ವಿಷಯಕ್ಕೆ ಹೋಗಿ

ಎಲ್ಲಾದರೂ ಇರು ಎಂಥಾದರೂ ಇರು ಏನನ್ನಾದರೂ ನೀ ಹುಡುಕುತ್ತಲಿರು!

ಎಲ್ಲೇ ಇರಲಿ, ಹೇಗೆ ಇರಲಿ, ಸದಾ ಕಾಲ ಏನನ್ನಾದರೂ ನಾವು ಹುಡುಕುತ್ತಲೇ ಇರುತ್ತೇವೆ. ಹುಟ್ಟಿನಿಂದಲೇ ಇದು ಶುರುವಾಗುತ್ತದೆ. ಹುಟ್ಟಿದ ಮಗು ತನ್ನ ತಾಯಿಯನ್ನು ಹುಡುಕುತ್ತದೆ. ಹಸಿವಾದಾಗ ತಾಯಿಯ ಎದೆಹಾಲು, ನಂತರ ಅಪ್ಪನನ್ನು, ಆಮೇಲೆ ಅಣ್ಣಂದಿರನ್ನು, ಅಕ್ಕ ತಂಗಿಯರನ್ನು, ಸ್ನೇಹಿತರನ್ನು, ಆಟದ ಸಾಮಾನುಗಳನ್ನು ಅಮ್ಮ ಮುಚ್ಚಿಟ್ಟುರವ ಉಂಡಿಗಳನ್ನು.... 
ಹೀಗೆ ಹುಡುಕುವ ಕಾರ್ಯ ಹುಟ್ಟಿನಿಂದಲೇ ಶುರು.
ಮಗುವನ್ನು ಕಳೆದುಕೊಂಡು ಹುಡುಕುವ ಅಪ್ಪಾಮ್ಮಂದಿರೂ ಇದಾರೆ. ಕೆಲವು ನತದೃಷ್ಟ ಮಕ್ಕಳ ತಂದೆ ತಾಯಿಯಂದಿರೇ ಕಳೆದು ಹೋಗಿರುತ್ತಾರೆ. ಇಪ್ಪತ್ತೊಂದು ವರ್ಷದ ನಂತರ ಜೋನಾಥನ್ ಎಂಬ ಯುವಕ ತನ್ನ ಹೆತ್ತವರನ್ನು ಹುಡುಕಿದ!ಹಳ್ಳಿಗಳಿಗಿಂತಲೂ ನಗರಗಳಲ್ಲಿ ಹುಡುಕಾಟ ಜೋರು. ಮಗು ಮೂರು ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ಒಳ್ಳೆಯ ಕಾನ್ವೆಂಟಿನ ಹುಡುಕಾಟ ಪ್ರಾರಂಭವಾಗುತ್ತದೆ. ನಮಂತರ ಒಳ್ಳೆಯ ಶಾಲೆ, ಒಳ್ಳೆಯ ಕಾಲೇಜು, ಒಳ್ಳೆಯ ಕೋರ್ಸು, ಒಳ್ಳೆಯ ಉದ್ಯೋಗ ಹೀಗೆ ಹುಡುಕಾಟದ ಸರಮಾಲೆಯೇ ಹೆತ್ತವರ ಮುಂದೆ.
