"ದೇಶವನ್ನು ಒಡೆಯಲು ಯತ್ನಿಸಬೇಡಿ" - ಇದು ಮೊನ್ನೆ ನೀವು ಹೇಳಿದ ಮಾತು. ಒಂದು ಪ್ರತಿಮೆಯ ಅನಾವರಣವನ್ನು ತಡೆಯುವುದರಿಂದ ದೇಶ ಒಡೆಯುತ್ತದೆಯೇ? ಇಷ್ಟಕ್ಕೂ ದೇಶ ಒಡೆಯದಿರಲೆಂದು ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆಯೇ? ಇವೆರಡೂ ಅಲ್ಲ ಅನ್ನುವುದು ಎಲ್ಲರಿಗೂ ತಿಳಿದ ವಿಷಯ. ಮೊದಲಿಗೆ ಎರಡು ರಾಜ್ಯಗಳ ಸೌಹಾರ್ಧತೆಗಾಗಿ ತಿರುವಳ್ಳುವರ್ ಪ್ರತಿಮೆ ಬೆಂಗಳೂರಿಗೆ ಬರಲಿಲ್ಲ ಅನ್ನುವುದನ್ನು ತಿಳಿಯಪಡಿಸುತ್ತೇನೆ ಯುವರ್ ಆನರ್. ಅದನ್ನು ತಮಿಳರು ಮೊದಲು ಇಲ್ಲಿ ಸ್ಥಾಪಿಸಲು ಹೊಂಚು ಹಾಕಿದರು. ಅದಾದ ಎಷ್ಟೋ ವರ್ಷಗಳ ನಂತರ ತಿರುವಳ್ಳುವರ್ ಪ್ರತಿಮೆಗೆ ಪ್ರತಿಯಾಗಿ ಚೆನ್ನೈನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಬೇಕು ಅನ್ನುವ ಹೊಸ ವಾದ ಹುಟ್ಟಿಕೊಂಡಿತು ಅಷ್ಟೇ.
ನಾವು ಯಾರನ್ನು ಬೇಕಾದರೂ ನಿಯಂತ್ರಿಸಬಹುದು ಅನ್ನುವುದು ಮೊದಲಿಗೆ ರಾಜಕಾರಣಿಗಳಿಗೆ, ನಂತರ ಪೊಲೀಸರಿಗೆ, ತದ ನಂತರ ಪತ್ರಕರ್ತರಿಗೆ ಹಾಗೂ ಇದೀಗ ನಿಮಗೆ ಅಂಟಿದ ಜಾಡ್ಯ. "ಯಾರೂ ಪ್ರತಿಮೆ ಅನಾವರಣವನ್ನು ತಡೆಯಬಾರದು, ಅಷ್ಟೇ ಅಲ್ಲ, ಪ್ರತಿಭಟನೆಯನ್ನೂ ಮಾಡಬಾರದು" ಅನ್ನುವ ಮೂಲಕ ಪ್ರಜಾಪ್ರಭುತ್ವದಲ್ಲಿ ನಾವು ಬದುಕುತ್ತಿದ್ದೇವೆ ಅನ್ನುವ ಅಂಶವನ್ನೇ ನೀವು ಅಳಿಸಿ ಹಾಕಿದಿರಿ. ನಿಜವಾಗಿಯೂ ನ್ಯಾಯದಾನ ನೀಡುವುದಾಗಿದ್ದರೆ "ಚೆನ್ನೈನಲ್ಲಿಯೂ ಸರ್ವಜ್ಞನ ಪ್ರತಿಮೆಯನ್ನು ಸೂಕ್ತ ಸ್ಥಳದಲ್ಲಿ ಸ್ಥಾಪಿಸುವಂತೆ ಸೂಚಿಸಬುದಾಗಿತ್ತು. ಒಂದೇ ದಿನ ಎರಡೂ ಕಡೆ ಅನಾವರಣ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬಹುದಾಗಿತ್ತು. ಆದರೆ ಅದನ್ನು ನೀವು ಮಾಡಲಿಲ್ಲ.
ಕೆಲವು ವರ್ಷದ ಹಿಂದೆ ಕೋಲಾರದಲ್ಲಿ ತಮಿಳು ಶಾಸಕನೊಬ್ಬ ಎಂಜಿಆರ್ ಪ್ರತಿಮೆಯನ್ನು ಸ್ಥಾಪಿಸಲು ಹೊರಟಿದ್ದ. ಅದನ್ನು ಕನ್ನಡ ಮುಖಂಡರು ತಡೆದರು. ಬಹುಶಃ ಅದರ ದೂರು ನಿಮ್ಮ ಬಳಿ ಬಂದಿದ್ದರೆ ನೀವು ಹೇಳಿರುತ್ತಿದ್ದಿರಿ.. "ದೇಶ ಒಡೆಯಬೇಡಿ, ಎಂಜಿಆರ್ ಪ್ರತಿಮೆ ಸ್ಥಾಪಿಸಲು ಬಿಡಿ" ಎಂದು! ಏಕೆಂದರೆ ತಮಿಳರ ಪಾಲಿಗೆ ಎಂಜಿಆರ್ ಸಹ ಮಹಾನ್ ವ್ಯಕ್ತಿಯೇ.
