಬಲೀಕರಣ ಮುಂತಾದ ಯೋಜನೆಗಳನ್ನೌ ಅಲ್ಲಿನ ಧರ್ಮಾಧಿಕಾರಿಗಳು ಹಮ್ಮಿಕೊಂಡಿದ್ದಾರೆ. ಸಿದ್ಧಗಂಗಾ ಮಠದಲ್ಲಿ ಹತ್ತಿರ ಹತ್ತಿರ ಲಕ್ಷ ಜನ ಬಡ ವಿದ್ಯಾರ್ಥಿಗಳು ಉಚಿತ ಊಟ ವಸತಿಯೊಂದಿಗೆ ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಇಸ್ಕಾನ್ ಕೂಡಾ ಬಡ ಮಕ್ಕಳಿಗೆ ಮಧ್ಯಾಹ್ನದೂಟ ಬಡಿಸುತ್ತಿದೆ. ಭಾ.ಜ.ಪ.ದವರೇ ಆದ ಅನಂತ್ ಕುಮಾರ್ ಅವರ ಪತ್ನಿ ನಡೆಸುತ್ತಿರುವ ಸಂಸ್ಥೆಯೂ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ. ಇದಲ್ಲದೇ ಸಾವಿರಾರು ಸಂಘ ಸಂಸ್ಥೆಗಳು ಬಡ ಬಗ್ಗರಿಗೆ ಸಹಾಯ ಮಾಡುತ್ತಿವೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿಯೊಂದಿಗೆ ಬಳ್ಳಾರಿಯೆಂಬ ಬಳ್ಳಾರಿಯೇ ಅಡ್ಡಡ್ಡ ಮಲಗಿದೆ. ಇವೆಲ್ಲ ಇರುವಾಗ ಇವ್ಯಾವುಗಳತ್ತಲೂ ಕಣ್ಣೆತ್ತಿಯೂ ನೋಡದ ಗಣಿ ಧಣಿಗಳು ಪರ ರಾಜ್ಯಕ್ಕೆ ೫೨ ಕೋಟಿ ರೂಪಾಯಿಗಳನ್ನು ಧಾರೆ ಎರೆದು ಬಂದಿದ್ದಾರೆ!
ಹೀಗಿದೆ ಬಳ್ಳಾರಿ
ಮೊದಲಿಗೆ ಮತದಾರರಲ್ಲಿ ಒಂದು ನಂಬಿಕೆ ಇತ್ತು. ದುಡ್ಡೇ ಇಲ್ಲದವರನ್ನು ಗೆಲ್ಲಿಸಿದರೆ ಅವರು ದುಡ್ಡು ಹೊಡೆಯತೊಡಗುತ್ತಾರೆ. ಅದರ ಬದಲಿಗೆ ವಿಪರೀತ ದುಡ್ಡಿರುವವರೇ ರಾಜಕೀಯಕ್ಕೆ ಬಂದರೆ ಅದಾಗಲೇ ಅವರ ಬಳಿ ಹಣ ಇರೋದರಿಂದ ಹಣದ ಆಸೆ ಅವರಿಗೆ ಇರೋದಿಲ್ಲ, ದೇಶವನ್ನು ಲೂಟಿ ಮಾಡೋದೊಲ್ಲ ಎಂದು ಎಲ್ಲರೂ ನಂಬಿದ್ದರು. ಆದರೆ ಅದೆಲ್ಲಾ ತಪ್ಪು ಗ್ರಹಿಕೆ ಎಂಬುದು ಈಗ ಸಾಬೀತಾಗುತ್ತಿದೆ. ಕೋಟ್ಯಾಧೀಶರುಗಳಾದರೂ ಧನಿಗಳು ಬಳ್ಳಾರಿಯನ್ನು ಉದ್ಧಾರ ಮಾಡಲಿಲ್ಲ. ಒಂದೇ ಜಿಲ್ಲೆಯಿಂದ ಮೂವರು ಮಂತ್ರಿಗಳಾಗಿದ್ದರೂ ಬಳ್ಳಾರಿಗಾದ ಲಾಭ ಮಾತ್ರ ಶೂನ್ಯ.