ಮಕ್ಕಳ ಬೆಳೆಯುತ್ತಿದ್ದಂತೆಯೇ ಜೊತೆಗಾರರನ್ನು ಹುಡುಕುತ್ತದೆ. ತಮಗೆ ಹಿಡಿಸುವ ಜೊತೆಗಾರರು ದೊರೆತಾದ ನಂತರ ತಮಗಿಷ್ಟವಾದ ಆಟದ ಹುಡುಕಾಟ. ಅಷ್ಟಾದ ಮೇಲೂ ಹುಡುಕುವುದು ನಿಲ್ಲುವುದಿಲ್ಲ. ಆಟ ಆಡಲು ಜಾಗ ಹುಡುಕಬೇಕು. ಆಟಕ್ಕೆ ಬೇಕಾದ ಪರಿಕರ ಹುಡುಕಬೇಕು. ಹುಡುಗರು ಕಡಿಮೆ ಬಿದ್ದರೆ ಸಾಕಾಗುವಷ್ಟು ಗೆಳೆಯರನ್ನು ಹುಡುಕಿಕೊಳ್ಳಬೇಕು. ಅಷ್ಟೆಲ್ಲಾ ಆಗಿ ಆಟ ಶುರುವಾದರೆ ಹುಡುಕಾಟ ಮುಗಿದು ಹೋಯ್ತೆಂದೇನಲ್ಲ. ಹೊಡೆದ ಚೆಂಡೇ ಎಲ್ಲೋ ಕಳೆದು ಹೋಗುತ್ತದೆ. ಅದನ್ನು ಹುಡುಕಬೇಕು. ಕೆಲವು ಬಾರಿ ಬಾಲು ಬ್ಯಾಟುಗಳ ಇಟ್ಟು ಜಾಗದಲ್ಲಿ ಇರುವುದೇ ಇಲ್ಲ. ಆಗಲೂ ಹುಡುಕಾಟವೇ!ಶಾಲೆಗೆ ಹೊರಡುವಾಗ ಪೆನ್ನು, ಪುಸ್ತಕ, ಟಿಫನ್ ಬಾಕ್ಸ್, ಸಾಕ್ಸ್, ಹುಡುಕಿಕೊಳ್ಳಬೇಕು. ಮನೆಯಲ್ಲಿ ತುಂಟ ನಾಯಿ ಏನಾದರೂ ಇದ್ದಲ್ಲಿ ಶೂ ಅಥವಾ ಚಪ್ಪಲಿಯನ್ನು ಹುಡುಕೋ ಹುಡುಕು!
ಯುವಕರಾಗುತ್ತಿದ್ದಂತೆಯೇ ಮತ್ತೊಂದು ರೀತಿಯ ಹುಡುಕಾಟ ಶುರುವಾಗುತ್ತದೆ. ಅದು ಪ್ರೇಮಿಯ ಹುಡುಕಾಟ. ಯಾವುದಕ್ಕೆ ವ್ಯವಧಾನವಿದ್ದರೂ ಇದಕ್ಕೆ ಮಾತ್ರ ಇರುವುದಿಲ್ಲ. ಅಂತೂ ಇಂತೂ ಒಂದು ಲವ್ ಮಾಡಿಕೊಳ್ಳದೇ ಹೋದರೆ ಸಮಾಧಾನವೇ ಇರುವುದಿಲ್ಲ. ಅದಕ್ಕಾಗಿ ಸುಂದರ ಹುಡುಗಿಯರ ಹುಡುಕಾಟ ಶುರುವಾಗುತ್ತದೆ. ಹುಡುಗೀರೂ ಕೂಡಾ ಓರೆಗಣ್ಣಲ್ಲಿ ತಮಗೊಪ್ಪುವ ಗಂಡುಗಳನ್ನು ಹುಡಕತೊಡಗುತ್ತಾರೆ. ಮೆಚ್ಚಿದ ಇಬ್ಬರು ಗೆಳೆಯರಾಗಿ, ಪ್ರೀತಿ ಅರಳಿ ಪ್ರೇಮಿಗಳಾದ ಮೇಲೂ ಹುಡುಕಾಟ ಮುಗೀತು ಅನ್ನುವ ಹಾಗಿಲ್ಲ. ಅವಳನ್ನು ಪಾರ್ಕಲ್ಲಿ, ಬಸ್ಸಲ್ಲಿ, ಕಾಲೇಜು ಕ್ಯಾಂಪಸ್ಸಲ್ಲಿ ಹುಡುಕಿದ್ದೇ ಹುಡುಕಿದ್ದು. ಈ ಸಮಯದಲ್ಲಿ ಕೆಲ ಕಳ್ಳಪ್ರೇಮಿಗಳು ಮುಗ್ಧ ಹುಡುಗಿಯರ ಮಧುಬಟ್ಟಲು ಹೀರಿ ಪರಾರಿಯಾಗಿ ಬಿಡುವುದಿದೆ. ಆಗ ಈ ಬೆಪ್ಪು ಹುಡುಗಿಯರು ಎಷ್ಟೇ ಹುಡಿಕಿದರೂ ಆ ಕೋತಿಗಳು ಸಿಕ್ಕಾವೆಯೇ?