ಇದೇ ತಮಿಳನೊಬ್ಬ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ನೀಡಬಾರದು ಎಂದು ನಿಮ್ಮ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದಾಗ ಖಂಡಿತಾ ನಿಮ್ಮ ನ್ಯಾಯಾಲಯ ಅವನಿಗೆ "ದೇಶ ಒಡೆಯಲು ಯತ್ನಿಸಬೇಡಿ" ಎಂದು ಎಚ್ಚರಿಕೆ ನೀಡಲೇ ಇಲ್ಲ. ಕಾವೇರಿ ನೀರಿಗಾಗಿ ಜಯಲಲಿತ ಸುಪ್ರೀಂ ಕೋರ್ಟ್ಗೆ ಹೋದಾಗ ಆಕೆಗೂ ಕೂಡಾ "ದೇಶ ಒಡೆಯಲು ಯತ್ನಿಸಬೇಡಿ" ಎಂದು ಹೇಳಲಿಲ್ಲ. ಏಕೆಂದರೆ ದೇಶ ಒಡೆಯಲು ಕನ್ನಡಿಗರಲ್ಲದೇ ಇನ್ಯಾರು ಯತ್ನಿಸಲು ಸಾಧ್ಯ ಅನ್ನುವುದು ನಿಮ್ಮ ಅಭಿಪ್ರಾಯ.
ಅವರು ನೀರು ಬಿಡಿ ಅಂದಾಗೆಲ್ಲಾ ನಾವು ಬಿಡಬೇಕು. ಇಲ್ಲಾಂದರೆ ನಿಮ್ಮ ಪ್ರಕಾರ ದೇಶ ಒಡೆದು ಚೂರಾಗಿ ಹೋಗುತ್ತದೆ. ಅವರು ಹೇಳಿದ ಜಾಗದಲ್ಲಿ, ಅವರು ಹೇಳಿದ ಪ್ರತಿಮೆಯನ್ನು ಸ್ಥಾಪಿಸಬೇಕು. ಇಲ್ಲಾಂದರೆ ದೇಶ ನಮ್ಮಿಂದ ಒಡೆದು ಹೋಗುತ್ತದೆ. ಇದೆಲ್ಲಿಯ ನ್ಯಾಯ ಸ್ವಾಮಿ?
ತಿರುವಳ್ಳುವರ್ ದೊಡ್ಡ ಕವಿ ಇರಬಹುದು. ಆದರೆ ಅದೇ ತಮಿಳು ಸರ್ಕಾರ ಕವಿಯ ನುಡಿಗಳನ್ನು ಕನ್ನಡದಲ್ಲಿ ಮುದ್ರಿಸಿ ಕಡಿಮೆ ಬೆಲೆಗೆ ನಮಗೆಲ್ಲಾ ನೀಡಿದ್ದಿದ್ದರೆ ನಮಗೂ ಆ ಕವಿಯ ದೊಡ್ಡ ಜ್ಞಾನ ತಿಳಿದಿರುತ್ತಿತ್ತು. ತಮಿಳರು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಪುಸ್ತಕ ಮುದ್ರಿಸುತ್ತಾರೆ. ಆದರೆ ಅವರ ಸಾಹಿತ್ಯದ ಬಗ್ಗೆ ಕನ್ನಡದಲ್ಲಿ ಮುದ್ರಿಸುವ ಪ್ರಯತ್ನ ಮಾಡುವುದಿಲ್ಲ.
ಅದೆಲ್ಲಾ ಇರಲಿ, ಈಗ ನಿಮ್ಮ ಬಗ್ಗೆಯೇ ಒಂದೆರಡು ಪ್ರಶ್ನೆ.
ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು ತಂತಮ್ಮ ಆಸ್ತಿ ವಿವರವನ್ನು ಭಹಿರಂಗಪಡಿಸುತ್ತಾರೆ. ಆದರೆ ನಿವ್ಯಾಕೆ ಅದನ್ನು ಮಾಡಲು ಹಿಂಜರಿಯುತ್ತೀರಿ ಸ್ವಾಮಿ? ಒಂದು ವಿಧದಲ್ಲಿ ನೀವೂ ಕೂಡಾ ಸರಕಾರಿ ನೌಕರರೇ ಹೊರತೂ ಬೇರೇನಲ್ಲ. ಹಾಗಿದ್ದರೆ ನಿಮಗೇಕೆ ವಿಷೇಶ ಸೂತ್ರ? ಸರ್ಕಾರದಿಂದ ಪಡೆವ ಸಂಬಳದ ಲೆಕ್ಕವನ್ನು ಸರಕಾರಕ್ಕೆ ನೀಡಲು ನಿಮಗೇಕೆ ಹಿಂಜರಿಕೆ? ಉಳಿದವರೆಲ್ಲಾ ಸಾಧಾರಣ ಪ್ರಜೆಗಳು, ನೀವು ಮಾತ್ರ ಎಲ್ಲರಿಗಿಂತಲೂ ಮಿಗಿಲು ಅನ್ನುವ ಭ್ರಮೆಯೇ?
ದಟ್ಸಾಲ್ ಯುವರ್ ಆನರ್...
ಕಾಮೆಂಟ್ಗಳು