ಈ ಮೂವರೂ ಮನಸ್ಸು ಮಾಡಿದ್ದರೆ ಸರಕಾರದಲ್ಲಿನ ತಮ್ಮ ಪ್ರಭಾವ ಬಳಸಿಯೇ ಬಳ್ಳಾರಿಯನ್ನು ಇಷ್ಟರಲ್ಲಿಯೇ ಬೆಂಗಳೂರು ಮಾಡಿಬಿಡಬಹುದಿತ್ತು. ರಾಜ್ಯದಲ್ಲಿಯೇ ಮಾಧರಿ ಜಿಲ್ಲೆಯನ್ನಾಗಿಸುವ ಸಾಧ್ಯತೆ ಇತ್ತು. ಆದರೆ ಅಂತಹ ಪವಾಡಗಳೇನು ಇದುವರೆಗೂ ನಡೆದಿಲ್ಲ. ಇವರು ರಾಜ್ಯದ ಗುಡ್ಡ ಗುಡ್ಡಗಳನ್ನೇ ಆಂಧ್ರದ ಗಡಿ ಎಂದು ಒತ್ತುವರಿ ಮಾಡಿಕೊಂಡು ಕಬಳಿಸುತ್ತಿರುವುದನ್ನು ನೋಡಿದರೆ ಯಾವ ಪವಾಡಗಳೂ ನಡೆಯಲಾರದು ಅನ್ನುವುದು ಮನದಟ್ಟಾಗುತ್ತದೆ. ಉದಾಹರಣೆಗೆ ಬಳ್ಳಾರಿ ನಗರವನ್ನೇ ತೆಗೆದುಕೊಂಡರೂ ಸಾಕು, ಸ್ವಾತಂತ್ರ ಬಂದು ಇನ್ನೂ ನಾಲ್ಕು ವರ್ಷವೂ ಆಗಿಲ್ಲವೇನೋ ಎಂದೇ ತೋರುತ್ತದೆ. ಹೊಂಡ ಬಿದ್ದ ರಸ್ತೆಗಳು, ಗೋತಾ ಹೊಡೆದ ಚರಂಡಿ ವ್ಯವಸ್ಥೆ ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಪಾದಚಾರಿ ರಸ್ತೆ ಯೆಂದರೆ ಇಲ್ಲಿನ ಜನರಿಗೆ ಇನ್ನೂ ಪರಿಚಯ ಆಗಿಲ್ಲ. ಉತ್ತಮವಾದ ವ್ಯಾಪಾರ ಮಳಿಗೆಗಳೂ ಇಲ್ಲಿಲ್ಲ. ಬಸ್ ನಿಲ್ದಾಣ ಹದಗೆಟ್ಟು ಬಹಳಾ ವರ್ಷಗಳೇ ಕಳೆದಿವೆ. ನಗರದಿಂದ ಅದನ್ನು ಹೊರ ಹಾಕಿದ್ದರೂ ಕುಂಟುತ್ತಾ ಕೆಲಸ ಸಾಗಿದೆ. ಇದನ್ನೆಲ್ಲಾ ನೋಡಿದರೆ ಬಳ್ಳಾರಿ ಎಂದಿಗೂ ಸುಧಾರಿಸುವುದಿಲ್ಲ ಅನ್ನಿಸದಿರದು.
ಅಲ್ಲಿನ ಜನತೆಯಾದರೂ ಸುಧಾರಿಸಿದರೆ ಕಡೇ ಪಕ್ಷ ರಾಜ್ಯಕ್ಕಾದರೂ ನೆಮ್ಮದಿ ಧಕ್ಕೀತು.
ಕಾಮೆಂಟ್ಗಳು