ಇತ್ತ ಹರೆಯದ ಹುಡುಗರು ಹುಡುಗೀರು ತಮಗೆ ಬೇಕಾದ ಸಂಗಾರಿಗಳನ್ನು ಹುಡುಕುತಿದ್ದರೆ ಅಲ್ಲಿ ಅವರ ತಂದೆ ತಾಯಿಗಳು ಇವರ ಕುತ್ತಿಗೆಗೆ ಕಟ್ಟಲು ವಧು-ವರರನ್ನು ಹುಡುಕುತ್ತಿರುತ್ತಾರೆ. ಕೆಲವು ರಸಿಕ ಗಂಡಂದಿರು ಮನೆಯಲ್ಲಿ ಹೆಂಡತಿಯಿದ್ದರೂ ಇನ್ನೊಂದು ಸೆಟ್ಅಪ್‌ಗಾಗಿ ಹುಡುಕುತ್ತಲೇ ಇರುವುದಿದೆ!
ಇನ್ನು ಬೆಂಗಳೂರಿಗೆ ಬಂದರೆ ಒಂದೊಂದು ಸ್ಥಳದಲ್ಲೂ ವೆರೈಟಿ ಹುಡುಕಾಟಗಳನ್ನು ಕಾಣಬಹುದು. ಮೆಜೆಸ್ಟಕ್‌ನಲ್ಲಿ ಇಳಿಯುತ್ತಿದ್ದಂತೆಯೇ ಯಾವ ರೀತಿಯಲ್ಲಾದರೂ ಟೋಪಿ ಹಾಕಲು ಬಕಾರಗಳು ಸಿಗುತ್ತಾರೆ ಎಂದು ಕೆಲವರು ಹುಡುಕುತ್ತಿದ್ದರೆ. ಬಸ್‌ಗಳಗೆ ಸೀಟು ಭರ್ತಿ ಮಾಡಿಸಿ ಕಮಿಷನ್ ಪಡೆಯುವ ಏಜೆಂಟರು ಪ್ರಯಾಣೆಕರನ್ನು ಹುಡುಕುತ್ತಿರುತ್ತಾರೆ. ಮೆಟ್ಟಿಲಿನ ಮೂಲೆಗಳಲ್ಲಿ ಅಂದಿನ ರಾತ್ರಿಗೆ ಸಂಪಾದನೆ ಯಾಗುವ ಗಿರಾಕಿಗಳನ್ನು ಹುಡುಕುತ್ತಾ ನಿಂತಿರುವ ವೇಶ್ಯೆಯರು. ಯಾರಿಗೆ ಬ್ಲೇಡ್ ಹಾಕುವುದೆಂದು ಹುಡುಕುವ ಕಳ್ಳರು, ಕಳ್ಳರನ್ನು ಹುಡುಕುವ ಪೋಲಿಸರು. ಹೀಗೆ ನಾನಾ ರೀತಿಯ ಹುಡುಕಾಟಗಳನ್ನು ಅಲ್ಲಿ ಕಾಣಬಹುದು.
ಮೇಲೆ ಬಕಾರಗಳ ಬಗ್ಗೆ ಹೇಳಿದೆನಲ್ಲ. ಅಂತಹ ಬಕಾರಗಳನ್ನು ಕೆಲವರು ಕೆಲವೊಮ್ಮೆ ಎಷ್ಟು ಹುಡುಕಿದರೂ ಸಿಗುವುದೇ ಇಲ್ಲ. ಪೆನ್ನು ಪೇಪರುಗಳು ಕೆಲವೊಮ್ಮೆ ಸಿಗದೇ ತಲೆ ಬಿಸಿ ಮಾಡುತ್ತದೆ. ಕೆಲವೊಮ್ಮೆ ಡಾಕ್ಟರುಗಳೇ ಸ್ಟೆತೋಸ್ಕೋಪನ್ನು ಕಳೆದುಕೊಂಡು ಹುಡುಕುವುದೂ ಇದೆ.
ಇನ್ನು ವಿಜ್ಞಾನಿಗಳಿಗಂತೂ ಹುಡುಕುವುದೇ ಕೆಲಸ. ಎಲ್ಲೋ ಇರುವ ಗ್ರಹವನ್ನು ನಕ್ಷತ್ರವನ್ನು ರೋಗಾಣುಗಳನ್ನು ಹೀಗೆ ಹುಡುಕುತ್ತಲೇ ಇರುತ್ತಾರೆ. ಸರ್ಕಾರಿ ಅಧಿಕಾರಿಗಳು ಎಲ್ಲೆಲ್ಲಿ ಲಂಚ ಹೊಡೆಯಬಹುದೆಂಬುದನ್ನು ಹುಡುಕುತ್ತಾರೆ. ಆದರೆ ಮತದಾರ ಎಷ್ಟು ಹುಡುಕಿದರೂ ಯಾವ ಮಂತ್ರಿಯೂ ಎಂದೂ ಸಿಗುವುದೇ ಇಲ್ಲ!
ಹೀಗೆ ಜೀವನ ಪೂರ್ತಿ ಪ್ರತಿದಿನವೂ ಏನಾದರೊಂದನ್ನು ಹುಡುಕುತ್ತಿರುವ ನಮ್ಮನ್ನು ಸಾವು ಹುಡುಕುತ್ತಿರುತ್ತದೆಂಬುದನ್ನು ತಿಳಿಯುವುದೇ ಇಲ್ಲ. ನಾವು ಹುಡುಕುವ ವಸ್ತು ಸಿಗದೇ ಹೋಗಬಹುದು. ಆದರೆ ಸಾವು ಮಾತ್ರ ತನಗೆ ಬೇಕಾದಾಗ ಬೇಕಾದವರನ್ನು ಕರೆಕ್ಟಾಗಿ ಹುಡುಕಿಕೊಳ್ಳುತ್ತದೆ. ಮಿಸ್ ಆಗುವ ಅವಕಾಶವೇ ಇಲ್ಲ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶಿಕ್ಷಣದ ಬಗೆಗಿನ ನುಡಿಮುತ್ತುಗಳು

* ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ. - ಸ್ವಾಮಿ ವಿವೇಕಾನಂದರು . * ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ. - ಮಾಹಾತ್ಮ ಗಾಂಧೀಜಿ. * ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆಯನ್ನು ತರಬೇಕು.  ಜೀವನದಲ್ಲಿ ಮುನ್ನಡೆಸುವ ಸಾಮಥ್ರ್ಯ ನೀಡಬೇಕು. -    ಜಿಡ್ಡು ಕೃಷ್ಣಮೂರ್ತಿ . * ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಪ್ರಗತಿಗೆ ಇಂಬು ಕೊಡದ ಶಿಕ್ಷಣ ಅಪೂರ್ಣ. - ಡಾ. ಎಸ್. ರಾಧಾಕೃಷ್ಣನ್. * ಶಿಕ್ಷಣವೆಂದರೆ, ಪುಸ್ತಕದ ಜ್ಞಾನವೇ ಮಾತ್ರ ಅಲ್ಲ.  ಸಂಸಾರ, ಮನುಷ್ಯ ಮತ್ತು ಕಾರ್ಯ ಕಲಾಪಗಳ ಪರಸ್ಪರ ಸಂಯೋಗವೇ ಶಿಕ್ಷಣ. -    ಬರ್ಕ. * ಜೀವನವೇ ಶಿಕ್ಷಣ, ಶಿಕ್ಷಣವೇ ಜೀವನ. - ಜಾನ್ ಟ್ಯೂಯ್ಲಿ. * ಸಮನ್ವಯತೆ, ಸಮತೋಲನ, ಉಪಯುಕ್ತತೆ,  ಪರಿಪೂರ್ಣತೆ, ಆನಂದದಾಯಕ ಹಾಗೂ ನೈಸರ್ಗಿಕತೆಯೇ ಶಿಕ್ಷಣದ ಗುಣಗಳು. - ರೂಸೋ. * ಶಿಕ್ಷಣವು ಧಾರ್ಮಿಕ ವಿಚಾರಗಳ ಸಮನ್ವಯವಾದಾಗಲೇ ಪೂರ್ಣವಾಗುವುದು. - ಅಜ್ಞಾತ. * ನಡತೆ ಬೋಧಿಸುವ ಶಿಕ್ಷಣ, ಮನುಷ್ಯತ್ವ ತೋರದ ವಿಜ್ಞಾನ, ಇವೆರಡೂ ಅಪಾಯಕಾರಿ ಮತ್ತು ಉಪಯೋಗವಿಲ್ಲದವು. - ನೀತಿವಚನ . * ಶಿಕ್ಷಣವೇ ಜೀವನದ ಬೆಳಕು - ಗೊರೂರು * ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರಿಕನನ್ನಾಗಿ ಮಾಡುತ್ತದೆ. - ಡಾ: ಎಸ್. ರಾಧಾಕೃಷ್ಣನ್. * ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವದೇ ಶಿಕ್ಷಣ - ವಿವೇಕಾನಂದ. * ವಿದ್ಯೆ ಗುರುಗಳ ಗುರು - ಭ್ರತೃ ಹರಿ. * ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ...

ಈ ಹುಡುಗಿಯರೇ ಹೀಗೆ !

ಬೆಟ್ಟದ ಬದಿಯಿಂದ ಮುಂಜಾನೆಯ ರವಿ ಇಣುಕಿದಂತೆ ಕಿಟಕಿ ಹಿಂದಿನ ಕಂಗಳು, ಕಂಡೂ ಕಾಣದ ಮುಂಗುರುಳು ಗಲಗಲ ಬಳೆಯ ತರಂಗ ಕಿಲಕಿಲ ನಗುವಿನಂತರಂಗ, ಎದುರು ಬರಲಾರರು ಚೆಲುವೆಯರು ಬಂದರೂ ಬಹು ಲಾಸ್ಯ ಲಜ್ಜೆ ಇಡುತಲಿ ಒಂದೊಂದೇ ಹೆಜ್ಜೆ ಮುಗಿಲಿಂದ ಬರಗಾಲದಿ ಮಳೆ ಹನಿ ಬಿಸಿ ನೆಲಕ್ಕೆ ಎಣಿಸಿ ಮುತ್ತಿಕ್ಕಿದಂತೆ ! ಕಿರು ಹಣತೆ ಉರಿಯಂತೆ ತುಟಿ ರಂಗು ಪತಂಗ ಹಾರಿದಂತೆ ತೆಳು ಸೆರಗು ಕಾವ್ಯದೊಡತಿಯರು, ಮೌನವೇ ಮಾತು. ಅರೆಕ್ಷಣದಿ ಸೃಷ್ಟಿಸಿ ಕಲ್ಪಾನಾ ಲೋಕ ನಗ್ನ ಬಿಂಬ ತೋರಿ ತೆರೆವರು ಪ್ರೇಮಲೋಕ ಒಮ್ಮೆ ಧಾರಾಳ ದಮಯಂತಿ ಮಗದೊಮ್ಮೆ ಮುನಿದ ಮಗುವಂತೆ ಅಲ್ಲಿ ಪ್ರೇಮ ಪ್ರೀತಿಯನ್ನರಸುವ ಹುಡುಗನ ನಿರಂತರ ಬೇಟೆ ! ಅರಿವಾಗುವ ಮುನ್ನವೇ ಮಾನಸಿಕ ಪತ್ನಿಯಾಗಿರುತ್ತಾಳೆ, ಛೇಧಿಸಿ ಹೃದಯ ಕೋಟೆ.

ರೇಡಿಯೋ ಕಾಮೆಂಟೇಟರ‍್ ಡಿಕ್ಕಿ ರತ್ನಾಗರ‍್ ನಿಧನ!

ಈ ಸುದ್ದಿಯ ತಲೆ ಬರಹವನ್ನು ಇಂದಿನ ಕನ್ನಡಪ್ರಭದಲ್ಲಿ ನೋಡಿ ಕೊಂಚ ಯೋಚಿಸುವಂತಾಯ್ತು. ಮೊದಲಿಗೆ ರತ್ನಾಗರ‍್ ಯಾರೆಂದು ನನಗೆ ತಿಳಿದಿಲ್ಲ. ಆದರೂ ಅವರು ನಿಧನರಾಗಿರುವ ಸುದ್ದಿ ಪತ್ರಿಕೆಯಲ್ಲಿ ಬಂದಿರುವುದರಿಂದ ಅವರೊಬ್ಬ ಖ್ಯಾತ ವ್ಯಕ್ತಿ ಎಂದು ಅರಿವಾಯ್ತು. ಇಲ್ಲದಿದ್ದರೆ ಮುಖಪುಟದಲ್ಲಿ ಹೆಸರು ಹಾಕಿ ನಿಧನ ಸುದ್ದಿ ಹಾಕುತ್ತಿರಲಿಲ್ಲ. ಒಳಗಿನ ಯಾವುದೋ ಪುಟದಲ್ಲಿ "ರೇಡಿಯೋ ಕಮೆಂಟೇಟರ‍್ ಡಿಕ್ಕಿ - ವ್ಯಕ್ತಿ ಸಾವು" ಎಂದು ಕೊಟ್ಟಿರುತ್ತಿದ್ದರು. ಆದರೆ ಅವರು ಸತ್ತಿರುವ ರೀತಿ ಸ್ವಲ್ಪ ಗೊಂದಲ ಮೂಡಿಸಿತು. ನನಗೆ ಮೊದಲು ಅನ್ನಿಸಿದ್ದು ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸತ್ತಿದ್ದಾರೆ ಎಂದು. ಸುದ್ದಿಯ ತಲೆಬರಹ ಮುಖಪುಟದಲ್ಲಿ ಇದ್ದು ವಿವರ ೧೫ನೇ ಪುಟದಲ್ಲಿರುವುದಾಗಿ ತೋರಿಸಿದ್ದರು. ಆ ಪುಟಕ್ಕೆ ಹೋಗುವ ಮುನ್ನ ಉಳಿದ ಪ್ರಮುಖ ಸುದ್ದಿಗಳತ್ತ ಕಣ್ಣಾಡಿಸಲೇ ಬೇಕಿತ್ತು. ಆ ಸಮಯದಲ್ಲೇ ರತ್ನಾಗರ‍್ ಸಾವಿನ ಬಗ್ಗೆ ನಾನು ಯೋಚಿಸಿದ್ದು. ರೇಡಿಯೋ ಕಮೆಂಟೇಟರ‍್ ಡಿಕ್ಕಿಯಿಂದಾಗಿ ರತ್ನಾಗರ‍್ ಸಾಯಬೇಕಿದ್ದರೆ ರೇಡಿಯೋ ಕಮೆಂಟೇಟರ‍್ ಬಹುಶಃ ಅತಿ ವೇಗವಾಗಿಯೇ ಬಂದಿರಬೇಕು. ಎಷ್ಟೇ ವೇಗವಾಗಿ ಬಂದರೂ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಡಿಕ್ಕಿ ಹೊಡೆದರೆ ಸಾವು ಸಂಭವಿಸುವುದು ಅಷ್ಟೊಂದು ಸಲೀಸಲ್ಲ. ಓಡಿ ಬಂದು ಡಿಕ್ಕಿ ಹೊಡೆದಿರಬಹುದೇ ? ಒಂದು ವೇಳೆ ರತ್ನಾಗರ‍್ ವಯಸ್ಸಾದವರಾಗಿದ್ದರೆ ಎದುರಿನ ವ್ಯಕ್ತಿ ಓಡಿ ಬಂದು ಡಿಕ್ಕಿ ಹೊಡೆದರೆ...